Vande Bharat Train: ಬೆಂಗಳೂರಿನ ಈ ವಂದೇ ಭಾರತ್ ರೈಲು ಮತ್ತೊಂದು ನಗರಕ್ಕೆ ವಿಸ್ತರಣೆ
ಬೆಂಗಳೂರು, ಸೆಪ್ಟೆಂಬರ್ 22: ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್. ಈ ಐಷಾರಾಮಿ ಎಕ್ಸ್ಪ್ರೆಸ್ ರೈಲಿಗೆ ಭಾರೀ ಬೇಡಿಕೆ ಇದೆ. ಕರ್ನಾಟಕದಲ್ಲಿ 8ಕ್ಕೂ ಅಧಿಕ ಈ ಮಾದರಿಯ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ರಾಜ್ಯದ ರಾಜಧಾನಿ ಬೆಂಗಳೂರು ನಗರದಿಂದ ಸಂಚಾರ ನಡೆಸುವ ವಂದೇ ಭಾರತ್ ರೈಲನ್ನು ಮತ್ತೊಂದು ನಗರಕ್ಕೆ ವಿಸ್ತರಣೆ ಮಾಡಲು ಈಗ ಇಲಾಖೆ ಮುಂದಾಗಿದೆ. ಶೀಘ್ರವೇ ಈ ಕುರಿತು ಆದೇಶ ಪ್ರಕಟವಾಗುವ ನಿರೀಕ್ಷೆ ಇದೆ.
ಆಗಸ್ಟ್ 31ರಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಒಟ್ಟು 3 ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಚಾಲನೆ ನೀಡಿದ್ದರು. ಇದರಲ್ಲಿ ಒಂದು ರೈಲು ತಮಿಳುನಾಡು ಮತ್ತು ಕರ್ನಾಟಕವನ್ನು ಸಂಪರ್ಕಿಸುತ್ತದೆ. ಈ ರೈಲು ಮಧುರೈ-ಬೆಂಗಳೂರು ನಡುವೆ ಸಂಚಾರವನ್ನು ನಡೆಸುತ್ತಿದೆ, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ.

ತಮಿಳುನಾಡಿನ ತಿರುನಲ್ವೇಲಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಪರ್ಕ ಬೇಕು ಎನ್ನುವ ಬೇಡಿಕೆ ಇದೆ. ಅಲ್ಲದೇ ಮಧುರೈ-ಬೆಂಗಳೂರು ವಂದೇ ಭಾರತ್ ರೈಲನ್ನು ತಿರುನಲ್ವೇಲಿಗೆ ವಿಸ್ತರಣೆ ಮಾಡಬೇಕು ಎಂದು ಇಲಾಖೆಯ ಮುಂದೆ ಬೇಡಿಕೆ ಇಡಲಾಗಿದೆ. ಆದ್ದರಿಂದ ರೈಲು ಸೇವೆ ವಿಸ್ತರಣೆ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ದಕ್ಷಿಣ ರೈಲ್ವೆ ಮಾಹಿತಿ: ದಕ್ಷಿಣ ರೈಲ್ವೆಯ ಜನರಲ್ ಮ್ಯಾನೇಜರ್ ಆರ್. ಎನ್. ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. ತಿರುನಲ್ವೇಲಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೇಕು, ಮಧುರೈ-ಬೆಂಗಳೂರು ರೈಲನ್ನು ತಿರುನಲ್ವೇಲಿಗೆ ವಿಸ್ತರಣೆ ಮಾಡಬೇಕು ಎಂದು ಬೇಡಿಕೆಗಳು ಸಲ್ಲಿಕೆಯಾಗಿವೆ ಎಂದು ಹೇಳಿದ್ದಾರೆ.
ಆರ್. ಎನ್. ಸಿಂಗ್ ತಿರುನಲ್ವೇಲಿ ಜಂಕ್ಷನ್ ರೈಲು ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿದ್ದರು. ಅಲ್ಲಿನ ಮೂಲ ಸೌಲಭ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು, ಪರಿಶೀಲನೆ ನಡೆಸಿದರು. ಆಗ ತಿರುನಲ್ವೇಲಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೇಕು ಎಂಬ ಬೇಡಿಕೆ ಕುರಿತು ಅವರು ಮಾತನಾಡಿದರು.
"ಈಗಾಗಲೇ ತಿರುನಲ್ವೇಲಿ ಜಂಕ್ಷನ್ ಈಗಾಗಲೇ ಇಲಾಖೆ ಬಿ-ಪ್ಲಸ್ ಗ್ರೇಡ್ ರೈಲು ನಿಲ್ದಾಣವಾಗಿದೆ. ಇಲ್ಲಿ ವಿಮಾನ ನಿಲ್ದಾಣ ಮಾದರಿಯ ಮೂಲ ಸೌಕರ್ಯವನ್ನು ಕಲ್ಪಿಸಲು ಅನುಮೋದನೆ ಸಿಕ್ಕಿದ್ದು, ಭೂ ಸ್ವಾಧೀನ ಕಾರ್ಯ ನಡೆಯುತ್ತಿದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿಯೇ ಪ್ರಯಾಣಿಕರು, ಸ್ಥಳೀಯರು ಕರ್ನಾಟಕದ ರಾಜಧಾನಿ ಬೆಂಗಳೂರು, ತಮಿಳುನಾಡು ರಾಜಧಾನಿ ಚೆನ್ನೈ ನಗರಕ್ಕೆ ಸಂಪರ್ಕ ಕಲ್ಪಿಸಲು ಹೆಚ್ಚುವರಿ ರೈಲುಗಳು ಬೇಕು ಮತ್ತು ವಂದೇ ಭಾರತ್ ಮಾದರಿಯ ರೈಲುಗಳ ಸೇವೆಯನ್ನು ಆರಂಭಿಸಬೇಕು ಎಂದು ಜನರಲ್ ಮ್ಯಾನೇಜರ್ಗೆ ಮನವಿಯನ್ನು ಸಲ್ಲಿಕೆ ಮಾಡಿದರು.
"ಚೆನ್ನೈ-ತಿರುನಲ್ವೇಲಿ ನಡುವೆ ಈಗ ಇರುವ ರೈಲುಗಳ ಜೊತೆ ಹೊಸ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸುವ ಕುರಿತು ತೀರ್ಮಾನ ಮಾಡಲಾಗುತ್ತದೆ. ಬೆಂಗಳೂರು-ಮುಧುರೈ ನಡುವಿನ ವಂದೇ ಭಾರತ್ ರೈಲನ್ನು ತಿರುನಲ್ವೇಲಿ ತನಕ ವಿಸ್ತರಣೆ ಮಾಡುವ ಕುರಿತು ಸಹ ಶೀಘ್ರವೇ ಗಮನಹರಿಸಲಾಗುತ್ತದೆ" ಎಂದು ಪ್ರಯಾಣಿಕರಿಗೆ ಭರವಸೆ ನೀಡಿದರು.
ತಿರುನಲ್ವೇಲಿ ಸಂಸದ ಸಿ. ರಾರ್ಬಟ್ ಬ್ರೂಸ್ ಆರ್. ಎನ್. ಸಿಂಗ್ ಭೇಟಿ ಮಾಡಿದರು. ರೈಲ್ವೆ ಜಂಕ್ಷನ್ನಲ್ಲಿ ವಿವಿಧ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು. ಅಲ್ಲದೇ ತಿರುನಲ್ವೇಲಿ-ಬೆಂಗಳೂರು ನಡುವೆ ಹೆಚ್ಚಿನ ರೈಲುಗಳನ್ನು ಓಡಿಸಬೇಕು ಎಂದು ಮನವಿ ಸಲ್ಲಿಕೆ ಮಾಡಿದರು.
ಮಧುರೈ ಮತ್ತು ಬೆಂಗಳೂರು ಕಂಟೋನ್ಮಂಟ್ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ತಿರುನಲ್ವೇಲಿಗೆ ವಿಸ್ತರಣೆ ಮಾಡಿದರೆ ವೇಳಾಪಟ್ಟಿ, ನಿಲ್ದಾಣಗಳಲ್ಲಿ ಬದಲಾವಣೆ ಆಗಲಿದೆ. ಇಲಾಖೆ ರೈಲು ಸೇವೆ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications