Dasara Special Train: ಮೈಸೂರು, ಬೆಂಗಳೂರಿಂದ ಕರಾವಳಿಗೆ ವಿಶೇಷ ರೈಲು, ವೇಳಾಪಟ್ಟಿ
ಬೆಂಗಳೂರು, ಅಕ್ಟೋಬರ್ 06: ದಸರಾ ಹಬ್ಬ-2024ರ ಹಿನ್ನಲೆಯಲ್ಲಿ ಬೆಂಗಳೂರು ಮತ್ತು ಮೈಸೂರು ನಗರದಿಂದ ಕರಾವಳಿ ಭಾಗಕ್ಕೆ ಸಂಚಾರ ನಡೆಸುವ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಸಾಲು ಸಾಲು ರಜೆ ಇರುವುದರಿಂದ ಖಾಸಗಿ ಬಸ್ಗಳ ದರಗಳು ದುಪ್ಪಟ್ಟಾಗಿದ್ದು, ಸದ್ಯ ಸಂಚಾರ ನಡೆಸುತ್ತಿರುವ ರೈಲುಗಳಲ್ಲಿ ಟಿಕೆಟ್ಗಳು ಸಿಗುತ್ತಿಲ್ಲ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ದಸರಾ ಹಬ್ಬದ ಅಂಗವಾಗಿ ಬೆಂಗಳೂರು ಮತ್ತು ಮೈಸೂರು ನಗರದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಓಡಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಮನವಿ ಸಲ್ಲಿಸಿದ್ದರು.

ಕುಂದಾಪುರ ರೈಲು ಹಿತರಕ್ಷಣಾ ಸಮಿತಿಯ ಗಣೇಶ್ ಪುತ್ರನ್ ಕರಾವಳಿಗೆ ಆಗಮಿಸುವ ರೈಲು, ಬಸ್ಗಳಲ್ಲಿ ಟಿಕೆಟ್ಗಳು ಲಭ್ಯವಿಲ್ಲದಿರುವ ಬಗ್ಗೆ ಸಂಸದರ ಗಮನ ಸೆಳೆದಿದ್ದರು. ಈ ಹಿನ್ನಲೆಯಲ್ಲಿ ವಿಶೇಷ ರೈಲುಗಳನ್ನು ಓಡಿಸಬೇಕು ಎಂದು ಸಂಸದರು ಸಚಿವರಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಲಾಗಿದ್ದು, ವಿಶೇಷ ರೈಲು ಓಡಿಸಲಾಗುತ್ತಿದೆ. ರೈಲಿನ ವೇಳಾಪಟ್ಟಿಯನ್ನು ಘೋಷಣೆ ಮಾಡಲಾಗಿದೆ.
ವಿಶೇಷ ರೈಲು ವೇಳಾಪಟ್ಟಿ: ಅಕ್ಟೋಬರ್ 12ರ ಶನಿವಾರ ವಿಜಯದಶಮಿ, ಅಕ್ಟೋಬರ್ 13 ಭಾನುವಾರದ ಹಿನ್ನಲೆ ಸಾವಿರಾರು ಜನರು ಬೆಂಗಳೂರು, ಮೈಸೂರು ನಗರದಿಂದ ಉಡುಪಿ, ಕುಂದಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಸಂಚಾರವನ್ನು ನಡೆಸುತ್ತಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.
ರೈಲು ಸಂಖ್ಯೆ 06569 ಅಕ್ಟೋಬರ್ 1ರಂದು ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ರಾತ್ರಿ 12.30ಕ್ಕೆ ಹೊರಡಲಿದೆ. ಪಡೀಲ್ ಬೈಪಾಸ್ ಮೂಲಕ ಶುಕ್ರವಾರ ಬೆಳಗ್ಗೆ 11.30ಕ್ಕೆ ಉಡುಪಿ ತಲುಪಿ, ಸಂಜೆ 4 ಗಂಟೆಗೆ ಕಾರವಾರವನ್ನು ತಲುಪಲಿದೆ. ಅಕ್ಟೋಬರ್ 11ರಂದು ರೈಲು ಸಂಖ್ಯೆ 06570 ರಾತ್ರಿ 11.30ಕ್ಕೆ ಕಾರವಾರದಿಂದ ಹೊರಡಲಿದೆ. ಮಧ್ಯರಾತ್ರಿ ಉಡುಪಿಗೆ ತಲುಪಿ, ಸಂಜೆ 4.40ಕ್ಕೆ ಮೈಸೂರು ನಗರ ತಲುಪಲಿದೆ.
ರೈಲು ಸಂಖ್ಯೆ 06585 ಅಕ್ಟೋಬರ್ 12ರ ರಾತ್ರಿ 9.20ಕ್ಕೆ ಮೈಸೂರು ನಗರದಿಂದ ಹೊರಟು, ರಾತ್ರಿ 12.20ಕ್ಕೆ ಬೆಂಗಳೂರು ನಗರದ ಕೆಎಸ್ಆರ್ ಬೆಂಗಳೂರು, 12.40ಕ್ಕೆ ಯಶವಂತಪುರ ಮೂಲಕ ಪಡೀಸ್ ಬೈಪಾಸ್ಗೆ ಬಂದು 11.30ಕ್ಕೆ ಉಡುಪಿಗೆ ಬರಲಿದೆ. ಸಂಜೆ 4 ಗಂಟೆಗೆ ಕಾರವಾರಕ್ಕೆ ತಲುಪಲಿದೆ. ಅಕ್ಟೋಬರ್ 13ರಂದು ರೈಲು ಸಂಖ್ಯೆ 06586 ರಾತ್ರಿ 11.30ಕ್ಕೆ ಕಾರವಾರದಿಂದ ಹೊರಟು, ಉಡುಪಿಗೆ ಮಧ್ಯರಾತ್ರಿ 2.40ಕ್ಕೆ ಆಗಮಿಸಿ, ಅಕ್ಟೋಬರ್ 14ರಂದು ಮಧ್ಯಾಹ್ನ 1ಕ್ಕೆ ಯಶವಂತಪುರ ಮೂಲಕ ಸಂಜೆ 4.40ಕ್ಕೆ ಮೈಸೂರು ನಗರ ತಲುಪಲಿದೆ.
ವಿಶೇಷ ರೈಲು ಸೇವೆ ಬಗ್ಗೆ ಕುಂದಾಪುರ ರೈಲು ಹಿತರಕ್ಷಣಾ ಸಮಿತಿ ಫೇಸ್ಬುಕ್ ಪೋಸ್ಟ್ ಹಾಕಿದ್ದು, ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಲೀಲಾಜಾಲವಾಗಿ ರೈಲ್ವೆಯ ಸೇವೆಗಳನ್ನು ತಂದ ಉದಾಹರಣೆಯೇ ಇಲ್ಲ. ಕಳೆದ 25 ವರ್ಷಗಳಲ್ಲಿ ಆಗದ ಗಣನೀಯ ಬದಲಾವಣೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಡುತ್ತಿದ್ದಾರೆ. ಈಗ ದಸರಾ ವಿಶೇಷ ರೈಲನ್ನು ತಂದಿದ್ದು, ಮೊದಲ ಬಾರಿಗೆ ಕರಾವಳಿಗರಿಗೆ ವಿಶ್ವ ವಿಖ್ಯಾತ ಮೈಸೂರು ದಸರಾ ನೋಡಲು ಸಹಾಯಕವಾಗಲಿದೆ ಹಾಗೂ ಮೈಸೂರು, ಬೆಂಗಳೂರಿನಲ್ಲಿ ನೆಲೆಸಿರುವ ಅಸಂಖ್ಯಾತ ಕರಾವಳಿಯ ಜನರಿಗೆ ಹಬ್ಬಕ್ಕೆ ಮನೆಗೆ ಬರಲು ಮತ್ತು ಮೈಸೂರು, ಮಂಡ್ಯ, ಬೆಂಗಳೂರು, ಹಾಸನ ಭಾಗದ ಪ್ರವಾಸಿಗರಿಗೂ ಅನುಕೂಲವಾಗಲಿದೆ ಎಂದು ಹೇಳಿದೆ.












Click it and Unblock the Notifications