ಒನ್ ಟೈಮ್ ಸೆಟ್ಲ್ ಮೆಂಟ್ ಗೆ ಬ್ಯಾಂಕ್-ರೈತರು ಒಪ್ಪಿಗೆ: ಎಚ್ಡಿಕೆ
ಬೆಂಗಳೂರು, ನವೆಂಬರ್ 08: ಆಕ್ಸಿಸ್ ಬ್ಯಾಂಕ್ ಕೋಲ್ಕೊತ್ತಾದ ನ್ಯಾಯಾಲಯದಲ್ಲಿ ಬೆಳಗಾವಿ ರೈತರ ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ರೈತರು ಆತಂಕಗೊಂಡಿದ್ದರು. ಆದರೆ, ಬಗ್ಗೆ ಕರ್ನಾಟಕ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ರೈತರ ಹಿತ ಕಾಪಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರೈತರ ಹಿತಾಸಕ್ತಿ ಕಾಪಾಡಲು ಈ ಎಲ್ಲ ಪ್ರಕ್ರಿಯೆಗಳನ್ನು ಖುದ್ದು ಮೇಲ್ವಿಚಾರಣೆ ನಡೆಸಲು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಕುಮಾರಸ್ವಾಮಿ ಅವರ ನಿರ್ದೇಶನದಂತೆ ಬೆಳಗಾವಿ ಜಿಲ್ಲಾಧಿಕಾರಿಗಳು ಆಕ್ಸಿಸ್ ಬ್ಯಾಂಕ್ ನ ಹಿರಿಯ ಉಪಾಧ್ಯಕ್ಷರು ಹಾಗೂ ರೈತ ಪ್ರತಿನಿಧಿಗಳೊಂದಿಗೆ ನಡೆಸಿದ ಸಂಧಾನ ಸಭೆಯಲ್ಲಿ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಈ ಕೆಳಕಂಡ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

* ರೈತರ ವಿರುದ್ಧ ಹೂಡಿರುವ ಎಲ್ಲ ಪ್ರಕರಣಗಳನ್ನು ಕೋಲ್ಕೊತ್ತಾದಿಂದ ಸ್ಥಳೀಯ ನ್ಯಾಯಾಲಯಗಳಿಗೆ ವರ್ಗಾಯಿಸಲು ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಸಮ್ಮತಿಸಿದರು.
* ಆಕ್ಸಿಸ್ ಬ್ಯಾಂಕ್ ದಾಖಲಿಸಿರುವ ಪ್ರಕರಣಗಳಲ್ಲಿ ಸುಮಾರು 25-30 ಪ್ರಕರಣಗಳು ರಾಜ್ಯದ ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಬರುವುದರಿಂದ ಈ ಬಗ್ಗೆ ಕಾನೂನು ಕ್ರಮ ಕೈಬಿಡಲು ಬ್ಯಾಂಕ್ ಅಧಿಕಾರಿಗಳು ಸಮ್ಮತಿಸಿದರು.
* ಟ್ರಾಕ್ಟರ್ ಖರೀದಿ, ಕೃಷಿ ಯಂತ್ರೋಪಕರಣ ಖರೀದಿ, ಜಮೀನು ಅಭಿವೃದ್ಧಿ ಮುಂತಾದ ಉದ್ದೇಶಗಳಿಗೆ ಪಡೆದಿರುವ ಸಾಲಗಳ ಸಂಬಂಧ ಒನ್ ಟೈಮ್ ಸೆಟಲ್ ಮೆಂಟ್ ಗೆ ರೈತರು ಹಾಗೂ ಬ್ಯಾಂಕ್ ಅಧಿಕಾರಿಗಳು ಸಮ್ಮತಿಸಿದರು.
* ಈ ಎಲ್ಲ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ನಾಲ್ಕು ತಾಲ್ಲೂಕುಗಳಲ್ಲಿ ಉಪವಿಭಾಗಾಧಿಕಾರಿ ಗಳ ನೇತೃತ್ವದಲ್ಲಿ ಅದಾಲತ್ ನಡೆಸಿ ವಿಲೇವಾರಿ ಮಾಡಲು ತೀರ್ಮಾನಿಸಲಾಯಿತು.












Click it and Unblock the Notifications