ಇದು ರಾಷ್ಟ್ರೀಯ ಭದ್ರತೆ ವಿಚಾರ, ಬಗೆಹರಿಸಿ: ಅಮಿತ್ ಶಾಗೆ ಅಮರಿಂದರ್ ಸಿಂಗ್ ಮನವಿ
ನವದೆಹಲಿ, ಡಿಸೆಂಬರ್ 3: ರಾಷ್ಟ್ರ ರಾಜಧಾನಿ ದೆಹಲಿಯ ಸಮೀಪದ ಹೆದ್ದಾರಿಗಳಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಯು ಪಂಜಾಬ್ನ ಆರ್ಥಕತೆಗೆ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆಗೂ ಬೆದರಿಕೆ ಒಡ್ಡಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ. ಎರಡೂ ಕಡೆಯವರು ತಮ್ಮ ಬಿಗಿಪಟ್ಟು ಸಡಿಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅಮರಿಂದರ್ ಸಿಂಗ್, 'ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆಗಳು ನಡೆಯುತ್ತಿವೆ. ಇದರಲ್ಲಿ ನಾನು ಪರಿಹರಿಸುವುದು ಏನೂ ಇಲ್ಲ. ಗೃಹ ಸಚಿವರೊಂದಿಗಿನ ಸಭೆಯ ವೇಳೆ ನನ್ನ ವಿರೋಧವನ್ನು ಪುನರುಚ್ಚರಿಸಿದ್ದೇನೆ ಮತ್ತು ಈ ವಿವಾದವು ನನ್ನ ರಾಜ್ಯದ ಆರ್ಥಿಕತೆಗೆ ಮತ್ತು ದೇಶದ ಭದ್ರತೆ ಹಾನಿಯುಂಟು ಮಾಡುವುದರಿಂದ ಬೇಗನೆ ಬಗೆಹರಿಸುವಂತೆ ಕೋರಿದ್ದೇನೆ' ಎಂದರು.
ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದರು.

ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಅನೇಕರು ಪ್ರಶಸ್ತಿ ವಾಪಸ್ ಚಳವಳಿಯನ್ನು ಆರಂಭಿಸಿದ್ದಾರೆ. ಪಂಜಾಬ್ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ತಮ್ಮ ಪದ್ಮ ವಿಭೂಷಣ ಪುರಸ್ಕಾರವನ್ನು ಮರಳಿಸಿದ್ದಾರೆ. ಅಕಾಲಿದಳದ ಮಾಜಿ ಮುಖಂಡ ಸುಖದೇವ್ ಸಿಂಗ್ ಧಿಂಡ್ಸಾ ಅವರು ಪದ್ಮಭೂಷಣ ಪುರಸ್ಕಾರವನ್ನು ವಾಪಸ್ ನೀಡಿದ್ದಾರೆ.












Click it and Unblock the Notifications