ತುಮಕೂರು; ಅಮಾನಿಕೆರೆಯಲ್ಲಿ ಈಗ ಬೋಟಿಂಗ್ ಮಾಡಿ
ತುಮಕೂರು, ಆಗಸ್ಟ್ 20: ತುಮಕೂರು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ನಗರದ ಅಮಾನಿಕೆರೆಯಲ್ಲಿ ಜನರು ಬೋಟ್ ರೈಡಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ತುಮಕೂರು ಪ್ರವಾಸ ಕೈಗೊಳ್ಳುವ ಜನರು ಕೆರೆಯಲ್ಲಿ ಬೋಟಿಂಗ್ ಮಾಡಿ, ಎಂಜಾಯ್ ಮಾಡಬಹುದಾಗಿದೆ.
ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಆಗಸ್ಟ್ 15ರಂದು ತುಮಕೂರು ನಗರದ ಅಮಾನಿಕೆರೆಯಲ್ಲಿನ ಬೋಟ್ ರೈಡಿಂಗ್ ವ್ಯವಸ್ಥೆಯನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಚಿವ ಡಾ. ಜಿ. ಪರಮೇಶ್ವರ, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಶಾಸಕರಾದ ಜಿ. ಬಿ. ಜ್ಯೋತಿ ಗಣೇಶ್ , ಬಿ. ಸುರೇಶ್ ಗೌಡ ಮುಂತಾವರೊಂದಿಗೆ ಭಾರತದ ಧ್ವಜವನ್ನು ಹಿಡಿದು ಕೆರೆಯಲ್ಲಿ ಬೋಟ್ ರೈಡ್ ಮಾಡಿದರು.
ತುಮಕೂರು ನಗರದಲ್ಲಿರುವ ಅಮಾನಿಕೆರೆಯನ್ನು ತುಮಕೂರು ಜಿಲ್ಲಾಡಳಿತ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಗೊಳಿಸಿದೆ. ಪ್ರವಾಸಿಗರನ್ನು ಸೆಳೆಯಲು ಹಲವು ವ್ಯವಸ್ಥೆಗಳನ್ನು ಮಾಡಲಾಗಿದ್ದು, ಕೆರೆ ಅಭಿವೃದ್ಧಿ ಯೋಜನೆ ಅನ್ವಯ ಬೋಟಿಂಗ್ ವ್ಯವಸ್ಥೆ ಸಹ ಮಾಡಲಾಗಿದೆ.
ಅಮಾನಿಕೆರೆಯ ಕುರಿತು; ಅಮಾನಿಕೆರೆಯು ತುಮಕೂರು ನಗರ ಹೆಮ್ಮೆ. ಈ ಕರೆಯನ್ನು ಉಳಿಸಿ ಅಭಿವೃದ್ಧಿಗೊಳಿಸುವಲ್ಲಿ ವಿದ್ಯಾರ್ಥಿಗಳ ಶ್ರಮವಿದೆ ಎಂದು ನಗರದ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ.
ಈಗ ಅಮಾನಿಕೆರೆಯಲ್ಲಿ ನೀರು ತುಂಬಿದೆ. ದೋಣಿ ವಿಹಾರವನ್ನು ಆರಂಭಿಸಲಾಗಿದೆ. ಹಿಂದೆ ಬರಗಾಲ ಬಂದಾಗ ಜನರು ಅಮಾನಿಕೆರೆಯ ನೀರನ್ನು ಹೇಗೆ ಹಂಚಿಕೊಳ್ಳುತ್ತಿದ್ದರು ಎಂಬು ಫ್ರಾನ್ಸ್ನ ಪ್ರವಾಸಿಗ ಬುಖಾನನ್ ಬರಹಗಳಲ್ಲಿ ಸಹ ಕಾಣಬಹುದಾಗಿದೆ.
1999ರಲ್ಲಿ ಅಮಾನಿಕೆರೆಯನ್ನು ಮುಚ್ಚಿ ಖಾಸಗಿ ಬಸ್ ನಿಲ್ದಾಣ, ತೋಟಗಾರಿಕಾ ಇಲಾಖಾ ಕಛೇರಿ ಸೇರಿದಂತೆ ವಿವಿಧ ಸರ್ಕಾರಿ ಕಛೇರಿಗಳಿಗಾಗಿ ಬಹುಮಹಡಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುವ ಪ್ರಸ್ತಾವನೆ ಸಿದ್ಧವಾಗಿತ್ತು. ಆಗ ಕೆರೆ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ವಿದ್ಯಾರ್ಥಿಗಳ ಹೋರಾಟ.
