ಮುರಿದುಬಿತ್ತು ಎಂಟನೇ ಸುತ್ತಿನ ಮಾತುಕತೆ; ಕಾಯ್ದೆ ರದ್ದತಿಗೆ ಸುತಾರಾಂ ಒಪ್ಪದ ಕೇಂದ್ರ
ನವದೆಹಲಿ, ಜನವರಿ 8; ಮೂರು ವಿವಾದಿತ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಶುಕ್ರವಾರ ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಎಂಟನೇ ಸುತ್ತಿನ ಮಾತುಕತೆ ನಡೆದಿದೆ. ಈ ಮಾತುಕತೆಯಲ್ಲಿಯೂ, ಈ ಕಾಯ್ದೆಗಳನ್ನು ರದ್ದುಪಡಿಸಲೇಬೇಕು ಎಂದು ರೈತರು ತಮ್ಮ ಗಟ್ಟಿ ನಿಲುವನ್ನು ಪ್ರಕಟಿಸಿದ್ದು, ಯಾವುದೇ ಕಾರಣಕ್ಕೂ ಈ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರ್ಕಾರ ರೈತರಿಗೆ ತಿಳಿಸಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಇಂದು ಮಾತುಕತೆ ನಡೆದಿದ್ದು, ಎರಡೂ ಕಡೆ ಒಮ್ಮತ ಸಾಧ್ಯವಾಗದೇ ಜನವರಿ 15ಕ್ಕೆ ಮಾತುಕತೆಯನ್ನು ಮುಂದೂಡಲಾಗಿದೆ. ಮುಂದೆ ಓದಿ...
ಎಂಟನೇ ಸುತ್ತಿನ ಮಾತುಕತೆಯಲ್ಲೂ ಒಮ್ಮತವಿಲ್ಲ
ಸುಮಾರು 45 ದಿನಗಳಿಂದಲೂ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಪಂಜಾಬ್, ಮಧ್ಯಪ್ರದೇಶ, ಹರಿಯಾಣದ ಸುಮಾರು ನಲವತ್ತು ರೈತ ಸಂಘಟನೆಯ ಸಾವಿರಾರು ರೈತರು ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೂ ಏಳು ಸುತ್ತಿನ ಮಾತುಕತೆಗಳು ನಡೆದಿದ್ದು, ಇಂದು ಎಂಟನೇ ಮಾತುಕತೆ ನಡೆದಿದೆ. ಆದರೆ ರೈತರ ಹೋರಾಟಕ್ಕೆ ಅಂತ್ಯ ಆಡುವ ಯಾವುದೇ ಪರಿಹಾರ ದೊರೆತಿಲ್ಲ.
8ನೇ ಸುತ್ತಿನ ಮಾತುಕತೆಯಲ್ಲಾದರೂ ರೈತರ ಸಮಸ್ಯೆ ಬಗೆಹರಿಯುವ ವಿಶ್ವಾಸ
"ನಾವು ಸಾಯುತ್ತೇವೆ ಇಲ್ಲವೇ ಗೆಲ್ಲುತ್ತೇವೆ"
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ತಮ್ಮ ನಿಲುವಿಗೆ ರೈತರು ಗಟ್ಟಿಯಾಗಿದ್ದರು. ಇಂದಿನ ಮೊದಲ ಅವಧಿಯ ಮಾತುಕತೆಯಲ್ಲಿ ಕಾಯ್ದೆಗಳನ್ನು ರದ್ದುಪಡಿಸುವ ತಮ್ಮ ಬೇಡಿಕೆಯನ್ನು ಮತ್ತೆ ಮುಂದಿಟ್ಟರು. ಈ ಬೇಡಿಕೆಗೆ ಸಿದ್ಧವಿದ್ದರೆ ಮಾತ್ರ ಮುಂದಿನ ಮಾತುಕತೆಗೆ ನಾವು ಸಿದ್ಧ ಎಂದು ತಿಳಿಸಿದ್ದರು. "ನಾವು ಸಾಯುತ್ತೇವೆ ಇಲ್ಲವೇ ಗೆಲ್ಲುತ್ತೇವೆ" ಎಂದು ಘೋಷಣೆಯನ್ನೂ ಕೂಗಿದರು.
"ಕಾಯ್ದೆಗಳಲ್ಲಿ ಆಕ್ಷೇಪಣೆಯಿದ್ದರೆ ತಿಳಿಸಿ"
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪಿಯೂಶ್ ಗೋಯಲ್, ಸೋಮ್ ಪ್ರಕಾಶ್ ರೈತರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು. ಸರ್ಕಾರ ಈ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾಯ್ದೆಗಳಲ್ಲಿ ಏನಾದರೂ ಆಕ್ಷೇಪಣೆಯಿದ್ದರೆ ತಿಳಿಸಿ ಎಂದು ಮತ್ತೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪುನರುಚ್ಚರಿಸಿದರು. ಹೀಗಾಗಿ ಈ ಮಾತುಕತೆಯಲ್ಲಿಯೂ ಯಾವುದೇ ಫಲ ದೊರೆತಿಲ್ಲ.
"ಇದು ಸ್ವಾಭಿಮಾನದ ರ್ಯಾಲಿ"; ಬೃಹತ್ ಹೋರಾಟಕ್ಕೆ ರೈತರ ತಾಲೀಮು
ಜನವರಿ 15ಕ್ಕೆ ಮಾತುಕತೆ ಮುಂದೂಡಿಕೆ
ಇದೇ ಜನವರಿ 4ರಂದು ಏಳನೇ ಸುತ್ತಿನ ಮಾತುಕತೆ ನಡೆದಿತ್ತು. ಡಿ.30ರಂದು ನಡೆದಿದ್ದ ಮಾತುಕತೆಯಲ್ಲಿ ವಿದ್ಯುತ್ ಹಾಗೂ ಕೃಷಿ ತ್ಯಾಜ್ಯ ಸುಡುವ ವಿಷಯಗಳಿಗೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರಲಾಗಿತ್ತು. ಆದರೆ ರೈತರ ಮುಖ್ಯ ಬೇಡಿಕೆಗಳಾದ ಕೃಷಿ ಕಾಯ್ದೆ ರದ್ದತಿ ಹಾಗೂ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ. ಇದೀಗ ಮತ್ತೆ ಜನವರಿ 15ಕ್ಕೆ ಮಾತುಕತೆಯನ್ನು ಮುಂದೂಡಲಾಗಿದೆ.