Namma metro: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸೇವೆ ಆರಂಭ ಯಾವಾಗ?-ಇಲ್ಲಿದೆ ಮಾಹಿತಿ
ಬೆಂಗಳೂರು, ಜನವರಿ, 04: ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ ಸೇವೆ ಒದಗಿಲು ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತರಣೆಯಾಗುತ್ತಲೇ ಇದೆ. ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಮೆಟ್ರೋ ರೈಲು ವಿಸ್ತರಣೆ ಕಮಗಾರಿ ಪ್ರಗತಿಯಲ್ಲಿದೆ. ಹಾಗಾದರೆ ಈ ಕಾಮಗಾರಿ ಯಾವಾಗ ಮುಗಿಯುತ್ತದೆ ಹಾಗೂ ವೆಚ್ಚದ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈ ಕಾಮಗಾರಿ ವೇಗವನ್ನು ಗಮನಿಸಿದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಲು (ನೀಲಿ ಮಾರ್ಗ) ಇನ್ನೂ ಕನಿಷ್ಠ ನಾಲ್ಕು ವರ್ಷ ಬೇಕಾಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೀಗ ಪಿಲ್ಲರ್ಗಳ ನಿರ್ಮಾಣ ಕಾಮಗಾರಿ ಬಹುತೇಕ ಮುಕ್ತಾಯದ ಹಂತ ತಲುಪಿವೆ. ಪಿಲ್ಲರ್ಗಳ ಮೇಲೆ ಕೆಲವೆಡೆ ಕ್ಯಾಪ್ಗಳನ್ನು ಅಳವಡಿಸಲಾಗಿದ್ದು, ಈ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ.

ಮೂರು ಸಂಸ್ಥೆಗಳಿಂದ ಕಾಮಗಾರಿ: ಬಿಎಂಆರ್ಸಿಎಲ್ ಹಳಿ ಜೋಡಣೆ, ಸಿಸ್ಟಮ್, ಸಿಗ್ನಲಿಂಗ್ ವ್ಯವಸ್ಥೆ ಆಗಬೇಕಿದೆ. ಪಿಲ್ಲರ್ಗಳ ಹಂತದ ಕಾಮಗಾರಿ ಮುಗಿಯಲು ಮೂರು ವರ್ಷಗಳನ್ನು ತೆಗೆದುಕೊಳ್ಳುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರೇಷ್ಮೆ ಮಂಡಳಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿಯನ್ನು ಮೂರು ಸಂಸ್ಥೆಗಳು ನಿರ್ವಹಿಸುತ್ತಿದ್ದು, ಶೇಕಡಾ 50ರಷ್ಟು ಪಿಲ್ಲರ್ ಕಾಮಗಾರಿ ಮುಕ್ತಾಯ ಆಗಿದೆ ಅಂತಾ ವಿಜಯ ಕರ್ನಾಟಕದಲ್ಲಿ ವರದಿಯಾಗಿದೆ.
ಅಫ್ಕಾನ್ಸ್ , ಎಸ್ಎನ್ಸಿ ಮತ್ತು ಎನ್ಸಿಸಿ ಕಂಪನಿಗಳು ಈ ಕಾಮಗಾರಿಯನ್ನು ನಿರ್ವಹಿಸುತ್ತಿವೆ. ಎನ್ಸಿಸಿ 3 ಹಂತದಲ್ಲಿ ಕೆಲಸ ಮಾಡುತ್ತಿದೆ. ಅಫ್ಕಾನ್ಸ್ , ಎಸ್ಎನ್ಸಿ ಕಂಪನಿಗಳು ವೇಗದಲ್ಲಿ ಕೆಲಸ ನಿರ್ವಹಿಸುತ್ತಿವೆ. ಅಫ್ಕಾನ್ಸ್ ಕಂಪನಿಯು ರೇಷ್ಮೆ ಮಂಡಳಿಯಿಂದ -ಕೋಡಿಬೀಸನಹಳ್ಳಿವರೆಗೆ (ದೇವರಬೀಸನಹಳ್ಳಿ) ಸಿವಿಲ್ ಕಾಮಗಾರಿ ಗುತ್ತಿಗೆ ಪಡೆದಿದ್ದು, ಶೇಕಡಾ 56ರಷ್ಟು ಪಿಲ್ಲರ್ ಕಾಮಗಾರಿ ಪೂರ್ಣಗೊಳಿಸಿದೆ.
ಹಾಗೆಯೇ ಶಂಕರನಾರಾಯಣ ಕನ್ಸ್ಟ್ರಕ್ಷನ್ (ಎಸ್ಎನ್ಸಿ) ಸಂಸ್ಥೆಯು ಕೋಡಿಬೀಸನಹಳ್ಳಿ (ದೇವರಬೀಸನಹಳ್ಳಿ)ಯಿಂದ ಕೆಆರ್ ಪುರದವರೆಗೆ ಕಾಮಗಾರಿ ನಡೆಸುತ್ತಿದೆ. ಈ ಸಂಸ್ಥೆಯು ಶೇಕಡಾ 80ರಷ್ಟು ಪಿಲ್ಲರ್ ಕಾಮಗಾರಿ ಮುಗಿಸಿದ್ದು, ಶೇಕಡಾ 63ರಷ್ಟು ಪಿಲ್ಲರ್ ಕ್ಯಾಪ್ ಹಾಗೂ ಶೇಕಡಾ 49ರಷ್ಟು ಯು -ಗರ್ಡರ್ ಅಳವಡಿಕೆ ಮಾಡಿದೆ ಎಂದು ತಿಳಿದುಬಂದಿದೆ.
ನೀಲಿ ಮಾರ್ಗದ 37 ಕಿಲೋ ಮೀಟರ್ ಕಾಮಗಾರಿಯನ್ನು ನಾಗರ್ಜುನ ಕನ್ಸ್ಟ್ರಕ್ಷನ್ ಕಂಪನಿ (ಎನ್ಸಿಸಿ) ನಿರ್ವಹಿಸುತ್ತಿದೆ. ಒಟ್ಟು ಮೂರು ಹಂತದಲ್ಲಿ ಸಂಸ್ಥೆ ಕಾಮಗಾರಿ ನಡೆಸುತ್ತಿದ್ದು, ಬೆನ್ನಿಗಾನಹಳ್ಳಿಯಿಂದ ಕೆಂಪಾಪುರ (ಹಂತ -1), ಕೆಂಪಾಪುರದಿಂದ- ಯಲಹಂಕ ವಾಯುನೆಲೆ (ಹಂತ -2), ಯಲಹಂಕ ವಾಯು ನೆಲೆಯಿಂದ- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಹಂತ-3)ದವರೆಗೆ ಕಾಮಗಾರಿ ನಡೆಸುತ್ತಿದೆ. ಮೂರು ಹಂತದಲ್ಲಿಒಟ್ಟಾರೆ ಶೇಕಡಾ 33ರಷ್ಟು ಪಿಲ್ಲರ್ ಕಾಮಗಾರಿ ಮುಗಿಸಿದೆ ಎಂದು ತಿಳಿದುಬಂದಿದೆ.
ಭೂಸ್ವಾಧೀನ ಪ್ರಕ್ರಿಯೆ ಈ ಮಾರ್ಗದ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಈ ಯೋಜನೆಗಾಗಿ ಒಟ್ಟು 274 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಿತ್ತು. ಇದರಲ್ಲಿ214 ಆಸ್ತಿಗಳು ಖಾಸಗಿ ಮತ್ತು 60 ಆಸ್ತಿಗಳು ಸರ್ಕಾರಕೆ ಸೇರಿದ್ದಾಗಿವೆ. ಖಾಸಗಿ ಆಸ್ತಿಗಳ ಖರೀದಿಗೆ ಬಿಎಂಆರ್ಸಿಎಲ್ ಸಾಕಷ್ಟು ಸಮಯ ಕಾಲಹರಣ ಮಾಡಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ ಅಂತಾ ವಿಜಯ ಕರ್ನಾಟಕ ವರದಿ ಮಾಡಿದೆ.
ದೊಡ್ಡಜಾಲದಲ್ಲಿ ರೈಲ್ವೆ ಕ್ರಾಸಿಂಗ್ ಅನುಮತಿ ವಿಳಂಬ, ವಾಯುನೆಲೆ ಬಳಿ ಗೇಲ್ ಗ್ಯಾಸ್ ಪೈಪ್ಲೈನ್ ಸ್ಥಳಾಂತರ, ಯಲಹಂಕ ವಾಯುನೆಲೆಯಿಂದ ಭೂಮಿ ಹಸ್ತಾಂತರಕ್ಕೆ ಹೆಚ್ಚಿನ ಸಮಯ ತೆಗೆದುಕೊಂಡಿರುವುದು, ಜಕ್ಕೂರು ಪ್ಲಾಂಟೇಶನ್ ಸಮೀಪ ಹಲವು ತಿಂಗಳ ಕಾಮಗಾರಿ ಸ್ಥಗಿತ, ಹೆಬ್ಬಾಳದ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಈ ಎಲ್ಲಾ ಕಾರಣಗಳಿಂದ ಕಾಮಗಾರಿಗೆ ಹಿನ್ನಡೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೆಆರ್ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ನಡುವೆ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣದ ಹಗ್ಗ ಜಗ್ಗಾಟ ನಡೆದಿತ್ತು. ನಂತರ 2023ರ ಜನವರಿಯಲ್ಲಿ ನಾಗವಾರ ರಿಂಗ್ ರೋಡ್ನ ಎಚ್ಬಿಆರ್ ಲೇಔಟ್ ಬಳಿ ಮೆಟ್ರೋ ಪಿಲ್ಲರ್ನ ಕಬ್ಬಿಣದ ಸರಳುಗಳ ಗುಚ್ಛ ದಿಢೀರ್ ಕುಸಿದು ಬಿದ್ದು ತಾಯಿ, ಮಗು ಮೃತಪಟ್ಟಿದ್ದು, ಈ ಹಿನ್ನೆಲೆ ಮೂರು ತಿಂಗಳುಗಳ ಕಾಲ ಕಾಮಗಾರಿ ನಿಲ್ಲಿಸಲಾಗಿತ್ತು.
ಒಟ್ಟಿನಲ್ಲಿ ಯೋಜನೆಯ ಒಟ್ಟು ಮೊತ್ತ 10,584 ಕೋಟಿ ರೂಪಾಯಿ ಆಗಿದ್ದು, ಮಾರ್ಗದ ಕಾಮಗಾರಿ ವೆಚ್ಚ 1,533 ಕೋಟಿ ರೂಪಾಯಿ, ಭೂಸ್ವಾದೀನ ವೆಚ್ಚ 2,171 ಕೋಟಿ ರೂಪಾಯಿ, ನಿಲ್ದಾಣ ನಿರ್ಮಾಣದ ವೆಚ್ಚ 828 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.












Click it and Unblock the Notifications