New Year 2024: ಹೊಸ ವರ್ಷಾಚರಣೆಗೆ ಪ್ರವಾಸಿಗರು ಕೊಡಗಿತ್ತ ದೌಡಾಯಿಸುವುದೇಕೆ?
ಮಡಿಕೇರಿ, ಡಿಸೆಂಬರ್ 16: 2023ರ ವರ್ಷಾಂತ್ಯಕ್ಕೆ ಬಂದಿದ್ದೇವೆ ಮುಂದಿನ 2024ನ್ನು ಬರಮಾಡಿಕೊಳ್ಳುವ ತವಕದಲ್ಲಿದ್ದೇವೆ. ಒಬ್ಬೊಬ್ಬರದು ಒಂದೊಂದು ರೀತಿಯ ಪ್ಲಾನ್ ಗಳಿದ್ದು ವರ್ಷಾಚರಣೆಯನ್ನು ಎಲ್ಲೆಲ್ಲಿ ಮಾಡಬೇಕೆಂಬ ಚರ್ಚೆಗಳು ತಮ್ಮ ಆತ್ಮೀಯ ವಲಯಗಳಲ್ಲಿ, ಕುಟುಂಬಗಳಲ್ಲಿ ನಡೆಯುತ್ತಿದೆ. ಬಹುತೇಕರು ಪ್ರತಿವರ್ಷವೂ ಮನೆಯಿಂದ ಹೊರ ಹೋಗಿ ಸುಂದರ ತಾಣಗಳಲ್ಲಿ ಹೊಸವರ್ಷವನ್ನು ಆಚರಿಸುವುದು ಮಾಮೂಲಿಯಾಗಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಅದರಲ್ಲೂ ಸುನಾಮಿ ಬಂದ ಬಳಿಕ ಸಮುದ್ರ ತೀರದ ಕಡೆಗೆ ಹೋಗುವವರಿಗಿಂತ ಮಲೆನಾಡಿನ ಕಡೆಗೆ ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಈ ಬಾರಿ ಇತ್ತೀಚೆಗಿನವರೆಗೂ ಮೈಚಾಂಗ್ ಚಂಡಮಾರುತ ತಮಿಳುನಾಡು ಮತ್ತು ಆಂಧ್ರಪ್ರದೇಶವನ್ನು ತಲ್ಲಣಗೊಳಿಸಿತ್ತು. ಹೀಗಾಗಿ ಹೆಚ್ಚಿನವರು ಸಮುದ್ರತೀರದತ್ತ ಹೋಗಲು ಹಿಂದೇಟು ಹಾಕುತ್ತಿದ್ದು, ಎಲ್ಲರ ಕಣ್ಣು ದಕ್ಷಿಣದ ಕಾಶ್ಮೀರ ಕೊಡಗಿನತ್ತ ನೆಟ್ಟಿದೆ.

ತಣ್ಣಗಿನ ವಾತಾವರಣ, ಮಂಜಿನ ಮುಸುಕು, ಕಣ್ಣು ಹಾಯಿಸಿದೆಡೆ ಹಸಿರು ಹಚ್ಚಡದಿಂದ ಕಂಗೊಳಿಸುವ ನಿಸರ್ಗ ಒತ್ತಡದ ಬದುಕಿಗೆ ಮುದ ನೀಡುತ್ತದೆ. ಇಲ್ಲಿನ ತೋಟಗಳ ನಡುವೆ ಹೋಂಸ್ಟೇಗಳು ಮನೆಯಲ್ಲಿ ಕಾಲ ಕಳೆದ ಅನುಭವ ನೀಡುತ್ತವೆ. ಹೀಗಾಗಿಯೇ ಪ್ರವಾಸಿಗರು ವರ್ಷಪೂರ್ತಿ ಇತ್ತ ಬರುತ್ತಿರುತ್ತಾರೆ. ಅದರಲ್ಲೂ ಹೊಸವರ್ಷಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸುವುದರಿಂದ ಇಲ್ಲಿರುವ ಹೋಟೆಲ್, ರೆಸಾರ್ಟ್, ಹೋಂಸ್ಟೇಗಳು ಮೊದಲೇ ಬುಕಿಂಗ್ ಆಗಿ ಬಿಡುತ್ತವೆ. ಈ ಬಾರಿಯೂ ಅದೇ ಆಗಿದ್ದು, ಬಹುತೇಕ ಹೋಂಸ್ಟೇ ಗಳು ಈಗಾಗಲೇ ಭರ್ತಿಯಾಗಿವೆ.
ಹೋಂಸ್ಟೇಗಳಲ್ಲಿ ದಿನಕಳೆಯುವುದೇ ಮಜಾ
ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಹೋಂಸ್ಟೇ ದರಗಳು ಹೆಚ್ಚಾಗಿವೆ. ಇದು ಪ್ರತಿವರ್ಷವೂ ನಡೆಯುತ್ತದೆ. ದೂರದಿಂದ ಬರುವ ಪ್ರವಾಸಿಗರಿಗೆ ವಾಸ್ತವ್ಯ ಹೂಡಲು ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳು ದೊರೆಯದೆ ಪ್ರವಾಸಿತಾಣಗಳಲ್ಲಿ, ರಸ್ತೆಬದಿಯಲ್ಲಿ ವರ್ಷಾಚರಣೆ ಮಾಡಿ ಹಿಂತಿರುಗುವವರೂ ಇದ್ದಾರೆ. ಇನ್ನು ಕೊಡಗಿನಿಂದ ಹೊರಗೆ ಹೋಗಿ ಕೆಲಸ ಮಾಡುವವರು ವರ್ಷಾಚರಣೆ ಸ್ನೇಹಿತರೊಂದಿಗೆ ತಮ್ಮ ಊರಿಗೆ ಹಿಂತಿರುಗಿ ಪಾರ್ಟಿ ಮಾಡಿ ಖುಷಿ ಪಡುತ್ತಾರೆ. ಬಹುತೇಕರು ಜಿಲ್ಲೆಯ ಹೊರಗೆ ಕೆಲಸ ಮಾಡುತ್ತಿದ್ದರೂ ಇಲ್ಲಿ ತೋಟ ಮತ್ತು ಮನೆಗಳನ್ನು ಹೊಂದಿರುವುದರಿಂದ ತೋಟದ ನಡುವಿನ ಮನೆಗಳಲ್ಲಿ ರಾತ್ರಿಯೆಲ್ಲ ಕಳೆದು ಎಂಜಾಯ್ ಮಾಡುತ್ತಿದ್ದಾರೆ.
ಕಳೆದೊಂದು ದಶಕದಲ್ಲಿ ಎಲ್ಲೆಂದರಲ್ಲಿ ಪಟ್ಟಣಕ್ಕೆ ಹೊಂದಿಕೊಂಡಂತೆ ಮಾತ್ರವಲ್ಲದೆ, ಜಿಲ್ಲೆಯಾದ್ಯಂತ ಬೆಟ್ಟಗುಡ್ಡ ಕಾಡು ಮೇಡುಗಳ ಮಧ್ಯೆಯೂ ಹೋಂಸ್ಟೇಗಳಿವೆ. ಹೊರಗಿನಿಂದ ಅದರಲ್ಲೂ ಸದಾ ನಗರದ ಗೌಜುಗದ್ದಲದಲ್ಲಿದ್ದವರು ಜನ ಸಂಪರ್ಕವಿಲ್ಲದ ಬೆಟ್ಟಗುಡ್ಡ ಸುಂದರ ಪರಿಸರ ಹೊಂದಿದ ಪ್ರಶಾಂತ ತಾಣವನ್ನು ಬಯಸುವುದರಿಂದ ಅಂತಹ ಸ್ಥಳಗಳಲ್ಲಿರುವ ಹೋಂಸ್ಟೇಗಳು ಕೂಡ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತವೆ. ಈ ಬಾರಿ ನಿರೀಕ್ಷೆಗೂ ಮೀರಿ ಪ್ರವಾಸಿಗರು ಬರುವ ಸಾಧ್ಯತೆಯಿದೆ.

ಕೊಡಗಿಗೆ ಪ್ರವಾಸಿಗರು ದೌಡಾಯಿಸುವುದೇಕೆ.?
ಕೊಡಗಿಗೆ ಪ್ರವಾಸಿಗರಲ್ಲಿ ವಿವಿಧ ಅಭಿರುಚಿಯವರಿದ್ದು ಪ್ರವಾಸಿ ತಾಣಗಳನ್ನು ನೋಡಲೆಂದು ಬರುವವರಿಗಿಂತಲೂ ಹೆಚ್ಚಾಗಿ ತಮ್ಮ ನಿತ್ಯದ ಜಂಜಾಟವನ್ನು ದೂರ ಮಾಡಿ ಎಲ್ಲರಿಂದ ದೂರವಾಗಿ ಪ್ರಕೃತಿ ನಡುವೆಯಿದ್ದು ಮೈಮನವನ್ನು ಉಲ್ಲಾಸ ಮಾಡಿಕೊಂಡು ಹೋಗಬೇಕೆಂದು ಬಯಸುತ್ತಾರೆ. ಇನ್ನು ಕೆಲವರು ಕುಟುಂಬದವರೊಂದಿಗೆ ಬಂದು ಕೊಡಗಿನ ಪ್ರಕೃತಿ ಸೌಂದರ್ಯ ಮತ್ತು ಅಡುಗೆ ತಿಂಡಿ ತಿನಿಸುಗಳನ್ನು ಸವಿದು ಖುಷಿಪಡುತ್ತಾರೆ. ಮತ್ತೆ ಕೆಲವರು ಹೋಂಸ್ಟೇ ಗಳಲ್ಲಿ ವಾಸ್ತವ್ಯ ಹೂಡಿ ಅಲ್ಲಿಂದ ಸುತ್ತಮುತ್ತ ಇರುವ ಬೆಟ್ಟಗುಡ್ಡ, ಜಲಪಾತ, ಇನ್ನಿತರ ತಾಣಗಳನ್ನು ನೋಡಲು ಬಯಸುತ್ತಾರೆ. ಅಂತಹವರು ಕೆಲವು ದಿನಗಳ ಕಾಲ ಇಲ್ಲಿ ಉಳಿಯುತ್ತಾರೆ.
