ರೈತರ ಒಡಲಾಳದ ಉರಿಯ ಪ್ರಕಟಣೆ: ದಾಳಿಕಾರಂಗೆ ಧರ್ಮವುಂಟೆ ಕರುಳುಂಟೆ
ದೇಶದ ರೈತ ಸಂಘಟನೆಗಳೆಲ್ಲಾ ಸೇರಿ ಸಮಾನ ಬೇಡಿಕೆಗಳಿಗಾಗಿ ತಮ್ಮ ಹಕ್ಕೋತ್ತಾಯವನ್ನು ಕೇಂದ್ರ ಸರ್ಕಾರದ ಎದುರು ಮಂಡಿಸಲು ಒಂದು ವೇದಿಕೆ/ಒಕ್ಕೂಟ ಮಾಡಿಕೊಂಡು ಹೋರಾಟ ನಡೆಸುವ ಪರಂಪರೆ ಹಿಂದಿನಿಂದಲೂ ಜಾರಿಯಲ್ಲಿದೆ.
ಪ್ರೊ. ಎಂಡಿಎನ್, ಮಹೇಂದ್ರ ಸಿಂಗ್, ಟಿಕಾಯತ್ ಇನ್ನೂ ಹಲವು ಹಿರಿಯರು ಕೂಡಿ ಇಂಡಿಯನ್ ಕೋರ್ಡಿನೇಶನ್ ಕಮಿಟಿ ಆಫ್ ಫಾರ್ಮರ್ಸ್ ಎಂಬ ವೇದಿಕೆಯನ್ನು ಮಾಡಿದ್ದರು. ಅದು ಈಗಲೂ ಚಾಲ್ತಿಯಲ್ಲಿದೆ.
ಸಿಂಘು ಗಡಿಯಲ್ಲಿ ಪ್ರತಿಭಟನೆ ಮುಂದುವರೆಸಿದ ರೈತರು
ಇದೀಗ ಬದಲಾದ ಕಾಲಮಾನದಲ್ಲಿ ಸಂಘಟನೆ ಹಾಗೂ ಸಂವಹನದ ಹೊಸ ಸಾಧ್ಯತೆಗಳನ್ನರಿತು, ರಾಷ್ಟ್ರ ಮಟ್ಟದಲ್ಲಿ ಅನೇಕ ಒಕ್ಕೂಟಗಳು ಜನ್ಮ ತಾಳಿವೆ. ಪ್ರಸ್ತುತ "ದಿಲ್ಲಿ ಚಲೋ" ಕಾರ್ಯಕ್ರಮ ಅಂಥದ್ದೇ ಒಂದು ಒಕ್ಕೂಟ. ಅದರ ಹೆಸರು "ಸಂಯುಕ್ತ್ ಕಿಸಾನ್ ಮೂಮೆಂಟ್" ಈ ಸಂಘಟನೆಯಲ್ಲಿ ದೇಶದ ಹತ್ತಾರು ರೈತ ಸಂಘಟನೆಗಳಿವೆ.
ಇದೀಗ ದಿಲ್ಲಿಯ ಹೊರವಲಯ ತಲುಪಿರುವ ಲಕ್ಷಾಂತರ ರೈತರ ಜಾಥಾ ಸುಮಾರು 80 ಕಿಲೋಮೀಟರ್ ನಷ್ಟು ಉದ್ದವಿದೆ. (ಮೊದಲನೆಯ ಸಾಲು ವಿಧಾನ ಸೌಧದ ಮುಂದಿದ್ದರೆ ಜಾಥಾದ ಕೊನೆಯ ಸಾಲು ತುಮಕೂರು ದಾಟಿ ಗುಬ್ಬಿಯ ಬಳಿ ಇದೆ ಎಂದು ಊಹಿಸಿಕೊಳ್ಳಿ).
