ಬೆಳಗಾವಿಯಲ್ಲಿ ಮಳೆಯಿಂದ ನೆಲಕಚ್ಚಿದ 200 ಎಕರೆ ಈರುಳ್ಳಿ ಬೆಳೆ
ಬೆಳಗಾವಿ, ಅಕ್ಟೋಬರ್ 20: ಉತ್ತರ ಕರ್ನಾಟಕದ ಭಾಗದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಜನಜೀವನವನ್ನೇ ಅತಂತ್ರಗೊಳಿಸಿದೆ. ಅದರಲ್ಲೂ ಮಳೆಯಿಂದ ಬೆಳೆಗಳನ್ನು ಕಳೆದುಕೊಂಡಿರುವ ರೈತರ ಪಾಡು ಹೇಳತೀರದಾಗಿದೆ. ಬೆಳಗಾವಿ ಜಿಲ್ಲೆಯಲ್ಲೂ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳೆಲ್ಲವೂ ನಾಶವಾಗಿವೆ.
ಮಳೆಯಿಂದಾಗಿ ತಿಮ್ಮಾಪುರ ಗ್ರಾಮದಲ್ಲಿ ಬೆಳೆದ ಈರುಳ್ಳಿ ಬೆಳೆಯು ಸಂಪೂರ್ಣ ನೆಲಕಚ್ಚಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯನ್ನು ಬೆಳೆಯಲಾಗಿತ್ತು. ಈರುಳ್ಳಿ ಕಟಾವಿಗೆ ಬಂದಿದ್ದ ಈ ಸಮಯದಲ್ಲಿ, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಇನ್ನೇನು ಈ ಈರುಳ್ಳಿಗಳನ್ನು ಕಟಾವು ಮಾಡಿ, ಮಾರುಕಟ್ಟೆಗೆ ಸಾಗಿಸಬೇಕಾಗಿತ್ತು. ಆದರೆ ಇದ್ದಕ್ಕಿದ್ದಂತೆ ಈ ರೀತಿ ಮಳೆ ಸುರಿದು ಬೆಳೆಗಳೆಲ್ಲವೂ ನೀರು ಪಾಲಾಗುವಂತೆ ಮಾಡಿದೆ. ನೆಲಕಚ್ಚಿರುವ ಈರುಳ್ಳಿ ಬೆಳೆಯನ್ನು ನೋಡಿ ರೈತ ಭೀಮಪ್ಪ ಮಬನೂರ ಕಂಗಾಲಾಗಿದ್ದಾರೆ. ಕಳೆದ ವರ್ಷವೂ ಪ್ರವಾಹದಿಂದಾಗಿ ಭೀಮಪ್ಪ ಬೆಳೆ ಕಳೆದುಕೊಂಡಿದ್ದರು. ಈ ಬಾರಿ ಮತ್ತೆ ಅದೇ ಸ್ಥಿತಿ ಬಂದೊದಗಿದೆ.

ಜಿಲ್ಲೆಯ ಬಹುತೇಕ ರೈತರದ್ದೂ ಇದೇ ಸ್ಥಿತಿಯಾಗಿದೆ. ಈರುಳ್ಳಿ ಮಾತ್ರವಲ್ಲದೇ, ಕಟಾವಿಗೆ ಬಂದಿದ್ದ ಕಬ್ಬು, ಸೋಯಾಬಿನ್ ಬೆಳೆ ಕೂಡ ನಾಶವಾಗಿವೆ. ಇದೀಗ ಬೆಳೆ ಕಳೆದುಕೊಂಡ ರೈತರು ಸೂಕ್ತ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.












Click it and Unblock the Notifications