ಸರ್ಕಾರದ ಈ "ಮೌನ" ಬೇರೇನನ್ನೋ ಹೇಳುವಂತಿದೆ: ಟಿಕಾಯತ್
ನವದೆಹಲಿ, ಮಾರ್ಚ್ 01: ಕೇಂದ್ರ ಸರ್ಕಾರ ಪರಿಚಯಿಸಿರುವ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿ ಗಡಿಗಳಲ್ಲಿ ತಮ್ಮ ಹೋರಾಟ ಮುಂದುವರೆಸಿದ್ದಾರೆ. ಆದರೆ ಪ್ರತಿಭಟನೆ ಕುರಿತು ಸರ್ಕಾರ ಈಚೆಗೆ ಮೌನಕ್ಕೆ ಶರಣಾಗಿದ್ದು, ಯಾವುದೇ ಹೇಳಿಕೆಗಳನ್ನು ನೀಡುತ್ತಿಲ್ಲ. ಸರ್ಕಾರದ ಈ ನಡೆಗೆ ಭಾರತೀಯ ಕಿಸಾನ್ ಸಂಘದ ಮುಖಂಡ ರಾಕೇಶ್ ಟಿಕಾಯತ್ ಶಂಕೆ ವ್ಯಕ್ತಪಡಿಸಿದ್ದು, ಈ ಮೌನ, ಸರ್ಕಾರ ರೈತರ ವಿರುದ್ಧ ಸಂಚು ಹೂಡುತ್ತಿರುವ ಸೂಚನೆಯೂ ಇರಬಹುದು ಎಂದಿದ್ದಾರೆ.
"ರೈತರ ಹೋರಾಟದ ಕುರಿತು ಕೆಲವು ದಿನಗಳಿಂದ ಸರ್ಕಾರ ಮೌನ ತಾಳಿರುವುದನ್ನು ನೋಡಿದರೆ ಅನುಮಾನ ಬರುತ್ತಿದೆ. ರೈತರ ವಿರುದ್ಧ ಕ್ರಮ ತೆಗೆದುಕೊಳ್ಳಲು ಏನನ್ನೋ ಯೋಜಿಸುತ್ತಿರುವಂತೆ ಕಾಣುತ್ತಿದೆ" ಎಂದು ಹೇಳಿದ್ದಾರೆ. ಇದೇ ಸಂದರ್ಭ, ಪ್ರತಿಭಟನಾನಿರತ ರೈತರೊಂದಿಗೆ ಸೂಕ್ತ ಮಾತುಕತೆ ಹಾಗೂ ಪ್ರಸ್ತಾವನೆಯೊಂದಿಗೆ ಸರ್ಕಾರ ಮುಂದೆ ಬರಬೇಕು ಎಂದು ಸೋಮವಾರ ಒತ್ತಾಯಿಸಿದ್ದಾರೆ. ಮುಂದೆ ಓದಿ...

"ಈ ಮೌನದ ಹಿಂದೆ ಪ್ರತಿಭಟನೆ ಹತ್ತಿಕ್ಕುವ ಯೋಚನೆ"
ಕಳೆದ 15-20 ದಿನಗಳಿಂದ ಸರ್ಕಾರ, ಪ್ರತಿಭಟನೆ ಕುರಿತು ಚಕಾರವನ್ನೂ ಎತ್ತಿಲ್ಲ. ಕೇಂದ್ರದ ಈ ಮೌನ ನೋಡಿದರೆ ಏನೋ ಆಗುತ್ತದೆ ಎಂದೆನಿಸುತ್ತಿದೆ. ರೈತರ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳುತ್ತದೆ. ಇದಕ್ಕೆ ಯೋಜನೆ ರೂಪಿಸುತ್ತಿದ್ದು, ಈ ಕಾರಣಕ್ಕೇ ಮೌನಕ್ಕೆ ಶರಣಾಗಿದೆ ಎನಿಸುತ್ತಿದೆ ಎಂದು ರಾಕೇಶ್ ಟಿಕಾಯತ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೆಲವು ರಾಜ್ಯಗಳಲ್ಲಿ ರೈತರು ಸರ್ಕಾರದ ವಿರುದ್ಧ, ತಾವು ಬೆಳೆದ ಬೆಳೆಗಳನ್ನು ನಾಶಪಡಿಸಿ ಆಕ್ರೋಶ ವ್ಯಕ್ತಪಡಿಸಿರುವ ಸಂಗತಿ ವರದಿಯಾಗಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಕಾಯತ್, "ನಮಗಿನ್ನೂ ಅಂಥ ಸಮಯ ಬಂದಿಲ್ಲ. ಆದರೆ ಸರ್ಕಾರ ಅಂಥ ಕ್ರಮಗಳನ್ನು ತೆಗೆದುಕೊಳ್ಳದಂತೆ ರೈತರ ಬಳಿ ಏಕೆ ಮನವಿ ಮಾಡುತ್ತಿಲ್ಲವೆಂಬುದು ತಿಳಿಯುತ್ತಿಲ್ಲ" ಎಂದಿದ್ದಾರೆ.

ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ: ಟಿಕಾಯತ್
ಸರ್ಕಾರ ಏನು ಬೇಕಾದರೂ ಮಾಡಲಿ, ರೈತರ ವಿರುದ್ಧ ಯಾವ ಕ್ರಮವನ್ನು ಬೇಕಾದರೂ ತೆಗೆದುಕೊಳ್ಳಲಿ, ಆದರೆ ನಮ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ. ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಮತ್ತೆ ಸವಾಲು ಹಾಕಿದ್ದಾರೆ ಟಿಕಾಯತ್. ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ನಡೆದ ಗಲಭೆಯೂ ಸರ್ಕಾರವೇ ಹುಟ್ಟುಹಾಕಿದ ಸಮಸ್ಯೆ ಎಂದು ದೂರಿದ್ದಾರೆ.

"ಹೋರಾಟಕ್ಕೆ ಇನ್ನಷ್ಟು ರೈತರು ಕೈಜೋಡಿಸುತ್ತಿದ್ದಾರೆ"
ಇದು ಕೊಯ್ಲಿನ ಸಮಯವಾದ್ದರಿಂದ ಪ್ರತಿಭಟನೆಯಿಂದ ಒಂದಷ್ಟು ರೈತರು ಊರುಗಳಿಗೆ ತೆರಳುತ್ತಿದ್ದಾರೆ. ಇನ್ನಷ್ಟು ರೈತರು ಪ್ರತಿಭಟನೆಗೆ ಕೈಜೋಡಿಸುತ್ತಿದ್ದಾರೆ. ಬೆಳೆ ಹಾಗೂ ಹೋರಾಟ ಎರಡನ್ನೂ ರೈತರು ನಿಭಾಯಿಸುತ್ತಿದ್ದಾರೆ ಎಂದು ವಿವರಿಸಿದ ಅವರು, ತನಗೆ ಸಮಯ ಬಂದಾಗ ಸರ್ಕಾರ ಚರ್ಚೆಗೆ ಬರಲಿ. ಮಾರ್ಚ್ 24ರವರೆಗೂ ದೇಶದ ವಿವಿಧ ಸ್ಥಳಗಳಲ್ಲಿ ರೈತರ ಮಹಾ ಪಂಚಾಯತ್ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ನವೆಂಬರ್ 26ರಿಂದಲೂ ನಡೆಯುತ್ತಿರುವ ಹೋರಾಟ
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಕಳೆದ ನವೆಂಬರ್ 26 ರಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ರೈತರು ಹೋರಾಟದಲ್ಲಿ ಭಾಗಿಯಾಗಿದ್ದಾರೆ.












Click it and Unblock the Notifications