ರೈತರ ಬಗ್ಗೆ ಅಸೂಕ್ಷ್ಮರಾಗಬೇಡಿ; ಕೇಂದ್ರಕ್ಕೆ ಬಿಜೆಪಿ ಮುಖಂಡರೇ ಕೊಟ್ಟ ಎಚ್ಚರಿಕೆ
ನವದೆಹಲಿ, ಡಿಸೆಂಬರ್ 15: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ತೀವ್ರತೆ ದಿನಕಳೆದಂತೆ ಹೆಚ್ಚಾಗುತ್ತಿದೆ. ಹೀಗಿದ್ದಾಗ ರೈತರ ಮೇಲೆ ಬಳಸುತ್ತಿರುವ ಪದ ಪ್ರಯೋಗಗಳು ಈ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಬಹುದು. ಸರ್ಕಾರ ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಹತೋಟಿ ತಪ್ಪುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ ಎಂದು ಬಿಜೆಪಿ ರೈತ ಮುಖಂಡರೇ ಕೇಂದ್ರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ರೈತರಿಗೆ ಖಲಿಸ್ತಾನಿಗಳು, ತುಕ್ಡೇ ತುಕ್ಡೇ ಗ್ಯಾಂಗ್ ಎಂಬ ಪದಗಳನ್ನು ಬಳಸಿದರೆ ಇದರ ತೀಕ್ಷ್ಣ ಫಲಿತಾಂಶವನ್ನೂ ಎದುರು ನೋಡಬೇಕಾಗುತ್ತದೆ. ಇದು ಪ್ರತೀಕಾರದಲ್ಲಿಯೇ ಕೊನೆಗೊಳ್ಳುತ್ತದೆ. ಹೋರಾಟ ದೇಶದ ಇನ್ನಿತರ ಭಾಗಗಳಿಗೂ ವ್ಯಾಪಿಸುತ್ತದೆ ಎಂದು ಎಚ್ಚರಿಸಿದ್ದಾರೆ. ಮುಂದೆ ಓದಿ...

ರೈತರಿಗೆ ಇಂಥ ಭಾಷೆಗಳನ್ನು ಬಳಸಬೇಡಿ
ಮೊದಲು ರೈತರಿಗೆ ಈ ರೀತಿಯ ಭಾಷೆ ಬಳಸುವುದನ್ನು ಬಿಟ್ಟುಬಿಡಿ. ರೈತ ಸಂಘಟನೆಗಳಲ್ಲಿ ಎಡಪಂಥೀಯರು ಸೇರಿದ್ದಾರೆ ಎಂದು ಅವರನ್ನು ತುಕ್ಡೇ ತುಕ್ಡೇ ಗ್ಯಾಂಗ್ ಮತ್ತು ದೇಶ ವಿರೋಧಿ ಎಂದು ಕರೆದ ಮಾತ್ರಕ್ಕೆ ಈ ಬಿಕ್ಕಟ್ಟು ಬಗೆಹರಿಯುವುದಿಲ್ಲ. ಇದು ಪ್ರತೀಕಾರವನ್ನಷ್ಟೇ ಹುಟ್ಟುಹಾಕಬಲ್ಲದು. ಹೀಗಾಗಿ ಸೂಕ್ಷ್ಮವಾಗಿ ವರ್ತಿಸಬೇಕಿದೆ ಎಂದು ಹಿರಿಯ ಬಿಜೆಪಿ ಮುಖಂಡ ಸುರ್ಜಿತ್ ಸಿಂಗ್ ಜ್ಯಾನಿ ಸಲಹೆ ನೀಡಿದ್ದಾರೆ.
ಇದರ ಬದಲು ಹೋರಾಟ ಮಾಡುತ್ತಿರುವವರ ಬೇಡಿಕೆಗಳ ಕುರಿತು ಸೂಕ್ಷ್ಮವಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅವರು ನಮ್ಮ ಸಹೋದರರು ಎಂಬುದನ್ನು ಮರೆಯಬಾರದು. ಈ ಬಿಕ್ಕಟ್ಟನ್ನು ಪರಿಹರಿಸಲು ಮಾತುಕತೆಯೊಂದೇ ದಾರಿ ಎಂದು ತಿಳಿಸಿದ್ದಾರೆ.

