ಕೊನೆಯಾಗದ ಸರ್ಕಾರ ರೈತರ ನಡುವಿನ ಬಿಕ್ಕಟ್ಟು; ಮುಂದಿನ ಹೋರಾಟಕ್ಕೆ ಸಜ್ಜು
ನವದೆಹಲಿ, ಜನವರಿ 22: ಮೂರು ವಿವಾದಿತ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ರೈತರ ನಡುವಿನ ಬಿಕ್ಕಟ್ಟು ಶಮನಕ್ಕೆ ಶುಕ್ರವಾರ ಹನ್ನೊಂದನೇ ಸುತ್ತಿನ ಮಾತುಕತೆ ನಡೆದಿದ್ದು, ಈ ಮಾತುಕತೆಯೂ ವಿಫಲವಾಗಿದೆ. ಹನ್ನೊಂದು ಸುತ್ತಿನ ಮಾತುಕತೆಯಲ್ಲಿಯೂ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ.
ಈ ಸಭೆಯಲ್ಲಿಯೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತರು ಪಟ್ಟು ಹಿಡಿದಿದ್ದು, ಯಾವುದೇ ಕಾರಣಕ್ಕೂ ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ. ಕಾಯ್ದೆಗಳನ್ನು 12-18 ತಿಂಗಳ ಕಾಲ ತಡೆ ಹಿಡಿಯುವ ಪ್ರಸ್ತಾವ ಮರುಪರಿಶೀಲನೆ ನಡೆಸಿ. ಎರಡು ವರ್ಷಗಳ ಕಾಲ ಈ ಕಾಯ್ದೆಗಳನ್ನು ತಡೆಹಿಡಿದು ನಂತರ ಮರುಪರಿಶೀಲನೆ ಮಾಡಬಹುದು. ಇದಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ಮುಂದಿನ ಸಭೆ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಸರ್ಕಾರ ಎರಡು ವರ್ಷಗಳ ಕಾಲ ಈ ಕಾಯ್ದೆಗಳಿಗೆ ತಡೆಯೊಡ್ಡಲು ನಿರ್ಧರಿಸಿದ್ದು, ಈ ನಿರ್ಧಾರಕ್ಕೆ ಒಪ್ಪುವುದಾದರೆ ಮಾತ್ರ ಮುಂದಿನ ಮಾತುಕತೆ ನಡೆಸುವುದಾಗಿ ತಿಳಿಸಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನ ರಾಕೇಶ್ ತಿಕೈಟ್ ತಿಳಿಸಿದ್ದಾರೆ. ಸರ್ಕಾರದ ನಡವಳಿಕೆ ರೈತರಿಗೆ ವಿರುದ್ಧವಾಗಿದೆ ಎಂದು ರೈತ ಸಂಘಗಳು ಆರೋಪಿಸಿವೆ.

ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ದೆಹಲಿ ಗಡಿಗಳಲ್ಲಿ ಸುಮಾರು 40 ರೈತ ಸಂಘಟನೆಯ ರೈತ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೀಗ ಹನ್ನೊಂದನೇ ಮಾತುಕತೆಯೂ ವಿಫಲವಾಗಿದ್ದು, ಕೃಷಿ ಕಾಯ್ದೆಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಾಗುವುದು. ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್ ಜಾಥಾ ನಡೆಸಲು ಪೊಲೀಸರೊಂದಿಗೆ ಸಭೆ ನಡೆಸುವೆವು ಎಂದು ರೈತ ಸಂಘಗಳು ತಿಳಿಸಿವೆ. ಸುಮಾರು ಐದು ಗಂಟೆಗಳ ಕಾಲ ಸಭೆ ನಡೆದಿದ್ದು, ಐದು ಗಂಟೆಗಳಲ್ಲಿ ಮೂವತ್ತು ನಿಮಿಷ ಮಾತ್ರ ಮುಖಾಮುಖಿ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.












Click it and Unblock the Notifications