ಅಡಿಕೆ, ಕಾಳುಮೆಣಸು ಬೆಳೆಯುವ ರೈತರಿಗೆ ಸಿಹಿಸುದ್ದಿ
ಬೆಂಗಳೂರು, ಜುಲೈ 09; ತೋಟಗಾರಿಕೆ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯನ್ನು ಘೋಷಣೆ ಮಾಡಿದೆ. ಅಡಿಕೆ ಮತ್ತು ಕಾಳುಮೆಣಸು ಬೆಳೆಗಳನ್ನು ಸೇರಿಸಲಾಗಿದೆ. ಯೋಜನೆಯಡಿ ರೈತರು ನೋಂದಣಿ ಮಾಡಿಕೊಳ್ಳಲು ಕರೆ ನೀಡಿದ್ದು, ಹವಾಮಾನ ವೈಪರೀತ್ಯದಿಂದ ಉಂಟಾಗುವ ಬೆಳೆ ನಷ್ಟಕ್ಕೆ ಮುಂಗಾರು ಹಂಗಾಮಿನಲ್ಲಿ ಯೋಜನೆಯಡಿ ಪರಿಹಾರ ಸಿಗಲಿದೆ.
ಜೂನ್ 26ರಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಕೋಟ ಶ್ರೀನಿವಾಸ ಪೂಜಾರಿ ತೋಟಗಾರಿಕೆ ಇಲಾಖೆ ಆಯುಕ್ತರಿಗೆ ಪತ್ರವನ್ನು ಬರೆದಿದ್ದರು. ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ಅಡಿಕೆ, ಕಾಳುಮೆಣಸು ಬೆಳೆಗಳನ್ನು ಸೇರಿಸಲು ಒತ್ತಾಯಿಸಿದ್ದರು. ನೋಂದಣಿಗೆ ಹೆಚ್ಚಿನ ದಿನಗಳ ತನಕ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು.

ಈಗ ಹವಾಮಾನಾಧಾರಿತ ಬೆಳೆ ವಿಮೆ ಮರು ವಿನ್ಯಾಸಗೊಳಿಸಲಾಗಿದೆ. ರೈತರು ಅಡಿಕೆ ಬೆಳೆ ಪ್ರತಿ ಹೆಕ್ಟೇರ್ಗೆ ವಿಮಾ ಮೊತ್ತ 1,28,000 ರೂ. ಗಳಿಗೆ ವಿಮಾಕಂತು (ಶೇ.5) 6,400 ರೂ. ಹಾಗೂ ಕರಿಮೆಣಸು ಪ್ರತಿ ಹೆಕ್ಟೇರ್ಗೆ ವಿಮಾ ಮೊತ್ತ 47,000 ರೂ. ಗಳಿಗೆ ವಿಮಾಕಂತು (ಶೇ.5) 2,350 ರೂ. ಪಾವತಿಸಿ, ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ರೈತರು ವಿಮಾ ಕಂತುಗಳನ್ನು ಪಾವತಿ ಮಾಡಿದ ಜುಲೈ 15ರ ತನಕ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ವಿಮಾ ಕಂತುಗಳನ್ನು ಪಾವತಿಸಲು ನಿಗದಿತ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್ ಮತ್ತು ಡಿಜಿಟಲ್ ಇ-ಸೇವಾ ಕೇಂದ್ರಗಳನ್ನು ರೈತರು ಸಂಪರ್ಕಿಸಬಹುದಾಗಿದೆ.