ಬಿ. ಇಡಿ ಕಾಲೇಜಿನ ವಿದ್ಯಾರ್ಥಿಗಳ ಹೋರಾಟ, ಬೀದಿ ನಾಟಕಗಳಿಗೆ ಪರಿಸರವಾದಿ ಹೋರಾಟಗಾರರು ಧ್ವನಿಗೂಡಿಸಿದರು. ಕರ್ನಾಟಕ ಹೈಕೋರ್ಟ್ನಲ್ಲಿ ಅಮಾನಿಕೆರೆಯನ್ನು ಉಳಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಹ ಸಲ್ಲಿಕೆಯಾಯಿತು. ಎಲ್ಲಾ ಹೋರಾಟಕ್ಕೆ ಮಣಿದು ಕೆರೆಯನ್ನು ಉಳಿಸಲಾಯಿತು.
ಚೋಳರ ರಾಜೇಂದ್ರ ಚೋಳ 948 ಎಕರೆ ಪ್ರದೇಶದಲ್ಲಿ ಅಮಾನಿಕೆರೆಯನ್ನು ಕಟ್ಟಿಸಿದ ಎನ್ನುತ್ತದೆ ಇತಿಹಾಸ. ಟಿ. ಬೇಗೂರಿನಲ್ಲಿರುವ ಚಂದ್ರ ಮೌಳೇಶ್ವರ ದೇವಾಲಯದಲ್ಲಿನ ಶಿಲಾ ಶಾಸನದಲ್ಲಿ ಈ ಕರೆಯ ಬಗ್ಗೆ ಉಲ್ಲೇಖವಿದೆ. ಗುಬ್ಬಿ ಹೊಸಹಳ್ಳಿ ಪಾಳೇಗಾರರು ಈ ಕೆರೆಯನ್ನು ಜೀರ್ಣೋದ್ಧಾರ ಮಾಡಿದರು. ದಾಖಲೆಗಳ ಪ್ರಕಾರ ಕೆರೆಯು 750 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡಿದೆ.
ಕರ್ನಾಟಕದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆಗೊಂಡು ಅದು ಕೆರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿತು. ಮೊದಲು ಪ್ರಾಧಿಕಾರ ಅಭಿವೃದ್ಧಿ ಮಾಡಿದ ಕೆರೆಗಳಲ್ಲಿ ಅಮಾನಿಕೆರೆ ಮತ್ತು ಹುಬ್ಬಳ್ಳಿಯ ಉಣಕಲ್ ಕೆರೆಗಳು ಪ್ರಮುಖವಾದವು. ಬಳಿಕ ಹಂತ ಹಂತವಾಗಿ ಅಮಾನಿಕೆರೆ ಅಭಿವೃದ್ಧಿಗೊಂಡಿತು.
ಸ್ಮಾರ್ಟ್ ಸಿಟಿ ಯೋಜನೆಯ 2ನೇ ಹಂತದಲ್ಲಿ 2016ರ ಅಕ್ಟೋಬರ್ನಲ್ಲಿ ತುಮಕೂರು ನಗರವನ್ನು ಗುರುತಿಸಲಾಯಿತು. ಈ ಯೋಜನೆಯಡಿ ಅಮಾನಿಕೆರೆಯನ್ನು 102 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಯಿತು. ಇದರಲ್ಲಿ 56 ಕೋಟಿ ರೂ. ವೆಚ್ಚದಲ್ಲಿ ಕೆರೆಗೆ ಹೇಮಾವತಿ ನೀರು ಹರಿಸುವುದು, ಶುದ್ಧೀಕರಣ ಘಟಕಕ್ಕೆ ಕೊಳವೆ ಮಾರ್ಗ ನಿರ್ಮಾಣವೂ ಸೇರಿದೆ.
ಅಮಾನಿಕೆರೆಗೆ ಹೇಮಾವತಿ ನದಿ ನೀರು ತುಂಬಿಸುವ ಯೋಜನೆ ಕೈ ಬಿಡಬೇಕು. ಕೃಷಿ, ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡದ ಕೆರೆಯನ್ನು ಹೇಮಾವತಿ ನದಿ ನೀರಿನಿಂದ ತುಂಬಿಸಿದರೆ ಆಗುವ ಉಪಯೋಗ ಏನು? ಎಂದು ಪ್ರಶ್ನಿಸಲಾಗಿತ್ತು. ಸಿದ್ಧಗಂಗಾ ಬೆಟ್ಟ, ದೇವರಾಯನದುರ್ಗದಿಂದ ಬರುವ ನೀರಿನ ಜಲಮೂಲ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಿ, ಮಳೆ ನೀರಿನಿಂದ ಕೆರೆ ತುಂಬುವಂತೆ ಮಾಡಿ ಎಂಬ ಒತ್ತಾಯವೂ ಕೇಳಿ ಬಂದಿತ್ತು.












Click it and Unblock the Notifications