ಉಡುಪಿಯ ಪ್ರವಾಸಿತಾಣಗಳ ಮಾಹಿತಿ ಕೊಡಲಿದೆ ರಜತ ಮಹೋತ್ಸವ ರಥ
ಉಡುಪಿ, ಜನವರಿ 02; ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ' ಉಡುಪಿ ರಜತ ಮಹೋತ್ಸವ ರಥ' ಸಂಚಾರ ನಡೆಯಲಿದೆ. ಈ ರಥವು ಜಿಲ್ಲೆಯ ಪ್ರವಾಸಿತಾಣಗಳ ಕುರಿತು ಜನರಿಗೆ ಮಾಹಿತಿಯನ್ನು ನೀಡಲಿದೆ.
ಸೋಮವಾರ ಉಡುಪಿ ಶಾಸಕ ರಘುಪತಿ ಭಟ್ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ, ಉಡುಪಿ ಜಿಲ್ಲಾ ರಜತ ಮಹೋತ್ಸವ ಸಮಾರಂಭ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿರುವ 'ಉಡುಪಿ ರಜತ ಮಹೋತ್ಸವ ರಥ'ಕ್ಕೆ ಚಾಲನೆ ನೀಡಿದರು.
ಉಡುಪಿಗೆ ರಜತ ಮಹೋತ್ಸವ; ಜಿಲ್ಲೆ ರಚನೆ ಹಿಂದಿನ ಕಥೆ
ಬಳಿಕ ಮಾತನಾಡಿದ ಶಾಸಕರು, "ಉಡುಪಿ ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಬಗ್ಗೆ ದೇಶದ ಪ್ರತಿಷ್ಠಿತ ಬ್ಲಾಗರ್ಗಳ ಮೂಲಕ, ಜಿಲ್ಲೆಯಲ್ಲಿನ ಹಲವು ಪ್ರವಾಸಿ ತಾಣಗಳ ಬಗ್ಗೆ ವಿನೂತನವಾಗಿ ಅತೀ ಹೆಚ್ಚಿನ ರೀತಿಯಲ್ಲಿ ಪ್ರಚುರಪಡಿಸಿದ್ದು, ಜಿಲ್ಲೆಯನ್ನು ದೇಶದ ಪ್ರಸಿದ್ಧ ಪ್ರವಾಸಿತಾಣವನ್ನಾಗಿ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುವುದಾಗಿ" ಹೇಳಿದರು.
ಕರ್ನಾಟಕ ವಾರ್ತಾ ಇಲಾಖೆ ಸಾಕ್ಷ್ಯಚಿತ್ರಕ್ಕೆ ರಜತ ಕಮಲ ಪ್ರಶಸ್ತಿ
"ಉಡುಪಿ ಜಿಲ್ಲೆಯ ರಜತ ಉತ್ಸವದ ಅಂಗವಾಗಿ ಜಿಲ್ಲೆಯನ್ನು ಮುಂದಿನ 25 ವರ್ಷಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿ ಸಮಗ್ರವಾಗಿ ಅಭಿವೃದ್ದಿಪಡಿಸುವ ಬಗ್ಗೆ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ದಿಕ್ಸೂಚಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿವಿಧ ಕ್ಷೇತ್ರಗಳ ತಜ್ಞರು ನೀಡಿರುವ ಸಲಹೆಗಳನ್ನು ದಾಖಲೀಕರಣ ಮಾಡಿ, ಅದರಂತೆ ಜಿಲ್ಲೆಯನ್ನು ಅಭಿವೃದ್ದಿಗೊಳಿಸಲಾಗುವುದು" ಎಂದು ಶಾಸಕರು ತಿಳಿಸಿದರು.
ಉಡುಪಿ: ಅಪಘಾತದಲ್ಲಿ ಮೆದುಳು ನಿಶ್ಕ್ರಿಯ: ವಿದ್ಯಾರ್ಥಿ ಸಾವಿನಲ್ಲೂ ಸಾರ್ಥಕತೆ
"ರಜತ ಉತ್ಸವ ಅಂಗವಾಗಿ ಜಿಲ್ಲೆಯ ಪ್ರಗತಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ರಥವನ್ನು ಸಿದ್ದಪಡಿಸಲಾಗಿದ್ದು, ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುವ ಈ ರಥವು ಜಿಲ್ಲೆಯ ಪ್ರಗತಿಯನ್ನು ಎಲ್ಲೆಡೆ ಸಾರಲಿದೆ" ಎಂದು ಶಾಸಕರು ವಿವರಣೆ ನೀಡಿದರು.
25 ದಿನಗಳ ಕಾಲ ಸಂಚಾರ; ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಮಾತನಾಡಿ, "ರಜತ ಉತ್ಸವದ ರಥವು 25 ದಿನಗಳ ಕಾಲ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ಜಿಲ್ಲೆಯ ವೈವಿಧ್ಯಮಯ ಪ್ರವಾಸಿತಾಣಗಳ ಬಗ್ಗೆ ಮಾಹಿತಿ ನೀಡಲಿದ್ದು, ರಜತ ಉತ್ಸವದ ಅಂಗವಾಗಿ ಜನವರಿ 20 ರಿಂದ 22ರ ವರಗೆ ಮಲ್ಪೆ ಬೀಚ್ನಲ್ಲಿ ಆಕರ್ಷಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ" ಎಂದರು.
ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್ ಮಾತನಾಡಿ, "ಬ್ಯಾಂಕಿಂಗ್ ಕ್ಷೇತ್ರದ ತವರೂರಾದ ಉಡುಪಿ ಜಿಲ್ಲೆಯಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಂಭಗೊಂಡು ಜಿಲ್ಲೆಯು ಆರ್ಥಿಕವಾಗಿ ಮತ್ತಷ್ಟು ಸದೃಢವಾಗಬೇಕಿದೆ, ಪ್ರವಾಸೋದ್ಯಮವು ಅಂತಾರಾಷ್ಟ್ರೀಯ ಪ್ರಸಿದ್ದಿ ಪಡೆಯುವಂತಾಗಲಿ" ಎಂದು ತಿಳಿಸಿದರು.
ರಥದ ವಿಶೇಷತೆಗಳು; ಈ ರಥದಲ್ಲಿ ಉಡುಪಿಯ ಕಲೆ ಸಂಸ್ಕೃತಿಗಳನ್ನು ಬಿಂಬಿಸುವ, ಯಕ್ಷಗಾನ, ಕಂಬಳ, ದೈವಾರಾಧನೆ, ದೇವಾಲಯ, ಹುಲಿವೇಷ ಬಿಂಬಿಸುವ ಆಕರ್ಷಕ ಸ್ಥಬ್ಧಚಿತ್ರಗಳು ಹಾಗೂ ಎಲ್ಸಿಡಿ ಪರದೆಯ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳು ಮತ್ತು ಅಭಿವೃದ್ಧಿಯನ್ನು ಬಿಂಬಿಸುವ ವೀಡಿಯೋ ಪ್ರದರ್ಶನದ ವ್ಯವಸ್ಥೆ ಇರಲಿದೆ.
ಪ್ರವಾಸೋದ್ಯಮದ ಅಭಿವೃದ್ಧಿ; ನಿಸರ್ಗ ಸೌಂದರ್ಯದಿಂದ ಕೂಡಿದ ಉಡುಪಿ ಜಿಲ್ಲೆ ಅರಬ್ಬಿ ಸಮುದ್ರ, ಪಶ್ಚಿಮ ಘಟ್ಟ ಶ್ರೇಣಿಯನ್ನು ಹೊಂದಿದೆ. ಹಲವು ಪ್ರವಾಸಿ ತಾಣಗಳ ಮೂಲಕ ಜಿಲ್ಲೆ ಪ್ರವಾಸಿಗರನ್ನು ಸೆಳೆಯುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಉಡುಪಿಯು 1997ರಲ್ಲಿ ಸ್ವತಂತ್ರ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಸಹ ಹಲವಾರು ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಜಿಲ್ಲೆಯು ಸುಂದರವಾದ, ಮನಸೆಳೆಯುವ ಮೋಹಕವಾದ 105 ಕಿ. ಮೀ. ಉದ್ದದ ಕಡಲ ತೀರವನ್ನು ಹೊಂದಿದೆ.
ಉಡುಪಿ ಜಿಲ್ಲೆಯಾಗಿ ರಚನೆಗೊಂಡು 25 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ರಜತೋತ್ಸವ ಲೋಗೋ ಹಾಗೂ ವೆಬ್ಸೈಟ್ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 25ರಿಂದ 5 ತಿಂಗಳ ಕಾಲ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜನವರಿ 25ರಂದು ರಜತೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.