ರೈತರಿಗೆ ಅನುಕೂಲ; ಬೆಳೆ ವಿಮಾ ಯೋಜನೆಯಲ್ಲಿ ಗ್ರಾಮ ಪಂಚಾಯತಿಗಳನ್ನು ವಿಮಾ ಘಟಕಗಳಾಗಿ ಅಧಿಸೂಚಿಸಲಾಗಿದ್ದು, ಅಡಿಕೆ ಹಾಗೂ ಕಾಳುಮೆಣಸು ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ವಿಮಾ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆಯು ಐಚ್ಛಿಕವಾಗಿದ್ದು, ಬೆಳೆ ಸಾಲ ಪಡೆದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳದೇ ಇರಲು ಇಚ್ಚಿಸಿದಲ್ಲಿ ನೋಂದಣಿಯ ಅಂತಿಮ ದಿನಾಂಕದ ಒಂದು ವಾರದೊಳಗೆ ಮುಚ್ಚಳಿಕೆ ಪತ್ರವನ್ನು ಬೆಳೆ ಸಾಲ ಪಡೆದ ಹಣಕಾಸು ಸಂಸ್ಥೆಗೆ ಸಲ್ಲಿಸಬೇಕು.
ವಿಮೆ ಮಾಡಿಸುವ ರೈತರು ಫ್ರೂಟ್ ತಂತ್ರಾಂಶದ ನೋಂದಣಿ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿದ್ದು, ಸದರಿ ನೋಂದಣಿ ಸಂಖ್ಯೆಗೆ ಪಹಣಿ ವಿವರವನ್ನು ಜೋಡಿಸಿಕೊಳ್ಳಬೇಕು. ನೋಂದಣಿ ಸಂಖ್ಯೆ ಹೊಂದಿಲ್ಲದ ರೈತರು ನೋಂದಣಿ ಸಂಖ್ಯೆಯನ್ನು ಮಾಡಿಕೊಂಡು ವಿಮೆಯಲ್ಲಿ ಪಾಲ್ಗೊಳ್ಳಬೇಕು.
ರೈತರು ವಿಮೆ ಮಾಡಲ್ಪಟ್ಟ ಬೆಳೆಗಳಿಗೆ 2023ರ ಜುಲೈ 1 ರಿಂದ 2024ರ ಜೂನ್ 30ರ ವರೆಗೆ ವಿಮೆ ರಕ್ಷಣೆಯ ಅವಧಿ ಇದ್ದು, ನಿಗದಿತ ಟರ್ಮ್ ಶೀಟ್ ಹಾಗೂ ನಷ್ಟ ಲೆಕ್ಕಾಚಾರದ ಕಾಲಮಿತಿಯೊಳಗೆ ಹವಾಮಾನ ವೈಪರಿತ್ಯಗಳಿಂದಾಗಿ ಬೆಳೆ ನಷ್ಟ ಉಂಟಾದಲ್ಲಿ, ವಿಮೆ ರಕ್ಷಣೆಯ ಅವಧಿ ಮುಗಿದ 45 ದಿನಗಳ ಒಳಗೆ ವಿಮಾ ಕಂಪೆನಿಯು ನಷ್ಟ ಪರಿಹಾರವನ್ನು ಪಾವತಿಸುತ್ತದೆ.
ವಿಮೆ ಅರ್ಜಿಯಲ್ಲಿ ಸಕ್ರಿಯ ಆಧಾರ್ ಮಾಹಿತಿಯನ್ನು ರೈತರು ನೀಡಬೇಕು. ಬೆಳೆ ಸಾಲ ಹೊಂದಿಲ್ಲದ ರೈತರು ಆಧಾರ್ ಮಾಹಿತಿಯೊಂದಿಗೆ ಜಮೀನಿನ ಪಹಣಿ ಪ್ರತಿ, ಉಳಿತಾಯ ಖಾತೆ ಮಾಹಿತಿ ದಾಖಲೆಗಳು, ಸ್ವಯಂಘೋಷಣೆ ನಮೂನೆಗಳನ್ನು ಪ್ರೀಮಿಯಂ ಮೊತ್ತದೊಂದಿಗೆ ಹಣಕಾಸು ಸಂಸ್ಥೆಗಳಿಗೆ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ವಾಣಿಜ್ಯ, ಗ್ರಾಮೀಣ ಸಹಕಾರಿ ಬ್ಯಾಂಕ್, ಹೋಬಳಿ ರೈತ ಸಂಪರ್ಕ ಕೇಂದ್ರ, ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications