Breaking; ಪ್ರವಾಸಿಗರಿಗೆ ಕಾವೇರಿ ನಿಸರ್ಗಧಾಮ ಬಂದ್
ಮಡಿಕೇರಿ, ನವೆಂಬರ್ 08; ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ. ತಾತ್ಕಾಲಿಕವಾಗಿ ಪ್ರವಾಸಿಗರು ಭೇಟಿ ನೀಡುವುದನ್ನು ಬಂದ್ ಮಾಡಲಾಗಿದೆ.
ವಲಯ ಅರಣ್ಯಾಧಿಕಾರಿ ಶಿವರಾಮ್ ಈ ಕುರಿತು ಮಾಹಿತಿ ನೀಡಿದ್ದಾರೆ. ನವೆಂಬರ್ 8ರ ಮಂಗಳವಾರದಿಂದಲೇ ಅನ್ವಯವಾಗುವಂತೆ ಪ್ರವಾಸಿಗರ ಭೇಟಿಯನ್ನು ಮುಂದಿನ ಆದೇಶದ ತನಕ ನಿರ್ಬಂಧಿಸಲಾಗಿದೆ.

ಕಾವೇರಿ ನಿಸರ್ಗಧಾಮದ ತೂಗು ಸೇತುವೆ ರಿಪೇರಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಆದ್ದರಿಂದ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ. ಆದರೆ ಹಾರಂಗಿ ಸಸ್ಯೋದ್ಯಾನ ಮತ್ತು ಸಾಕಾನೆ ಶಿಬಿರಕ್ಕೆ ಪ್ರವಾಸಿಗರು ಭೇಟಿ ನೀಡಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಅರಣ್ಯ ಇಲಾಖೆ ಕಾವೇರಿ ನಿಸರ್ಗಧಾಮದ ಉಸ್ತುವಾರಿ ನೋಡಿಕೊಳ್ಳುತ್ತದೆ. ಕೆಲವು ದಿನಗಳ ಹಿಂದೆ ಗುಜರಾತ್ನಲ್ಲಿ ತೂಗು ಸೇತುವೆ ಮುರಿದು ಬಿದ್ದ ದುರಂತ ನಡೆದ ಬಳಿಕ ಇಲ್ಲಿನ ಸೇತುವೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.
ನೂರಾರು ಪ್ರವಾಸಿಗರು ಆಗಮಿಸುತ್ತಾರೆ; ಕಾವೇರಿ ನಿಸರ್ಗಧಾಮವು ಮಡಿಕೇರಿಯಿಂದ ಸುಮಾರು 28 ಕಿ. ಮೀ. ದೂರದಲ್ಲಿದೆ. ಕಾವೇರಿ ನದಿಯ ತೀರದಲ್ಲಿ ಇರುವ ನಿಸರ್ಗಧಾಮ ದ್ವೀಪದ ಮಾದರಿಯಲ್ಲಿದೆ, ಈ ದ್ವೀಪವನ್ನು ತಲುಪಲು ತೂಗು ಸೇತುವೆ ಮೂಲಕವೇ ಸಾಗಬೇಕಿದೆ. ನೂರಾರು ಪ್ರವಾಸಿಗರು ಪ್ರತಿನಿತ್ಯ ನಿಸರ್ಗಧಾಮಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಿಪೇರಿ ಕಾರ್ಯ ಕೈಗೊಳ್ಳಲಾಗಿದೆ.
ಕಾವೇರಿ ನಿಸರ್ಗಧಾಮದ ಸುತ್ತಲಿನ ದಟ್ಟ ಕಾಡು, ಬಿದಿರನ ತೋಪು, ಹಚ್ಚಹಸಿರಿನ ಪಕೃತಿ ಸೌಂದರ್ಯ ಜನರನ್ನು ಸೆಳೆಯುತ್ತದೆ. ಇಲ್ಲಿ ಆನೆ ಸವಾರಿ ಹಾಗೂ ದೋಣಿ ವಿಹಾರ ಸಹ ಇದ್ದು, ರಜೆಯನ್ನು ಕಳೆಯಲು ಇದೊಂದು ಅತ್ಯುತ್ತಮ ಸ್ಥಳವಾಗಿದೆ.
ಕಾವೇರಿ ನಿಸರ್ಗಧಾಮದ ಸುತ್ತಲೂ ಬಿದಿರು, ತೇಗ, ಶ್ರೀಗಂಧ ಮುಂತಾದ ಮರಗಳಿವೆ. ವಿವಿಧ ಜಾತಿಯ ಹಕ್ಕಿಗಳು, ಚಿಟ್ಟೆಗಳನ್ನು ಇಲ್ಲಿ ಕಾಣಬಹುದಾಗಿದೆ. ಪ್ರಶಾಂತವಾಗಿ ಹರಿಯುವ ಕಾವೇರಿ ನದಿ ತೀರದಲ್ಲಿ ವಾಕಿಂಗ್ ಮಾಡುವುದು ವಿಶಿಷ್ಟ ಅನುಭವ ನೀಡುತ್ತದೆ.












Click it and Unblock the Notifications