ಪಿ.ಯು. ಪ್ರಶ್ನೆಪತ್ರಿಕೆ ಸೋರಿಕೆ: ಸರ್ಕಾರಕ್ಕೆ ಸವಾಲೇ, ಕಂಠಕಪ್ರಾಯವೇ?
ಚಾಮರಾಜನಗರ: ಕಳೆದ ವರ್ಷ ಪಿ.ಯು. ಪ್ರಶ್ನೆಪತ್ರಿಕೆ ಸೋರಿಕೆ ಮೇಲೆ ಸೋರಿಕೆಯಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಹೈರಾಣಾಗಿದ್ದು ವಿದ್ಯಾಭ್ಯಾಸವೇ ಬೇಡ ಎಂದುಕೊಂಡವರೆಷ್ಟೋ! ಕೊನೆಗೂ ಸರ್ಕಾರ ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಿಸುವಲ್ಲಿ ನಿಯೋಜಿಸಿದ ತಂಡ ಯಶಸ್ವಿಯಾಯಿತು.
ಕಳೆದ ಸಾಲಿನಲ್ಲಿ ಪಿ.ಯು. ಪ್ರಶ್ನೆಪತ್ರಿಕೆ ಸೋರಿಕೆಯಿಂದ ರೊಚ್ಚಿಗೆದ್ದ ಪೋಷಕರು ವಿದ್ಯಾರ್ಥಿಗಳು ಪಿ.ಯು ಮಂಡಳಿ ಘೇರಾವ್ ಹಾಕಿ ಪ್ರತಿಭಟಿಸಿದ್ದರು. ಪರೀಕ್ಷೆಯನ್ನೇ ಬರೆಯುವುದಿಲ್ಲ, ಕೃಪಾಂಕ ನೀಡಿ ಉತ್ತೀರ್ಣ ಮಾಡಿ ಎಂದೂ, ಪಿ.ಯು ಆಡಳಿತ ಮಂಡಳಿ ನಿರ್ದೇಶಕರು ರಾಜೀನಾಮೆ ನೀಡಿ ಸಂಪೂರ್ಣ ಜವಾಬ್ದಾರಿ ಹೊರತಕ್ಕದು ಎಂದು ಎಚ್ಚರಿಕೆ ನೀಡಿದ್ದರು.[ಮೌಲ್ಯಮಾಪನ ಬಹಿಷ್ಕರಿಸುವ ಉಪನ್ಯಾಸಕರಿಗೆ ಜೈಲು ಶಿಕ್ಷೆ!]

ಕೊನೆಗೂ ಎಚ್ಚೆತ್ತ ಸರ್ಕಾರ ಮಾಡದ ತಪ್ಪಿಗೆ ಪಿ.ಯು ಆಡಳಿತ ಮಂಡಳಿಯ ಕೆಲವರನ್ನು ವರ್ಗಾವಣೆ ಮಾಡಿ ಶಿಕ್ಷೆ ವಿಧಿಸಿದರೆ ಇನ್ನು ಕೆಲವರನ್ನು ರಾಜಕೀಯ ಲಾಭಿಯಿಂದ ರಕ್ಷಿಸಿತ್ತು. ಸರ್ಕಾರ ಪ್ರಮುಖವಾಗಿ ರಚಿಸಿದ್ದ ನಾಲ್ಕು ತಂಡ ಆರೋಪಿಗಳ ಪತ್ತೆಗಾಗಿ ತುಮಕೂರು, ಹಾನಗಲ್,ಮಂಗಳೂರು, ಧಾರವಾಡ, ವಿವಿಧೆಡೆ ಶೋಧ ಕಾರ್ಯನಡೆಸಿತ್ತು. ಅವರ ಗಾಳಕ್ಕೆ ಮೀನು ಸಿಕ್ಕಿದಂತೆ ಆರೋಪಿಗಳು ಒಬ್ಬರಾಗಿ ಸಿಕ್ಕಿಹಾಕಿಕೊಂಡರು.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಜಾಮೀನಿನ ಮೇಲೆ ಹೊರಬಂದರೆ ಇನ್ನು ಕೆಲವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ರಾಜ್ಯದಲ್ಲಿನ ಖಜಾನೆಗಳೇ ಸುರಕ್ಷಿತವಾಗಿಲ್ಲದಿರುವುದು ಸೋರಿಕೆಗೆ ಪ್ರಮುಖ ಕಾರಣವಾಯಿತು. ಟ್ಯುಟೋರಿಯಲ್ ಮಾಫಿಯಾಗಳು ಹೆಚ್ಚು ಫಲಿತಾಂಶ ತರಲು ಇದನ್ನೇ ಅಡ್ಡದಾರಿಯನ್ನಾಗಿ ಬಳಸಿಕೊಂಡವು.
ಆರೋಪಿಗಳನ್ನು ಬಂಧಿಸಿದ ಮೇಲೂ ಈ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಆರೋಪಿಗಳೆಲ್ಲರೂ ಸೆರೆಸಿಕ್ಕಿಲ್ಲವೆಂದಾಗುತ್ತದೆ. ಮತ್ತೆ ಹೆಚ್ಚಿನ ತನಿಖೆ ನಡೆಸಬೇಕಾಗುತ್ತದೆ. ಜೈಲಿನಲ್ಲೇ ಇದ್ದುಕೊಂಡು ಪ್ರಶ್ನೆಪತ್ರಿಕೆ ಸೋರಿಕೆ ಮಾಡುವಂತಹ ಚಾಣಕ್ಷನಾಗಿರುವ ಶಿವಕುಮಾರ್ ಹಾಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೂ ಅವರ ಶಿಷ್ಯರು ಈ ಕೆಲಸ ಮಾಡಬಾರದೆಂದೇನಿಲ್ಲ.
ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸರ್ಕಾರ ಈಗಲೇ ಹೆಚ್ಚಿನ ಮುಂಜಾಗ್ರತಾಕ್ರಮ ಕೈಗೊಳ್ಳುವ ಅಗತ್ಯವಿದೆ.












Click it and Unblock the Notifications