ನಾನು ಸಮ್ಮೇಳನದ ಅಧ್ಯಕ್ಷನಾಗಬೇಕಿತ್ತು: ವಾಟಾಳ್
ಕನ್ನಡವೇ ನನ್ನ ಉಸಿರು. ಕನ್ನಡಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ದ. ಈ ವಾಟಾಳ್ ಕಾಡಿನಲ್ಲಿ ಮದಗಜ ಇದ್ದ ಹಾಗೆ. ಏಕಾಂಗಿಯಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ ಮುಂದೆ ಕೂಡಾ ಹೋರಾಟ ಮಾಡುತ್ತೇನೆ. ಬೆಳಗಾವಿಯಿಂದ ಹಿಡಿದು ಚಾಮರಾಜನಗರದವರೆಗೆ ಹೋರಾಟ ಮಾಡಿದ್ದೇನೆ. ಇತರ ಕನ್ನಡಪರ ಸಂಘಟನೆಗಳ ಹಾಗೆ ನಾನು ತೋರಿಕೆಯ ಹೋರಾಟ ಮಾಡುವವನಲ್ಲ. ಹಾರ ಹಾಕಿಕೊಂಡು ಮಾಧ್ಯಮಗಳ ಮುಂದೆ ಫೋಸ್ ನೀಡುವ ದುರ್ಗತಿ ಈ ವಾಟಾಳ್ ಗೆ ಬಂದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ವಾಟಾಳ್ ಬೆಂಕಿ ಇದ್ದ ಹಾಗೆ. ನನ್ನನ್ನು ಮುಟ್ಟಲು ಬಂದರೆ ಸುಟ್ಟು ಹೋಗುತ್ತಾರೆ. ನನ್ನ ಹೋರಾಟ ಬರೀ ಬೆಂಗಳೂರು ನಗರಕ್ಕೆ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ಬರೀ ಮೈಸೂರು ಬ್ಯಾಂಕ್ ವೃತ್ತದ ಬಳಿ ವಾಟಾಳ್ ಪ್ರತಿಭಟನೆ ನಡೆಸುತ್ತಾರೆನ್ನುವ ಆರೋಪ ನನ್ನ ಮೇಲಿದೆ. ವಿಧಾನಸೌಧಕ್ಕೆ ಬರಬೇಡಿ, ರಾಜಭವನಕ್ಕೆ ಹೋಗಬೇಡಿ, ಅಲ್ಲಿ ಮೆಟ್ರೋ ಕೆಲಸ ನಡೆಯುತ್ತಿದೆ ಇಲ್ಲಿ ಬೇರೆ ಕಾಮಗಾರಿ ನಡೆಯುತ್ತಿದೆ ಎಂದು ಪ್ರತಿಭಟನೆಗೆ ಅವಕಾಶ ನೀಡದಿದ್ದರೆ ಇನ್ನೇನು ಚಂದ್ರಲೋಕದಲ್ಲಿ ಪ್ರತಿಭಟನೆ ನಡೆಸಲಾ ಎಂದು ವಾಟಾಳ್ ಆಕ್ರೋಶದಿಂದ ನುಡಿದರು.
ಚಾಮರಾಜನಗರದ ಜನ ನಾನು ಮಾಡಿದ ಅಭಿವೃದ್ದಿ ಕೆಲಸವನ್ನು ಈಗಲೂ ನೆನೆಸುತ್ತಿದ್ದಾರೆ. ಆದರೂ ನಾನು ಚುನಾವಣೆಯಲ್ಲಿ ಸೋತೆ. ನನ್ನ ಜೇಬಿನಲ್ಲಿ ದುಡ್ಡಿಲ್ಲ. ಮದ್ಯಮಾಂಸ ವಿತರಿಸಲು ನನ್ನಿಂದಾಗುವುದಿಲ್ಲ. ಅಲ್ಲಿನ ಜನ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ವಾಟಾಳ್ ಹೇಳಿದರು.