ಕಾರವಾರದಲ್ಲಿ ಸಿಆರ್ಝಡ್ ನಿಯಮ ಉಲ್ಲಂಘನೆ ಆರೋಪ: ಕಡಲ ತೀರದ ಪ್ರವಾಸಿ ತಾಣಗಳ ತೆರವಿಗೆ ಸೂಚನೆ
ಕಾರವಾರದ ಕಡಲತೀರದಲ್ಲಿ ಸಿಆರ್ಝಡ್ ನಿಯಮ ಉಲ್ಲಂಘನೆಯಾಗಿರುವ ಆರೋಪ ಕೇಳಿಬಂದಿದ್ದು, ಅಭಿವೃದ್ಧಿಪಡಿಸಿರುವ ಪ್ರವಾಸಿ ತಾಣಗಳನ್ನು ನೆಲಸಮ ಮಾಡುವ ಆತಂಕ ಎದುರಾಗಿದೆ.
ಕಾರವಾರ, ಮಾರ್ಚ್, 15: ಕಡಲನಗರಿ ಕಾರವಾರ ಪ್ರವಾಸಿಗರ ಪಾಲಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಇಲ್ಲಿನ ಟ್ಯಾಗೋರ ಕಡಲತೀರದತ್ತ ಪ್ರತಿನಿತ್ಯವೂ ಆಗಮಿಸುವ ನೂರಾರು ಪ್ರವಾಸಿಗರು ಕಡಲತೀರದುದ್ದಕ್ಕೂ ಇರುವ ಪ್ರವಾಸಿತಾಣಗಳಲ್ಲಿ ಎಂಜಾಯ್ ಮಾಡುತ್ತಾರೆ. ಆದರೆ ಇದೀಗ ಕಡಲತೀರದಲ್ಲಿ ಸಿಆರ್ಝಡ್ ನಿಯಮ ಉಲ್ಲಂಘನೆಯಾಗಿರುವ ಆರೋಪ ಕೇಳಿಬಂದಿದ್ದು, ಅಭಿವೃದ್ಧಿ ಪಡಿಸಿರುವ ಪ್ರವಾಸಿ ತಾಣಗಳನ್ನು ನೆಲಸಮ ಮಾಡುವ ಆತಂಕ ಎದುರಾಗಿದೆ.
ಕಾರವಾರದ ರವೀಂದ್ರನಾಥ್ ಠಾಗೋರ್ ಕಡಲತೀರ ವಿಶಾಲವಾದ ಕಡಲತೀರವಾಗಿದೆ. ಆದರೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರ ಯಾವ ಕಾರ್ಯಗಳನ್ನು ಮಾಡಿಲ್ಲ ಎನ್ನುವ ಆರೋಪ ಈ ಹಿಂದೆ ಕೇಳಿಬಂದಿತ್ತು. ಹಲವು ವರ್ಷಗಳ ಹಿಂದೆ ಪ್ರವಾಸಿಗರನ್ನು ಆಕರ್ಷಿಸಲು ಕಾರವಾರದ ಕಡಲತೀರದಲ್ಲಿದ್ದ ಪುಟಾಣಿ ರೈಲು, ಹೋಟೆಲ್ಗಳು ಕೂಡ ನಂತರದ ದಿನದಲ್ಲಿ ಹಾಳಾಗಿವೆ. ಮತ್ತೆ ಹೊಸ ಚಟುವಟಿಕೆಗಳನ್ನು ಪ್ರಾರಂಭಿಸುವಲ್ಲಿ ಸರ್ಕಾರ ಕೂಡ ಆಸಕ್ತಿ ತೋರಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು.
ಆದರೆ ಕಳೆದ ಕೆಲ ವರ್ಷಗಳ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಎಸ್.ಎಸ್.ನಕುಲ್ ನೇತೃತ್ವದಲ್ಲಿ ಕಾರವಾರದ ಪ್ರವಾಸೋದ್ಯಮ ಬೆಳವಣಿಗೆಗೆ ಶ್ರಮಿಸಿದರು. ಈ ಮೂಲಕ ಕಡಲ ತೀರದಲ್ಲಿ ಫುಡ್ ಕೋರ್ಟ್, ರೆಸ್ಟೋರೆಂಟ್, ರಾಕ್ ಗಾರ್ಡನ್ ಸೇರಿದಂತೆ ಹಲವು ಚಟುವಟಿಕೆಗಳಿಗೆ ಅವಕಾಶ ನೀಡಿದ್ದರು. ಟೆಂಡರ್ ಮೂಲಕವೇ ಈ ಚಟುವಟಿಕೆಗೆ ಅವಕಾಶ ನೀಡಿದ್ದು, ಇದು ಇಂದು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಅಲ್ಲದೆ ಪ್ರವಾಸಿಗರ ಪಾಲಿಗೆ ಆಕರ್ಷಣೀಯ ಕೇಂದ್ರವಾಗಿಯೂ ರೂಪುಗೊಂಡಿತ್ತು.

30 ದಿನಗಳೊಳಗೆ ತೆರವು ಮಾಡುವಂತೆ ಸೂಚನೆ
ಆದರೆ ಇದೀಗ ಸ್ಥಳೀಯರು ಕಡಲತೀರದಲ್ಲಿ ಸಿ.ಆರ್.ಝಡ್ ನಿಯಮ ಉಲ್ಲಂಘಿಸಿ ಕಾಮಗಾರಿ ಮಾಡಲಾಗಿದೆ ಎಂದು ರಾಷ್ಟ್ರೀಯ ಹಸಿರು ಪೀಠದ ಮೊರೆ ಹೋಗಿದ್ದಾರೆ. ಇದರ ಪರಿಣಾಮ ಆಗಿನಿಂದ ರಾಜ್ಯ ಸಿ.ಆರ್.ಝಡ್ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ ಎನ್ನಲಾಗಿದೆ. ಸದ್ಯ ಸ್ಥಳೀಯ ಸಿ.ಆರ್.ಝಡ್ನವರು ಜಿಲ್ಲಾಡಳಿತಕ್ಕೆ ಕಡಲತೀರದಲ್ಲಿ ನಿರ್ಮಾಣವಾದ ಕಾಮಗಾರಿಗಳನ್ನು 30 ದಿನಗಳೊಳಗೆ ತೆರವು ಮಾಡುವಂತೆ ತಿಳಿಸಿದ್ದಾರೆ. ಅಲ್ಲದೆ ನೋಟಿಸ್ ಕೂಡ ನೀಡಿದ್ದು, ಇದೀಗ ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಕಾಮಗಾರಿ ನಡೆಸಿದ್ದ ಸಮಿತಿ
ಕಾರವಾರದಲ್ಲಿ ರಾಕ್ ಗಾರ್ಡನ್ ಸೇರಿದಂತೆ ಇತರೆ ಪ್ರವಾಸಿ ತಾಣಗಳನ್ನು ನಿರ್ಮಿಸುವುದು ಸಿಆರ್ಝಡ್ ನಿಯಮವನ್ನು ಉಲ್ಲಂಘಿಸಿದಂತೆ ಆಗುತ್ತದೆ. ಇದು ತಿಳಿದಿದ್ದರೂ ಕೂಡ ಅಧಿಕಾರಿಗಳು ಹಾಗೂ ಕಡಲತೀರ ಅಭಿವೃದ್ಧಿ ಸಮಿತಿ ಕಾಮಗಾರಿ ನಡೆಸಿತ್ತು. ಅಲ್ಲದೆ ರಾಕ್ ಗಾರ್ಡನ್ ಆದಾಯ ಯಾವುದೋ ಕಂಪನಿಗೆ ನೀಡಿದ್ದರಿಂದ ಸರ್ಕಾರಕ್ಕೆ ಇದರ ಲಾಭ ಸಿಗದಂತಾಗಿದೆ. ಇದೀಗ ರಾಕ್ ಗಾರ್ಡನ್ ತೆರವುಗೊಳಿಸಿದರೆ ಪ್ರವಾಸೋದ್ಯಮ ಚಟುವಟಿಕೆಗೂ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರಾದ ನಾಗರಾಜ ಹರಪ್ಪನಳ್ಳಿ ಹೇಳಿದ್ದಾರೆ.

