ದೇಶದಲ್ಲಿ ಶೇ. 41 ರಷ್ಟು ಮಳೆ ಅಧಿಕ: ಉತ್ತರಾಖಂಡದಲ್ಲಿ ಐದು ಪಟ್ಟು ಹೆಚ್ಚಳ
ನವದೆಹಲಿ, ಅಕ್ಟೋಬರ್ 21: ಅಕ್ಟೋಬರ್ 1-21 ರ ನಡುವೆ ಭಾರತದಲ್ಲಿ ಸಾಮಾನ್ಯವಾಗಿ ಸುರಿಯುವ ಮಳೆಗಿಂತ ಶೇಕಡ ಶೇ. 41 ರಷ್ಟು ಅಧಿಕ ಮಳೆಯಾಗಿದೆ. ಇನ್ನು ವರುಣನ ಅಬ್ಬರದಿಂದಾಗಿ ಸಾಕಷ್ಟು ಹಾನಿಗೆ ಒಳಗಾಗಿರುವ ಉತ್ತರಾಖಂಡದಲ್ಲಿ ಸಾಮಾನ್ಯಕ್ಕಿಂತ ಐದು ಪಟ್ಟು ಅಧಿಕ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಗುರುವಾರ ಹೇಳಿದೆ.
ಭಾರತದಲ್ಲಿ ಹಲವೆಡೆ ಸಾಮಾನ್ಯಕ್ಕಿಂತ ಅಧಿಕವಾಗಿ ಮಳೆಯಾಗಿದೆ. ಅದು ಕೂಡಾ ನಿರ್ದಿಷ್ಟವಾಗಿ ಕಣಿವೆ ಪ್ರದೇಶವಾದ ಉತ್ತರಾಖಂಡ ಹಾಗೂ ಕರಾವಳಿ ರಾಜ್ಯವಾದ ಕೇರಳದಲ್ಲಿ ಭಾರೀ ಮಳೆಯಾಗಿದ್ದು, ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಭಾರತದಲ್ಲಿ ಸಾಮಾನ್ಯವಾಗಿ 60.2 ಮಿಲಿ ಮೀಟರ್ ಮಳೆ ಆಗುತ್ತದೆ. ಆದರೆ ಈಗ 84.8 ಮಿಲಿ ಮೀಟರ್ ಮಳೆಯಾಗಿದೆ.
ಈವರೆಗೆ ಉತ್ತರಾಖಂಡದಲ್ಲಿ ವರುಣನ ಅಬ್ಬರಕ್ಕೆ 64 ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಇನ್ನು ಈ ನಡುವೆ ಕೇರಳದ ಎಂಟು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಮತ್ತೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಕೇರಳದಲ್ಲಿ ಸುಮಾರು 40 ಕ್ಕೂ ಅಧಿಕ ಮಂದಿ ಈ ಮಳೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯು ಹೇಳಿದೆ. ದೇಶದ 694 ಜಿಲ್ಲೆಗಳಲ್ಲಿ ಶೇಕಡ 45 ರಷ್ಟು ಮಳೆಯಾಗಿದೆ. ಈ ಪೈಕಿ 311 ಜಿಲ್ಲೆಗಳು ರಾಜ್ಯಗಳಲ್ಲಿ ಇದ್ದು, 16 ಕೇಂದ್ರಾಡಳಿತ ಪ್ರದೇಶದಲ್ಲಿದೆ.

