Shanti Sagara : ಸೂಳೆಕೆರೆ ಸೌಂದರ್ಯ ಸವಿಯುವುದಕ್ಕೆ ಹೀಗಿದೆ 'ಮಾರ್ಗ'; ಇದು ಪ್ರವಾಸಿಗರ ಸ್ವರ್ಗ
ದಾವಣಗೆರೆ, ಸೆಪ್ಟೆಂಬರ್ 14: ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕ. ರಾಜ್ಯದ ಎಲ್ಲಾ ಕಡೆಗೆ ಸುರಿದ ಧಾರಾಕಾರ ಮಳೆಯಿಂದ ಕೆರೆಗಳು ಮೈದುಂಬಿಕೊಂಡಿವೆ. ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಕೆರೆ ಎನಿಸಿರುವ ಮಧ್ಯ ಕರ್ನಾಟಕದ ಸೂಳೆ ಕೆರೆಯು ಪ್ರವಾಸಿಗರ ಪಾಲಿನ ಹಾಟ್ ಸ್ಪಾಟ್ ಆಗಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೂಳೆಕೆರೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಹಲವು ವರ್ಷಗಳ ನಂತರದಲ್ಲಿ ಮೊದಲ ಬಾರಿಗೆ ಈ ಕೆರೆ ತುಂಬಿಕೊಂಡು ಕಂಗೊಳಿಸುತ್ತಿದೆ. ಸುತ್ತಲೂ ಹಸಿರಿನ ವಾತಾವರಣ, ಮಧ್ಯೆದಲ್ಲಿ ಕಣ್ಮನ ಸೆಳೆಯುವುದೇ ಈ ಸೂಳೆಕೆರೆ. ಇದೇ ಸೂಳೆ ಕೆರೆ ಸೊಬಗು ಸವಿಯುವುದಕ್ಕೆ ಪ್ರವಾಸಿಗರು ತಂಡೋಪತಂಡವಾಗಿ ಹರಿದು ಬರುತ್ತಿದ್ದಾರೆ.
ಸೂಳೆಕೆರೆ ನಿರ್ಮಾಣಕ್ಕೆ ವೇಶ್ಯೆಯರು ಇಟ್ಟಿದ್ದ ಬೇಡಿಕೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಇತಿಹಾಸದಲ್ಲಿ ತನ್ನದೇ ಆಗಿರುವ ಮಹತ್ವವನ್ನು ಹೊಂದಿರುವ ಈ ಕೆರೆಗೆ ಆ ಹೆಸರು ಬಂದಿರುವುದರ ಹಿಂದೆ ಒಂದು ರೋಚಕ ಕಥೆಯಿದೆ. ಶಾಂತಿ ಸಾಗರ ಎಂತಲೂ ಕರೆಯಲ್ಪಡುವ ಈ ಸೂಳೆ ಕೆರೆಯು ಏಕೆ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದೆ?, ದಾವಣಗೆರೆ ಜಿಲ್ಲೆಯ ಈ ಪ್ರವಾಸಿ ತಾಣಕ್ಕೆ ಜನರು ಹೋಗುವುದು ಹೇಗೆ?, ಸೂಳೆಕೆರೆ ಹಿಂದಿನ ಇತಿಹಾಸವು ಏನು ಹೇಳುತ್ತದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಸೂಳೆ ಕೆರೆ ಎಂಬ ಹೆಸರು ಬರುವುದರ ಹಿಂದಿನ ಇತಿಹಾಸವೇನು?
ಸರ್ಕಾರಿ ದಾಖಲೆಗಳ ಪ್ರಕಾರ ಶಾಂತಿಸಾಗರ ಎಂದು ಕರೆಸಿಕೊಳ್ಳುವ ಸೂಳೆ ಕೆರೆಗೆ ಆ ಹೆಸರು ಬಂದಿದ್ದು ಹೇಗೆ ಎಂಬುದರ ಹಿಂದೆ ಒಂದು ಇತಿಹಾಸವೇ ಅಡಗಿದೆ. ವಿಕ್ರಮರಾಯ ಮತ್ತು ಆತನ ಪತ್ನಿ ನೂತನಾ ದೇವಿಗೆ ಶಾಂತಲಾದೇವಿ ಎಂಬ ಮಗಳಿದ್ದಳು. ಶಾಂತಮ್ಮ ಎಂದು ಕರೆಸಿಕೊಳ್ಳುತ್ತಿದ್ದ ಆಕೆಯು ಪಕ್ಕದ ಊರಿಗೆ ಹೋಗಿ ವಾಪಸ್ಸಾಗಿದ್ದಳು. ಅರಮನೆಗೆ ಬರುವಾಗ ಆಕೆ ನಡವಳಿಕೆಯಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸಿದ ತಂದೆಯು ತನ್ನ ಮಗಳನ್ನೇ ಸೂಳೆ ಎಂದು ನಿಂದಿಸಿದರು. ಅಂದು ತಂದೆ ಮಾತಿನಿಂದ ನೊಂದ ಮಗಳು ಆರೋಪದಿಂದ ಮುಕ್ತಳಾಗಲು ಕೆರೆಯೊಂದನ್ನು ನಿರ್ಮಿಸುವುದಾಗಿ ಶಪಥ ಮಾಡಿದ್ದರು.
ಸ್ವರ್ಗವತಿ ಪಟ್ಟಣದಲ್ಲಿ ವೇಶ್ಯೆಯರು ವಾಸಿಸುತ್ತಿದ್ದ ಪ್ರದೇಶವೇ ಕೆರೆ ನಿರ್ಮಾಣಕ್ಕೆ ಸೂಕ್ತ ಎಂದು ಶಾಂತಮ್ಮ ನಿರ್ಧರಿಸಿದರು. ಅಲ್ಲಿನ ಜಾಗ ಬಿಟ್ಟುಕೊಡುವಂತೆ ವೇಶ್ಯೆಯರಲ್ಲಿ ಮನವಿ ಮಾಡಿದರು. ಆಗ ವೇಶ್ಯೆಯರು ಹಾಕಿದ ಅದೊಂದು ಷರತ್ತಿನಿಂದ ಇಂದಿಗೂ ಈ ಕೆರೆಯನ್ನು ಸೂಳೆ ಕೆರೆ ಎಂತಲೇ ಕರೆಯಲಾಗುತ್ತಿದೆ. ಏಕೆಂದರೆ ಅಂದು ಜಾಗವನ್ನು ಬಿಟ್ಟುಕೊಡಲು ಒಪ್ಪಿದ್ದ ಆ ವೇಶ್ಯೆಯರು ಕೆರೆಗೆ ಸೂಳೆ ಕೆರೆ ಎಂದು ಹೆಸರಿಡುವಂತೆ ಷರತ್ತು ಹಾಕಿದ್ದರು. ಇದನ್ನು ಒಪ್ಪಿಕೊಂಡ ರಾಜಪುತ್ರಿ ಇಲ್ಲಿಯೇ ಕೆರೆ ನಿರ್ಮಾಣ ಮಾಡಿ, ಅದಕ್ಕೆ ಸೂಳೆ ಕೆರೆ ಎಂಬ ಹೆಸರಿಟ್ಟರು. ಅಂದಿನಿಂದ ಇಂದಿನವರೆಗೂ ಇದಕ್ಕೆ ಸೂಳೆಕೆರೆ ಎಂಬ ಹೆಸರು ಬಂದಿದೆ ಎಂದು ಪೂರ್ವಜರು ಹೇಳುತ್ತಾರೆ.ದಾವಣಗೆರೆ; ತುಂಬಿದ ಶಾಂತಿ ಸಾಗರ ಕೆರೆ, ರೈತರಿಗೆ ಹರ್ಷ ಮತ್ತು ಸಂಕಟ!
ಸೂಳೆಕೆರೆ ಎನ್ನುವುದೇ ಪ್ರವಾಸಿಗರ ಪಾಲಿನ ಸ್ವರ್ಗ
ಅಕ್ಕಪಕ್ಕದಲ್ಲಿ ಹಚ್ಚಹಸಿರಿನಿಂದ ಕಂಗೊಳಿಸುವ ಬೆಟ್ಟ-ಗುಡ್ಡ ನಡುವೆ ಅದೊಂದು ಹೊಸ ಲೋಕ. ಪರಿಸರ ಪ್ರೇಮಿಗಳ ಪಾಲಿನ ಸ್ವರ್ಗದಂತೆ ಕಾಣಿಸಿಕೊಳ್ಳುತ್ತಿರುವ ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ವೀಕೆಂಡ್ನಲ್ಲಿ ಜನಸಾಗರವೇ ಹರಿದುಬರುತ್ತದೆ. ಈ ಮಾರ್ಗದಲ್ಲಿ ಯಾರೇ ಬಂದರೂ ಕೂಡ ಇಲ್ಲಿಗೆ ಭೇಟಿ ನೀಡಿಯೇ ಹೋಗುತ್ತಾರೆ. ಹಚ್ಚಹಸಿರಿನ ಈ ಪ್ರಪಂಚದಲ್ಲಿ ಬೆಟ್ಟ-ಗುಡ್ಡಗಳು ಸೂಳೆಕೆರೆ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಸೂಳೆಕೆರೆಯ ಎದುರು ನಿಂತು ನೋಡಿದರೆ ಕಾಣುವ ಬ್ರಿಡ್ಜ್ ಪ್ರವಾಸಿಗರನ್ನು ತನ್ನತ್ತ ಸೆಳೆದು ಬಿಡುತ್ತದೆ. ರೈತರ ಜೀವನಾಡಿ ಆಗಿರುವ ಸೂಳೆಕೆರೆ ಇದೀಗ ಪ್ರವಾಸಿಗರಿಗೆ ಪ್ರಮುಖ ಪ್ರೇಕ್ಷಣಿಕ ತಾಣವೂ ಆಗಿದೆ.
ಸೂಳೆ ಕೆರೆ ಎನ್ನುವುದು ಪ್ರವಾಸಿ ತಾಣವಷ್ಟೇ ಅಲ್ಲ!
ಆಂಧ್ರ ಪ್ರದೇಶದ ಕಂಭಕೆರೆ ಹೊರತುಪಡಿಸಿದರೆ, ದಕ್ಷಿಣ ಭಾರತದಲ್ಲೇ ಎರಡನೆಯ ಅತಿದೊಡ್ಡ ಕೆರೆ ಎಂಬ ಪ್ರಖ್ಯಾತಿಯನ್ನು ಸೂಳೆಕೆರೆ ಹೊಂದಿದೆ. ಕರ್ನಾಟಕದ ಪ್ರಾಚೀನ ತಂತ್ರಜ್ಞಾನ ಬಳಸಿ ಈ ಕೆರೆಯನ್ನು ರೂಪಿಸಿರುವುದು ಮತ್ತೊಂದು ವಿಶೇಷವಾಗಿದೆ. ಈ ಸೂಳೆ ಕೆರೆಯು ಸುಮಾರು15 ರಿಂದ 20 ಹಳ್ಳಿಗಳ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಈ ಕೆರೆಯಿಂದಲೇ ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಲಕ್ಷಾಂತರ ಜನರು ಸೂಳೆ ಕೆರೆಯನ್ನು ನಂಬಿಕೊಂಡು ಇಂದಿಗೂ ಜೀವನ ಸಾಗಿಸುತ್ತಿದ್ದಾರೆ. ಚನ್ನಗಿರಿ ತಾಲೂಕಿನ ರೈತರ ಪಾಲಿಗೂ ಇದೇ ಕೆರೆ ಆಧಾರವಾಗಿದೆ. ಅಲ್ಲದೇ ಪ್ರಮುಖ ಪ್ರವಾಸಿ ತಾಣ ಎಂಬ ಪ್ರಖ್ಯಾತಿಯನ್ನೂ ಹೊಂದಿದೆ.
ದಾವಣಗೆರೆ: ದೇವರಬೆಳಕೆರೆ ಡ್ಯಾಂನಿಂದ ಹೊರಬರುತ್ತಿರುವ ಜಲಸಿರಿ ವೈಭವ ನೋಡಬನ್ನಿರಿ
ಐತಿಹಾಸಿಕ ಸೂಳೆ ಕೆರೆಗೆ ಹೋಗುವ ಮಾರ್ಗ ಹೇಗೆ?
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೂಳೆಕೆರೆ ಇಂದು ಕೇವಲ ಒಂದು ಕೆರೆಯಾಗಿ ಉಳಿದಿಲ್ಲ. ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಮೈದುಂಬಿ ಕಂಗೊಳಿಸುತ್ತಿರುವ ಕೆರೆಯು ನೂರಾರು ಸಾವಿರಾರು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಬೆಂಗಳೂರಿನಿಂದ ಸೂಳೆಕೆರೆಗೆ ರಸ್ತೆ ಮಾರ್ಗವಾಗಿ ತೆರಳಿದರೆ, 281 ಕಿಲೋ ಮೀಟರ್ ಆಗುತ್ತದೆ. ರಾಜ್ಯದ ಮಧ್ಯೆ ಭಾಗದಲ್ಲಿರುವ ದಾವಣಗೆರೆಗೆ ತಲುಪುವುದಕ್ಕೆ ರಸ್ತೆ ಮಾರ್ಗ ಮತ್ತು ರೈಲು ಮಾರ್ಗಗಳೂ ಇವೆ. ಬೆಂಗಳೂರಿನಿಂದ ದಾವಣಗೆರೆಗೆ 270 ಕಿಲೋ ಮೀಟರ್ ಆಗುತ್ತದೆ. ಬೆಳಗ್ಗೆ 6 ಗಂಟೆಗೆ ಜನಶತಾಬ್ದಿ, 8.45ಕ್ಕೆ ವಿಶ್ವಮಾನವ, ಮಧ್ಯಾಹ್ನ 12.45ಕ್ಕೆ ಸಿದ್ದಗಂಗಾ, ಸಂಜೆ 6.55ಕ್ಕೆ ಗೋಲ್ ಗುಂಬಜ್ ಎಕ್ಸ್ ಪ್ರೆಸ್, ರಾತ್ರಿ 9 ಗಂಟೆಗೆ ಬೆಳಗಾವಿ ಎಕ್ಸ್ ಪ್ರೆಸ್ ಹಾಗೂ ರಾತ್ರಿ 11 ಗಂಟೆಗೆ ರಾಣಿ ಚನ್ನಮ್ಮ ಎಕ್ಸ್ ಪ್ರೆಸ್ ರೈಲುಗಳಿವೆ. ಅದೇ ರೀತಿ ಹುಬ್ಬಳ್ಳಿಯಿಂದಲೂ ದಾವಣಗೆರೆ ಸಾಕಷ್ಟು ರೈಲು ಮತ್ತು ಬಸ್ ವ್ಯವಸ್ಥೆಯಿದೆ. ದಾವಣಗೆರೆಯಿಂದ ರಸ್ತೆ ಮಾರ್ಗವಾಗಿ 39 ಕಿಲೋ ಮೀಟರ್ ದೂರದ ಈ ಸೂಳೆಕೆರೆಗೆ ಹೋಗಬಹುದಾಗಿದೆ.