ಬೆಳಗಾವಿ ಮೆರವಣಿಗೆಯಲ್ಲಿ ಕನ್ನಡಿಗರ ದರ್ಬಾರು

ಬಲರಾಮನ ಜೊತೆಗೆ ಕೃಷ್ಣಾ, ಸುಧಾ ಆನೆಗಳು ಸಾಗುತ್ತಿರುವ ರೀತಿ ಮೈಸೂರು ದಸರಾ ವೈಭವನ್ನು ನೆನಪಿಸುವಂತಿದೆ. ಪೂರ್ಣಕುಂಭ ಕಲಶ ಹೊತ್ತ 1001 ಮಹಿಳೆಯರು ಕನ್ನಡ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದಾರೆ. ನಂದಿ ಧ್ವಜ ಪೂಜೆ ಪೂರೈಸಿದ ನಂತರ ಸಚಿವ ಅಶೋಕ್, ಗೋವಿಂದ ಕಾರಜೋಳ ಮುಂತಾದ ಜನ ಪ್ರತಿನಿಧಿಗಳ ಸಮೂಹ ತಮ್ಮ ಗೂಟದ ಕಾರಿನತ್ತ ತೆರಳದೆ ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡ ಅಭಿಮಾನಿಗಳ ಹರ್ಷವನ್ನು ಹೆಚ್ಚಿಸಿದರು. ಸಿನಿ ನಟ ನಟಿಯರು ವೋಲ್ವೋ ಬಸ್ ನಲ್ಲೇ ಮೆರವಣಿಗೆ ಸುತ್ತಾ ಸುತ್ತಾಟ ನಡೆಸಿದ್ದು ಅಭಿಮಾನಿಗಳನ್ನು ಕೆರಳಿಸಿತ್ತು.
ಜನಪದ ವೈಭವ: ಪೂಜಾ ಕುಣಿತ, ಪಟ ಕುಣಿತ, ಕೋಲಾಟ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಹುಲಿ ವೇಷ, ಕುದುರೆ ಕುಣಿತ, ತಮಟೆ ಬಡಿತ, ಯಕ್ಷಗಾನದ ವೇಷಗಳು, ಒಂದೇ ಎರಡೇ ಮಾತು ಬರದ ಮೂಗ ಕೂಡಾ ಕನ್ನಡ ಕನ್ನಡ ಎಂದು ಕೂಗುವಂತೆ ಮಾಡಿದೆ. ಕಾಲಿಲ್ಲದವ ಕೂಡಾ ಕನ್ನಡ ಎಂದು ಕುಣಿದಾಡುವಂತೆ ಮಾಡಿದೆ. ನಾಡಿನ ವಿವಿಧೆಡೆಗಳಿಂದ ಬಂದಿರುವ ಸುಮಾರು ಆರು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದಾರೆ. ಸುಮಾರು 6 ಕಿ.ಮೀ ದೂರ ಸಾಗುವ ಈ ಮೆರವಣಿಗೆಯಲ್ಲಿ ದಣಿವಿಲ್ಲದೆ ಕುಣಿವ ಈ ಸಾಂಸ್ಕೃತಿಕ ರಾಯಭಾರಿಗಳಿಗೆ ನಮೋ ನಮಃ
ಮರಾಠಿ ಗೋಡಾ ಥಕ ಥೈ ಥಕ ಕೈ: ಮೆರವಣಿಯಲ್ಲಿ ಪಾಲ್ಗೊಂಡ ಚಿಣ್ಣರು, ಬಿಳಿ ಕುದುರೆ ಹಿಂದೆ ಮುಂದೆ ಸುತ್ತುತ್ತಿದ್ದರು. ಮೈಸೂರಿನಿಂದ ಬಂದ ಒಟ್ಟು 45 ಕುದುರೆಗಳ ಅಶ್ವದಳದ ಲೆಫ್ಟ್ ರೈಟ್ ಮೆರವಣಿಗೆ ಒಂದು ಕಡೆ ಸಾಗಿದ್ದರೆ, ಮಹಾರಾಷ್ಟ್ರದಿಂದ ಬಂದಿರುವ ಬಿಳಿ ಕುದುರೆ ಸೂರಜ್, ಲಕ್ಷ್ಮಣ್ ಜೋಡಿ ಎಲ್ಲರನ್ನೂ ಮೋಡಿ ಮಾಡುತ್ತಿದೆ. ಆಕರ್ಷಕವಾದ ಈ ಬಿಳಿ ಕುದುರೆಗಳು ಸಂಗೀತದ ಮೋಡಿಗೆ ಸಿಲುಕಿದಂತೆ ಥಕ ಥೈ ಥಕ ಥೈ ಎಂದು ಹೆಜ್ಜೆ ಹಾಕುವುದು, ಕೆನೆಯುವುದು ನೋಡುವುದೇ ಆನಂದ. ಮಾತುಂಗದಿಂದ ಬಂದಿರುವ ಕನ್ನಡ ಸಂಘ ಸೇರಿದಂತೆ ಸುಮಾರು 250ಕ್ಕೂ ಹೊರರಾಜ್ಯದಿಂದ ಬಂದಿರುವ ಕಲಾವಿದರೂ ಈ ಕನ್ನಡ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ವಿಶೇಷ. ಗಡಿನಾಡಿನ ನಗರ ಬೆಳಗಾವಿಯು ಕರ್ನಾಟಕದ ಎರಡನೇ ರಾಜಧಾನಿಯಾಗಲಿ ಎಂಬ ಆಶಯವನ್ನು ಮೆರವಣಿಗೆ ಹೊರಟ್ಟಿದ್ದವರಲ್ಲಿ ಹೆಚ್ಚು ಜನರ ಅಭಿಪ್ರಾಯವಾಗಿದೆ.












Click it and Unblock the Notifications