ಕೊಡಗಿನ ಕಡೆಗೆ ಹೋದರೆ ಮಾಂದಲಪಟ್ಟಿ ತೆರಳಲು ಮರೆಯದಿರಿ
ಸದಾ ಒಂದಲ್ಲ ಒಂದು ರೀತಿಯ ಜಂಜಾಟಕ್ಕೆ ಸಿಲುಕಿ ಒತ್ತಡದ ಜೀವನ ನಡೆಸುವವರು ಪ್ರಕೃತಿಯ ಮಡಿಲಲ್ಲಿ ಒಂದಷ್ಟು ಸಮಯ ಕಳೆದು ಬರುವ ಮನಸ್ಸು ಮಾಡಿ ಕೊಡಗಿನ ಕಡೆಗೆ ಪಯಣ ಬೆಳೆಸಿದ್ದೇ ಆದರೆ ಮಾಂದಲಪಟ್ಟಿಗೆ ತೆರಳಲು ಮರೆಯದಿರಿ.
ಇಷ್ಟಕ್ಕೂ ಮಾಂದಲಪಟ್ಟಿಗೆ ಏಕೆ ಹೋಗಬೇಕು? ಎಂಬ ಪ್ರಶ್ನೆ ಪ್ರವಾಸಿಗರನ್ನು ಕಾಡಬಹುದು. ಆದರೆ ಅಲ್ಲಿಗೆ ಹೋದ ಬಳಿಕ ಪ್ರಶ್ನೆಗೆ ಉತ್ತರ ಖಂಡಿತವಾಗಿಯೂ ಸಿಕ್ಕೇ ಸಿಗುತ್ತದೆ. ಗಾಳಿಪಟ ಸಿನಿಮಾದಲ್ಲಿ 'ಮುಗಿಲುಪೇಟೆ' ಯಾಗಿ ಜನಮನ ಸೆಳೆದ ಈ ತಾಣ ಆ ಸಿನಿಮಾ ಬರುವವರೆಗೂ ಪ್ರವಾಸಿಗರನ್ನು ಅಷ್ಟೊಂದಾಗಿ ಸೆಳೆದಿರಲಿಲ್ಲ. ಆದರೆ ತದ ನಂತರ ಕೊಡಗಿನಲ್ಲಿರುವ ಪ್ರವಾಸಿ ತಾಣಗಳ ಪೈಕಿ ಇದು ಒಂದಾಗಿ ಹೋಗಿದೆ.
ಹಾಗಾದರೆ ಕೆಲವು ದಶಕಗಳ ಹಿಂದೆ ಮಾಂದಲಪಟ್ಟಿ ಹೇಗಿತ್ತು ಎನ್ನುವುದನ್ನು ನೋಡಿದ್ದೇ ಆದರೆ. ಕೊಡಗಿನಲ್ಲಿರುವ ಬೆಟ್ಟಗುಡ್ಡಗಳ ಪೈಕಿ ಇದು ಒಂದು ಎಂಬಂತೆ ಇತ್ತು. ಕೆಲವರು ಶಿಕಾರಿಗಾಗಿ ಇಲ್ಲಿಗೆ ಹೋದರೆ ಮತ್ತೆ ಕೆಲವರು ದನಗಳನ್ನು ಮೇಯಿಸಲು ತೆರಳುತ್ತಿದ್ದರು. ಕೆಲವು ದಶಕಗಳ ಹಿಂದೆ ಕಾಳಚಂಡ ರವಿತಮ್ಮಯ್ಯ ಎಂಬುವವರು ತಮ್ಮ ನೇತೃತ್ವದ ಕೊಡಗು ಪಶ್ಚಿಮ ಘಟ್ಟ ಮೂಲನಿವಾಸಿಗಳ ವಿಮೋಚನಾ ಸಂಘದ ಮೂಲಕ ಇಲ್ಲಿ ವರ್ಷಕ್ಕೊಮ್ಮೆ ಕ್ರೀಡಾಕೂಟವನ್ನು ಏರ್ಪಡಿಸಲು ಆರಂಭಿಸಿದರು.

ಗ್ರಾಮೀಣ ಭಾಗದ ಕ್ರೀಡೆಗಳು
ಕ್ರೀಡಾಕೂಟದಲ್ಲಿ ಈ ವ್ಯಾಪ್ತಿಯ ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಮಕ್ಕಂದೂರು, ದೇವಸ್ತೂರು, ಮುತ್ತ್ನಾಡು, ಹಚ್ಚಿನಾಡು ಗ್ರಾಮಗಳ ಯುವಕರು, ಯುವತಿಯರು, ಮಹಿಳೆಯರು, ಪುರುಷರು ಭಾಗವಹಿಸುತ್ತಿದ್ದರು. ಎಲ್ಲರೂ ಬೆಟ್ಟವೇರಿ ಬಂದು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದದ್ದು ವಿಶೇಷ. ಇಲ್ಲಿ ವಿವಿಧ ಬಗೆಯ ಕ್ರೀಡಾಕೂಟಗಳು ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯುತ್ತಿತ್ತು.
ಮಕ್ಕಳ ಶಕ್ತಿ, ಛಲ, ಜಾಣ್ಮೆ ಪರೀಕ್ಷಿಸಲು ಅಂಬುಕಾಯಿ (ತೆಂಗಿನಕಾಯಿ ಕೀಳುವ) ಸ್ಪರ್ಧೆ, ಓಟದ ಸ್ಪರ್ಧೆ, ಸೇರಿದಂತೆ ಗ್ರಾಮೀಣ ಭಾಗದ ಕ್ರೀಡೆಗಳು ನಡೆಯುತ್ತಿದ್ದವು. ಮಧ್ಯಾಹ್ನ ತಮ್ಮ ಮನೆಯಿಂದಲೇ ತಂದ ಸ್ಪೆಷಲ್ ತಿನಿಸುಗಳನ್ನು ಒಬ್ಬರನ್ನೊಬ್ಬರು ಹಂಚಿ ತಿನ್ನುತ್ತಾ ಉಭಯಕುಶಲೋಪರಿ ವಿಚಾರಿಸುತ್ತಿದ್ದರು. ಬಳಿಕ ಮಹಿಳೆಯರು ಹಾಗೂ ಪುರುಷರಿಗೆ ಹಗ್ಗಜಗ್ಗಾಟದ ಸ್ಪರ್ಧೆ ಹಾಗೂ ಕೊಡಗಿನ ಶೌರ್ಯದ ಪ್ರತೀಕವಾದ ಕೋವಿಯಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯೂ ನಡೆಯುತ್ತಿತ್ತು.

ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕುತ್ತಿದ್ದ ಜನ
ಇದೇ ಸಂದರ್ಭ ಬೆಟ್ಟದ ಮೇಲೆ ಬೈಕ್ ಓಡಿಸುವ, ಜೀಪು ಹತ್ತಿಸುವ ಸಾಹಸ ನೋಡುಗರಲ್ಲಿ ರೋಮಾಂಚನವನ್ನುಂಟು ಮಾಡುತ್ತಿತ್ತು. ಸ್ಪರ್ಧೆಗಳು ಮುಗಿಯುತ್ತಿದ್ದಂತೆಯೇ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದವರಿಗೆ ಬಹುಮಾನ ವಿತರಿಸಲಾಗುತ್ತಿತ್ತು. ಬಳಿಕ ನೆರೆದವರೆಲ್ಲಾ ಮಕ್ಕಳು, ಮಹಿಳೆಯರು, ಪುರುಷರೆನ್ನದೆ ಎಲ್ಲರೂ ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕಿ ಕುಣಿಯುವುದರೊಂದಿಗೆ ಕತ್ತಲು ಆವರಿಸುತ್ತಿದ್ದಂತೆಯೇ ಮನೆಯ ಹಾದಿ ಹಿಡಿಯುತ್ತಿದ್ದರು.

ಮಡಿಕೇರಿಗೆ ಸುಮಾರು ಇಪ್ಪತ್ತು ಕಿ.ಮೀ. ದೂರ
ಸಮುದ್ರ ಮಟ್ಟದಿಂದ ಸುಮಾರು 4000 ಅಡಿ ಎತ್ತರದಲ್ಲಿದ್ದ ಮಾಂದಲಪಟ್ಟಿ ಆಗ ಸದಾ ನೀರವಮೌನದಿಂದ ಕೂಡಿತ್ತು. ನಂತರದ ದಿನಗಳಲ್ಲಿ ಕೆಲವು ಸಾಹಸಿಗರು ಬರಲಾರಂಭಿಸಿದರು. ಈಗ ಪ್ರವಾಸಿ ತಾಣವಾಗಿ ಗಮನಸೆಳೆಯುತ್ತಿದೆ. ಕೊಡವ ಭಾಷೆಯಲ್ಲಿ "ಮಾಂದಲ್ ಪಟ್ಟ" ಎಂದರೆ ಎತ್ತರದ ಜಾಗ ಎಂದರ್ಥ. ಬಹುಶಃ ಆಡು ಭಾಷೆಯಲ್ಲಿ ಅದು ಮಾಂದಲಪಟ್ಟಿ ಆಗಿರಬಹುದು ಎಂಬುದು ಹಿರಿಯರು ಅಭಿಪ್ರಾಯ. "ಮಾಂದಲಪಟ್ಟಿ" ಮಡಿಕೇರಿಗೆ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿದ್ದು, ಪುಷ್ಪಗಿರಿ ವನ್ಯಧಾಮಕ್ಕೆ ಸೇರಿದೆ. ಮಡಿಕೇರಿಯಿಂದ ಅಬ್ಬಿಫಾಲ್ಸ್ ರಸ್ತೆಯಲ್ಲಿ ಸಾಗಬಹುದು. ಮಡಿಕೇರಿಯಿಂದ ಇಲ್ಲಿಗೆ ತೆರಳಲು ಪ್ರತ್ಯೇಕ ಜೀಪುಗಳಿವೆ. ಕಾಫಿ, ಏಲಕ್ಕಿ ತೋಟಗಳು, ತೊರೆ ಝರಿಗಳು, ಸಾಲಾಗಿ ನಿಂತ ಪಶ್ಚಿಮಘಟ್ಟ ಶ್ರೇಣಿಗಳನ್ನು ನೋಡುತ್ತಾ ಹೋಗುವುದು ವಿಶೇಷ ಅನುಭವವಾಗುತ್ತದೆ.

