Talakadu: ತಲಕಾಡಿನಿಂದ ಗೋಕರ್ಣಕ್ಕೆ ಗಂಗೆ ಪ್ರವೇಶವಾಗುವುದು ಹೇಗೆ ಗೊತ್ತಾ?
ಮೈಸೂರು, ಅಕ್ಟೋಬರ್ 17: ತುಲಾಮಾಸ ಪವಿತ್ರಮಾಸ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಮಾಸ ಪೂರ್ತಿ ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ದರ್ಶನ ನೀಡಿ ತಿಂಗಳ ಕಾಲ ಪವಿತ್ರಜಲವಾಗಿ ಭಕ್ತರ ಪಾಪಕಳೆಯುತ್ತಾಳೆ ಎಂಬ ನಂಬಿಕೆ ನಮ್ಮೆಲ್ಲರಲ್ಲಿದೆ. ಇದರ ನಡುವೆ ಮೈಸೂರು ಜಿಲ್ಲೆಯ ತಲಕಾಡಿನಲ್ಲಿರುವ ಗೋಕರ್ಣಕ್ಕೂ ಗಂಗೆಯು ತೀರ್ಥರೂಪದಲ್ಲಿ ಪ್ರವೇಶಿಸಿ ಒಂದು ತಿಂಗಳ ಕಾಲ ಇಲ್ಲಿರುತ್ತದೆ ಎನ್ನುವುದೇ ವಿಶೇಷ.
ಇಷ್ಟಕ್ಕೂ ತಲಕಾಡಿನ ಗೋಕರ್ಣಕ್ಕೂ ಗಂಗೆಗೂ ಎಲ್ಲಿಯ ಸಂಬಂಧ ಎಂಬ ಪ್ರಶ್ನೆಗಳು ಮೂಡಬಹುದು ಆದರೆ ಪೌರಾಣಿಕವಾಗಿ ನಂಟಿರುವುದು ನಮಗೆ ಗೋಚರಿಸುತ್ತದೆ. ತುಲಾಮಾಸದಲ್ಲಿ ಪವಿತ್ರಗಂಗೆ ಇಲ್ಲಿನ ಗೋಕರ್ಣಕ್ಕೆ ಆಗಮಿಸಿ ಒಂದು ತಿಂಗಳ ಕಾಲ ಇಲ್ಲಿರುತ್ತಾಳೆ ಎಂಬ ನಂಬಿಕೆಯಿದೆ. ಈ ಸಮಯದಲ್ಲಿ ಗೋಕರ್ಣದ ತೀರ್ಥ ಪ್ರೋಕ್ಷಣೆ ಮಾಡಿ ಪೂಜಿಸಿದರ ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ. ಇದೇ ಸಮಯದಲ್ಲಿ ಕಾವೇರಿಯಲ್ಲಿ ತೀರ್ಥ ಸ್ನಾನಮಾಡಲು ಭಕ್ತರು ಮುಗಿ ಬೀಳುತ್ತಾರೆ.

ಹಾಗೆ ನೋಡಿದರೆ ತಲಕಾಡು ಕಾವೇರಿ ನದಿ ತಟದ ಕ್ಷೇತ್ರವಾಗಿದೆ. ಜತೆಗೆ ಪೌರಾಣಿಕ ಮತ್ತು ಇತಿಹಾಸದ ನಂಟಿರುವುದು ಕಂಡು ಬರುತ್ತದೆ. ಕಾವೇರಿಯು ಇಲ್ಲಿ ಶಿವ ಕ್ಷೇತ್ರ ಮತ್ತು ವಿಷ್ಣುಕ್ಷೇತ್ರವನ್ನು ಸೃಷ್ಟಿಸಿದ್ದು ಚತುರ್ (ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರ) ವಾಹಿನಿಯಾಗಿ ಹರಿಯುವುದು ಗಮನಾರ್ಹವಾಗಿದೆ. ಪೌರಾಣಿಕ ಮತ್ತು ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ತಲಕಾಡು ಹಲವು ಹೆಸರುಗಳಿಂದ ಕರೆಯಲ್ಪಡುತ್ತಿತ್ತಂತೆ.
ತಲ ಮತ್ತು ಕಾಡರಿಂದ ತಲಕಾಡಾಯಿತು!
ಸೋಮದತ್ತ ಋಷಿ ಮತ್ತು ಶಿಷ್ಯರು ಇಲ್ಲಿ ಮೋಕ್ಷ ಪಡೆದಿದ್ದರಿಂದ ಗಜಾರಣ್ಯ ಕ್ಷೇತ್ರ, ಸಿದ್ಧಾರಣ್ಯ ಕ್ಷೇತ್ರವೆಂದೂ, ಗಂಗರ ರಾಜಧಾನಿಯಾಗಿ ಬಳಿಕ ಚೋಳರ ಅಧೀನಕ್ಕೆ ಬಂದಾಗ ರಾಜರಾಜಪುರವೆಂದೂ, ಇದಾದ ನಂತರ ತಲ ಮತ್ತು ಕಾಡ ಎಂಬ ಬೇಡರು ಇಲ್ಲಿರುವ ವೈದ್ಯನಾಥೇಶ್ವರನನ್ನು ಆರಾಧಿಸಿ ಮೋಕ್ಷ ಪಡೆದಿದ್ದರಿಂದ ತಲಕಾಡು ಎಂಬ ಹೆಸರು ಬಂದಿದೆ.
ಇನ್ನು ಇತಿಹಾಸದ ಪ್ರಕಾರ ಪಶ್ಚಿಮ ಗಂಗರು ಕ್ರಿ.ಶ. ಸುಮಾರು ಆರನೇ ಶತಮಾನದಿಂದ ಹತ್ತನೇ ಶತಮಾನದ ಕೊನೆವರೆಗೂ ತಲಕಾಡನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ನಡೆಸಿ, ತಲಕಾಡು ಗಂಗರೆಂದೇ ಹೆಸರುವಾಸಿಯಾದರು.

ಹತ್ತನೇ ಶತಮಾನದ ಕೊನೆಯ ಭಾಗದಲ್ಲಿ ತಲಕಾಡು ಹಾಗೂ ಸುತ್ತಮುತ್ತಲ ಪ್ರಾಂತ್ಯಗಳನ್ನು ಚೋಳ ಚಕ್ರವರ್ತಿ ರಾಜರಾಜ ಚೋಳನು ತನ್ನ ವಶಕ್ಕೆ ತೆಗೆದುಕೊಂಡನು. ಆ ನಂತರ ಸುಮಾರು 130 ವರ್ಷಗಳ ಕಾಲಚೋಳರು ಆಳ್ವಿಕೆ ನಡೆಸಿದರೆಂದೂ 1117ರಲ್ಲಿ ಹೊಯ್ಸಳ ವಿಷ್ಣುವರ್ಧನ ಚೋಳರನ್ನು ಯುದ್ಧದಲ್ಲಿ ಸೋಲಿಸಿ ಅಧಿಪತ್ಯ ಸ್ಥಾಪಿಸಿದ್ದರಿಂದ ತಲಕಾಡುಗೊಂಡ ಎಂಬ ಬಿರುದು ಪಡೆದನೆಂದೂ ಆ ನಂತರ ಮೈಸೂರು ಒಡೆಯರ್ ಆಳ್ವಿಕೆ ನಡೆಸಿದರೆಂಬುದು ಇತಿಹಾಸದಿಂದ ತಿಳಿದು ಬರುತ್ತದೆ.
ಮರಳ ರಾಶಿ ಪ್ರಕೃತಿಯ ಸೋಜಿಗ
ತಲಕಾಡಿನಲ್ಲಿ ಹರಿದು ಹೋಗುವ ಕಾವೇರಿ ನದಿ ದಂಡೆಯಿಂದ ಸುಮಾರು ಮೂರು ಕಿ.ಮೀ. ಒಳಭಾಗದವರೆಗೆ ನಿರ್ಮಾಣವಾಗಿರುವ ನಲವತ್ತು ಅಡಿಗಿಂತಲೂ ಎತ್ತರವಾಗಿರುವ ಮರಳಿನ ದಿಬ್ಬಗಳು ಈ ಕ್ಷೇತ್ರದ ವಿಶೇಷತೆಯನ್ನು ಸಾರುತ್ತಾ ದೂರದಿಂದ ಬರುವ ಪ್ರವಾಸಿಗರನ್ನು ಆಶ್ಚರ್ಯ ಚಕಿತರನ್ನಾಗಿಸುತ್ತದೆ. ಮೇಲ್ನೋಟಕ್ಕೆ ಮರಳ ರಾಶಿಗಳು ಪ್ರಕೃತಿಯ ಸೋಜಿಗವಾಗಿ ಕಂಡು ಬಂದರೂ ಇದು ತಲಕಾಡಿಗೆ ತಟ್ಟಿದ ಶಾಪ ಎಂಬುದು ಜನವಲಯದಲ್ಲಿರುವ ಕಥೆಯಾಗಿದೆ.
ಇನ್ನು ಇಲ್ಲಿರುವ ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ ಮತ್ತು ಮರಳೇಶ್ವರ ಎಂಬ ನಾಲ್ಕು ಶಿವದೇವಾಲಯಗಳನ್ನು ಸುತ್ತಲಿನಿಂದಲೂ ಮರಳು ಆವರಿಸಿಕೊಳ್ಳುತ್ತದೆ. ಹೀಗಾಗಿ ಈ ದೇವಾಲಯಗಳು ಮರಳಿನಲ್ಲಿ ಹುದುಗಿ ಹೋಗುತ್ತವೆ. ಪಂಚಲಿಂಗದರ್ಶನ ಸಂದರ್ಭ ಮರಳು ತೆಗೆದು ದೇವಾಲಯಗಳಲ್ಲಿ ಪೂಜಾಕಾರ್ಯ ನಡೆಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಪಂಚಲಿಂಗದ ಸೃಷ್ಟಿಯ ಕಥೆಯೇನು?
ಪಂಚಲಿಂಗದ ಸೃಷ್ಟಿಯ ಬಗ್ಗೆ ಹೇಳುವುದಾದರೆ ಕಾಶಿ ವಿಶ್ವನಾಥನು ಸೋಮದತ್ತ ಮತ್ತು ಶಿಷ್ಯರಿಗೆ ಹಾಗೂ ತಲ- ಕಾಡ ಎಂಬ ಬೇಡರಿಗೆ ಸಾಮೂಹಿಕ ಮೋಕ್ಷ ನೀಡಲೆಂದು ಶ್ರೀ ವೈದ್ಯೇಶ್ವರನ ರೂಪದಲ್ಲಿ ಬಂದು ಕಾವೇರಿ ನದಿ ತಟದ ಬೂರುಗ ಮರದ ಕೆಳಗೆ ನೆಲೆಸಿ ಮೋಕ್ಷ ನೀಡಿದಲ್ಲದೆ, ಭಕ್ತರಿಗೆ ಮೋಕ್ಷ ನೀಡಲೆಂದೇ ಪ್ರಧಾನ ಮುಖವಾದ ಈಶಾನ ಮುಖದಿಂದ ಶ್ರೀ ವೈದ್ಯನಾಥೇಶ್ವರ, ಪೂರ್ವ ಮುಖವಾದ ತತ್ಪುರುಷ ಮುಖದಿಂದ ಶ್ರೀ ಅರ್ಕೇಶ್ವರ, ಅಘೋರ ಮುಖದಿಂದ ಪಾತಾಳೇಶ್ವರ ಸದ್ಯೋಜಾತ ಮುಖದಿಂದ ಮರಳೇಶ್ವರ ಸ್ತ್ರೀ ವಾಸುದೇವ ಮುಖದಿಂದ ಮಲ್ಲಿಕಾರ್ಜುನೇಶ್ವರನಾಗಿ ನೆಲೆಗೊಂಡಿದ್ದಾಗಿ ನಂಬಿಕೆಯಿದೆ. ಮೈಸೂರಿನಿಂದ ಸುಮಾರು ಅರುವತ್ತು ಕಿ.ಮೀ. ದೂರದಲ್ಲಿರುವ ತಲಕಾಡು ತಿ.ನರಸೀಪುರ ತಾಲೂಕಿಗೆ ಸೇರಿದೆ.












Click it and Unblock the Notifications