ಅಧಿಕಾರಿಗಳ ಯಡವಟ್ಟಿಗೆ 300 ಎಕರೆ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿ ಬೆಳಗಾವಿ ರೈತರು
ಬೆಳಗಾವಿ, ನವೆಂಬರ್ 2: ಅಧಿಕಾರಿಗಳು ಮಾಡಿದ ಯಡವಟ್ಟಿನಿಂದಾಗಿ ಬೆಳಗಾವಿಯ ಸುಮಾರು 70 ರೈತರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ತಮ್ಮ ಜೀವನಕ್ಕೆ ಆಧಾರವಾಗಿರುವ ಕೃಷಿ ಜಮೀನನ್ನೇ ಕಳೆದುಕೊಳ್ಳುವ ಆತಂಕದಲ್ಲಿ ಈ ರೈತರಿದ್ದಾರೆ. ಇದೆಲ್ಲವೂ ಆಗಿರುವುದು ಅಧಿಕಾರಿಗಳು ಮಾಡಿರುವ ಒಂದು ತಪ್ಪಿನಿಂದ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕಉಳ್ಳಿಗೇರಿ ಗ್ರಾಮದ ಹಳ್ಳದ ಎಂಬ ಮನೆತನದ ರೈತರ ಕೃಷಿ ಜಮೀನನ್ನು ಸರ್ಕಾರಿ ಜಮೀನು ಎಂದು ದಾಖಲಿಸಲಾಗಿದೆ. ಸುಮಾರು 300 ಎಕರೆ ಕೃಷಿ ಜಮೀನನ್ನು ಸರ್ಕಾರಿ ಜಮೀನು ಎಂದು ದಾಖಲಿಸಿದ್ದು, ಈ ರೈತರಿಗೆ ಈಗ ಸರ್ಕಾರಿ ಸವಲತ್ತುಗಳೂ ಸಿಗದಂತಾಗಿದೆ.
ಚಿಕ್ಕ ಉಳ್ಳಿಗೇರಿ ಹಾಗೂ ಇನಾಮ ಹೊಂಗಲದಲ್ಲಿರುವ ಸುಮಾರು 300 ಎಕರೆಯಷ್ಟು ಜಮೀನು ತಾಂತ್ರಿಕ ಕಾರಣಗಳಿಂದ ಜೂನ್ 2020ರಿಂದ ಸರ್ಕಾರಿ ಜಮೀನು ಎಂದು ದಾಖಲಾಗಿದೆ. ಹೀಗಾಗಿ ಇವರಿಗೆ ಸರ್ಕಾರದ ನೆರೆ ಪರಿಹಾರವೂ ಇಲ್ಲ, ಬ್ಯಾಂಕ್ಗಳಲ್ಲಿ ಸಾಲ ಕೂಡ ಸಿಗುತ್ತಿಲ್ಲ.

ಅಧಿಕಾರಿಗಳ ಈ ತಪ್ಪಿನಿಂದ ನಾವು ಕಷ್ಟ ಅನುಭವಿಸುತ್ತಿದ್ದೇವೆ. ಆರು ತಿಂಗಳಿನಿಂದ ಅಲೆದಾಟ ನಡೆಸುತ್ತಿದ್ದೇವೆ. ಕೂಡಲೇ ಈ ತಪ್ಪನ್ನು ಸರಿಪಡಿಸಿ, ಇದಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗಳ್ಳಿ ಎಂದು ರೈತರು ಸೋಮವಾರ ನಗರದ ಡಿಸಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದ್ದಾರೆ. ಈಚೆಗೆ ಬೆಳಗಾವಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿದ್ದು, ಇವರ ಸಮಸ್ಯೆಯನ್ನು ಆಲಿಸಿದ್ದರು. ಆದರೆ ಸಮಸ್ಯೆ ಬಗೆಹರಿಯದ ಹಿನ್ನೆಲೆ ರೈತರೇ ಹೋರಾಟಕ್ಕಿಳಿದಿದ್ದಾರೆ.

ಅಧಿಕಾರಿಗಳ ತಪ್ಪಿನಿಂದ ರೈತರು ಶಿಕ್ಷೆ ಅನುಭವಿಸುವಂತಾಗಿದೆ. ಸರ್ಕಾರ ಈ ಕೂಡಲೇ ಸ್ವಯಾರ್ಜಿತ ಜಮೀನಿನ ದಾಖಲೆಯಲ್ಲಿ ಆಗಿರುವ ತಪ್ಪನ್ನು ಸರಿಪಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.












Click it and Unblock the Notifications