ರೈತರ ಬಗ್ಗೆ ಅಸೂಕ್ಷ್ಮರಾಗಬೇಡಿ
ಪಂಜಾಬ್ ನ ಅಕಾಲಿ- ಬಿಜೆಪಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಜ್ಯಾನಿ ಅವರು ಈ ಮೂರು ಕೃಷಿ ಕಾಯ್ದೆಗಳ ಕುರಿತು ರೈತರೊಂದಿಗೆ ಮಾತುಕತೆ ನಡೆಸಲು ರೂಪಿಸಿರುವ ಎಂಟು ಮಂದಿಯನ್ನೊಳಗೊಂಡ ಸಮಿತಿಯ ನೇತೃತ್ವ ವಹಿಸಿದ್ದಾರೆ. 35 ರೈತ ಸಂಘಟನೆಗಳೊಂದಿಗೆ ಜ್ಯಾನಿ ಮಾತುಕತೆ ನಡೆಸಿದ್ದು, ಬಿಕ್ಕಟ್ಟು ಶಮನ ಮಾಡಲು ಸಾಧ್ಯವಾಗಿಲ್ಲ.
ಸರ್ಕಾರಕ್ಕೆ ಸಲಹೆ ನೀಡಿರುವ ಅವರು, "ಅಸೂಕ್ಷ್ಮವೆನಿಸಿದ ಭಾಷೆ ಬಳಸುವುದರಿಂದ ಪಕ್ಷದ ಕುರಿತು ರೈತ ಸಮುದಾಯದ ಭಾವನೆ ಹದಗೆಡುತ್ತದೆ" ಎಂದು ಹೇಳಿದ್ದಾರೆ.

"ರೈತರ ಮೇಲೆ ಎಲ್ಲರ ಸಹಾನುಭೂತಿಯಿದೆ"
ಜ್ಯಾನಿ ಅವರ ಈ ಆಲೋಚನೆಯನ್ನೇ ಪಂಜಾಬ್ ನ ಬಿಜೆಪಿ ರೈತ ಮುಖಂಡ ಸುಖೀದಂರ್ ಗ್ರೆವಾಲ್ ಅವರೂ ಪುನರುಚ್ಚರಿಸಿದ್ದಾರೆ. "ಒಂದು ಕಡೆ, ನಾವು ರೈತರೊಂದಿಗೆ ಮಾತುಕತೆ ನಡೆಸುತ್ತೇವೆ ಎನ್ನುತ್ತೇವೆ. ಇನ್ನೊಂದು ಕಡೆ ಅವರನ್ನು ಖಲಿಸ್ತಾನಿಗಳೆಂದು ಕರೆಯುತ್ತಿದ್ದೇವೆ. ಇದು ನಮಗೆ ಯಾವುದೇ ರೀತಿಯಲ್ಲೂ ಸರಿಹೊಂದುವುದಿಲ್ಲ. ಹೋರಾಟ ಮಾಡುತ್ತಿರುವ ರೈತರ ಮೇಲೆ ಎಲ್ಲಾ ರಾಜ್ಯಗಳ ರೈತರ ಸಹಾನುಭೂತಿ ಇದೆ. ಕೆಲವರು ಈ ಚಳವಳಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಪ್ರಾಮಾಣಿಕರಾಗಿರುವ ರೈತರನ್ನು ನೋಡಬೇಕಿದೆ ಎಂದಿದ್ದಾರೆ.

ಕಷ್ಟ ಕೊನೆಗಾಣಿಸಲು ಮೋದಿ ಗೆಲ್ಲಿಸಿದ್ದಾರೆ
ಬಿಜೆಪಿ ರೈತ ಮುಖಂಡರು ಮಾತ್ರವಲ್ಲ, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಗೌರಿ ಶಂಕರ್ ಬೀಸೆನ್ ಅವರೂ ಸರ್ಕಾರದ ಅಸೂಕ್ಷ್ಮತೆ ಬಗ್ಗೆ ಎಚ್ಚರಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಈ ಹೋರಾಟದ ಪರಿಣಾಮ ಅಷ್ಟಾಗಿಲ್ಲ. ಆದರೆ ಸರ್ಕಾರ ಯಾವಾಗಲೂ ಸೂಕ್ಷ್ಮವಾಗಿ, ವಿವೇಚನೆಯಿಂದ ನಡೆದುಕೊಳ್ಳಬೇಕು. ತಮ್ಮ ಕಷ್ಟಗಳನ್ನು ಕೊನೆಗಾಣಿಸಲು ಮೋದಿಯನ್ನು ಜನ ಗೆಲ್ಲಿಸಿದ್ದಾರೆ. ಬೇರೆ ರೀತಿಯ ಸಂದೇಶ ಇದರಿಂದ ಹೋಗಬಾರದು ಎಂದು ವಿವರಿಸಿದ್ದಾರೆ.
ಇಪ್ಪತ್ತು ದಿನಗಳಿಂದ ದೆಹಲಿಯ ಗಡಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದು, ಇದನ್ನು ಹಿಂತೆಗೆದುಕೊಳ್ಳುವ ಸೂಚನೆ ನೀಡುತ್ತಿಲ್ಲ. ಹೀಗಿದ್ದಾಗ ಕೆಲವು ಕೇಂದ್ರ ಸಚಿವರು, ರೈತರ ಹಿಂದೆ ದೇಶದ್ರೋಹಿ ಸಂಘಟನೆಗಳು ತೊಡಗಿಕೊಂಡಿವೆ ಎಂದು ಆರೋಪಿಸಿದ್ದಾರೆ. ಈ ಸಮಯದಲ್ಲಿ ಇವು ಸೂಕ್ತ ಹೇಳಿಕೆಗಳಲ್ಲ ಎಂದಿದ್ದಾರೆ.

ರೈತರ ಬಗ್ಗೆ ಬಿಜೆಪಿ ನಾಯಕರ ಮಾತುಗಳು
ಈಚೆಗೆ ಕಾನೂನು ಸಚಿವ ರವಿಶಂಕರ್ ಪ್ರಸಾದ್, ರೈತರ ಪ್ರತಿಭಟನೆಯಿಂದ ತುಕ್ಡೇ ತುಕ್ಡೇ ಗ್ಯಾಂಗ್ ಅವಕಾಶ ಪಡೆದುಕೊಳ್ಳುತ್ತಿದೆ ಎಂದು ದೂರಿದ್ದರು. ಸರ್ಕಾರ ಹಾಗೂ ನರೇಂದ್ರ ಮೋದಿ ಅವರು ರೈತರ ಮೇಲೆ ಗೌರವವಿಟ್ಟಿದ್ದಾರೆ. ರೈತರೂ ಮೋದಿಯವರನ್ನು ಗೌರವಿಸುತ್ತಾರೆ. ಆದರೆ ರೈತರ ಪ್ರತಿಭಟನೆ ಹೆಸರಿನಲ್ಲಿ ಕೆಲವರು ದೇಶವನ್ನು ಒಡೆಯುತ್ತಿದ್ದಾರೆ. ಅಂಥವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದರು. ರೈಲ್ವೆ ಸಚಿವ ಪಿಯೂಶ್ ಗೋಯಲ್ ಕೂಡ, ಎಡಪಂಥೀಯ ಹಾಗೂ ಮಾವೋವಾದಿಗಳು ಈ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದಾರೆ ಎಂದಿದ್ದರು. ಮೋದಿ ವಿರೋಧಿಗಳು ಈ ಪ್ರತಿಭಟನೆಯಲ್ಲಿದ್ದಾರೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಆರೋಪಿಸಿದ್ದರು. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ, ಪ್ರತಿಭಟನೆಯಲ್ಲಿ ಖಲಿಸ್ತಾನಿಗಳು ಇದ್ದಾರೆ ಎಂದಿದ್ದರು.












Click it and Unblock the Notifications