ಉತ್ತರಾಖಂಡದಲ್ಲಿ ಐದು ಪಟ್ಟು ಅಧಿಕ ಮಳೆ
ಉತ್ತರಾಖಂಡದಲ್ಲಿ ಈವೆಗೆ 64 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಲಭಿಸಿದೆ. ಅಕ್ಟೋಬರ್ 1-20 ರ ನಡುವೆ ಸಾಮಾನ್ಯವಾಗಿ 35.3 ಮಿಲಿಮೀಟರ್ ಮಳೆಯಾಗಬೇಕಿತ್ತು. ಆದರೆ 192.6 ಮಿಲಿಮೀಟರ್ ಮಳೆ ಆಗಿದೆ. ಅಂದರೆ ಉತ್ತರಾಖಂಡದಲ್ಲಿ ಸಾಮಾನ್ಯ ಮಳೆಗಿಂತ ಐದು ಪಟ್ಟು ಅಧಿಕ ಮಳೆಯಾಗಿದೆ. ರಾಜ್ಯದಲ್ಲಿ ಮಳೆಯಿಂದಾಗಿ ಭಾರೀ ಹಾನಿಯಾಗಿದೆ. ಹಲವೆಡೆ ನೆರೆ, ಭೂ ಕುಸಿತ ಉಂಟಾಗಿದೆ. ಹಲವಾರು ಮುಖ್ಯ ರಸ್ತೆಗಳ ಸಂಪರ್ಕವೇ ಕಡಿತವಾಗಿದೆ. ಕೇರಳದಲ್ಲಿ ಅಕ್ಟೋಬರ್ 1-20 ರ ನಡುವೆ ಸಾಮಾನ್ಯವಾಗಿ 303.4 ಮಿಲಿಮೀಟರ್ ಮಳೆ ಆಗಬೇಕಿತ್ತು. ಆದರೆ 445.1 ಮಳೆಯಾಗಿದೆ. 40 ಕ್ಕೂ ಅಧಿಕ ಕೇರಳದಿಂದ ಮಳೆಯಿಂದಾಗಿ ಸಾವನ್ನಪ್ಪಿದ್ದಾರೆ. ಸಿಕ್ಕಿಂ, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದಲ್ಲಿಯೂ ಭಾರೀ ಮಳೆಯಾಗಿದೆ. ಕೆಲವೊಂದು ಕಡೆಗಳಲ್ಲಿ ಹಾನಿ ಉಂಟಾಗಿದೆ.

ವರುಣನ ಆರ್ಭಟಕ್ಕೆ ಕಾರಣವೇನು?
ಈ ಮಳೆಗೆ ಹಲವಾರು ಕಾರಣಗಳನ್ನು ತಜ್ಞರು ನೀಡಿದ್ದಾರೆ. ತಡವಾಗಿ ಮುಂಗಾರು ಆರಂಭ, ಸಮುದ್ರದಲ್ಲಿ ತಾಪ ಹೆಚ್ಚಳವು ಈ ಅಕಾಲಿಕ ಮಳೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಐಐಟಿ ಮದ್ರಾಸ್ ಸಿವಿಲ್ ಇಂಜಿನಿಯರ್ ಇಲಾಖೆಯ ಪ್ರೊಫೆಸರ್, ಬಾಲಾಜಿ ನರಸಿಂಹನ್, "ಇದು ಅಸಾಮಾನ್ಯ ಅಕ್ಟೋಬರ್ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೂಲಸೌಕರ್ಯ ಸವಾಲುಗಳು ಹಾಗೂ ಯಾವುದೇ ತಡೆ ಇಲ್ಲದೆ ಆಗುತ್ತಿರುವ ಅಭಿವೃದ್ದಿಯನ್ನು ಇದು ಸೂಚಿಸುತ್ತಿದೆ," ಎಂದು ಹೇಳಿದ್ದಾರೆ. 2015 ರ ಚೆನ್ನೈ ಮಳೆಯ ಬಗ್ಗೆ ಅಧ್ಯಯನ ಮಾಡಿರುವ ನರಸಿಂಹನ್, "ಈ ಹಿಂದೆಯೂ ಇಂತಹ ಹಲವಾರು ಘಟನೆಗಳು ನಡೆದಿದೆ. ಆದರೆ ಈಗ ಜನಸಂಖ್ಯೆಯು ಅಧಿಕವಾಗಿದೆ. ಆದ್ದರಿಂದ ಈ ಮಳೆಯ ಪರಿಣಾಮವು ಅಧಿಕವಾಗುತ್ತಿದೆ," ಎಂದು ಅಭಿಪ್ರಾಯಿಸಿದ್ದಾರೆ. 2015 ರ ಡಿಸೆಂಬರ್ನಲ್ಲಿ ಚೆನ್ನೈನಲ್ಲಿ ಭಾರೀ ಮಳೆಯಾಗಿದ್ದು, 250 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಇನ್ನು ಕೇರಳದ ವಿಚಾರದಲ್ಲಿ ಮಾತನಾಡಿದ ಪ್ರೊಫೆಸರ್, ಬಾಲಾಜಿ ನರಸಿಂಹನ್, "ಕೇರಳದಲ್ಲಿ ನೈಋತ್ಯ ಹಾಗೂ ಈಶಾನ್ಯ ಮುಂಗಾರಿನ ಸಂದರ್ಭದಲ್ಲಿ ಮಳೆ ಆಗುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಬೇರೆಯೇ ಆಗಿದೆ," ಎಂದು ಹೇಳಿದ್ದಾರೆ. ಐಎಂಡಿ ಡೈರೆಕ್ಟರ್ ಜನರಲ್ ಮೃತ್ಯುಂಜಯ ಮಹೋಪಾತ್ರ, "ಅಕ್ಟೋಬರ್ ಎರಡು ಕಡಿಮೆ ಒತ್ತಡದ ಪ್ರದೇಶಗಳನ್ನು ಸೃಷ್ಟಿ ಮಾಡಿದೆ," ಎಂದಿದ್ದಾರೆ.

ಉತ್ತರಾಖಂಡದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಶಾ
ಉತ್ತರಾಖಂಡದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜೊತೆಗಿದ್ದರು. ಇನ್ನು ಉತ್ತರಾಖಂಡದಲ್ಲಿ 7,000 ಕೋಟಿ ನಷ್ಟ ಉಂಟಾಗಿದೆ ಎಂದು ವರದಿಯು ಹೇಳಿದೆ. ಕುಮಾವಾನ್ ಪ್ರದೇಶದ ಪೀಡಿತ ಪ್ರದೇಶಗಳ ಸಮೀಕ್ಷೆಯಿಂದ ಹಿಂದಿರುಗಿದ ನಂತರ ಇಲ್ಲಿನ ಜಾಲಿಗ್ರಾಂಟ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, "ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳ ಎಚ್ಚರಿಕೆಯು ಹಾನಿಯನ್ನು ತಡೆಯಲು ಸಹಾಯ ಮಾಡಿದೆ," ಎಂದು ಹೇಳಿದರು.

ಅಮಿತ್ ಶಾ ವಿರುದ್ಧ ಉತ್ತರಾಖಂಡ ಕಾಂಗ್ರೆಸ್ ಅಸಮಾಧಾನ
ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಾಖಂಡದಲ್ಲಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದಾರೆ. ಈ ನಡುವೆ ಅಮಿತ್ ಶಾ ವಿರುದ್ದ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. "ಮಳೆಯಿಂದ ಹಾನಿ ಉಂಟಾಗಿರುವ ರಾಜ್ಯಕ್ಕೆ ಭೇಟಿ ನೀಡಿರುವುದು ನಿರಾಶಾದಾಯಕ," ಎಂದು ಕಾಂಗ್ರೆಸ್ ಬಣ್ಣಿಸಿದೆ. ಬದಲಾಗಿ ಕೇಂದ್ರ ಸರ್ಕಾರ ಉತ್ತರಾಖಂಡಕ್ಕೆ 10,000 ಕೋಟಿ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡಿದೆ. ಈ ನಡುವೆ ಕೇರಳದಲ್ಲಿಯೂ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಎಲ್ಡಿಎಫ್ ಸರ್ಕಾರ ನೆರೆಯನ್ನು ಸರಿಯಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಕೇರಳ ಕಾಂಗ್ರೆಸ್ ಆರೋಪ ಮಾಡಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications