ರಾಯಚೂರಿನಲ್ಲಿರುವ ಇತಿಹಾಸ ಪ್ರಸಿದ್ಧ "ತೀನ್ ಕಂದಿಲ್" ಬಗ್ಗೆ ನಿಮಗೆಷ್ಟು ಗೊತ್ತು?, ಏನಿದು?, ಇಲ್ಲಿದೆ ವಿವರ
ರಾಯಚೂರು, ಅಕ್ಟೋಬರ್, 13: ಪ್ರತಿ ಜಿಲ್ಲೆಗಳು ಕೂಡ ಒಂದೊಂದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುತ್ತವೆ. ಅದೇ ರೀತಿ ರಾಯಚೂರಿನಲ್ಲಿ ಇತಿಹಾಸ ಪ್ರಸಿದ್ಧ ತೀನ್ ಕಂದಿಲ್ ಎನ್ನುವ ವೃತ್ತ ಇದೆ. ಇದನ್ನು ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತದೆ. ಹಾಗಾದರೆ ಏನಿದರ ವಿಶೇಷತೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಯಚೂರು ಜಿಲ್ಲೆಯೂ ನೈಸರ್ಗಿಕವಾಗಿ ಸಂಪತ್ಭರಿತವಾಗಿದೆ. ಕಲೆ ಸಾಹಿತ್ಯ, ವಾಸ್ತುಶಿಲ್ಪ, ಇಲ್ಲಿನ ಕೋಟೆ ಕೊತ್ತಲಗಳೇ ಇದಕ್ಕೆ ಸಾಕ್ಷಿ. ಆದರೂ ಹಿಂದುಳಿದ ಜಿಲ್ಲೆ ಎಂದೇ ಸಂಬೋಧಿಸುವುದು ಕಡಿಮೆಯಾಗಿಲ್ಲ. ಹಾಗಾದರೆ ಜಿಲ್ಲೆಯಲ್ಲಿನ ಪ್ರಸಿದ್ಧ ಸ್ಥಳಗಳ ವಿವರನ್ನು ಇಲ್ಲಿ ತಿಳಿಯೋಣ ಬನ್ನಿ.

ಒಂದು ಜಿಲ್ಲೆಯ ಪ್ರಸಿದ್ದಿ ತಿಳಿಯಬೇಕಾದರೆ ಅಲ್ಲಿನ ಐತಿಹಾಸಿಕ ಸ್ಥಳ, ಕಟ್ಟಡಗಳು, ಕುರುಹುಗಳು ಸಾಕ್ಷಿಯಾಗುತ್ತದೆ ಎಂಬ ಮಾತಿದೆ. ಇದು ಐತಿಹಾಸಿಕ ಸ್ಥಳಗಳ ಮಹತ್ವ ಸಾರುತ್ತದೆ. ಹಾಗೆಯೇ ರಾಯಚೂರು ಜಿಲ್ಲಾ ಕೇಂದ್ರ ಸಾಕಷ್ಟು ಐತಿಹಾಸಿಕ ಕಟ್ಟಡಗಳು, ಶಾಸನಗಳು ತನ್ನ ಕಬಂದಬಾಹುವಿನಲ್ಲಿ ಇಟ್ಟುಕೊಂಡಿದ್ದು ವಿಶೇಷ.
ನಗರದ ತೀನ್ ಕಂದಿಲ್ ವೃತ್ತದಲ್ಲಿನ ಕಲ್ಲಾನೆ, ಕಾಟೆ ದರ್ವಾಜ, ನವರಂಗ್ ದರ್ವಾಜ, ಸಿಂಕದರ್ ದರ್ವಾಜ, ಪಂಚ್ ಬೀಬಿ ಪಹಾಡ್ ಸೇರಿದಂತೆ ಅನೇಕ ಐತಿಹಾಸಿ ಸ್ಥಳಗಳು ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ನಗರದ ಹೃದಯಭಾಗವಾದ ತೀನ್ ಕಂದಿಲ್ ವೃತ್ತವೂ ತನ್ನದೇ ಐತಿಹಾಸಿಕ ಹಿನ್ನೆಲೆ ಹೊಂದಿ ಪ್ರಾಮುಖ್ಯ ಪಡೆದಿದ್ದು, ರಾಯಚೂರಿಗೆ ಬರುವವರು ತೀನ್ ಕಂದಿಲ್ ವೃತ್ತಕ್ಕೆ ಬಾರದೇ ಹೋಗಿರಲಿಲ್ಲ ಎಂಬ ಮಟ್ಟಿಗೆ ಜನ ಮನ್ನಣೆ ಪಡೆದಿದೆ.
ಉಸ್ಮಾನಿಯಾ ಮಸೀದಿ ಬಳಿಯ ಈ ವೃತ್ತದಲ್ಲಿ ಅನೇಕ ವ್ಯಾಪಾರ ಮಳಿಗೆಗಳು, ಸುತ್ತಲೂ ಜನ ವಸತಿ ಪ್ರದೇಶದ ಮಧ್ಯೆ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಈ ವೃತ್ತಕ್ಕೆ ತೀನ್ ಕಂದಿಲ್ ಎಂಬ ಹೆಸರು ಹಾಗೂ ಅದರ ಹಿನ್ನೆಲೆಯೂ ರೋಚಕವಾಗಿದೆ.
ತೀನ್ ಕಂದಿಲ್ ಹಿನ್ನೆಲೆ
ರಾಯಚೂರು ಕೋಟೆಯೂ ಕಾಕತೀಯರ ಆಡಳಿತಾವಧಿಯಲ್ಲಿ 1297ರಲ್ಲಿ ಕಟ್ಟಿಸಲಾಗಿದೆ. ಒಳ ಕೋಟೆ (ಅಂದ್ರೂನ್ ಕಿಲ್ಲಾ) 1297ರಲ್ಲಿ ಕಟ್ಟಿಸಿದ್ದಾರೆ. ಆನಂತರ ಬಹಮನಿ ಹಾಗೂ ಆದಿಲ್ ಶಾಹಿಗಳು ಹೊರ ಕೋಟೆಗಳನ್ನು ಕಟ್ಟಿಸಿದ್ದಾರೆ. ಇದಕ್ಕೆ ಎರಡು ಮುಖ್ಯ ದ್ವಾರಗಳಾಗಿ ಮಾಡಿದರು. ಒಂದು ಪಶ್ಚಿಮಕ್ಕೆ ಮೆಕ್ಕಾ ದರ್ವಾಜಾ. ದಕ್ಷಿಣಕ್ಕೆ ಮುಖಮಾಡಿ ಕಾಟೆ ದರ್ವಜಾ( ಮುಳ್ಳಿನ ಅಗಸೆ) ಮಾಡಿದರು. ಇಲ್ಲಿಂದಲೇ ನಗರವಾಸಿಗಳು ತಿರುಗಾಡುತ್ತಿದ್ದರು.
16ನೇ ಶತಮಾನದಲ್ಲಿ ಕೃಷ್ಣ ದೇವರಾಯನ ಕಾಲದಲ್ಲಿ ರಾಯಭಾರಿಯಾಗಿ ಇರಬೇಕೆಂದು ಕೋಟೆಯ ಮುಂಭಾಗದಲ್ಲಿ ಕಲ್ಲಾನೆ ನಿರ್ಮಿಸಿದನು. ಇಲ್ಲಿಯೇ ಮೂರು ದಾರಿ (ಕೂಡಳ್ಳಿ) ಸೆಂಟರ್ ಪ್ಲೇಸ್ ಮಾಡಲಾಗಿದೆ.
ಮೂರು ದಾರಿಯಿಂದ ಹೋಗುವವರಿಗೆ ಅನುಕೂಲವಾಗಲಿ ಎಂದು ಬೃಹತ್ ಕಂಬ ನಿರ್ಮಿಸಿ ಅಲ್ಲಿ ಮೂರು ದಾರಿಗೆ ಬೆಳಕು ಕಾಣುವಂತೆ ತೀನ್ ಕಂದಿಲ್ (ಒಂದು ಬಗೆಯ ಎಣ್ಣೆಯ ದೀಪ) ಮಾಡಿ ಅಳವಡಿಸಲಾಗಿತ್ತು. ಇದನ್ನು ಈಗಿನ ನೇತಾಜಿ ರಸ್ತೆ, ಮಚ್ಚಿ ಬಜಾರ್ ಹಾಗೂ ಉಸ್ಮಾನಿಯಾ ಮಸೀದಿಯಿಂದ ತರಕಾರಿ ಮಾರುಕಟ್ಟೆಗೆ ಹೋಗುವ ದಾರಿ ಹೋಕರಿಗೆ ಬೆಳಕು ಕಾಣಲಿ ಎಂದು ಅಳವಡಿಸಲಾಗಿತ್ತು.
ಒಬ್ಬ ಜವಾನನ್ನು ನೇಮಿಸಿ ಪ್ರತಿ ನಿತ್ಯ ದೀಪ ಹಚ್ಚುವ ಕೆಲಸ ಮಾಡುತ್ತಿದ್ದರು. ಆನಂತರ ಹೈದ್ರಬಾದ್ ನವಾಬನೂ ಈ ಕಾರ್ಯ ಮುಂದುವರೆಸಿ ದೀಪ ಹಚ್ಚುವ ಕೆಲಸ ನಡೆಯುತ್ತಿತ್ತು. ನಂತರ ಬೆಳವಣಿಗೆಯಲ್ಲಿ ಸ್ವಾತಂತ್ರ್ಯದ ನಂತರ ವಿದ್ಯುತ್ ದೀಪ ಮಾಡಲಾಯಿತು. ಹೀಗೆ ಐತಿಹಾಸಿಕವಾಗಿ ಪ್ರಸಿದ್ದಿ ಪಡೆಯಿತು.
ಪ್ರವಾಸಿಗಳಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ರಾತ್ರಿ ವೇಳೆ ಓಡಾಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ತೀನ್ ಕಂದಿಲ್ ನಿರ್ಮಿಸಲಾಯಿತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. 1520ರಲ್ಲಿ ಕೃಷ್ಣ ದೇವರಾಯ ಹಂಪಿಯಿಂದ ರಾಯಚೂರಿನ ಕೋಟೆಗೆ ದಾಳಿ ಮಾಡಿದಾಗ 7ರಿಂದ 8 ಸಾವಿರ ಜನಸಂಖ್ಯೆ ಇತ್ತು. ಆನಂತರ ಜನಸಂಖ್ಯೆ ಬೆಳೆದಂತೆಲ್ಲ ನಗರ ಅಭಿವೃದ್ಧಿಯಾಯಿತು. ಆದರೆ ಪುರಾತನ ಕಟ್ಟಡಗಳು, ಐತಿಹಾಸಿಕ ಸ್ಥಳಗಳು ರಕ್ಷಣೆ ಇಲ್ಲದೇ ಮೂಲೆಗುಂಪಾಗಿವೆ.
ಐತಿಹಾಸಿಕ ಸ್ಮಾರಕ, ಕೋಟೆಗಳು, ಅವಶೇಷಗಳು ಸಂರಕ್ಷಿಸಬೇಕಿದೆ. ಇವು ನಾಶವಾದರೆ ಮುಂದಿನ ಪೀಳಿಗೆಗೆ ಚಿತ್ರ ಬಿಡಿಸಿ ತೋರಿಸಬೇಕಾಗುತ್ತದೆ. ಶಿಕ್ಷಣ, ಆರೋಗ್ಯ ಊಟ ಎಷ್ಟು ಮುಖ್ಯಯೋ ಇತಿಹಾಸವೂ ಅಷ್ಟೇ ಮುಖ್ಯ. ಐತಿಹಾಸಿಕ ಕಟ್ಟಡಗಳು, ಅವಶೇಷಗಳನ್ನು ನಾಗರಿಕರಿಗೆ ತಿಳಿಸುವ ಉದ್ದೇಶ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದೆ. ಆದರೆ ಈ ಕಾರ್ಯವನ್ನು ಮಾಡುವಲ್ಲಿ ವಿಫಲವಾಗಿವೆ. ಈಗಲಾದರೂ ಹೆಚ್ಚಿನ ಅನುದಾನ ನೀಡಿ ಐತಿಹಾಸಿಕ ಸ್ಥಳ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂಬುದು ಇಲ್ಲಿನ ಜನರ ಒತ್ತಾಯ ಆಗಿದೆ.
ಐತಿಹಾಸಿಕವಾಗಿ ರಾಯಚೂರು ಜಿಲ್ಲೆಯು ಹೆಸರುವಾಸಿಯಾಗಿದ್ದು, ವಿಶೇಷವಾಗಿ ತೀನ್ ಕಂದೀಲ್ ವೃತ್ತ ಇತಿಹಾಸದ ಕುರುಹು ಆಗಿ ಉಳಿದಿದೆ. ಈ ವೃತ್ತದಲ್ಲಿ ಇರುವ ಕಲ್ಲಾನೆಗಳು ಗತವೈಭವ ಸಾರುವ ಇತಿಹಾಸವನ್ನು ಸ್ಮರಿಸುವಂತೆ ಮಾಡುತ್ತವೆ. ನಗರಸಭೆಯ ಲಾಂಛನವಾಗಿರುವ ತೀನ್ ಖಂದಿಲ್ನ ಕಲ್ಲಾನೆಯನ್ನು ಬಳಸಿಕೊಳ್ಳಲಾಗಿದೆ. ರಾಜ, ಮಹಾರಾಜರ ಕಾಲದ ತೀನ್ ಕಂದೀಲ್ ಈ ಹೆಸರು ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ. ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಉಳಿಸಿಕೊಂಡು ಹೋಗುವುದು ಸ್ಥಳೀಯ ಆಡಳಿತ ಹಾಗೂ ನಾಗರಿಕರ ಜವಾಬ್ದಾರಿಯಾಗಿದೆ.












Click it and Unblock the Notifications