Union Budget 2023; ಕೃಷಿ ಸ್ಟಾರ್ಟ್ ಅಪ್ಗಳಿಗೆ ಹೆಚ್ಚಿನ ಆದ್ಯತೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಕೃಷಿ ಸ್ಟಾರ್ಟ್ ಅಪ್ಗಳಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡಿದ್ದಾರೆ. ಅಲ್ಲದೇ ಅದಕ್ಕಾಗಿಯೇ ಅನುದಾನ ಮೀಸಲಿಡಲಾಗುತ್ತದೆ ಎಂದು ಹೇಳಿದ್ದಾರೆ.
ನವದೆಹಲಿ, ಫೆಬ್ರವರಿ 01; ಲೋಕಸಭೆಯ ಬಜೆಟ್ ಅಧಿವೇಶನ ಆರಂಭವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. 5ನೇ ಬಾರಿಗೆ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅದರಲ್ಲೂ ಕೃಷಿ ವಲಯದ ಸ್ಟಾರ್ಟ್ ಅಪ್ಗಳಿಗೆ ಅನುದಾನವನ್ನು ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಬಜೆಟ್ನಲ್ಲಿ 'ಕೃಷಿ ವೇಗ ವರ್ಧಕ ನಿಧಿ' ಮೀಸಲಿಡಲಾಗುತ್ತದೆ ಎಂದು ಹೇಳಿದರು.
ಬಜೆಟ್ನ ಪ್ರಮುಖ ಆದ್ಯತೆಯೇ ಕೃಷಿ ಕ್ಷೇತ್ರವಾಗಿದೆ. ಸ್ಟಾರ್ಟ್ ಅಪ್, ಬೆಳೆ ಯೋಜನೆ, ಬೆಳೆಯ ಅಂದಾಜು ಎಂದು ಮೂರು ಪ್ರಮುಖ ಅಂಶಗಳನ್ನು ಹೆಸರಿಸಲಾಗಿದೆ. ಈ ಮೂಲಕ ಮುಂದಿನ ಹಣಕಾಸು ಅವಧದಿಯೊಳಗೆ ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಸಹ ಕೇಂದ್ರ ಸರ್ಕಾರ ಹೊಂದಿದೆ.

ಸಚಿವರು ತಮ್ಮ ಭಾಷಣದಲ್ಲಿ ಕೃಷಿ ಕ್ಷೇತ್ರದ ಸ್ಟಾರ್ಟ್ ಅಪ್ ಆರಂಭಿಸುವ ಯುವಕರಿಗೆ ಉತ್ತೇಜನ ನೀಡಲು ನಿಗದಿತ ಮೊತ್ತದ ಅನುದಾನ ಮೀಸಲಿಡಲಾಗುತ್ತದೆ ಎಂದು ಘೋಷಣೆ ಮಾಡಿದರು.
ಯುವ ಉದ್ಯಮಿಗಳು ಕೃಷಿ ಕ್ಷೇತ್ರದ ಸ್ಟಾರ್ಟ್ ಅಪ್ ಸ್ಥಾಪನೆ ಮಾಡುವುದಾದರೆ ಉತ್ತೇಜನ ನೀಡಲಾಗುತ್ತದೆ. ಅದಕ್ಕಾಗಿಯೇ ಬಜೆಟ್ನಲ್ಲಿ 'ಕೃಷಿ ವೇಗ ವರ್ಧಕ ನಿಧಿ' ಸ್ಥಾಪನೆ ಮಾಡುವ ಭರವಸೆ ನೀಡಲಾಗಿದೆ. ಭಾಷಣದಲ್ಲಿ ಸಚಿವರು ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಬಜೆಟ್ ಭಾಷಣದಲ್ಲಿ ಸಚಿವರು ಸಿರಿಧಾನ್ಯದ ಬಗ್ಗೆಯೂ ಮಾತನಾಡಿದ್ದಾರೆ. ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಗೆ ಉತ್ತೇಜನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಘೋಷಣೆ ಮಾಡಿದ ಬಜೆಟ್ನಲ್ಲಿ ಕೃಷಿ ಕ್ಷೇತ್ರದ ಸಾಲದ ಗುರಿಯನ್ನು 18 ಲಕ್ಷ ಕೋಟಿಗೆ ನಿಗದಿ ಮಾಡಲಾಗಿತ್ತು. ಅದರ ಹಿಂದಿನ ವರ್ಷ 16.50 ಲಕ್ಷ ಕೋಟಿ ಮೀಸಲಿಡಲಾಗಿತ್ತು. ಈ ವರ್ಷ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಏರಿಕೆ ಮಾಡಲಾಗಿದೆ.












Click it and Unblock the Notifications