Vande Bharat Express: ಬೆಂಗಳೂರು-ಎರ್ನಾಕುಲಂ ನಡುವೆ ವಂದೇ ಭಾರತ್ ಸೇವೆ ಆರಂಭ ಯಾವಾಗ?
ಬೆಂಗಳೂರು, ಮೇ, 04: ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಈಗಾಗಲೇ ದೇಶಾದ್ಯಂತ ಸಂಚಾರ ಮಾಡುತ್ತಿದೆ. ಇದೀಗ ಎರ್ನಾಕುಲಂ-ಬೆಂಗಳೂರು ನಡುವೆಯೂ ಸಂಚಾರ ಆರಂಭಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವಾಗಿನಿಂದ ಆರಂಭ ಹಾಗೂ ಸಮಯಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕೆಲವು ದಿನಗಳ ಹಿಂದೆಯಷ್ಟೇ ಈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಇದೀಗ ಬೆಂಗಳೂರು ಮತ್ತು ಎರ್ನಾಕುಲಂ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಲಾಗಿದೆ.

ಬಹು ನಿರೀಕ್ಷಿತ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಲೋಕಸಭಾ ಚುನಾವಣೆಯ ನಿರ್ಬಂಧಗಳು ಮುಗಿದ ಬಳಿಕ ಆರಂಭವಾಗಲಿದೆ. ಕೊಚ್ಚಿಯ ಎರ್ನಾಕುಲಂನಿಂದ ಬೆಂಗಳೂರಿಗೆ ಸಂಚಾರ ಆರಂಭಿಸಲಿದೆ ಎಂದು ಎಂದು ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. ಕೊಚ್ಚಿ-ಬೆಂಗಳೂರು ನಡುವೆ ಬಹು ನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಚಾದರೆ, ದೈನಂದಿನ ಪ್ರಯಾಣಿಕರು ಸೇರಿದಂತೆ ಇಲ್ಲಿನ ನಿವಾಸಿಗಳಿಗೆ ತುಂಬಾ ಅನುಕೂಲ ಆಗಲಿದೆ.
ಎರ್ನಾಕುಲಂ ಮಾರ್ಷಲಿಂಗ್ ಯಾರ್ಡ್ನಲ್ಲಿನ ಪಿಟ್ ಲೈನ್ನ ವಿದ್ಯುದೀಕರಣ ಸಂಪೂರ್ಣಗೊಂಡ ಬಳಿಕ, ಎರ್ನಾಕುಲಂ ಜಂಕ್ಷನ್ ರೈಲು ನಿಲ್ದಾಣದಲ್ಲಿ (ERS) ಹೆಚ್ಚಿನ ಎಕ್ಸ್ಪ್ರೆಸ್ ರೈಲುಗಳು ಓಡಲಿದೆ ಎಂದು ಹೇಳಲಾಗುತ್ತಿದೆ. ಇನ್ನು ರೈಲ್ವೆ ಇಲಾಖೆ ಮಾಹಿತಿಯ ಪ್ರಕಾರ, ಈ ವಿದ್ಯುದ್ದೀಕರಣವು ದೇಶಾದ್ಯಾಂತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಚಾರಕ್ಕಾಗಿ ಯಾರ್ಡ್ಗಳನ್ನು ಸಿದ್ಧಪಡಿಸುವ ಸಿದ್ಧತೆಯ ಭಾಗವಾಗಿತ್ತು ಎಂದು ತಿಳಿದುಬಂದಿದೆ.
ನಿರೀಕ್ಷಿತ ವೇಳಾಪಟ್ಟಿ: ಮೂಲಗಳ ಪ್ರಕಾರ, ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಎರ್ನಾಕುಲಂನಿಂದ ಬೆಳಗ್ಗೆ 5 ಗಂಟೆಗೆ ಹೊರಟು, ಮಧ್ಯಾಹ್ನ 1:35ಕ್ಕೆ ಬೆಂಗಳೂರು ತಲುಪಲಿದೆ. ಮತ್ತೆ ಬೆಂಗಳೂರಿನಿಂದ ಮಧ್ಯಾಹ್ನ 2:05ಕ್ಕೆ ಹೊರಟು, ರಾತ್ರಿ 10:45ಕ್ಕೆ ಎರ್ನಾಕುಲಂ ತಲುಪಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಲ್ಲೆಲ್ಲಿ ನಿಲುಗಡೆ?: ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ಈರೋಡ್ ಮತ್ತು ಸೇಲಂನಂತಹ ನಿಲ್ದಾಣಗಳಲ್ಲಿ ನಿಲ್ಲುಗಡೆ ಆಗಲಿದೆ.
ಕೇರಳದಲ್ಲಿ ಕಳೆದ ಏಪ್ರಿಲ್ನಲ್ಲಿ ಎಂಟು ಬೋಗಿಗಳ ಮೂರನೇ ವಂದೇ ಭಾರತ್ ಎಕ್ಸ್ಪ್ರೆಸ್ ಸಂಚಾರ ಆರಂಭಿಸಿದ್ದು, ಇದು ತುಂಬಾ ದಿನಗಳವರೆಗೆ ಕೊಲ್ಲಂನಲ್ಲಿ ನಿಲುಗಡೆಯಾಗಿತ್ತು. ಎರ್ನಾಕುಲಂ ಮಾರ್ಷಲಿಂಗ್ ಯಾರ್ಡ್ನ ಪಿಟ್ ಲೈನ್ನಲ್ಲಿ ವಿದ್ಯುದೀಕರಣ ಪೂರ್ಣಗೊಳಿಸುವ ಹಿನ್ನೆಲೆ ಈ ವಿಳಂಬಕ್ಕೆ ಕಾರಣವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications