Chikkamagaluru Rain: ಪ್ರವಾಸಿಗರಿಗೆ ಮಹತ್ವದ ಮಾಹಿತಿಗಳು
ಚಿಕ್ಕಮಗಳೂರು, ಜುಲೈ 22: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಮಳೆಯ ಕಾರಣಕ್ಕೆ ಕಾಫಿನಾಡಿನ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ನಿರ್ಬಂಧ ಹೇರಲಾಗಿದೆ. ಮಳೆ ಕಡಿಮೆಯಾಗುವ ತನಕ ಪ್ರವಾಸವನ್ನು ಮುಂದೂಡಿ ಎಂದು ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ.
ಮಳೆಯ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆ ಭೂ ಕುಸಿತ, ಮನೆ ಕುಸಿತ ಮುಂತಾದ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಪ್ರವಾಸಕ್ಕೆ ಆಗಮಿಸುವ ಜನರಿಗೆ ಹಲವು ಸೂಚನೆಗಳನ್ನು ನೀಡಿದ್ದಾರೆ.

ಮುಂಗಾರು ಮಳೆಗಾಲದ ಈ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವಿಶೇಷವಾಗಿ ಪಶ್ಚಿಮ ಘಟ್ಟ ಪ್ರದೇಶ, ಮಲೆನಾಡು ಇನ್ನಿತರೆ ಸ್ಥಳಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಸಾರ್ವಜನಿಕರು, ಪ್ರವಾಸಿಗರು ಸುರಕ್ಷತೆಯ ದೃಷ್ಟಿಯಿಂದ ತಪ್ಪದೇ ಪಾಲಿಸಬೇಕಾದ ಹಾಗೂ ಅನುಸರಿಸಬೇಕಾದ ಸಲಹಾ ಸೂಚನೆಗಳು ಎಂದು ಪೊಲೀಸರು ಕೆಲವು ಅಂಶಗಳನ್ನು ಹೇಳಿದ್ದಾರೆ.
ಪ್ರವಾಸಿಗರಿಗೆ ಸಲಹೆಗಳು
* ವಿಶೇಷವಾಗಿ ಪ್ರವಾಸಿ ತಾಣಗಳು ಹಾಗೂ ಜಲಪಾತಗಳ ಬಳಿ ವಿಪರೀತ ಮಳೆ ಬೀಳುತ್ತಿದ್ದು ಮಳೆಯ ಸಮಯದಲ್ಲಿ, ಜಲಪಾತಗಳು ಅಪಾಯಕಾರಿಯಾಗಬಹುದು. ಆದ್ದರಿಂದ ಪ್ರವಾಸಿಗರು/ ಸಂದರ್ಶಕರು ತೀವ್ರ ಎಚ್ಚರಿಕೆ ವಹಿಸಬೇಕು.
* ವೇಗವಾಗಿ ಚಲಿಸುವ ನೀರು, ಜಾರುವ ಮೇಲ್ಮೈಗಳು ಮತ್ತು ಮಂಜು ಕವಿದ ಕಡಿಮೆ ಗೋಚರತೆ ಇರುವ ಸ್ಥಳಗಳು ಅಪಘಾತಗಳು, ಗಾಯಗಳಿಗೆ ಹಾಗೂ ಸಾವು-ನೋವುಗಳಿಗೆ ಕಾರಣವಾಗಬಹುದು.
* ನದಿಗಳಲ್ಲಿ, ಜಲಪಾತಗಳಲ್ಲಿ ನೀರಿನ ಮಟ್ಟವು ಹಠಾತ್ ಆಗಿ ವೇಗವಾಗಿ ಏರಬಹುದು ಹಾಗೂ ಜನರನ್ನು ಕೊಚ್ಚಿಕೊಂಡು ಹೋಗಬಹುದಾದ ಸಂಭವವಿರುತ್ತದೆ.
* ಜಾರುವ ಭೂಪ್ರದೇಶ, ಪಾಚಿ ಗಟ್ಟಿರುವ ಸ್ಥಳಗಳು ಹಾಗೂ ಒದ್ದೆಯಾದ ಮೇಲ್ಮೈಗಳು ಜಾರುವಿಕೆ ಮತ್ತು ಬೀಳುವಿಕೆಗೆ ಕಾರಣವಾಗಬಹುದು.
