ಬಳ್ಳಾರಿಯ ವಿದ್ಯಾವರ್ಧಕ ಸಂಘದಲ್ಲಿ ಶಿಕ್ಷಣ ಪಡೆದಿದ್ದರು ಯು.ಆರ್. ರಾವ್
ಬಳ್ಳಾರಿ, ಜುಲೈ 24: ಸೋಮವಾರ ಬೆಳಗಿನ ಜಾವ ನಿಧನ ಹೊಂದಿದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ರೊದ ಮಾಜಿ ಅಧ್ಯಕ್ಷ ಪ್ರೊ ಯು.ಆರ್.ರಾವ್ ಅವರಿಗೂ ಬಳ್ಳಾರಿಗೂ ಹಾಗೂ ಇಲ್ಲಿನ ವೀರಶೈವ ವಿದ್ಯಾವರ್ಧಕ ಸಂಘಕ್ಕೂ ಅವಿನಾಭಾವ ಸಂಬಂಧ.
ಯಾಕೆ ಅಂತಿರಾ? ತಮ್ಮ ಸಂಬಂಧಿಕರ ಮನೆಯಲ್ಲಿದ್ದುಕೊಂಡು ರಾವ್ ಅವರು ತಮ್ಮ ಇಂಟರ್ ಮೀಡಿಯೆಟ್ ವಿದ್ಯಾಭ್ಯಾಸವನ್ನು ಮುಗಿಸಿದ್ದು ಇದೇ ಬಳ್ಳಾರಿಯ ವಿದ್ಯಾವರ್ಧಕ ಸಂಘದಲ್ಲಿ.
ಈ ಕಾರಣದಿಂದ ಖ್ಯಾತ ವಿಜ್ಞಾನಿ ಪ್ರೊ ರಾವ್ ಅವರು ಬಳ್ಳಾರಿಗೆ ಭೇಟಿ ನೀಡಿದಾಗ ಒಮ್ಮೆ ತಾವು ಅಭ್ಯಾಸ ಮಾಡಿದ ವೀರಶೈವ ಕಾಲೇಜಿಗೆ ಹೋಗುವುದನ್ನು ಎಂದಿಗೂ ಮರೆತಿರಲಿಲ್ಲ. ಅಲ್ಲದೆ ಪ್ರೊ. ರಾವ್ ಅವರು ಸಂಸ್ಥೆಯ ಹಳೆ ವಿದ್ಯಾರ್ಥಿ ಎಂಬ ಹೆಮ್ಮೆ ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯವರಿಗೆ ಇದೆ.
ಜೂನ್ 20, 2014ರಂದು ಪ್ರೊ ಯು.ಆರ್.ರಾವ್ ಅವರು ಬಳ್ಳಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, ತಾವು ಬಾಲ್ಯದಲ್ಲಿ ಬಳ್ಳಾರಿಯಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದರು. ಬಳ್ಳಾರಿಯಲ್ಲಿದ್ದ ತಮ್ಮ ಸ್ನೇಹಿತರಿಗೆ ಆಗ ಇಲ್ಲಿ ಕೋಟೆ ಪ್ರದೇಶವೇ ಕಾಲ ಕಳೆಯುವ ಸ್ಥಳವಾಗಿತ್ತು. ತಮ್ಮ ಈ ಬೆಳವಣಿಗೆಗೆ ವೀರಶೈವ ವಿದ್ಯಾವರ್ಧಕ ಸಂಘದ ಕೊಡುಗೆ ಅಪಾರವಾಗಿತ್ತು ಎಂದೂ ಅವರು ಅಂದು ಬಣ್ಣಿಸಿದ್ದರು.