ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಹರಿದುಬರುತ್ತಲೇ ಇದೆ ಪ್ರವಾಸಿಗರ ದಂಡು
ಚಿಕ್ಕಮಗಳೂರು, ಡಿಸೆಂಬರ್, 26: ಸಾಲು ರಜೆಗಳಿರುವ ಕಾರಣ ಜನರು ಕುಟುಂಬ ಸಮೇತ ಪ್ರವಾಸ ಹೊರಡುತ್ತಲೇ ಇದ್ದಾರೆ. ಹಾಗೆಯೇ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಎಲ್ಲಿ ನೋಡಿದರೂ ಪ್ರವಾಸಿಗರ ದಂದೇ ಕಾಣುತ್ತದೆ. ಅದರಲ್ಲೂ ವರ್ಷಾಂತ್ಯ ಆಗಿರುವುದರಿಂದ ರಾಜ್ಯದ ಎತ್ತರದ ಪ್ರದೇಶವಾಗಿರುವ ಮುಳ್ಳಯ್ಯನಗಿರಿಗೆ ಪ್ರತಿನಿತ್ಯ ಸಾವಿರಾರು ಜನ ಭೇಟಿ ನೀಡುತ್ತಲೇ ಇದ್ದಾರೆ. ಆದ್ದರಿಂದ ಸುತ್ತಮುತ್ತಲಿನ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ಗಳು ಭರ್ತಿಯಾಗಿವೆ.
ವರ್ಷಾಂತ್ಯ ಹಾಗೂ ಹೊಸ ವರ್ಷದ ಪ್ರಯುಕ್ತ ಪ್ರವಾಸಿಗರು ಪ್ರಮುಖ ತಾಣಗಳಲ್ಲಿ ಹೋಟೆಲ್ಗಳಲ್ಲಿ ಉಳಿದುಕೊಳ್ಳಲು ರೊಮ್ಗಳನ್ನು ಒಂದು ವಾರದ ಮುಂಚೆಯೇ ಬುಕ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಕಾಫಿನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಸಜ್ಜಾಗಿದ್ದಾರೆ. ಕ್ರಿಸ್ಮಸ್ ಹಿನ್ನೆಲೆ ಕೆಲವರಿಗೆ ವಾರಗಟ್ಟಲೇ ರಜೆ ಇವೆ. ಆದ್ದರಿಂದ ಬಹುತೇಕರು ಈಗಾಗಲೇ ಕಾಫಿನಾಡಿನಲ್ಲಿ ಠಿಕಾಣಿ ಹೂಡಿದ್ದಾರೆ. ಅವರೆಲ್ಲಾ ಇನ್ನೊಂದು ವಾರಗಳ ಕಾಲ ಇಲ್ಲಿನ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಹೊಸವರ್ಷವನ್ನು ಆಚರಿಸಿಯೇ ಹಿಂತಿರುಗುತ್ತಾರೆ ಎಂದು ತಿಳಿದುಬಂದಿದೆ. ಇನ್ನು ಕೆಲವರು ಮಹಾಮಾರಿ ಕೊರೊನಾ 4ನೇ ಅಲೆ ಬಂದರೆ ಕಷ್ಟ ಆಗುತ್ತದೆ. ಅದಕ್ಕಾಗಿಯೇ ಈಗಲೇ ಪ್ರವಾಸಕ್ಕೆ ಬಂದಿದ್ದೇವೆ ಅಂತಿದ್ದಾರೆ.
ವೀಕೆಂಡ್ ಪ್ರವಾಸ: ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ರೆಸಾರ್ಟ್ಗಳು
ಜಿಲ್ಲೆಗೆ ಕಿಕ್ಕಿರಿದು ಬರುತ್ತಿರುವ ಪ್ರವಾಸಿಗರು
ಹೀಗೆ ಕಾಫಿನಾಡಿಗೆ ಸಾಗರೋಪಾದಿಯಲ್ಲಿ ಪ್ರವಾಸಿಗರು ಬರುತ್ತಿದ್ದು, ಮುಳ್ಳಯ್ಯನಗಿರಿಯಲ್ಲಿ ಪ್ರತಿನಿತ್ಯವೂ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಕೆಲ ಪ್ರವಾಸಿಗರು ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ. ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಆಗುತ್ತಿದ್ದು, ಪ್ರವಾಸಿಗರು ಸುಡು ಬಿಸಿಲಿನಲ್ಲಿ ಗಂಟೆಗಟ್ಟಲೇ ನಿಲ್ಲಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಇನ್ನು ಗಿರಿಭಾಗದಲ್ಲಿ ಪ್ರವಾಸಿಗರಿಗೆ ಹೇಳುವವರಿಲ್ಲ, ಕೇಳುವವರಿಲ್ಲ ಎಂಬಂತಾಗಿದೆ.
ನಿಯಮಗಳಿಗೆ ಕ್ಯಾರೆ ಅನ್ನದ ಪ್ರವಾಸಿಗರು
ಈಗಾಗಲೇ ಸರ್ಕಾರ ಕೂಡ ಕೊರೊನಾ 4ನೇ ಅಲೆ ಎದುರಿಸುವುದಕ್ಕೆ ಸಜ್ಜಾಗುತ್ತಿದೆ. ಮೇಲಿಂದ ಮೇಲೆ ಸಭೆ ಮಾಡಿ ನಿಯಾಮವಳಿಗಳ ಬಗ್ಗೆ ಸೂಚನೆ ನೀಡುತ್ತಲೇ ಇದೆ. ಆದರೆ, ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರು ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ತಾವು ನಡೆದದ್ದೆ ಹಾದಿ ಎಂಬಂತೆ ವರ್ತಿಸುತ್ತಿದ್ದಾರೆ.
ಕಾಫಿನಾಡಿನ ಸ್ಥಳೀರಲ್ಯಲಿ ಆತಂಕ
ಮುಳ್ಳಯ್ಯನಗಿರಿಯಲ್ಲಿನ ಪ್ರವಾಸಿಗರ ಬೇಕಾಬಿಟ್ಟಿ ವರ್ತನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮಾಸ್ಕ್, ಸಾಮಾಜಿಕ ಅಂತರವಿಲ್ಲದೇ ತಮ್ಮಿಷ್ಟದಂತೆ ಸಾಗುತ್ತಿದ್ದಾರೆ. ಹೀಗೆ ಪ್ರವಾಸಿಗರು ಸರ್ಕಾರ ಹೊರಡಿಸಿರುವ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಓಡಾಡುತ್ತಿರುವುದು ಸ್ಥಳೀಯರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಹೋಟೆಲ್ ಮಾಲೀಕರಿಗೆ ಮತ್ತೆ ಆತಂಕ ಶುರು
ಒಟ್ಟಾರೆ, ಕಳೆದ ಮೂರು ವರ್ಷಗಳಿಂದ ಮಹಾಮಾರಿ ಕೊರೊನಾ, ಲಾಕ್ಡೌನ್ನಿಂದ ವ್ಯವಹಾರವಿಲ್ಲದೆ ಕಂಗೆಟ್ಟಿದ್ದ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಮಾಲೀಕರು ಇದೀಗ ಮತ್ತೆ ಕೊರೊನಾ ಹೆಸರು ಕೇಳಿ ಮತ್ತೆ ಕಂಗಾಲಾಗಿದ್ದಾರೆ. ಕೊರೊನಾ ಆತಂಕದ ನಡುವೆಯೂ ಪ್ರವಾಸಿಗರ ಹಾಟ್ಸ್ಪಾಟ್ ಅಂತಾನೇ ಕರೆಸಿಕೊಳ್ಳುವ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕೊರೊನಾವನ್ನೂ ನಿಯಂತ್ರಿಸಿ, ಪ್ರವಾಸೋದ್ಯಮವನ್ನೂ ಉತ್ತೇಜಿಸುವಂತೆ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ. ಜನರು ನಿಯಮಗಳನ್ನು ಪಾಲಿಸುವ ಮೂಲಕ ಸರ್ಕಾರದ ಜೊತೆ ಕೈಜೋಡಿಸಬೇಕಿದೆ ಅನ್ನುವುದು ಇಲ್ಲಿನ ಸ್ಥಳೀಯರ ಆಶಯವಾಗಿದೆ.