ಐತಿಹಾಸಿಕ ರೈತರ ಜಾಥಾ
ದಿಲ್ಲಿ ಹೊರವಲಯ ತಲುಪಿರುವ ರೈತರು ತಮಗೆ ಮಾರ್ಗಮಧ್ಯೆ ಉತ್ತರ ಪ್ರದೇಶ ಸರ್ಕಾರ ನೀಡಿದ ಕಿರುಕುಳದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡದಿಂದ ಬಂದಿದ್ದ ರೈತರ ದಂಡನ್ನು ಉತ್ತರ ಪ್ರದೇಶದ ಪೊಲೀಸರು ವಶಕ್ಕೆ ಪಡೆದು ಜಾಥಾಗೆ ತಡೆಯೊಡ್ಡಿದ್ದಾರೆ. ಇಂಥದೊಂದು ಐತಿಹಾಸಿಕ ರೈತರ ಜಾಥಾ ಘಟಿಸಿರುವುದು ರೈತರ ಬದುಕಿನ ಹಕ್ಕುನ್ನು ಕಸಿಯುತ್ತಿರುವ ಮೂರು ಕೃಷಿ ಕಾಯಿದೆಗಳು ಹಾಗೂ ವಿದ್ಯುತ್ ನೀತಿ 2020 ರ ವಿರುದ್ಧ. ಇದೀಗ ಕೇಂದ್ರ ಸರ್ಕಾರದ "ಮಾತುಕತೆ" ಎಂಬ ದಿಕ್ಕು ತಪ್ಪಿಸುವ ತಂತ್ರಕ್ಕೆ ತಾವು ಮಣಿಯುವುದಿಲ್ಲ. ನಾವಿಲ್ಲಿ ಬಂದಿರುವುದು ನಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲೋಸುಗವೇ ಹೊರತು ವೃಥಾ ಮಾತುಕತೆಯೆಂಬ ಕಾಲಹರಣಕ್ಕಲ್ಲ, ಎಂಬುದಾಗಿ ರೈತರು ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದ್ದಾರೆ.
ರೈತರಿಗೆ ಅನುಕೂಲವಾಗಲಿದೆ ಎಂಬ ಆಧಾರರಹಿತ ವಂಚನೆ
ಇಡೀ ದೇಶದ ರೈತರು, ರೈತ ಸಂಘಟನೆಗಳು, ರೈತ ಮುಖಂಡರು, ಜನಪರ ಅರ್ಥಶಾಸ್ತ್ರಜ್ಞರು ಹೊಸ ಕೃಷಿ ಕಾಯಿದೆಗಳನ್ನು ವಿರೋಧಿಸುತ್ತಿದ್ದರೂ, ಈ ಮೂರೂ ಕಾಯಿದೆಗಳಿಂದ 'ರೈತರಿಗೆ ಅನುಕೂಲವಾಗಲಿದೆ' ಎಂಬ ಆಧಾರರಹಿತ ವಂಚನೆಯ ಮಾತುಗಳನ್ನಾಡುತ್ತಾ ಸರ್ಕಾರ ಕಾಲಕಳೆಯುತ್ತಿದೆ. ಜೊತೆಗೆ ಈ ಕಾಯಿದೆಗಳು ರೈತ ಪರವಾಗಿವೆ ಎಂದು ಬಿಂಬಿಸಲು ಸರ್ಕಾರದ ಹಣ ವ್ಯಯಮಾಡಲಾಗುತ್ತಿದೆ.
ಪಡಿತರ ವ್ಯವಸ್ಥೆಯೂ ಸರ್ಕಾರದ ಕೈತಪ್ಪಿ ಹೋಗಲಿದೆ
ಈ ಕಾಯಿದೆಗಳಿಂದ ಕೃಷಿ ಬೆಳೆಗಳಿಗೆ ಸರ್ಕಾರ ನೀಡುವ ಕನಿಷ್ಟ ಬೆಂಬಲ ಬೆಲೆ ಸಿಗದೆ ಹೋಗುವ ಮತ್ತು ಕೃಷಿ ಕ್ಷೇತ್ರ ಖಾಸಗಿ ಕಂಪನಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಸ್ವತ್ತಾಗುವ ಅಪಾಯವಿದೆ. ಇದನ್ನು ನಾವು ಅರಿತಿದ್ದೇವೆ ಎಂಬುದಾಗಿ ರೈತರು ತಮ್ಮ ಮನದಾಳದ ಮಾತುಗಳನ್ನು ಕೇಂದ್ರಕ್ಕೆ ಸ್ಪಷ್ಟಪಡಿಸುತ್ತಿದ್ದಾರೆ. ಇದಲ್ಲದೆ ದೇಶದ ಪಡಿತರ ವ್ಯವಸ್ಥೆಯೂ ಸರ್ಕಾರದ ಕೈತಪ್ಪಿ ಹೋಗುವುದಲ್ಲದೆ ದೇಶದ ಆಹಾರ ಭದ್ರತೆಯೂ ವ್ಯಕ್ತಿಗಳ, ಕಂಪನಿಗಳ ಕೈ ಸೇರುವ ಬಹು ದೊಡ್ಡ ಅಪಾಯ ಎದುರಾಗಿದೆ.
ರೈತ ಸಂಘಟನೆಗಳ ಒಕ್ಕೂಟ ಒಕ್ಕೊರಲಿನಿಂದ ಪ್ರಶ್ನಿಸಿದೆ
ಈಗ ನಡೆಯುತ್ತಿರುವ ರೈತರ ಜಾಥಾ ಯಾವುದೇ ರಾಜಕೀಯ ಪಕ್ಷಗಳ ವ್ಯಕ್ತಿಗಳಿಂದ ಪ್ರೇರಿತವಾಗಿರುವುದಲ್ಲ. ಇದು ಅನ್ನದಾತನ ಒಡಲಾಳದ ಉರಿಯ ಪ್ರಕಟಣೆ ಎಂಬುದಾಗಿ ರೈತ ಸಂಘಟನೆಗಳ ಒಕ್ಕೂಟ ಪದೇ ಪದೇ ಹೇಳುತ್ತಿದೆ.
ಸರ್ಕಾರದ ಬದ್ಧತೆ ಹಾಗೂ ಪ್ರಾಮಾಣಿಕತೆಯನ್ನು ರೈತ ಸಂಘಟನೆಗಳ ಒಕ್ಕೂಟ ಒಕ್ಕೊರಲಿನಿಂದ ಪ್ರಶ್ನಿಸಿದೆ. ಪಂಜಾಬ್, ಉತ್ತರ ಪ್ರದೇಶ ಉತ್ತರಾಖಂಡ್, ಮಧ್ಯಪ್ರದೇಶ, ಒರಿಸ್ಸಾ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ರೈತ ಸಂಘಟನೆಗಳು ಈ ಒಕ್ಕೂಟದಲ್ಲಿ ಭಾಗಿಯಾಗಿವೆ.
ಅಲ್ಲಮನ ವಚನದ ಸಾಲುಗಳು ನೆನಪಾಗುತ್ತಿವೆ
ಇಡೀ ದೇಶದ ರೈತರು ತಮ್ಮ ಹಕ್ಕೋತ್ತಾಯಗಳಿಗಾಗಿ ಶಾಂತಿಯುತ ಜಾಥಾ ನಡೆಸುತ್ತಿರಬೇಕಾದರೆ ಅವರ ಮೇಲೆ ಶೆಲ್ ಗಳನ್ನು ಸಿಡಿಸುವುದು, ವಾಟರ್ ಜೆಟ್ ಗಳನ್ನು ಪ್ರಯೋಗಿಸುವುದು, ಲಾಠಿ ಬೀಸುವುದು, ಹೆದ್ದಾರಿಯನ್ನೇ ಕಡಿದು ದಾರಿ ಕಾಣದಾಗಿಸುವ ಸರ್ಕಾರದ ನಡೆ ನೋಡುತ್ತಿದ್ದರೆ ಅಲ್ಲಮನ ವಚನದ ಸಾಲುಗಳು ನೆನಪಾಗುತ್ತಿವೆ.
ಅಗ್ನಿಗೆ ತಂಪುಂಟೆ
ವಿಷಕ್ಕೆ ರುಚಿಯುಂಟೆ
ದಾಳಿಕಾರಂಗೆ ಧರ್ಮವುಂಟೆ ಕರುಳುಂಟೆ.