ಸಿದ್ರಾಮಯ್ಯನವರೇ ಕಾಂಗ್ರೆಸ್ ಗೆ ಅಧಿಕಾರ ಭಾಗ್ಯ ಕೊಡಿಸ್ತೀರಾ?
ಬೆಂಗಳೂರು, ಮಾರ್ಚ್ 11: ಈಗ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಯಡಿಯೂರಪ್ಪ ಫೋಟೋ ಇಟ್ಟುಕೊಂಡು ಗೌರವ ಕೊಡಬೇಕು ಎಂಬ ಮಾತು ಕಳೆದ ವಿಧಾನಸಭೆ ಚುನಾವಣೆ ವೇಳೆ ಕೇಳಿಬಂದಿತ್ತು. ಕೆಜೆಪಿ ಎಂಬ ಪಕ್ಷ ಕಟ್ಟಿದ್ದ ಯಡಿಯೂರಪ್ಪನವರು, ನಾವು ಗೆಲ್ಲದಿದ್ದರೆ ಹಾಳಾಗಲಿ, ಬಿಜೆಪಿಯನ್ನು ಸೋಲಿಸಿಯೇ ಸೋಲಿಸ್ತೀವಿ ಎಂದಿದ್ದರು. ಅ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದರು ಕೂಡ.
ಯಡಿಯೂರಪ್ಪನವರು ಕಟ್ಟುವುದರಲ್ಲಿ ನಿಸ್ಸೀಮರೋ ಅಲ್ಲವೋ ಕೆಡುವುವುದರಲ್ಲಿ ನಿಷ್ಣಾತರು ಎಂಬ ಬ್ರ್ಯಾಂಡ್ ಅಂತೂ ಅವರಿಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಳಗಿನ ಕಿತ್ತಾಟ ಕಾಂಗ್ರೆಸ್ ಗೆ ಅನಾಯಾಸ ಗೆಲುವು ತಂದುಕೊಟ್ಟಿತು. ಈ ಸಲ ಏನ್ಮಾಡ್ತಾರೆ ಕಾಂಗ್ರೆಸ್ ನವರು ಎಂಬುದು ಪ್ರಶ್ನೆ.[ಕರ್ನಾಟಕದಲ್ಲೂ ತಲ್ಲಣ ಸೃಷ್ಟಿಸಿದ ಬಿಜೆಪಿಯ ಭರ್ಜರಿ ಗೆಲುವು]
ಸಿದ್ದರಾಮಯ್ಯ ಅವರೇನೋ ಸಾಲುಸಾಲು 'ಭಾಗ್ಯ' ಗಳ ಹೆಸರು ಹೇಳ್ತಾರೆ. ಆದರೆ ಸ್ಟೀಲ್ ಬ್ರಿಡ್ಜ್, ಗಣಪತಿ ಆತ್ಮಹತ್ಯೆ ಪ್ರಕರಣ, ಆ ಕಡೆಯಿಂದ ಪೂಜಾರಿ, ಈ ಕಡೆಯಿಂದ ವಿಶ್ವನಾಥ್ ಕಾಂಗ್ರೆಸ್ ನ ಕೈ- ಕಾಲು, ತಲೆ ಕಡಿಯುತ್ತಿದ್ದಾರೆ. ಇನ್ನು ಸಿದ್ದರಾಮಯ್ಯ ಧೋರಣೆ ಬಗ್ಗೆಯಂತೂ ಶ್ರೀನಿವಾಸ್ ಪ್ರಸಾದ್ ಎಲ್ಲಿ ಸಿಕ್ಕರಲ್ಲಿ ತೊಳೆದು ಒಣಗಿ ಹಾಕ್ತಿದ್ದಾರೆ.
ಎರಡು-ಮೂರು ದಿನ ಮನೆ ಬಿಟ್ಟು ಆಚೆ ಕಾಣಿಸಿಕೊಂಡಿರಲಿಲ್ಲ
ಯಾವ ಸಿದ್ದರಾಮಯ್ಯ ತೊಡೆ ತಟ್ಟಿ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿಬಂದರೋ ಡೊನೇಷನ್ ಗೇಟ್ ಹಗರಣ ಬಯಲಾದಾಗ ಎರಡು-ಮೂರು ದಿನ ಮನೆ ಬಿಟ್ಟು ಆಚೆ ಕಾಣಿಸಿಕೊಂಡಿರಲಿಲ್ಲ. ಈಗ ಉತ್ತರಪ್ರದೇಶ ಚುನಾವಣೆಯಲ್ಲಿ ಅಮಿತ್ ಷಾ-ನರೇಂದ್ರ ಮೋದಿ ಬ್ಯಾಟ್ ಬೀಸಿರುವ ರೀತಿ ನೋಡಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ನ ಕಾಪಾಡಬೇಕೆಂದರೆ ಮತ್ತೆ ಯಡಿಯೂರಪ್ಪನವರೇ ಏನಾದರೂ ಮಾಡಬೇಕು.
ಇಮೇಜ್ ಸಮಸ್ಯೆ
ಹಾಗೆ ನೋಡಿದರೆ ಸಿದ್ದರಾಮಯ್ಯ ಅವರ ಬಗ್ಗೆ ಜನರಲ್ಲಿರುವ ಇಮೇಜೇ ಸಾಕು, ಕಾಂಗ್ರೆಸ್ ಗೆ ಡ್ಯಾಮೇಜ್ ಮಾಡೋದಿಕ್ಕೆ. ಎಂಥ ಕಷ್ಟದ ಮಧ್ಯೆಯೂ ಪರಿಸ್ಥಿತಿಯನ್ನು ಚಾಣಾಕ್ಷತೆಯಿಂದ ನಿರ್ವಹಿಸುತ್ತಿದ್ದ ಎಸ್ಸೆಂ ಕೃಷ್ಣ, ಮೈತ್ರಿ ಸರಕಾರದಲ್ಲಿ ಎಷ್ಟೇ ಮೈ ಕೈ ನೋವು ಮಾಡಿಕೊಂಡರೂ ತುಟ್ಟಿ ಬಿಚ್ಚದಿದ್ದ ಧರಂ ಸಿಂಗ್ ಗೆ ಹೋಲಿಸಿದರೆ ಸಿದ್ದರಾಮಯ್ಯ ಅವರದು ಬಹಳ ನೆಮ್ಮದಿ ಹಾಗೂ ಒಳ್ಳೆ ಹೆಸರಿರಬೇಕಾದ ಸರಕಾರ ಆಗಬೇಕಿತ್ತು.
ದೇವೇಗೌಡರೂ ಸುಮ್ಮನಿದ್ದು ಬಿಟ್ಟಿದ್ದರೆ
ಆದರೆ, ಕಾಂಗ್ರೆಸ್ ನಿಂದ ಹಿರಿತಲೆಗಳೇ ಕಳಚಿಕೊಳ್ಳುತ್ತಿದ್ದಾರೆ. ಕಾವೇರಿ ವಿವಾದದ ಸಂದರ್ಭದಲ್ಲಿ ದೇವೇಗೌಡರೂ ಸುಮ್ಮನಿದ್ದು ಬಿಟ್ಟಿದ್ದರೆ ಸಿದ್ರಾಮಣ್ಣ ಅವರ ಸ್ಥಿತಿ ಏನಾಗಿರ್ತಿತ್ತು? ಕಾಂಗ್ರೆಸ್ ಪಕ್ಷ ಇಂಥ ದಯನೀಯ ಸ್ಥಿತಿಗೆ ತಲುಪಲು ಕಾರಣ ಏನು ಅನ್ನೋದು ಆ ಪಕ್ಷದವರಿಗೂ ಗೊತ್ತಿದೆ. ಆದರೆ ಬಾಯಿ ಬಿಡುವುದಕ್ಕೆ ತಯಾರಿಲ್ಲ.
ಬಿಜೆಪಿಯವರು ಕಚ್ಚಾಟ ಬಿಟ್ಟು ಒಟ್ಟಾದರೆ
ರಾಜ್ಯದಲ್ಲಿ ಇನ್ನೊಂದು ವರ್ಷಕ್ಕೆ ವಿಧಾನಸಭೆ ಚುನಾವಣೆ ಬರುತ್ತದೆ. ಯಡಿಯೂರಪ್ಪ ಅವರು ಗಿರಗಿರ ತಿರುಗ್ತಾ, ಕಾಂಗ್ರೆಸ್ ಮುಖಂಡರನ್ನು ಒಬ್ಬೊಬ್ಬರನ್ನಾಗಿ ಸೆಳೆಯುತ್ತಿರುವುದು ನೋಡಿದರೆ ಮುಂದೆ ಬಹಳ ಕಷ್ಟ ಇದೆ. ರಾಯಣ್ಣ-ಈಶಣ್ಣ ಅಂತ ಕಚ್ಚಾಟ ಬಿಟ್ಟು ಒಟ್ಟಾಗಿ ಎಲ್ಲರೂ ಚುನಾವಣೆಗೆ ಇಳಿದರೆ ಬಿಜೆಪಿಗೆ ಬಹಳ ಪ್ಲಸ್ ಗಳಿವೆ. ಆದರೆ ಹಾಗಾಗಲು ಸಾಧ್ಯವಾ? ಇನ್ನೊಂದು ವರ್ಷ ಕಾದು ಬಿಡೋಣ.