* ಮಂಜು ಮುಸುಕಿದ ವಾತಾವರಣದಲ್ಲಿ ಹಾಗೂ ಭಾರಿ ಮಳೆಯು ಗೋಚರತೆಯನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಸ್ಥಳದ ನ್ಯಾವಿಗೇಟ್ ಮಾಡಲು & ನಡೆದಾಡಲು ಸಹ ಕಷ್ಟವಾಗುತ್ತದೆ.
* ಜಲಪಾತಗಳು ಮತ್ತು ನದಿ ಪಾತ್ರದ ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆ ಯಾಗುತ್ತಿರುವುದರಿಂದ ಬಲವಾದ ಪ್ರವಾಹ ಮತ್ತು ನೀರಿನ ಸೆಳೆತ ಹೆಚ್ಚಿದ್ದು ವೇಗವಾಗಿ ಚಲಿಸುವ ನೀರು ತುಂಬಾ ಅಪಾಯಕಾರಿಯಾಗಿರುತ್ತದೆ.
ಸುರಕ್ಷತಾ ಮುನ್ನೆಚ್ಚರಿಕೆಗಳು:-
* ಪ್ರವಾಸಿಗರು ತೀವ್ರ ಮಳೆ ಬೀಳುವ ಪ್ರೇಕ್ಷಣೀಯ, ಜಲಪಾತಗಳು ಅಥವಾ ಇತರೆ ಸ್ಥಳಗಳಿಗೆ ಈ ಸಮಯದಲ್ಲಿ ಭೇಟಿ ನೀಡದಿರುವುದು ಒಳ್ಳೆಯದು.
* ಚೂಪಾದ ಬಂಡೆ ಕಲ್ಲು, ಪಾಚಿ ಗಟ್ಟಿರುವ ಜಾರು ಮೇಲ್ಮೈ ಇರುವ ಸ್ಥಳಗಳಲ್ಲಿ ಮತ್ತು ಭಾರಿ ಮಳೆಯ ಸಮಯದಲ್ಲಿ ಜಲಪಾತಗಳ ಬಳಿ ನಡೆಯುವುದನ್ನು ಅಥವಾ ನೀರಿಗೆ ಇಳಿಯುವುದನ್ನು ತಪ್ಪಿಸಿ.
* ಸಾಧ್ಯವಾದಷ್ಟು ದೂರದಿಂದ ನೀರಿನ ಅಂಚಿನಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ.
* ಉತ್ತಮ ಎಳೆತವಿರುವ ಮಳೆಗಾಲಕ್ಕೆ ಹೊಂದಿಕೊಳ್ಳುವ ಬಟ್ಟೆ-ದಿರಿಸುಗಳು ಮತ್ತು ಸೂಕ್ತ ಪಾದರಕ್ಷೆಗಳನ್ನು ಧರಿಸಿ.
* ಹ್ಯಾಂಡ್ ರೈಲ್ಸ್ ಗಳನ್ನು ಬಳಸಿ ಮತ್ತು ಗೊತ್ತುಪಡಿಸಿದ ಸುರಕ್ಷತಾ ದಾರಿ ಅಥವಾ ಮಾರ್ಗಗಳನ್ನು ಮಾತ್ರವೇ ಅನುಸರಿಸಿ.
* ನದಿಪಾತ್ರಗಳ, ಜಲಪಾತ ಗಳ ಬಳಿ ಅತೀ ಸಮೀಪದಿಂದ ಸೆಲ್ಫಿ ಕ್ಲಿಕ್ಕಿಸುವುದು/ ಫೋಟೋ, ವಿಡಿಯೋ ತೆಗೆದುಕೊಳ್ಳುವುದನ್ನು ಮಾಡಬೇಡಿ.
* ನೀರಿನ ಅಂಚಿನಲ್ಲಿ ನಿಲ್ಲುವುದನ್ನು ತಪ್ಪಿಸಿ ಹಾಗೂ ನೀರಿನ ಒಳಗೆ ಇಳಿದು ಹುಚ್ಚಾಟವಾಡದಿರಿ ಅಥವಾ ಯಾವುದೇ ದುಸ್ಸಾಹಸಕ್ಕೆ ಪ್ರಯತ್ನಿಸದಿರಿ.
* ಸ್ಥಳೀಯ ವ್ಯಾಪ್ತಿಯ ಅಧಿಕಾರಿಗಳು ಮತ್ತು ಮಾರ್ಗದರ್ಶಿಗಳ ಸೂಚನೆಗಳನ್ನು ತಪ್ಪದೆ ಅನುಸರಿಸಿ.
* ಪ್ರವಾಸೋದ್ಯಮ, ಅರಣ್ಯ ಹಾಗೂ ಜಿಲ್ಲಾಡಳಿತ ವತಿಯಿಂದ ನೀಡಿರುವ ಸೂಚನೆಗಳು ಮತ್ತು ಎಚ್ಚರಿಕೆಗಳನ್ನು ಚಾಚುತಪ್ಪದೆ ಪಾಲಿಸಿ.
* ಹಳೆಯ ವೀಡಿಯೊಗಳು ಅಥವಾ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಹಂಚಿಕೊಳ್ಳಬೇಡಿ.
* ಬ್ಯಾರಿಕೇಡ್ ಗಳನ್ನು ದಾಟಲು ಪ್ರಯತ್ನಿಸಬೇಡಿ ಮತ್ತು ಸಾಹಸ ಚಟುವಟಿಕೆಗಳನ್ನು ಮಾಡಬೇಡಿ.
* ಸಾಹಸ ಚಟುವಟಿಕೆಗಳನ್ನು ಕೈಗೊಳ್ಳಲು ಇದು ಸಮಯವಲ್ಲ.
* ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಚಾಲನೆ ಮಾಡಿ. ರಕ್ಷಣಾತ್ಮಕ ಚಾಲನೆ ಅತೀ ಪ್ರಮುಖವಾಗಿದೆ.
* ಸಾರ್ವಜನಿಕರು, ಪ್ರವಾಸಿಗರು, ವಾಹನಗಳು ಹಾಗೂ ಜಾನುವಾರುಗಳನ್ನು ಸೇತುವೆ ಮಟ್ಟ ಅಥವಾ ಸೇತುವೆ ಮೇಲೆ ಹರಿಯುತ್ತಿರುವ ನೀರಿನಲ್ಲಿ ಬ್ಯಾರೀಕೆಡ್ ಗಳನ್ನು ದಾಟಿ ಚಲಿಸದಂತೆ/ ಸಾಗದಂತೆ ಎಚ್ಚರಿಕೆ ವಹಿಸುವುದು ಹಾಗೂ ಈಗಾಗಲೇ ಸೂಚಿಸಲಾಗಿರುವ ಬದಲಿ ಮಾರ್ಗಗಳಲ್ಲಿ ತೆರಳುವಂತೆ ತಿಳಿಸಿದೆ.
* ನಿಮ್ಮ ಹಾಗೂ ನಿಮ್ಮ ಪ್ರೀತಿ ಪಾತ್ರರ ಸುರಕ್ಷತೆಯ ಕುರಿತು ಕಾಳಜಿ ವಹಿಸಿ ಹಾಗೂ ಸದಾ ಎಚ್ಚರಿಕೆವಹಿಸಿ.
* ಯಾವುದೇ ತೊಂದರೆ ಸಮಸ್ಯೆಗಳಿಗೆ ಸಿಲುಕಿದಲ್ಲಿ ಅಥವಾ ಯಾವುದೇ ತುರ್ತು ಸಂದರ್ಭದಲ್ಲಿ ದಯವಿಟ್ಟು 112 ಗೆ ಕರೆ ಮಾಡಿ ಸಹಾಯ ಪಡೆಯಿರಿ.
ಸಾರ್ವಜನಿಕರು, ಪ್ರವಾಸಿಗರು ಸಂದರ್ಶಕರು ಎಲ್ಲಾ ಅಂಶಗಳನ್ನು ಅನುಸರಿಸಿ ಪಾಲನೆ ಮಾಡಿ ಯಾವುದೇ ಅನಾಹುತ ಅಥವಾ ಆಗು ಹೋಗುಗಳಿಗೆ ಅನುವು ಮಾಡಿಕೊಡದಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸರೊಂದಿಗೆ ಸಹಕರಿಸುವಂತೆ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications