ದಸರಾ ವೇಳೆ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಕಾಂಬೋ ಟಿಕೆಟ್; ಸ್ಥಳ, ದರದ ವಿವರ
ದಸರಾ ಸಮಯದಲ್ಲಿ ಮೈಸೂರಿಗೆ ದೂರದಿಂದ ಪ್ರವಾಸಿಗರು ಬರುವುದು ಸಾಮಾನ್ಯವಾಗಿದೆ. ಹಾಗೆಯೇ ಮೈಸೂರಿನಲ್ಲಿರುವ ಜನ ಸಾಮಾನ್ಯರ ಮನೆಗೆ ಅತಿಥಿಗಳು ಬರುವುದು ಕೂಡ ಇದೇ ಸಮಯವಾಗಿದೆ. ಹೀಗಾಗಿ ದಸರಾ ಎನ್ನುವುದು ಮೈಸೂರಿಗೆ ಅತಿಥಿಗಳನ್ನು ಕರೆತರುವ ಕಾಲವೂ ಹೌದು.
ಹಿಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿದ್ದ ಬಹುತೇಕ ಮಂದಿ ದಸರಾ ಸಮಯದಲ್ಲಿ ನಗರದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿ ಒಂದಷ್ಟು ದಿನಗಳಿದ್ದು ದಸರಾ ನೋಡಿಕೊಂಡು ಹಿಂತಿರುಗುತ್ತಿದ್ದರಿಂದ ಪ್ರತಿ ಮನೆಗಳಲ್ಲಿ ಸಂಭ್ರಮ ಏರ್ಪಡುತ್ತಿತ್ತು. ಮುಂದುವರೆದ ಈ ಕಾಲದಲ್ಲಿ ಅದು ಮೊದಲಿನಂತೆ ಇಲ್ಲದಿದ್ದರೂ ದೂರದ ಪ್ರವಾಸಿಗರಂತು ಮೈಸೂರಿನತ್ತ ದೌಡಾಯಿಸುತ್ತಾರೆ.
ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗಾಗಿ ಮತ್ತು ಸಾರ್ವಜನಿಕರಿಗಾಗಿ ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಕೆಲವು ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಏಕೀಕೃತ ಟಿಕೇಟ್ (ಕಾಂಬೋ ಟಿಕೆಟ್) ವ್ಯವಸ್ಥೆ ಜಾರಿಗೊಳಿಸಿರುವುದು ವಿಶೇಷವಾಗಿದೆ. ಇದರಿಂದ ಪ್ರವಾಸಿಗರಿಗೆ ಲಾಭವಾಗಲಿದೆ. ಏಕೀಕೃತ ಟಿಕೆಟ್ ಪಡೆಯುವುದರಿಂದ ಪ್ರವಾಸಿಗರು 5 ಪ್ರವಾಸಿ ಸ್ಥಳಗಳಾದ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ ಹಾಗೂ ಕೆಆರ್ಎಸ್ ಬೃಂದಾವನಕ್ಕೆ ತೆರಳಬಹುದಾಗಿದೆ.

ಕಾಂಬೊ ಟಿಕೆಟ್ ಬೆಲೆ 500 ರೂ
ಇನ್ನು ಕಾಂಬೊ ಟಿಕೆಟ್ ಪಡೆದವರು ಟಿಕೆಟ್ ಖರೀದಿಗೆ 5 ಸ್ಥಳಗಳಲ್ಲಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ಈ ವ್ಯವಸ್ಥೆ ಸೆಪ್ಟೆಂಬರ್ 20ರಂದು ಆರಂಭಗೊಂಡು ಅಕ್ಟೋಬರ್ 5ರವರೆಗೆ ಚಾಲ್ತಿಯಲ್ಲಿದ್ದು ದೂರದಿಂದ ಬರುವ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೂ ಅನುಕೂಲವಾಗಲಿದೆ. ಟಿಕೆಟ್ ಬೆಲೆ 500 ರೂ.ಗಳಾಗಿದ್ದು, ಮಕ್ಕಳಿಗೆ 250 ರೂ. ನಿಗದಿಪಡಿಸಲಾಗಿದೆ. ಈ ಟಿಕೆಟ್ ಗಳನ್ನು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮಾರಾಟ ಮಾಡಲಾಗುತ್ತಿದ್ದು, ನಗರದ ಕೆಎಸ್ಟಿಡಿಸಿ ಹೋಟೆಲ್ ಹಾಗೂ ಟ್ರಾವೆಲ್ಸ್ ವಿಭಾಗದಲ್ಲಿ, ಕೆಎಸ್ಆರ್ಟಿಸಿ ಸಬರ್ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣದ 2 ಕಡೆ, ಚಾಮುಂಡಿಬೆಟ್ಟ, ಮೃಗಾಲಯ, ಕೆಆರ್ಎಸ್, ಅರಮನೆ ಹಾಗೂ ಮೈಸೂರು ನಗರದ ಪ್ರಮುಖ ಹೋಟೆಲ್ಗಳಲ್ಲಿ ಟಿಕೆಟ್ ದೊರೆಯಲಿದೆ.

ವಾಹನಗಳಿಗೆ ತೆರಿಗೆ ವಿನಾಯಿತಿ
ಇನ್ನು ಈ ಬಾರಿಯ ದಸರಾದಲ್ಲಿ ಹೊರ ರಾಜ್ಯಗಳಿಂದ ಬರುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದ್ದು, ಇದನ್ನು ಮೈಸೂರು ಮಾತ್ರವಲ್ಲದೆ ಮಂಡ್ಯ ಜಿಲ್ಲೆಗೂ ವಿಸ್ತರಿಸಲಾಗುತ್ತಿದೆ. ಪ್ರತಿವರ್ಷ ಮೈಸೂರು ಜಿಲ್ಲೆಗೆ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು. ಈ ಬಾರಿ ಅಕ್ಕಪಕ್ಕದ ಜಿಲ್ಲೆಗಳಿಗೆ ವಿಸ್ತರಿಸಬೇಕೆಂಬ ಬೇಡಿಕೆ ಬಂದಿದ್ದು, ಸದ್ಯ ಮಂಡ್ಯ ಜಿಲ್ಲೆಗೆ ವಿಸ್ತರಿಸಲಾಗಿದೆ. ಈ ಬಗ್ಗೆ ಇನ್ನಷ್ಟೆ ಆದೇಶ ಹೊರ ಬರಬೇಕಾಗಿದೆ.

ಮಂಗಳವಾರ, ಶುಕ್ರವಾರ ವಿಶೇಷ ಪೂಜೆ
ಇದೆಲ್ಲದರ ನಡುವೆ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಮೈಸೂರು ನಗರ ಮತ್ತು ಸುತ್ತಮುತ್ತ ಇರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ. ಅದರಲ್ಲೂ ಪ್ರವಾಸ ಚಾಮುಂಡಿಬೆಟ್ಟದಿಂದ ಆರಂಭವಾದರೆ ಚೆನ್ನಾಗಿರುತ್ತದೆ. ಮೈಸೂರಿನ ಅಧಿದೇವತೆ, ಯದುವಂಶದ ಕುಲದೈವ ಶ್ರೀ ಚಾಮುಂಡೇಶ್ವರಿಯ ನೆಲೆವೀಡು ಚಾಮುಂಡಿಬೆಟ್ಟವಾಗಿದೆ. ಮೈಸೂರಿನ ಆಕರ್ಷಣೀಯ ಧಾರ್ಮಿಕ ಕ್ಷೇತ್ರ ಮತ್ತು ಹಸಿರಿನ ಸಿರಿಯಲ್ಲಿರುವ ಪ್ರೇಕ್ಷಣೀಯ ತಾಣವೂ ಹೌದು.
ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿಗೆ ಬೆಟ್ಟದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷವಾಗಿದ್ದು, ಆ ದಿನಗಳಲ್ಲಿ ವಿಶೇಷಪೂಜೆ ಇರುತ್ತದೆ. ಸಿಂಹವಾಹಿನಿ ಚತುರ್ಭುಜಧಾರಿಣಿಯಾದ ಇಲ್ಲಿನ ಚಾಮುಂಡೇಶ್ವರಿಯನ್ನು ನೋಡುವುದೇ ಆನಂದ. ಹೀಗಾಗಿ ಇಲ್ಲಿಗೆ ತೆರಳಿ ಇಲ್ಲಿನ ಸುಂದರ ಪರಿಸರದಲ್ಲಿ ಒಂದಷ್ಟು ಹೊತ್ತು ಇದ್ದು ತಾಯಿಯ ದರ್ಶನ ಮಾಡಿಕೊಂಡು ಮುಂದಿನ ಪಯಣ ಮುಂದುವರೆಸಬಹುದಾಗಿದೆ.

ಮೈಸೂರಿನ ಪ್ರವಾಸಿ ತಾಣಗಳು
ಅಲ್ಲಿಂದ ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ಪ್ರಾಣಿ-ಪಕ್ಷಿಗಳ ವೀಕ್ಷಣೆಗೆ ಕರ್ನಾಟಕದಲ್ಲೇ ಅತಿದೊಡ್ಡದೆನಿಸಿರುವ ಚಾಮರಾಜೇಂದ್ರ ಮೃಗಾಲಯಕ್ಕೆ ತೆರಳಬಹುದಾಗಿದೆ. ಇಲ್ಲಿಂದ ದೋಣಿ ವಿಹಾರಕ್ಕೆ ಕಾರಂಜಿ ಕೆರೆಗೂ ಭೇಟಿ ನೀಡಬಹುದು. ಅಲ್ಲಿಂದ ಅರಮನೆಗೆ ಬಂದು ಅರಮನೆಯನ್ನು ನೋಡಿದ ಬಳಿಕ ಸಂತ ಫಿಲೋಮಿನಾ ಚರ್ಚ್ ನತ್ತ ಮುಖ ಮಾಡಿದರೆ ಗಗನವನ್ನು ಚುಂಬಿಸಿ ಬಿಡುತ್ತವೇನೋ ಎಂಬಂತಿರುವ ಎರಡು ಬೃಹತ್ ಗೋಪುರಗಳುಳ್ಳ ಗೋಥಿಕ್ ಮಾದರಿಯಲ್ಲಿ ನಿರ್ಮಿಸಲ್ಪಟ್ಟ ಕಲಾನೈಪುಣ್ಯದ ಕಟ್ಟಡದ ಚರ್ಚ್ ಗಮನಸೆಳೆಯುತ್ತದೆ.

ಶ್ರೀರಂಗಪಟ್ಟದಲ್ಲಿ ನೋಡಬಹುದಾದ ಸ್ಥಳಗಳು
ಅಲ್ಲಿಂದ ರೈಲ್ವೆ ಮ್ಯೂಸಿಯಂ ನೋಡಿಕೊಂಡು ಅದೇ ಮಾರ್ಗವಾಗಿ ಮುನ್ನಡೆದರೆ ಕೆ.ಆರ್.ಎಸ್ ಜಲಾಶಯಕ್ಕೆ ತೆರಳಬಹುದಾಗಿದ್ದು, ಬೃಂದಾವನದಲ್ಲಿ ಒಂದಷ್ಟು ಹೊತ್ತು ಇದ್ದು ಬರಬಹುದಾಗಿದೆ. ಇಲ್ಲಿಂದ ಪಕ್ಕದಲ್ಲಿಯೇ ಇರುವ ರಂಗನತಿಟ್ಟು ಪಕ್ಷಿಧಾಮಕ್ಕೂ ಹೋಗಿ ಹಾಗೆಯೇ ಶ್ರೀರಂಗಪಟ್ಟಣಕ್ಕೆ ತೆರಳಿ ಶ್ರೀರಂಗನಾಥ ದೇಗುಲ, ದರಿಯಾದೌಲತ್, ಗಂಜಾಂನ ನಿಮಿಷಾಂಬ ದೇವಿ, ಬೆಳಗೊಳದ ಬಲಮುರಿ ಹಾಗೂ ಎಡಮುರಿ ಹೀಗೆ ಹಲವು ತಾಣಗಳಿಗೆ ಭೇಟಿ ನೀಡಬಹುದಾಗಿದೆ.
ಮೈಸೂರು ಜಿಲ್ಲೆಯಲ್ಲಿ ದಕ್ಷಿಣದ ಶ್ರೀಶೈಲ ಮುಡುಕುತೊರೆ ಬೆಟ್ಟ, ದಕ್ಷಿಣಕಾಶಿ ನಂಜನಗೂಡು ನಂಜುಂಡೇಶ್ವರ, ಇತಿಹಾಸ ಪ್ರಸಿದ್ಧ ಸೋಮನಾಥಪುರದ ಶ್ರೀ ಚನ್ನಕೇಶವ, ತಲಕಾಡು ಪಂಚಲಿಂಗೇಶ್ವರ, ತಿರುಮಕೂಡಲಿನ ತ್ರಿವೇಣಿ ಸಂಗಮ, ಪಿರಿಯಾಪಟ್ಟಣ ಬಳಿಯ ಗೋಲ್ಡನ್ ಟೆಂಪಲ್ ಹೀಗೆ ಹತ್ತು ಹಲವು ಪ್ರವಾಸಿ ತಾಣಗಳಿದ್ದು ಎಲ್ಲ ತಾಣಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಇಲ್ಲಿಂದ ಪಕ್ಕದ ಕೊಡಗು ಹಾಗೂ ಚಾಮರಾಜನಗರಕ್ಕೆ ತೆರಳಿ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಬರಲು ಅವಕಾಶವಿದೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications