ರಾಯಚೂರು ಜಿಲ್ಲೆಯಲ್ಲಿ ವೀಳ್ಯದೆಲೆಗೆ ಬಂಗಾರದ ಬೆಲೆ, ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ ಬೆಲೆ ಏರಿಕೆ
ರಾಯಚೂರು ಜಿಲ್ಲೆಯಲ್ಲಿ ವೀಳ್ಯದೆಲೆಗೆ ಇದೀಗ ಚಿನ್ನದ ಬೆಲೆ ಬಂದಿದೆ. ಹಾಗಾದರೆ ಒಂದು ಕಟ್ಟು ವೀಳ್ಯದೆಲೆಗೆ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
ರಾಯಚೂರು, ಮಾರ್ಚ್, 07: ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಅತ್ಯವಶ್ಯಕವೆನಿಸಿರುವ ವೀಳ್ಯದೆಲೆಗೆ ಇದೀಗ ಚಿನ್ನದ ಬೆಲೆ ಬಂದಿದೆ. ಪ್ರತಿ ಒಂದು ಕಟ್ಟು ವೀಳ್ಯದೆಲೆಗೆ (ನೂರು ಎಲೆಗಳ ಕಟ್ಟು) 10 ರಿಂದ 16 ಸಾವಿರ ರೂಪಾಯಿವರೆಗೆ ಮಾರಾಟವಾಗುತ್ತಿದ್ದು, ಇದು ಸಾರ್ವಕಾಲಿಕ ದಾಖಲೆ ಎನಿಸಿದೆ.
ಈ ಹಿಂದೆ ವೀಳ್ಯದೆಲೆ ಒಂದು ಪುಟ್ಟಿಗೆ 3 ಸಾವಿರ ರೂಪಾಯಿ ದೊರೆತರೆ ಹೆಚ್ಚು ಎಂಬಂತ್ತಿತ್ತು. ಆದರೆ ಇದೀಗ ಈ ಬೆಲೆ 6 ರಿಂದ 8 ಪಟ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಿನ ಬೆಲೆಗೆ ವೀಳ್ಯದೆಲೆ ಮಾರಾಟವಾಗುತ್ತಿದೆ. ಜಿಲ್ಲೆಯ ಬಹುತೇಕ ವ್ಯಾಪಾರಿಗಳಿಗೆ ಬಳ್ಳಾರಿ, ಕೋಲಾರ, ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆ ಸೇರಿ ಇನ್ನಿತರ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ವೀಳ್ಯದೆಲೆ ಬರುತ್ತದೆ.

ಎಲೆ ತೋಟಗಳಿಗೆ ಹಾನಿ
ಇಳುವರಿ ಕಡಿಮೆಯಾಗಿರುವುದು ವೀಳ್ಯದೆಲೆ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಅಧಿಕ ಮಳೆ ಸುರಿದ ಪರಿಣಾಮ ಎಲೆ ತೋಟಗಳಿಗೆ ಹಾನಿಯಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಆದರೆ ಇದೀಗ ಒಂದು ವಾರದಲ್ಲಿ ಒಂದು ಕಟ್ಟಿನ ಬೆಲೆ 50 ರಿಂದ 60 ರೂಪಾಯಿ ಹೆಚ್ಚಳ ಆಗುವ ಮೂಲಕ ಗ್ರಾಹಕರಿಗೆ ಹೊರೆಯಾದಂತಾಗಿದೆ.
ಒಂದು ಕಟ್ಟಿನಲ್ಲಿರುವ ಎಲೆಗಳೆಷ್ಟು?
ಒಂದು ಕಟ್ಟಿನಲ್ಲಿ ಒಟ್ಟು 100 ವೀಳ್ಯದೆಲೆ ಇರುತ್ತವೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ವೀಳ್ಯದೆಲೆ ಸರಾಸರಿ 2 ರೂಪಾಯಿಗೆ ಒಂದು ಮಾರಾಟ ಆಗುತ್ತಿದೆ. ಯಾವುದೇ ಧಾರ್ಮಿಕ ಪೂಜಾ ಕಾರ್ಯಗಳು, ಶುಭ, ಸಮಾರಂಭಗಳು, ಮದುವೆ ನಡೆಯಬೇಕಾದರೂ ವೀಳ್ಯದೆಲೆ ಬೇಕಾಗುತ್ತದೆ. ಎಲೆ, ಅಡಕೆ ಜಗಿಯುವವರ ಪಾಲಿಗೂ ವೀಳ್ಯದೆಲೆ ಬೇಕು. ಕಳೆದ ಒಂದು ತಿಂಗಳಿನಿಂದ ವೀಳ್ಯದೆಲೆ ಬೆಲೆ ಬರೋಬ್ಬರಿ ಮೂರು ಪಟ್ಟು ಹೆಚ್ಚಳ ಆಗಿದ್ದು ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸಿ ಹೋಗಿದ್ದಾರೆ.

ವೀಳ್ಯದೆಲೆ ಬೆಲೆ ಹೆಚ್ಚಳಕ್ಕೆ ಕಾರಣ ಏನು?
ಈ ವರ್ಷ ಇಳುವರಿ ಕಡಿಮೆ ಇರುವುದರಿಂದ ಜಿಲ್ಲೆಯಾದ್ಯಂತ ವೀಳ್ಯದೆಲೆ ಬೆಲೆ ಹೆಚ್ಚಾಗಿದೆ. ಒಂದು ಬುಟ್ಟಿ ವೀಳ್ಯದೆಲೆಗೆ ಸಾವಿರ ರೂಪಾಯಿ ಹೆಚ್ಚಾಗಿದೆ. ಇದರಿಂದ ನಾವು 50 ರೂಪಾಯಿ ಹೆಚ್ಚಳಕ್ಕೆ ಮಾರಾಟ ಮಾಡುತ್ತಿದ್ದು, ಇದು ಗ್ರಾಹಕರಿಗೆ ತೊಂದರೆಯಾಗಿದೆ ಎಂದು ವೀಳ್ಯದೆಲೆ ವ್ಯಾಪಾರಿ ಖಾಜಾ ಮಹಿಮುದ್ದೀನ್ ಹೇಳಿದರು.
ರಾಜ್ಯದಲ್ಲಿಯೇ ಹೆಸರುವಾಸಿಯಾದ ನಮ್ಮೂರಿನ ವೀಳ್ಯದೆಲೆಗೆ ವ್ಯವಸ್ಥಿತವಾದ ಮಾರುಕಟ್ಟೆಯನ್ನು ನಿರ್ಮಿಸದಿರುವುದು ನೋವಿನ ಸಂಗತಿಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಎಪಿಎಂಸಿ ಉತ್ತಮ ಮಾರುಕಟ್ಟೆ ನಿರ್ಮಿಸಲು ಮುಂದಾಬೇಕು ಎಂದು ಷಂಶಿಪುರದ ಎಲೆ ಬೆಳೆಗಾರ ಬಸವನಗೌಡ ಹೇಳಿದರು.












Click it and Unblock the Notifications