ಸುಬ್ರಮಣ್ಯ ರೋಡ್-ಮಂಗಳೂರು ಸೆಂಟ್ರಲ್ ರೈಲು ವೇಳಾಪಟ್ಟಿ ಬದಲು
ಮಂಗಳೂರು, ಡಿಸೆಂಬರ್ 06; ದಕ್ಷಿಣ ಕನ್ನಡ ಜಿಲ್ಲೆಯ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಸಿಹಿಸುದ್ದಿ ನೀಡಿದೆ. ಪ್ರಯಾಣಿಕರ ಬೇಡಿಕೆಯಂತೆ ಮಂಗಳೂರು ಸೆಂಟ್ರಲ್-ಸುಬ್ರಮಣ್ಯ ರೋಡ್ ನಡುವಿನ ರೈಲಿನ ವೇಗವನ್ನು ಹೆಚ್ಚಿಸಿದೆ. ಇದಕ್ಕಾಗಿ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ.
ಡಿಸೆಂಬರ್ 6ರ ಬುಧವಾರದಿಂದಲೇ ಜಾರಿಗೆ ಬರುವಂತೆ ರೈಲು ಸಂಖ್ಯೆ 06488 ಸುಬ್ರಹ್ಮಣ್ಯ ರೋಡ್-ಮಂಗಳೂರು ಸೆಂಟ್ರಲ್ ಪ್ರತಿದಿನದ ಪ್ಯಾಸೆಂಜರ್ ವಿಶೇಷ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.

ಹೊಸ ವೇಳಾಪಟ್ಟಿ; ಪರಿಷ್ಕೃತ ವೇಳಾಪಟ್ಟಿಯ ಅನ್ವಯ ರೈಲು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಿಂದ ಮಧ್ಯಾಹ್ನ 1:30ರ ಬದಲು 1:45ಕ್ಕೆ ಹೊರಡಲಿದೆ. ಬಜಕೆರೆ ಹಾಲ್ಟ್ 1.53/ 1.54, ಕೋಡಿಂಬಾಳ ಹಾಲ್ಟ್ 2/2:01, ಎಡಮಂಗಲ 2:08/ 2:09, ಕಾಣಿಯೂರು 2:18/ 2:19, ನರಿಮೊಗರು 2:30/ 2:31, ಕಬಕ ಪುತ್ತೂರು 2:45/ 2:47, ನೇರಳಕಟ್ಟೆ ಹಾಲ್ಟ್ 3:01/ 3:02 ಮತ್ತು ಬಂಟ್ವಾಳ 3.18/ 3.22 ಆಗಮಿಸಿ ನಿರ್ಗಮಿಸಲಿದೆ.
ಆದರೆ ಮಂಗಳೂರು ಜಂಕ್ಷನ್ನಿಂದ ಮಂಗಳೂರು ಸೆಂಟ್ರಲ್ ತನಕ ರೈಲು ಸಾಗುವ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
Dakshina Kannada Railway Users ಪರಿಷ್ಕೃತ ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಿದ್ದು, ಈ ತನಕ ಸುಮಾರು 30 ನಿಮಿಷಗಳ ಕಾಲ ಬಂಟ್ವಾಳದಲ್ಲಿ ಈ ರೈಲು ನಿಲ್ಲುತ್ತಿತ್ತು, ಇದು ಇನ್ನು ತಪ್ಪಲಿದೆ. ನಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ನೈರುತ್ಯ ರೈಲ್ವೆ ಹಾಗು ದಕ್ಷಿಣ ರೈಲ್ವೆ ವಲಯದ ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದೆ.
ಮಂಗಳೂರಿಗೆ ಹೆಚ್ಚುವರಿ ರೈಲು ಬೇಕು; ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಅಧಿಕಾರಿಗಳ ಜೊತೆ ಕಳೆದ ವಾರ ರೈಲು ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯನ್ನುನಡೆಸಿದರು. ಈ ಸಂದರ್ಭದಲ್ಲಿ ಹಾಸನ-ಮಂಗಳೂರು ಮಾರ್ಗದ ವಿದ್ಯುದೀಕರಣದ ಬಗ್ಗೆಯೂ ಚರ್ಚೆಗಳು ನಡೆದವು. ಮಂಗಳೂರು ನಗರಕ್ಕೆ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸುವ ಕುರಿತು ಸಹ ಚರ್ಚೆ ಆಯಿತು.
ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ಸಕಲೇಶಪುರ-ಸುಬ್ರಮಣ್ಯ ಘಾಟ್ ನಡುವಿನ 55 ಕಿ. ಮೀ. ಘಾಟ್ ಮಾರ್ಗದ ರೈಲು ಮಾರ್ಗದ ವಿದ್ಯುದೀಕರಣ ಸಹ ಸೇರಿದೆ. ಈ ಕುರಿತು ಸಮೀಕ್ಷೆ ಪೂರ್ಣಗೊಂಡಿದ್ದು, 2024ರ ಜನವರಿಯಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.
ಬೆಂಗಳೂರು-ಮಂಗಳೂರು ನಡುವಿನ ರೈಲು ಮಾರ್ಗ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಓಡಿಸುವ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.
ಇದೇ ಸಭೆಯಲ್ಲಿ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಸಂಜೆ ರೈಲನ್ನು ಸುಬ್ರಮಣ್ಯ ರೋಡ್ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಕುರಿತು ಚರ್ಚೆಗಳು ನಡೆದಿವೆ. ರೈಲ್ವೆ ಇಲಾಖೆ ಅಧಿಕಾರಿಗಳು ಕಬಕ ಪುತ್ತೂರು ಮತ್ತು ಸುಬ್ರಮಣ್ಯ ರೋಡ್ ನಡುವಿನ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳ್ಳಲು ಸುಮಾರು ಒಂದು ತಿಂಗಳು ಬೇಕಾಗಿದೆ. ಬಳಿಕ ಮೆಮು ರೈಲು ಓಡಿಸುವ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications