ಹಾಸನ: ಕೃಷಿ ನಂಬಿ ಬದುಕುತ್ತಿದ್ದ ರೈತರಿಗೆ ಸಂಕಷ್ಟ ತಂದ ಹೊಸ ಯೋಜನೆ
ಹಾಸನ, ಅಕ್ಟೋಬರ್ 12: ಕೃಷಿಯನ್ನೇ ನಂಬಿ ಬದುಕಿದ್ದ ರೈತರಿಗೆ ಹೊಸ ಯೋಜನೆವೊಂದು ದೊಡ್ಡ ತಲೆನೋವಾಗಿ ಪರಿಣಮಿಸಿರುವ ಘಟನೆ ಹಾಸನ ತಾಲೂಕಿನ ಜಿ. ಮೈಲನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವುದಿಲ್ಲ ಅನ್ನುವುದು ಸರ್ವೇ ಸಾಮಾನ್ಯ. ಆದರೆ ಜಿ. ಮೈಲನಹಳ್ಳಿ ಗ್ರಾಮದ ಜನ ಅಷ್ಟೋ ಇಷ್ಟೋ ಜಮೀನು ಹೊಂದಿ ನೆಮ್ಮದಿ ಜೀವನ ಸಾಗಿಸುತ್ತಿದ್ದರು. ಆದರೆ ರೈತರಿಗೆ ಏಕಾಏಕಿ ಬರಸಿಡಿಲು ಬಡಿದಂತಾಗಿದೆ. ತಮ್ಮ ಅನ್ನವನ್ನೇ ಕಿತ್ತುಕೊಳ್ಳುವ ಯೋಜನೆಯೊಂದು ತಮ್ಮ ಜಮೀನಿನ ಮೇಲೆ ಹಾದು ಹೋಗಿದ್ದು, ಭೂಮಿ ಕಳೆದುಕೊಳ್ಳುವ ಆತಂಕ ರೈತರಲ್ಲಿ ಎದುರಾಗಿದೆ.
ಹಾಸನ ತಾಲೂಕಿನ ಜಿ. ಮೈಲನಹಳ್ಳಿ ಗ್ರಾಮದ ಬಳಿ ಎಚ್ಪಿಸಿಎಲ್ ಸಂಸ್ಥೆ ಆಂಧ್ರಪ್ರದೇಶಕ್ಕೆ ಗ್ಯಾಸ್ ಕೊಂಡೊಯ್ಯಲು ಪೈಪ್ಲೈನ್ ಕಾಮಗಾರಿ ಮಾಡುತ್ತಿದ್ದು, ಆದರೆ ಇದು ರೈತರ ಜಮೀನಿನ ಮಧ್ಯೆ ಹಾದು ಹೋಗುತ್ತಿದೆ. ಜಮೀನು ಮಧ್ಯೆ ಬೆಳದಿರುವ ಬಗೆಯ ಮರ, ಬೆಳೆ, ಬೋರ್ವೆಲ್ ಎಲ್ಲವೂ ನಾಶವಾಗುವ ಪರಿಸ್ಥಿತಿ ಎದುರಾಗಿದೆ.
ಗುಂಟೆಗೆ ಕೇವಲ 28 ಸಾವಿರ ರೂ. ನಿಗದಿ
ಈ ಹಿಂದೆ ವಿಮಾನ ನಿಲ್ದಾಣಕ್ಕೆ ಇದೇ ಜಮೀನನ್ನು ಬಳಸಿಕೊಳ್ಳಲು ಹಾಸನ ಜಿಲ್ಲಾಡಳಿತ ಗುಂಟೆಗೆ 80 ಸಾವಿರ ರೂ.ಗಳನ್ನು ನಿಗದಿ ಮಾಡಿತ್ತು. ಈಗ ನಡೆಯುತ್ತಿರುವ ಕಾಮಗಾರಿಯಲ್ಲಿ ಗುಂಟೆಗೆ ಕೇವಲ 28 ಸಾವಿರ ರೂ. ನಿಗದಿ ಮಾಡಲಾಗಿದೆ. ಅಷ್ಟೇ ಅಲ್ಲದೆ, 5 ವರ್ಷ, 10 ವರ್ಷ ಕಳೆದಿರುವ ಒಂದು ತೆಂಗಿನ ಮರಕ್ಕೆ ಕೇವಲ 900 ರೂ, ಬೇವು, ಸಿಲ್ವರ್ ಮರಕ್ಕೆ 200, 300 ರೂ. ನಿಗದಿ ಮಾಡಲಾಗಿದೆ. ಇನ್ನು ಜಮೀನು ಮಧ್ಯದಲ್ಲಿ ಪೈಪ್ಲೈನ್ ಹಾದು ಹೋಗಿರುವುದರಿಂದ ಅಲ್ಪ ಸ್ವಲ್ಪ ಜಮೀನು ಹೊಂದಿರುವ ರೈತರ ಜಾಗ ಇಬ್ಭಾಗವಾಗಿ ಹಂಚಿಹೋಗಿ ಜೀವನವೇ ಡೋಲಾಯಮಾನ ಪರಿಸ್ಥಿತಿಗೆ ಬಂದು ನಿಂತಿದೆ.
ನಮಗೆ ಕಂಪೆನಿಯು ಮೋಸ ಮಾಡುತ್ತಿದೆ
"ಇನ್ನು ನಮಗೆ ಕಂಪೆನಿಯು ಮೋಸ ಮಾಡುತ್ತಿದೆ. ಸರಿಯಾದ ಪರಿಹಾರ ಒದಗಿಸಿಕೊಡಬೇಕು ಎಂದು ಮೇಲಾಧಿಕಾರಿಗಳಿಗೆ ಇಲ್ಲಿನ ರೈತರು ಮನವಿ ಮಾಡುತ್ತಿದ್ದಾರೆ. ಅಲ್ಲದೇ ನಾವು ಸರಿಯಾದ ಪರಿಹಾರ ನೀಡದಿದ್ದರೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಕಂಪೆನಿಯವರು ಮಾತ್ರ ಇದು ಕೇಂದ್ರ ಸರ್ಕಾರದ ಯೋಜನೆ. ನಾವು ಪೊಲೀಸರಿಗೆ ದೂರು ನೀಡಿ ಕಾಮಗಾರಿ ಮಾಡುತ್ತೇವೆ," ಎಂದು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ರೈತರ ಬದುಕು ಮಾತ್ರ ಸಂಕಷ್ಟದ ಸ್ಥಿತಿಗೆ
ಒಟ್ಟಿನಲ್ಲಿ ಸರ್ಕಾರದ ಯೋಜನೆಗಳು ಯಾವುದೋ ಒಂದು ಭಾಗಕ್ಕೆ ಅನುಕೂಲವಾಗುಂತೆ ರೂಪಿಸಲಾಗಿದೆ. ಆದರೆ ಯೋಜನೆಗೆ ಮುಖ್ಯ ಕಾರಣೀಕರ್ತರಾದ ರೈತರ ಬದುಕು ಮಾತ್ರ ಸಂಕಷ್ಟದ ಸ್ಥಿತಿಗೆ ಬಂದು ನಿಂತಿದೆ. ಒಂದೆಡೆ ಜಮೀನು ಕಳೆದುಕೊಳ್ಳುವ ದುಃಖದಲ್ಲಿ ರೈತರು ಪರಿಹಾರವಾದರೂ ಸಿಕ್ಕಿದರೆ ಜೀವನಕ್ಕೆ ಸಹಾಯವಾಗುತ್ತದೆ ಅನ್ನುವ ಆಸೆಗೂ ತಣ್ಣೀರೆರಚಿದಂತಾಗಿದೆ. ಕಂಪೆನಿ ಕೊಡುವ ಕವಡೆ ಕಾಸು ಮೂಗಿಗೆ ತುಪ್ಪ ಸವರಿದಂತಾಗಿದೆ. ನಮಗೆ ನ್ಯಾಯ ಕೊಡಿಸಿ ಎಂದು ರೈತರು ಅಂಗಲಾಚುತ್ತಿದ್ದಾರೆ.
ಮಾನಸಿಕ ಹಿಂಸೆ ಕೊಡುತ್ತಿದ್ದಾರೆ
ಇನ್ನು ಜಮೀನು ಕಳೆದುಕೊಂಡ ರೈತರೊಬ್ಬರು ಮಾತಾನಾಡಿ, "ಪೊಲೀಸರನ್ನು ಕರೆಸಿ ದರ್ಪದಿಂದ ರೈತರ ಬಳಿ ಸಹಿ ಹಾಕಿಸಿಕೊಂಡು ದರ್ಪ ತೋರುತ್ತಾ ಇದ್ದಾರೆ. ನಮಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ, ಪರಿಹಾರ ಸರಿಯಾದ ರೀತಿಯಲ್ಲಿ ನೀಡುತ್ತಿಲ್ಲ. ನಾವು ಎನು ಮಾಡಬೇಕು ಗೊತ್ತಾಗುತ್ತಿಲ್ಲ ಅಂತಿದ್ದಾರೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ ಎಂದು ನೊಂದ ರೈತರು ಆಳಲನ್ನು ತೋಡಿಕೊಂಡರು. ಸರ್ ನಾವು ಜಾಗ ಬಿಟ್ಟು ಕೊಡುತ್ತೇವೆ ಪರಿಹಾರ ನೀಡಿ, ಇಲ್ಲದಿದ್ದರೆ ಬೇರೆ ಕಡೆ ಜಾಗ ನೀಡಲಿ," ಎಂದು ಭೂಮಿ ಕಳೆದುಕೊಂಡ ರೈತರು ಆಗ್ರಹ ಮಾಡುತ್ತಿದ್ದಾರೆ.