ವರ್ಷದ ಇತರೆ ದಿನಗಳಲ್ಲಿ ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳನ್ನು ನೋಡಲು ಬಂದರೂ ಡಿಸೆಂಬರ್ ತಿಂಗಳಾಂತ್ಯದಲ್ಲಿ ಬರುವವರು ವರ್ಷಾಚರಣೆ ಮಾಡುವ ಸಲುವಾಗಿಯೇ ಬರುವುದು ವಿಶೇಷವಾಗಿದೆ. ಮಡಿಕೇರಿ ನಗರ ಈ ದಿನಗಳಲ್ಲಿ ತಣ್ಣಗೆ ಇರುತ್ತದೆ. ಅದರಲ್ಲೂ ಸಂಜೆಯಾಗುತ್ತಿದ್ದಂತೆಯೇ ಮೈಕೊರೆಯುವ ಚಳಿ ಮುದ ನೀಡುತ್ತದೆ. ಇನ್ನು ನಗರದ ಹೃದಯಭಾಗದಲ್ಲಿರುವ ರಾಜಾಸೀಟ್ ಗೆ ತೆರಳಿದರೆ ಇಲ್ಲಿಂದ ಕಂಡು ಬರುವ ದೃಶ್ಯ ಮನಮೋಹಕವಾಗಿರುತ್ತದೆ.
ರಾಜಾಸೀಟಿನಲ್ಲಿ ಹಳೆಯ ವರ್ಷಕ್ಕೆ ವಿದಾಯ
ಮಡಿಕೇರಿಯ ರಾಜಾಸೀಟ್ನಲ್ಲಿ ಡಿಸೆಂಬರ್ 31ರ ಸಂಜೆ ಜನರೆಲ್ಲ ಜಮಾವಣೆಗೊಂಡು ದೂರದ ಬೆಟ್ಟಗುಡ್ಡಗಳಾಚೆಗೆ ಸೂರ್ಯ ಲೀನವಾಗುವುದರ ಮೂಲಕ ಹಳೆಯ ವರ್ಷಕ್ಕೆ ಅಂತಿಮ ವಿದಾಯ ಹೇಳುವುದು ಪ್ರತಿವರ್ಷವೂ ನಡೆಯುತ್ತದೆ. ಇದು ವರ್ಷಾಚರಣೆಗೆ ಮುನ್ನ ನಡೆಯುವ ವಿದಾಯದ ಕಾಯರ್ಕ್ರಮವಾಗಿ ಜನಪ್ರಿಯವಾಗುತ್ತಿದ್ದು, ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ನೆರೆಯುವುದು ವಿಶೇಷವಾಗಿದೆ.

ಒಟ್ಟಾರೆಯಾಗಿ ಕೊಡಗು ಹೊಸ ವರ್ಷಾಚರಣೆ ಪ್ರಸಕ್ತ ತಾಣವಾಗಿ ಪ್ರವಾಸಿಗರನ್ನು ಸೆಳೆಯುತ್ತಿದ್ದು, ಕೆಲವರು ಒಮ್ಮೆ ಮಾತ್ರವಲ್ಲ ಪ್ರತಿವರ್ಷವೂ ಇತ್ತ ಬರುತ್ತಿರುವುದು ಕಂಡು ಬರುತ್ತದೆ. ದಕ್ಷಿಣದ ರಾಜ್ಯಗಳಲ್ಲದೆ, ಉತ್ತರ ಭಾರತ ಹಾಗೂ ವಿದೇಶಿಯರು ಕೂಡ ಕೊಡಗಿನಲ್ಲಿ ವಾಸ್ತವ್ಯ ಹೂಡಿ ವರ್ಷಾಚರಣೆ ಮಾಡುವ ಸಂಕಲ್ಪ ಮಾಡುತ್ತಿರುವುದು ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಹೊಂದಲು ಅನುಕೂಲವಾಗುತ್ತಿದೆ.
ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕಿದೆ
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸುವ ಕಾರಣದಿಂದ ಟ್ರಾಫಿಕ್ ಜಾಮ್ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದ್ದು ಅದೆಲ್ಲದರ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕಿದೆ. ಇನ್ನು ಹೋಂಸ್ಟೇ, ರೆಸಾರ್ಟ್, ಹೋಟೆಲ್ ಗಳಲ್ಲಿ ಕೊಠಡಿಗಳನ್ನು ನೀಡುವ ಮುನ್ನ ಎಚ್ಚರಿಕೆಗಳನ್ನು ವಹಿಸುವುದು ಮತ್ತು ಪೊಲೀಸ್ ಇಲಾಖೆ ನೀಡಿರುವ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.












Click it and Unblock the Notifications