ಪ್ರವಾಸೋದ್ಯಮಕ್ಕೆ ಹೊಡೆತ ಬೀಳುವ ಸಾಧ್ಯತೆ
ಇನ್ನು ಕಾರವಾರದ ಪ್ರವಾಸೋದ್ಯಮ ಅಭಿವೃದ್ದಿಗೆ ಪ್ರಮುಖವಾಗಿ ರಾಕ್ ಗಾರ್ಡನ್ ಫುಡ್ ಕೋರ್ಟ್, ರೆಸ್ಟೋರೆಂಟ್ಗಳು ಸಹಕಾರಿಯಾಗಿದ್ದವು. ಇದೀಗ ಈ ಕಾಮಗಾರಿಗಳ ಮೇಲೆ ಇದೀಗ ಸಿ.ಆರ್.ಝಡ್ ಕರಿನೆರಳು ಬಿದ್ದಿದೆ. ಕಾಮಗಾರಿ ತೆರವು ಮಾಡಿದರೆ ಕಾರವಾರದ ಪ್ರವಾಸೋದ್ಯಮದ ಮೇಲೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಸಿಆರ್ಝಡ್ ತನ್ನ ನಿಯಮಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಗಾದರೂ ಸಡಿಲಗೊಳಿಸಬೇಕು ಎನ್ನುವುದು ಪ್ರವಾಸಿಗರ ಆಶಯವಾಗಿದೆ.
ಕಾರವಾರದ ಕಡಲ ತೀರದಲ್ಲಿರುವ ಪ್ರವಾಸಿ ಚಟುವಟಿಕೆಗಳನ್ನೇ ನಂಬಿ ಹಲವರು ಉದ್ಯೋಗವನ್ನು ಕಂಡುಕೊಂಡಿದ್ದು, ಇದನ್ನು ತೆರವು ಮಾಡಿದರೆ ಅವರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಜಿಲ್ಲಾಡಳಿತ, ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಪರಿಶೀಲನೆ ನಡೆಸಲಾಗುವುದು
ಆದರೆ 30 ದಿನದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ರಾಷ್ಟ್ರೀಯ ಹಸಿರು ಪೀಠಕ್ಕೆ ಕಾಲಾವಕಾಶ ಕೇಳಿದ್ದೇವೆ. ಇದೀಗ ಸಿಆರ್ಝಡ್ ಸಡಲಿಕೆಯನ್ನು 100 ಮೀಟರ್ನಿಂದ 50 ಮೀ. ಇಳಿಕೆ ಮಾಡಿದೆ. ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿಯನ್ನು ತಿಳಿಸಲಿದ್ದು, ಈ ಕಾಮಗಾರಿಗಳು ಅದರೊಳಗೆ ಬರುವುದರ ಬಗ್ಗೆ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಗುವುದು. ಒಂದೊಮ್ಮೆ ತೆರವು ಮಾಡಲೇಬೇಕು ಎಂದಾದರೇ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಒಟ್ಟಾರೆ ಕಡಲತೀರದಲ್ಲಿ ಖಾಸಗಿ ಹೋಟೆಲ್ಗಳ ನಿರ್ಮಾಣಕ್ಕೆ ಹಾಗೂ ರಾಕ್ ಗಾರ್ಡನ್ ನಿರ್ಮಾಣಕ್ಕೆ ಅವಕಾಶವನ್ನು ಕೊಡಲಾಗಿದೆ. ಈ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ವ್ಯಯ ಮಾಡಲಾಗಿದೆ. ಹಲವರು ಇದರಿಂದ ಉದ್ಯೋಗವನ್ನು ಸಹ ಕಂಡುಕೊಂಡಿದ್ದಾರೆ. ಆದರೆ ಸಿ.ಆರ್.ಝಡ್ ನಿಯಮ ಉಲ್ಲಂಘಿಸಿ ಕಟ್ಟಡವನ್ನು ಕಟ್ಟಲಾಗಿದೆ ಎಂದು ಎಲ್ಲಾ ನಿರ್ಮಿಸಿದ ನಂತರ ಈಗ ಕೆಡವಲು ಮುಂದಾಗಿದ್ದಾರೆ.
ಆದರೆ ಈ ಹಾನಿಗೆ ಪರಿಹಾರ ಕೊಡುವವರು ಯಾರು? ಜಿಲ್ಲಾಡಳಿತವೇ ಈ ಅವಾಂತರಕ್ಕೆ ನೇರ ಹೊಣೆಯಾಗಲಿದೆಯೇ ಎನ್ನುವ ಚರ್ಚೆ ಸಹ ಪ್ರಾರಂಭವಾಗಿದೆ. ಜಿಲ್ಲಾಡಳಿತ ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.












Click it and Unblock the Notifications