ಆತಂಕಕ್ಕೆ ಒಳಗಾಗಿ ಬ್ಯಾಂಕ್, ಎಟಿಎಂಗೆ ಮುಗಿಬಿದ್ದ ಅಫ್ಘಾನ್ ಜನರು
ಕಾಬೂಲ್, ಸೆಪ್ಟೆಂಬರ್ 01: ಯುಎಸ್ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ವಾಪಾಸ್ ಪಡೆದ ಬಳಿಕ ತಾಲಿಬಾನ್ ಅಫ್ಘಾನಿಸ್ತಾನಕ್ಕೆ ದಾಳಿ ನಡೆಸಿ ಇಡೀ ಅಫ್ಘಾನಿಸ್ತಾನನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಹಿನ್ನೆಲೆ ಈಗಾಗಲೇ ವಿವಿಧ ದೇಶಗಳು ತಮ್ಮ ದೇಶದ ಪ್ರಜೆಗಳನ್ನು ಹಾಗೂ ಅಫ್ಘಾನ್ ಜನರನ್ನು ರಕ್ಷಿಸುವ ಕಾರ್ಯ ನಡೆಸಿದೆ. ಈ ಕಾರ್ಯಾಚರಣೆಯು ಆಗಸ್ಟ್ 31 ರಂದು ಕೊನೆಗೊಂಡಿದೆ. ಪಸ್ತುತ ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ವಶದಲ್ಲಿದೆ. ಈ ನಡುವೆ ಅಫ್ಘಾನ್ ಜನರಲ್ಲಿ ತೀವ್ರವಾದ ಅಭದ್ರತೆ ಮೂಡಿದೆ, ಹಾಗೆಯೇ ಆತಂಕವೂ ಕೂಡಾ ಅಫ್ಘಾನ್ ಜನರ ಮನಸ್ಸಲ್ಲಿ ಮನೆ ಮಾಡಿದೆ.
ಈ ಆತಂಕದಲ್ಲಿರುವ ಜನರು ಎಟಿಎಂ ಹಾಗೂ ಬ್ಯಾಂಕ್ಗಳಿಗೆ ಮುಗಿ ಬಿದ್ದಿದ್ದಾರೆ. ತಮ್ಮ ಬ್ಯಾಂಕ್ ಖಾತೆಗಳಲ್ಲಿ ಇರುವ ಹಣವನ್ನು ತೆಗೆಯಲು ಅಫ್ಘಾನ್ ಜನರು ಎಟಿಎಂ ಹಾಗೂ ಬ್ಯಾಂಕ್ಗಳ ಎದುರು ನೆರೆದಿದ್ದಾರೆ. ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ ಈ ಸಂದರ್ಭದಲ್ಲಿ ತಮ್ಮ ಕೈಯಲ್ಲಿ ಇರುವ ಹಣ ಯಾವುದೇ ಸಂದರ್ಭದಲ್ಲೂ ಕಡಿಮೆ ಆಗಬಾರದು, ಆ ಸಂದರ್ಭದಲ್ಲಿ ಭಾರೀ ಸಂಕಷ್ಟ ಉಂಟಾದೀತು ಎಂದು ಈ ಉಗ್ರರ ವಶದಲ್ಲಿರುವ ಅಫ್ಘಾನಿಸ್ತಾನದ ಜನರು ಎಟಿಎಂಗಳಿಗೆ ಹಾಗೂ ಬ್ಯಾಂಕ್ಗಳಿಗೆ ತೆರಳಿ ತಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಹಿಂಪಡೆಯುತ್ತಿದ್ದಾರೆ.
ಅಫ್ಘಾನಿಂದ ಹೊರಡುವಾಗ 73 ವಿಮಾನಗಳನ್ನು ನಿಷ್ಕ್ರಿಯಗೊಳಿಸಿದ ಅಮೆರಿಕ ಸೇನೆ
ಅಫ್ಘಾನಿಸ್ತಾನದ ಜನರಲ್ಲಿ ಈ ಸಂದರ್ಭದಲ್ಲಿ ಆತಂಕ ಅಧಿಕವಾಗಿದೆ. ವಿಶೇಷವಾಗಿ ತಾವು ಹೋರಾಟ ನಡೆಸಿ ಸಂಪಾದಿಸಿಕೊಂಡ ಹಕ್ಕುಗಳು ತಮ್ಮ ಕೈ ಜಾರಿ ಹೋಗುತ್ತದೆ ಎಂಬ ಭೀತಿಯು ಮಹಿಳೆಯಲ್ಲಿ ಇದೆ. ಮಹಿಳೆಯರು ತಾಲಿಬಾನ್ ಉಗ್ರರ ಭಯದಿಂದಾಗಿ ತಮ್ಮ ಮನೆಯಿಂದ ಹೊರಗೆ ಕೂಡ ಬರಲು ಹಿಂಜರಿಯುತ್ತಿದ್ದಾರೆ ಎಂದು ವರದಿಗಳು ಹೇಳಿದೆ.
ಅಫ್ಘಾನ್ನಲ್ಲಿ ಮನೆಯಿಂದ ಹೊರ ಬರಲು ಮಹಿಳೆಯರಿಗೆ ಭೀತಿ
ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮನೆಯಿಂದ ಹೊರ ಬರಲು ಕೂಡಾ ಭಯ ಪಡುತ್ತಾರೆ. ಮಹಿಳೆಯರು ಮನೆಯಿಂದ ಹೊರಗೆ ಬರುತ್ತಿಲ್ಲ ಎಂದು ವರದಿಗಳು ಹೇಳಿದೆ. ಇನ್ನು ಈ ಬಗ್ಗೆ ಫೋನ್ ಮೂಲಕ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಿಳೆಯೊಬ್ಬರು, "ನನಗೆ ಹಿಜಾಬ್ (ಮುಸ್ಲಿಂ ಮಹಿಳೆಯರು ತೊಡುವ ಕಪ್ಪು ಬಟ್ಟೆ) ತೊಡುವುದಕ್ಕೆ ಯಾವ ತೊಂದರೆಯೂ ಇಲ್ಲ. ಆದರೆ ಮಹಿಳೆಯರಿಗೆ ಹೊರ ಹೋಗಿ ಕೆಲಸ ಮಾಡಲು ಅವಕಾಶ ದೊರೆಯಬೇಕು ಹಾಗೂ ಯುವತಿಯರಿಗೆ ವಿದ್ಯಾಭ್ಯಾಸ ಮಾಡಲು ಅವಕಾಶ ನೀಡಬೇಕು," ಎಂದು ಹೇಳಿದ್ದಾರೆ. ಈ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದಾಗ ಮಹಿಳೆಯರಿಗೆ ಯಾವುದೇ ಸ್ವಾತಂತ್ಯ್ರವು ಇರಲಿಲ್ಲ. ಮಹಿಳೆಯರು ಮನೆಯಲ್ಲಿ ಮಾತ್ರ ಇರಬೇಕಾಗಿತ್ತು. ವಿದ್ಯಾಭ್ಯಾಸ ಪಡೆಯುವ ಅವಕಾಶವೂ ಕೂಡಾ ಇರಲಿಲ್ಲ.
ಕಳೆದ ಕೆಲವು ವಾರಗಳ ಹಿಂದೆ ತಾಲಿಬಾನ್ ಆದೇಶವೊಂದನ್ನು ಹೊರಡಿಸಿದ್ದು, ಅಫ್ಘಾನಿಸ್ತಾನದಲ್ಲಿನ ಉದ್ಯೋಗಸ್ಥ ಮಹಿಳೆಯರನ್ನು ಮನೆಯಲ್ಲೇ ಉಳಿಯುವಂತೆ ಹೇಳಿದೆ. ಉದ್ಯೋಗಸ್ಥ ಮಹಿಳೆಯರನ್ನು ಮನೆಯಲ್ಲೇ ಉಳಿಯಲು ಹೇಳಿರುವ ಕುರಿತು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ವಿವರಣೆ ನೀಡಿದ್ದಾರೆ. "ಇದು ತಾತ್ಕಾಲಿಕ ನೀತಿಯಷ್ಟೆ. ದೇಶದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವವರೆಗೂ ಮಹಿಳೆಯರ ಭದ್ರತೆಯ ದೃಷ್ಟಿಯಿಂದ ಈ ರೀತಿ ಹೇಳಲಾಗಿದೆ. ಎಲ್ಲಾ ಸುರಕ್ಷತೆ ಒದಗಿಸಿದ ಬಳಿಕ ಕೆಲಸಕ್ಕೆ ಮರಳಬಹುದು," ಎಂದಿದ್ದಾರೆ. ಇನ್ನು ಇತ್ತೀಚೆಗೆ ತಾಲಿಬಾನ್ನ ಹಾಲಿ ಸಚಿವರು ನೀಡಿದ ಹೇಳಿಕೆಯಲ್ಲಿ, "ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡಲು ಅಫ್ಘಾನಿಸ್ತಾನದ ಮಹಿಳೆಯರು ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯಬಹುದು. ಆದರೆ ಪುರುಷರು ಹಾಗೂ ಮಹಿಳೆಯರಿಗೆ ಒಟ್ಟಾಗಿ ತರಗತಿಯನ್ನು ಈ ಹೊಸ ನಿಯಮದ ಪ್ರಕಾರ ನಡೆಸುವಂತಿಲ್ಲ," ಎಂದು ಹೇಳಿದ್ದಾರೆ.
'ಹೊಸ ನಿಯಮದ ಪ್ರಕಾರ ಮಹಿಳೆಯರು ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯಬಹುದು': ತಾಲಿಬಾನ್
ಸಂಭ್ರಮಾಚರಣೆಯಲ್ಲಿ ತಾಲಿಬಾನಿಗರು
20 ವರ್ಷಗಳ ಸಂಘರ್ಷ ಅಂತ್ಯಗೊಳಿಸಿ ಅಫ್ಘಾನಿಸ್ತಾನದಿಂದ ಯುಎಸ್ ಸೇನೆಯು ಹೊರ ಹೋಗಿದೆ. ಮಂಗಳವಾರ ತನ್ನ ಎಲ್ಲಾ ಸ್ಥಳಾಂತರ ಪ್ರಕ್ರಿಯೆಯನ್ನು ಯುಎಸ್ ಮಂಗಳವಾರ ಕೊನೆಗೊಳಿಸಿದೆ. ಅಫ್ಘಾನಿಸ್ತಾನದಿಂದ ಯುಎಸ್ ಸೇನೆ ತನ್ನ ಕೊನೆಯ ಸ್ಥಳಾಂತರ ಪ್ರಕ್ರಿಯೆ ನಡೆಸಿದ ಬಳಿಕ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದಲ್ಲಿ ಭಾರೀ ಸಂಭ್ರಮಾಚರಣೆ ಮಾಡಿದ್ದಾರೆ. ತಾಲಿಬಾನಿಗರು ತಮ್ಮ ವಿಜಯದ ಸಂಕೇತವಾಗಿ ಬಂದೂಕುಗಳಿಂದ ಗುಂಡು ಹಾರಿಸಿಕೊಂಡು ಸಂಭ್ರಮ ಆಚರಿಸಿದ್ದಾರೆ. ಕಾಬೂಲ್ನ ಅಂತಾರಾಷ್ಟ್ರೀಯ ಹಮೀದ್ ಕರ್ಜಾಯ್ ವಿಮಾನ ನಿಲ್ದಾಣದ ಸಮೀಪ ತಾಲಿಬಾನ್ಗಳು ಈ ಸಂಭ್ರಮಾಚಣೆ ಮಾಡಿದ್ದಾರೆ. ಈ ಸಂಭ್ರಮದ ಹಿನ್ನೆಲೆ ತಾಲಿಬಾನ್ ನಾಯಕರುಗಳಾದ ಜಬೀದ್ದುಲ್ಲಾ ಮುಜಾಹಿದ್ ಹಾಗೂ ಅನಾಸ್ ಹಕ್ಕಾನಿ ತಮ್ಮ ತಾಲಿಬಾನ್ ಪಡೆಯನ್ನು ಭೇಟಿಯಾಗಿದ್ದಾರೆ.
ಯುಎಸ್ಗೆ ಸಹಾಯ ಮಾಡಿದವರ ಪತ್ತೆಗೆ ತಾಲಿಬಾನ್ನಿಂದ ಮನೆ ಮನೆ ಭೇಟಿ
ಈ ನಡುವೆ ಯುಎಸ್ಗೆ ಸಹಾಯ ಮಾಡಿದವರ ಪತ್ತೆಗಾಗಿ ತಾಲಿಬಾನ್ ಮನೆ ಮನೆಗೆ ಭೇಟಿ ನೀಡುತ್ತಿದೆ. ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳಿಗೆ ಸಹಾಯ ಮಾಡಿದವರ ಪತ್ತೆಗೆ ತಾಲಿಬಾನ್ ಈಗಲೇ ಕಾರ್ಯ ಆರಂಭ ಮಾಡಿದೆ. ಯುಎಸ್ ಅಥವಾ ಅದರ ಬೇರೆ ಮೈತ್ರಿ ದೇಶಗಳಿಗೆ ಸಹಾಯ ಮಾಡಿದ ಯಾರೇ ಆದರೂ ತಾಲಿಬಾನ್ನ ಕೋರ್ಟ್ಗೆ ಹಾಜರಾಗಬೇಕು, ಅಲ್ಲಿ ಆ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಾಲಿಬಾನ್ ಮನೆ ಮನಗೆ ತೆರಳಿ ನೊಟೀಸ್ ಅನ್ನು ಮನೆಯ ಬಾಗಿಲಿಗೆ ಹಾಕುತ್ತಿದೆ.
ತಾಲಿಬಾನ್ ಕೋರ್ಟ್ಗೆ ಹಾಜರಾಗದಿದ್ದರೆ ಮರಣ ದಂಡನೆ!
ಇನ್ನು ತಾಲಿಬಾನ್ನ ಕೋರ್ಟ್ಗೆ ಯುಎಸ್ ಅಥವಾ ಬೇರೆ ದೇಶಕ್ಕೆ ಸಹಾಯ ಮಾಡಿದವರು ಹಾಜರಾಗದಿದ್ದರೆ ಅವರಿಗೆ ಮರಣ ದಂಡನೆ ವಿಧಿಸಲಾಗುತ್ತದೆ ಎಂದು ಕೂಡಾ ತಾಲಿಬಾನ್ ಎಚ್ಚರಿಕೆ ನೀಡಿದೆ. ಹೆಲ್ಮಾಂಡ್ನಲ್ಲಿ ರಸ್ತೆ ಕಾಮಾಗಾರಿ ನಡೆಸಲು ಯುಎಸ್ ಮಿಲಟರಿ ಪಡೆಗೆ ಸಹಾಯ ಮಾಡಿದ ರಸ್ತೆ ಕಾಮಾಗಾರಿ ಸಂಸ್ಥೆಯ ಮಾಲಿಕರೊಬ್ಬರು, "ನಾನು ಸಾಯಲು ಇಚ್ಛಿಸುವುದಿಲ್ಲ ಅದಕ್ಕೆ ಅಡಗಿ ಕೂತಿದ್ದೇನೆ," ಎಂದು ಹೇಳಿದ್ದಾರೆ. "ನನ್ನ ಮನೆಗೆ ತಾಲಿಬಾನ್ ನೊಟೀಸ್ ಒಂದನ್ನು ಅಂಟಿಸಿದೆ. ಶಿಕ್ಷೆಯನ್ನು ಪಡೆಯಲು ತಾಲಿಬಾನ್ ಕೋರ್ಟ್ಗೆ ಹಾಜರಾಗಲು ಹೇಳಿದೆ," ಎಂದು ಆತಂಕಕ್ಕೆ ಒಳಗಾದ ಈ ರಸ್ತೆ ಕಾಮಾಗಾರಿ ಸಂಸ್ಥೆಯ ಮಾಲಿಕರು ಹೆಸರು ಹಾಗೂ ತಾವಿರುವ ಸ್ಥಳವನ್ನು ಬಹಿರಂಗಪಡಿಸದಂತೆ ಮನವಿ ಮಾಡಿ ಡೈಲಿ ಮೇಲ್ ಎಂಬ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
(ಒನ್ ಇಂಡಿಯಾ ಸುದ್ದಿ)