ಅಲೆಅಲೆಯಾಗಿ ತೇಲಿ ಬರುವ ಮಂಜು
ಬೆಟ್ಟದ ತುತ್ತ ತುದಿ (ವ್ಯೂಪಾಯಿಂಟ್) ತಲುಪಿದರೆ ಇಲ್ಲಿಂದ ಕಂಡು ಬರುವ ಸುಂದರ ದೃಶ್ಯಗಳು ರೋಮಾಂಚನಕಾರಿಯಾಗಿರುತ್ತದೆ. ಕೈಗೆ ಎಟುಕುವಂತೆ ಭಾಸವಾಗುವ ಮುಗಿಲು... ಪುಷ್ಪಗಿರಿ ಹಾಗೂ ಕೋಟೆಬೆಟ್ಟದ ಸುತ್ತಲೂ ಹರಡಿ ನಿಂತ ಪರ್ವತ ಶ್ರೇಣಿಗಳು... ಅಲೆಅಲೆಯಾಗಿ ತೇಲಿ ಬರುವ ಮಂಜು... ಸುಂದರ ನೆನಪುಗಳನ್ನು ಕಟ್ಟಿಕೊಡುತ್ತದೆ.

ಹೊತ್ತಲ್ಲದ ಹೊತ್ತಿನಲ್ಲಿ ಭೇಟಿ ನೀಡುವ ಸಾಹಸ ಬೇಡ
ಇಲ್ಲಿಗೆ ಭೇಟಿ ನೀಡುವವರು ತಿಂಡಿ ತಿನಿಸುಗಳನ್ನು ಜೊತೆಯಲ್ಲಿಯೇ ಕೊಂಡೊಯ್ಯುವುದು ಒಳ್ಳೆಯದು ಅಲ್ಲಿ ಏನೂ ಸಿಗಲಾರದು. ಆದರೆ ಪ್ಲಾಸ್ಟಿಕ್ ಚೀಲ, ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗದಿದ್ದರೆ ಅದೇ ಮಾಂದಲಪಟ್ಟಿಯ ಸೌಂದರ್ಯದ ಉಳಿವಿಗೆ ಪ್ರವಾಸಿಗರು ನೀಡುವ ಕೊಡುಗೆಯಾಗುತ್ತದೆ.
ಕೊನೆಯ ಎಚ್ಚರಿಕೆ ಏನೆಂದರೆ ಮೋಜು ಮಸ್ತಿಗಾಗಿ ಹೊತ್ತಲ್ಲದ ಹೊತ್ತಿನಲ್ಲಿ ಇಲ್ಲಿಗೆ ಭೇಟಿ ನೀಡುವ ಸಾಹಸ ಮಾಡಬೇಡಿ. ಆಗಾಗ್ಗೆ ಕಾಡಾನೆಗಳು ಅಡ್ಡಾಡುತ್ತಿರುವುದರಿಂದ ಅಪಾಯ ತಪ್ಪಿದಲ್ಲ. ಅಲ್ಲದೆ ಏನೇ ತೊಂದರೆಯಾದರೂ ನಿರ್ಜನ ಪ್ರದೇಶವಾದುದರಿಂದ ಯಾರೂ ನಿಮ್ಮ ಸಹಾಯಕ್ಕೆ ಬರಲಾರರು ಎಂಬುವುದಂತು ಸತ್ಯ. ಹೀಗಾಗಿ ನಿಗದಿತ ಸಮಯದೊಳಗೆ ಹೋಗಿ ಬರುವುದು ಒಳ್ಳೆಯದು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications