ಗದಗ-ಯಲವಿಗಿ ನೂತನ ರೈಲು ಮಾರ್ಗ; ಯೋಜನೆ ವಿವರಗಳು
ಗದಗ, ಆಗಸ್ಟ್ 07; ಭಾರತೀಯ ರೈಲ್ವೆ ಉತ್ತರ ಕರ್ನಾಟಕ ಭಾಗದ ಜನರಿಗೆ ಕೊಡುಗೆಯೊಂದನ್ನು ನೀಡಿದೆ. ಗದಗ ಮತ್ತು ಯಲವಿಗಿ ನಡುವೆ 58 ಕಿ. ಮೀ. ಉದ್ದದ ಹೊಸ ರೈಲು ಮಾರ್ಗವನ್ನು ನೈಋತ್ಯ ರೈಲ್ವೆ ಘೋಷಣೆ ಮಾಡಿದೆ. ಬೆಂಗಳೂರು ನಗರದ ದೂರವನ್ನು ಕಡಿಮೆ ಮಾಡುವ ಮಹತ್ವದ ಯೋಜನೆ ಇದಾಗಿದೆ.
ಗದಗ ಮತ್ತು ಯಲವಿಗಿ ನಡುವಿನ ರೈಲ್ವೆ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಸಮೀಕ್ಷೆಯ ಬಳಿಕ ಯೋಜನೆಯ ವಿಸ್ತ್ರತ ಯೋಜನಾ ವರದಿ ತಯಾರು ಮಾಡಿ, ರೈಲ್ವೆ ಸಚಿವಾಲಯಕ್ಕೆ ಕಳಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೈಋತ್ಯ ರೈಲ್ವೆ ವೆಬ್ಸೈಟ್ನಲ್ಲಿ ಗದಗ-ಯಲವಿಗಿ ನಡುವಿನ 58 ಕಿ. ಮೀ. ಹೊಸ ಮಾರ್ಗದ ಅಧಿಕೃತ ನೀಲನಕ್ಷೆ ಪ್ರಕಟಿಸಲಾಗಿದೆ. ಗದಗ ಜಿಲ್ಲೆಯ ಎರಡು ತಾಲೂಕು ಕೇಂದ್ರಗಳಾದ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರಕ್ಕೆ ಏಕಕಾಲಕ್ಕೆ ಈ ಯೋಜನೆಯಿಂದಾಗಿ ರೈಲು ಸಂಪರ್ಕ ಸಿಕ್ಕಂತೆ ಆಗಿದೆ.
ಯೋಜನೆಯ ವಿವರಗಳು; ಗದಗ ಮತ್ತು ಯಲವಿಗಿ ನಡುವಿನ ಹೊಸ ಮಾರ್ಗದ ಉದ್ದ 58 ಕಿ. ಮೀ.ಗಳು. ಗದಗದಿಂದ ಆರಂಭವಾಗುವ ಮಾರ್ಗ ಬಿಂಕದಕಟ್ಟಿ, ಹರ್ತಿ, ಶಿರಹಟ್ಟಿ, ಲಕ್ಷ್ಮೇಶ್ವರ ಮೂಲಕ ಹಾವೇರಿ ಜಿಲ್ಲೆಯ ಯಲವಿಗೆ ಸಂಪರ್ಕಿಸಲಿದೆ.
ಈ ಮೊದಲು ಗದಗ-ಯಲವಿಗಿ ಮಾರ್ಗ ಮುಳಗುಂದ, ಮಾಗಡಿ, ಮಂಜಲಾಪುರ ಮೂಲಕ ಸಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅಧಿಕೃತ ನಕ್ಷೆಯ ಪ್ರಕಾರ ಶಿರಹಟ್ಟಿ, ಲಕ್ಷ್ಮೇಶ್ವರ ಮೂಲಕ ಮಾರ್ಗ ಸಾಗಲಿದ್ದು, ಜಿಲ್ಲೆಯ ಎರಡು ತಾಲೂಕು ಮತ್ತು ಗದಗ ತಾಲೂಕಿನ ಹರ್ತಿ ಗ್ರಾಮಕ್ಕೆ ರೈಲ್ವೆ ಸಂಪರ್ಕ ದೊರಕಿದಂತೆ ಆಗಿದೆ.
1998ರಿಂದ ಗದಗ-ಯಲವಿಗಿ ಮಾರ್ಗ ಹೊಸ ರೈಲು ಮಾರ್ಗಕ್ಕಾಗಿ ಹೋರಾಟಗಳು ನಡೆಯುತ್ತಿದ್ದವು. ಒಂದು ಬಾರಿ ಸಮೀಕ್ಷೆ ಕಾರ್ಯ ಸಹ ಪೂರ್ಣಗೊಂಡಿತ್ತು. 2017ರಲ್ಲಿ ಕೇಂದ್ರ ಸರ್ಕಾರ ಯೋಜನೆಗೆ 650 ಕೋಟಿ ರೂ. ಸಹ ಬಿಡುಗಡೆ ಮಾಡಿತ್ತು.
ಈ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ 50ರಷ್ಟು ಅನುದಾನ ನೀಡಬೇಕಿದೆ. ಆದರೆ ರಾಜ್ಯ ಸರ್ಕಾರ ಅನುದಾನ ನೀಡಲು ವಿಳಂಬ ಮಾಡುತ್ತಿದೆ ಎಂಬ ಆರೋಪವಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಈ ರೈಲ್ವೆ ಮಾರ್ಗದ ಭೂ ಸ್ವಾಧೀನಕ್ಕಾಗಿ 640 ಕೋಟಿ ರೂ.ಗಳ ಅನುದಾನವನ್ನು ಮೀಸಲಿಟ್ಟಿದ್ದರು.
ಈ ರೈಲು ಮಾರ್ಗದಿಂದ ಹಾವೇರಿ, ಗದಗ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ಸೊಲ್ಲಾಪುರ, ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಯ ಜನರಿಗೆ ರಾಜಧಾನಿ ಬೆಂಗಳೂರು ಅಂತರ ಸುಮಾರು 100 ಕಿ. ಮೀ. ಕಡಿಮೆಯಾಗಲಿದೆ.
ಕೇಂದ್ರ ಸರ್ಕಾರದ ಪಿಂಕ್ ಬುಕ್ನಲ್ಲಿ ಗದಗ-ಯಲವಿಗಿ ಹೊಸ ರೈಲು ಮಾರ್ಗವನ್ನು ಸೇರಿಸಲಾಗಿತ್ತು. ಅಲ್ಲದೇ ಅನುದಾನ ಘೋಷಣೆ ಮಾಡಲಾಗಿತ್ತು. ಈಗ ರಾಜ್ಯವೂ ಅನುದಾನ ನೀಡಿದ್ದು, ಬೇಗ ಕಾಮಗಾರಿ ಆರಂಭಿಸಬೇಕು ಎಂಬುದು ಜನರ ಬೇಡಿಕೆಯಾಗಿದೆ.












Click it and Unblock the Notifications