Hill Station in Karnataka: ವಾರಾಂತ್ಯದಲ್ಲಿ ಭೇಟಿ ನೀಡಬಹುದಾದ ಕರ್ನಾಟದ ಸುಂದರ ಗಿರಿಧಾಮಗಳಿವು, ಮಾಹಿತಿ
ಕರ್ನಾಟಕ: ವಾರಾಂತ್ಯದಲ್ಲಿ ಹತ್ತಿರದ ತಾಣಗಳಿಗೆ ಪ್ರವಾಸ ತೆರಳುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇರುತ್ತದೆ. ಅದರಲ್ಲೂ ಈ ಬಾರಿ ಲಾಂಗ್ ವೀಕೆಂಡ್ ಇದ್ದು, ಈ ಸಮಯದಲ್ಲಿ ಹೆಚ್ಚಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ಲಾನ್ ಮಾಡಿಕೊಂಡಿದ್ದೀರಾ. ಹಾಗಾದರೆ ಮತ್ತೇಕೆ ತಡ ನಿಮ್ಮ ಮನಸ್ಸಿಗೆ ಆಹ್ಲಾದಕರ ಅನುಭವವನ್ನು ನೀಡುವ ಗಿರಿಧಾಮಗಳು ರಾಜ್ಯ ರಾಜಧಾನಿಯ ಸಮೀಪದಲ್ಲೇ ಇವೆ. ಈ ಗಿರಿಧಾಮಗಳು ಯಾವುವು, ಇಲ್ಲಿನ ವಿಶೇಷತೆ ಸಹಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕೂರ್ಗ್ ಗಿರಿಧಾಮ
ಕೊಡಗು ಜಿಲ್ಲೆಯಲ್ಲಿರುವ ಕೂರ್ಗ್ ಕರ್ನಾಟಕದ ಅತ್ಯಂತ ಶ್ರೀಮಂತ ಗಿರಿಧಾಮವಾಗಿದೆ. ಇಲ್ಲಿನ ಉಸಿರುಕಟ್ಟುವಂತಹ ಅಚ್ಚಹಸಿರಿನ ವಾತಾವರಣ ಎಂಥವರನ್ನೂ ತನ್ನ ಸೆಳೆದೆಬಿರುತ್ತದೆ. ಅಲ್ಲದೆ ಅರಣ್ಯದಿಂದ ಆವೃತವಾದ ಬೆಟ್ಟಗಳು, ಮಸಾಲೆ ಮತ್ತು ಕಾಫಿ ತೋಟಗಳಂತೂ ಪ್ರವಾಸಿಗರನ್ನು ಮೋಡಿ ಮಾಡಿಬಿಡುತ್ತವೆ.

ಸದಾ ಮಂಜಿನ ಭೂದೃಶ್ಯವನ್ನು ಹೊಂದಿರುವ ಕೂರ್ಗ್ ಜನಪ್ರಿಯ ಕಾಫಿ ಉತ್ಪಾದಿಸುವ ಗಿರಿಧಾಮವಾಗಿದೆ. ಇಲ್ಲಿ ಸುಂದರವಾದ ಹಸಿರು ಬೆಟ್ಟಗಳು ಮತ್ತು ಅವುಗಳ ನಡುವೆ ಹರಿಯುವ ತೊರೆಗಳನ್ನು ಕಾಣಬಹುದಾಗಿದೆ. ನೀವು ಕೂರ್ಗ್ಗೆ ಭೇಟಿ ನೀಡಿದಾಗ, ವಿರಾಜಪೇಟೆ, ಕುಶಾಲನಗರ, ಗೋಣಿಕೊಪ್ಪಲು, ಪೊಲ್ಲಿಬೆಟ್ಟ ಮತ್ತು ಸೋಮವಾರಪೇಟೆಯಂತಹ ಸುಂದರ ಪಟ್ಟಣಗಳಿಗೆ ಭೇಟಿ ನೀಡುವುದನ್ನು ಮಿಸ್ ಮಾಡಿಕೊಳ್ಳಬೇಡಿ.
ನಂದಿ ಬೆಟ್ಟ
ನಂದಿ ದುರ್ಗ ಎಂದು ಕರೆಯಲ್ಪಡುವ ನಂದಿ ಬೆಟ್ಟ ಬೆಂಗಳೂರು ನಗರದ ಜನರಿಗೆ ವಾರಾಂತ್ಯದ ಅತ್ಯಂತ ಜನಪ್ರಿಯ ತಾಣವಾಗಿದೆ. ಅದ್ಭುತ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯಗಳನ್ನು ಸವಿಯಬೇಕೆಂದರೆ ನಂದಿ ಬೆಟ್ಟಕ್ಕೆ ಭೇಟಿ ನೀಡಿ. ಅಲ್ಲದೆ ಇಲ್ಲಿ ಸುಂದರವಾದ ದೇವಾಲಯಗಳು, ಐತಿಹಾಸಿಕ ಕೋಟೆಗಳು ಮತ್ತು ಮೋಡಿಮಾಡುವ ಭೂದೃಶ್ಯಗಳನ್ನು ಸಹ ನೋಡಬಹುದಾಗಿದೆ.
ಸಮುದ್ರ ಮಟ್ಟದಿಂದ 4850 ಅಡಿಗಳಷ್ಟು ಎತ್ತರದಲ್ಲಿರುವ ನಂದಿ ಬೆಟ್ಟವು ಬ್ರಿಟೀಷ್ ಮತ್ತು ಟಿಪ್ಪು ಸುಲ್ತಾನರಿಗೆ ಬೇಸಿಗೆಯ ತಾಣವಾಗಿತ್ತು. ನಂದಿ ಬೆಟ್ಟದಲ್ಲಿನ ಹವಾಮಾನವು ವರ್ಷದುದ್ದಕ್ಕೂ ಆಹ್ಲಾದಕರವಾಗಿರುತ್ತದೆ. ಮತ್ತು ಅಲ್ಲಿ ನೀವು ಆರಾಮವಾಗಿ ಸುತ್ತಾಡಬಹುದು. ಸಾಹಸ ಕ್ರೀಡಾ ಪ್ರಿಯರು ಪ್ಯಾರಾಸೈಲಿಂಗ್ ಸಾಹಸ ಕ್ರೀಡೆಯಲ್ಲಿ ಭಾಗವಹಿಸಬಹುದು.
ಮುಳ್ಳಯ್ಯನಗಿರಿ
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿರಿ ಶಿಖರ ಸಮುದ್ರ ಮಟ್ಟಕ್ಕಿಂತ 1930 ಮೀಟರ್ ಎತ್ತರವಿದ್ದು ಕರ್ನಾಟಕದ ಅತೀ ಎತ್ತರದ ಶಿಖರವಾಗಿದೆ. ಈ ತಾಣ ಬೆಂಗಳೂರಿನಿಂದ 265 ಕಿ.ಮೀ ದೂರದಲ್ಲಿದೆ. ಹಿಮಾಲಯ ಮತ್ತು ನೀಲಗಿರಿ ನಡುವಿನ ಅತ್ಯುನ್ನತ ಶಿಖರವೆಂದು ಪರಿಗಣಿಸಲ್ಪಟ್ಟ ಮುಳ್ಳಯ್ಯನಗಿರಿ ರಾಜ್ಯದ ಅತ್ಯುತ್ತಮ ಟ್ರೆಕ್ಕಿಂಗ್ ತಾಣಗಳಲ್ಲಿ ಒಂದಾಗಿದೆ. ಇದು ಮುಳ್ಳಪ್ಪ ಸ್ವಾಮಿ ಎಂಬ ಋಷಿಗೆ ಸಮರ್ಪಿತವಾಗಿದ್ದು, ಅವರು ಶಿಖರದ ಸಮೀಪವಿರುವ ಗುಹೆಯಲ್ಲಿ ಧ್ಯಾನ ಮಾಡಿದ್ದಾರೆ ಎಂದು ನಂಬಲಾಗಿದೆ.
ಬಿಆರ್ ಹಿಲ್ಸ್
ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ ಕರ್ನಾಟಕದ ಪ್ರಮುಖ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನ ಆಗ್ನೇಯಕ್ಕೆ ಸುಮಾರು 175 ಕಿ.ಮೀ.ದೂರದಲ್ಲಿ ಕರ್ನಾಟಕದ ತಮಿಳುನಾಡು ಗಡಿಯಲ್ಲಿದೆ. ಅಲ್ಲದೆ ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಣಾ ಮೀಸಲು ಪ್ರದೇಶ ಮತ್ತು ವನ್ಯಜೀವಿ ಅಭಯಾರಣ್ಯವಾಗಿದೆ. ಇಲ್ಲಿ ರಂಗನಾಥ ಸ್ವಾಮಿಯ ಮುಖ್ಯ ದೇವಾಲಯವವನ್ನು ನೋಡಬಹುದಾಗಿದೆ.
ಬಿಆರ್ಟಿ ವನ್ಯಜೀವಿ ಅಭಯಾರಣ್ಯದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ದಿನಕ್ಕೆ ಎರಡು ಬಾರಿ ಜೀಪ್ ಸಫಾರಿಗಳನ್ನು ಮಾಡಲಾಗುತ್ತದೆ. ಬೆಳಗ್ಗೆ 6 ರಿಂದ 8ರವರೆಗೆ ಮತ್ತು ಮಧ್ಯಾಹ್ನ 3ರಿಂದ ಸಂಜೆ 5 ರವರೆಗೆ ಸಫಾರಿ ಸಮಯ ಆಗಿದೆ. ಈ ಸಮಯದಲ್ಲಿ ನೀವು ಆನೆಗಳು, ಕರಡಿಗಳು, ಕಾಡೆಮ್ಮೆ, ಮಲಬಾರ್ ದೈತ್ಯ ಅಳಿಲುಗಳು, ಕಾಡು ನಾಯಿಗಳು ಮತ್ತು ಜಿಂಕೆಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಇದು ಬೆಂಗಳೂರಿನಿಂದ 175 ಕಿ.ಮೀ ಮತ್ತು ಮೈಸೂರಿನಿಂದ 90 ಕಿಲೋ ಮೀಟರ್ ದೂರದಲ್ಲಿದೆ.
ಕೆಮ್ಮಣ್ಣುಗುಂಡಿ
ಕೆಮ್ಮಣ್ಣು ಗುಂಡಿಯ ಸುಂದರವಾದ ಗಿರಿಧಾಮವು ಸಮುದ್ರ ಮಟ್ಟದಿಂದ 1434 ಮೀಟರ್ ಎತ್ತರದಲ್ಲಿದೆ. ಇದು ಕೃಷ್ಣರಾಜ ಒಡೆಯರ್ ಅವರ ಬೇಸಿಗೆಯ ತಾಣವಾಗಿದೆ. ಅಲ್ಲದೆ ಬಾಬಾ ಬುಡಾನ್ ಗಿರಿ ಶ್ರೇಣಿಯಿಂದ ಸುತ್ತುವರೆದಿದ್ದು, ಬೆಳ್ಳಿ ಕ್ಯಾಸ್ಕೇಡ್ಗಳು, ಪರ್ವತ ತೊರೆಗಳು ಮತ್ತು ಸೊಂಪಾದ ಸಸ್ಯವರ್ಗಗಳಿಂದ ಕೂಡಿದೆ. ಅಷ್ಟೇ ಅಲ್ಲದೆ ಸುಂದರವಾದ ಅಲಂಕಾರಿಕ ಉದ್ಯಾನವನಗಳು, ಮೋಡಿಮಾಡುವ ಪರ್ವತಗಳು ಮತ್ತು ಕಣಿವೆಗಳನ್ನು ಕಾಣಬಹುದಾಗಿದೆ.
ಆಗುಂಬೆ ಘಾಟ್
ಆಗುಂಬೆ ಪಶ್ಚಿಮ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಪ್ರದೇಶವನ್ನು ದಕ್ಷಿಣ ಚಿರಾಪುಂಜಿ ಎಂದು ಕೂಡ ಕರೆಯುತ್ತಾರೆ. ಅದ್ಭುತ ಸೂರ್ಯೋದಯ ಹಾಗೂ ಸೂರ್ಯಾಸ್ತ ಆಗುಂಬೆಯ ಪ್ರಮುಖ ಆಕರ್ಷಣೆಯಾಗಿದೆ.
ಆಗುಂಬೆಯಲ್ಲಿನ ಸೂರ್ಯಾಸ್ತಮಾನವನ್ನು ಸವಿಯಲು ಬೆಟ್ಟದ ತುದಿಗೆ ಪ್ರಯಾಣಿಕರು ತೆರಳುತ್ತಿರುತ್ತಾರೆ. ಇಲ್ಲಿನ ಸೌಂದರ್ಯವನ್ನು ಸವಿಯಲು ಬರೀ ದೇಶ ಅಲ್ಲದೇ ವಿದೇಶಗಳಿಂದಲೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಅಲ್ಲದೆ ಆಗುಂಬೆಯ ಎಲ್ಲಾ ಅದ್ಭುತವಾದ ಪ್ರದೇಶಗಳನ್ನು ಕಾಣಬೇಕು ಎಂದುಕೊಂಡರೆ ನೀವು 3 ರಿಂದ 4 ದಿನಗಳ ಕಾಲ ಇಲ್ಲಿಯೇ ಉಳಿಯಬೇಕಾಗುತ್ತದೆ.
ಆಗುಂಬೆಯು ಬೆಂಗಳೂರಿನಿಂದ 350 ಕಿ.ಮೀಟರ್ ಹಾಗೂ ಹತ್ತಿರದ ಶಿವಮೊಗ್ಗದಿಂದ 93 ಕಿಲೋ ಮೀಟರ್ ದೂರದಲ್ಲಿದೆ. ಆಗುಂಬೆಗೆ ಭೇಟಿ ನೀಡಿದರೆ ಹತ್ತಿರದ ಆಕರ್ಷಣೆಗಳಾದ ಕುಂದಾದ್ರಿ ಬೆಟ್ಟ (16 ಕಿ.ಮೀ), ಶೃಂಗೇರಿ (30 ಕಿ.ಮೀ) ಮತ್ತು ಕುಪ್ಪಳ್ಳಿ (45 ಕಿ.ಮೀ) ಯನ್ನು ಕೂಡ ನೋಡಬಹುದಾಗಿದೆ.
ಬೆಂಗಳೂರಿನಿಂದ ಆಗುಂಬೆವರೆಗೆ ನೇರ ಕೆಎಸ್ಆರ್ಟಿಸಿ ಬಸ್ಗಳಿವೆ. ಮಂಗಳೂರು ಮತ್ತು ಶಿವಮೊಗ್ಗ ಹತ್ತಿರದ ರೈಲ್ವೆ ನಿಲ್ದಾಣಗಳಾಗಿದ್ದು, ಆಗುಂಬೆ ತಲುಪಲು ಆಗಾಗ್ಗೆ ಖಾಸಗಿ ಬಸ್ಗಳ ಸೌಲಭ್ಯವೂ ಇದೆ.












Click it and Unblock the Notifications