ತಾಂತ್ರಿಕ ದೋಷಕ್ಕಾಗಿ ಕ್ಷಮೆ ಇರಲಿ: ಸರ್ಕಾರ ರಚಿಸುವ ಬಗ್ಗೆ ತಾಲಿಬಾನಿಗಳ ಮಾತಿದು!
ಕಾಬೂಲ್, ಸಪ್ಟೆಂಬರ್ 7: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಬಗ್ಗೆ ಇಡೀ ಜಗತ್ತಿನ ದೃಷ್ಟಿ ನೆಟ್ಟಿದೆ. ತಾಲಿಬಾನ್ ಸರ್ಕಾರ ಬಗ್ಗೆ ಅಧಿಕೃತವಾಗಿ ಘೋಷಿಸುವುದಕ್ಕೆ ಎಲ್ಲ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಾಲಿಬಾನ್ ವಕ್ತಾರ ಅಹ್ಮದ್ ಉಲ್ಲಾ ಮಟ್ಟಾಕಿ ಹೇಳಿದ್ದಾರೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.
ಇದಕ್ಕೂ ಮೊದಲೇ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ, ತಾಂತ್ರಿಕ ಸಮಸ್ಯೆಗಳಷ್ಟೇ ಬಾಕಿ ಉಳಿದಿವೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ತಿಳಿಸಿರುವ ಬಗ್ಗೆ ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ. ತಾಲಿಬಾನ್ ಮತ್ತೊಂದು ಮೂಲಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯ ಘೋಷಣೆಯು ಶೀಘ್ರದಲ್ಲೇ ಆಗಲಿದೆ ಎಂದು ತಿಳಿದು ಬಂದಿದೆ.
ಒಂದೇ ಕ್ಲಾಸಿನ ಹುಡುಗ-ಹುಡುಗಿಯರ ಮಧ್ಯೆ ಪರದೆ; ಅಫ್ಘಾನ್ ವಿವಿಗಳಲ್ಲಿ ಇದೆಂಥಾ ದುಸ್ಥಿತಿ?
ಕಳೆದ ಆಗಸ್ಟ್ 15ರಂದು ಕಾಬೂಲ್ ನಗರಕ್ಕೆ ಲಗ್ಗೆಯಿಟ್ಟ ತಾಲಿಬಾನಿಗಳು ಸಂಪೂರ್ಣ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದರು. ಯುಎಸ್ ಸೇನೆ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಅಂದಿಗೆ ಪತನವಾಯಿತು. ಇಡೀ ದೇಶದಲ್ಲಿ ತಾಲಿಬಾನ್ ಆಳ್ವಿಕೆ ಶುರುವಾಯಿತು. ಈ ಮಧ್ಯೆ ಕಾಬೂಲ್ ಉತ್ತರ ಭಾಗದಲ್ಲಿರುವ ಪಂಜ್ ಶೀರ್ ಪ್ರದೇಶ ಮಾತ್ರ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ (ಎನ್ಆರ್ಎಫ್) ನಿಯಂತ್ರಣದಲ್ಲಿದೆ. ಎನ್ಆರ್ಎಫ್ ಮತ್ತು ತಾಲಿಬಾನ್ ನಡುವೆ ನಿರಂತರ ಸಂಘರ್ಷ ನಡೆಯುತ್ತಿದೆ. ಸೋಮವಾರ ಪಂಜ್ ಶೀರ್ ಪ್ರದೇಶವನ್ನು ತನ್ನ ಹತೋಟಿಗೆ ತೆಗೆದುಕೊಂಡಿರುವುದಾಗಿ ತಾಲಿಬಾನ್ ಹೇಳಿದರೂ, ಎನ್ಆರ್ಎಫ್ ಅದನ್ನು ನಿರಾಕರಿಸಿದೆ.
ಅಫ್ಘಾನಿಸ್ತಾನದಲ್ಲಿ "ರಾಷ್ಟ್ರೀಯ ದಂಗೆ"; ಪಂಜ್ ಶೀರ್ ನಾಯಕನ ಆಡಿಯೋ ಸಂದೇಶ
ಅಫ್ಘಾನಿಸ್ತಾನದ ಪಂಜ್ ಶೀರ್ ಪ್ರದೇಶದಲ್ಲಿ ತಾಲಿಬಾನ್ ಮತ್ತು ಎನ್ಆರ್ಎಫ್ ನಡುವಿನ ಸಂಘರ್ಷ ಹೇಗಿದೆ?, ಸರ್ಕಾರ ರಚನೆ ಪ್ರಕ್ರಿಯೆಗೆ ತಾಲಿಬಾನ್ ಹೇಳುವಂತೆ ಎದುರಾಗಿರುವ ತಾಂತ್ರಿಕ ಕಾರಣವೇನು?, ತಾಲಿಬಾನ್ ಸರ್ಕಾರ ರಚನೆ ವೇಳೆ ಉಪಸ್ಥಿತಿ ವಹಿಸುವಂತೆ ಯಾವ ರಾಷ್ಟ್ರಗಳಿಗೆಲ್ಲ ಆಹ್ವಾನ ನೀಡಿದೆ?, ಈ ರಾಷ್ಟ್ರಗಳಿಗೆ ಆಹ್ವಾನ ನೀಡುವುದರ ಹಿಂದಿನ ಅಸಲಿ ಕಾರಣಗಳ ಕುರಿತಾಗಿ ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.
ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಘೋಷಣೆ ವಿಳಂಬ
ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಬಹುತೇಕ ಮುಗಿದಿದೆ. ಅಂತಿಮ ಹಂತದ ಘೋಷಣೆಯೊಂದೇ ಬಾಕಿ ಉಳಿದುಕೊಂಡಿದ್ದು, ಈ ವಿಷಯದಲ್ಲಿ ಕೆಲವು ದಿನಗಳಿಂದ ವಿಳಂಬ ಧೋರಣೆ ಪ್ರದರ್ಶಿಸಲಾಗುತ್ತಿದೆ. ಸರ್ಕಾರ ರಚನೆ ಘೋಷಿಸುವ ಬಗ್ಗೆ ಈವರೆಗೂ ಯಾವುದೇ ವಕ್ತಾರರು ಸ್ಪಷ್ಟವಾಗಿ ಹೇಳುವುದಕ್ಕೆ ಸಾಧ್ಯವಾಗಿಲ್ಲ. ಏಕೆಂದರೆ ಅಧಿಕಾರ ಹಂಚಿಕೆ ವಿಷಯದಲ್ಲಿ ತಾಲಿಬಾನ್ ಮತ್ತು ಹಕ್ಕಾನಿ ನೆಟವರ್ಕ್ ಮಧ್ಯೆ ಭಿನ್ನಾಭಿಪ್ರಾಯ ಮೂಡಿರುವುದು ಈ ವಿಳಂಬಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)ಗೆ ಸೇರಲು ತಾಲಿಬಾನ್ ಸಂಘಟನೆಯು ಬಯಸುತ್ತದೆ ಎಂದು ತಾಲಿಬಾನ್ ವಕ್ತಾರ ಮುಜಾಹಿದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ 'ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ' (ಟಿಟಿಪಿ) ಕುರಿತು ಇಸ್ಲಾಮಾಬಾದ್ನ ಆತಂಕವನ್ನು ತಾಲಿಬಾನ್ ಪರಿಹರಿಸಲಿದೆ ಎಂದು ಅವರು ಮಾಹಿತಿ ನೀಡಿದರು, ಎಂದು ಸಮಾ ನ್ಯೂಸ್ ವರದಿ ಮಾಡಿದೆ. ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ) ಮುಖ್ಯ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಮತ್ತು ತಾಲಿಬಾನ್ ಹಿರಿಯ ನಾಯಕ ಮುಲ್ಲಾ ಅಬ್ದುಲ್ ಘನಿ ಬರಾದರ್ ನಡುವೆ ಮುಂಬರುವ ದಿನಗಳಲ್ಲಿ ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ತಾಲಿಬಾನ್ ವಕ್ತಾರ ಮುಜಾಹಿದ್ ಖಚಿತಪಡಿಸಿದ್ದಾರೆ.
ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಗುರಿಯೇನು?
CPEC ಚೀನಾದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ 'ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್' ನ ಭಾಗವಾಗಿದೆ. ಇದು ಆಗ್ನೇಯ ಏಷ್ಯಾದ ಕರಾವಳಿ ಭಾಗಗಳಲ್ಲಿ ದೇಶದ ಐತಿಹಾಸಿಕ ವ್ಯಾಪಾರ ಮಾರ್ಗಗಳನ್ನು ಆಧುನೀಕರಿಸುವ ಗುರಿ ಹೊಂದಲಾಗಿದೆ. 2015ರಲ್ಲಿ ಚೀನಾ ಘೋಷಿಸಿದ ಈ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗಾಗಿ 46 ಬಿಲಿಯನ್ ಯುಎಸ್ ಡಾಲರ್ ಹಣವನ್ನು ವಿನಿಯೋಗಿಸಲಿದೆ. CPEC ಯೋಜನೆ ಮೂಲಕ ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ಪ್ರಭಾವವನ್ನು ಎದುರಿಸಲು ಪಾಕಿಸ್ತಾನದಲ್ಲಿ ಮತ್ತು ಮಧ್ಯ ಮತ್ತು ದಕ್ಷಿಣ ಏಷ್ಯಾದಾದ್ಯಂತ ತನ್ನ ಪ್ರಭಾವವನ್ನು ವಿಸ್ತರಿಸುವ ಗುರಿಯನ್ನು ಚೀನಾ ಹಾಕಿಕೊಂಡಿದೆ.
ಚೀನಾದ CPEC ಯೋಜನೆಯು ಪಾಕಿಸ್ತಾನದ ದಕ್ಷಿಣ ಗ್ವಾದರ್ ಬಂದರನ್ನು (ಕರಾಚಿಯಿಂದ 626 ಕಿಲೋಮೀಟರ್ ಪಶ್ಚಿಮಕ್ಕೆ) ಅರುಬಿಯನ್ ಸಮುದ್ರದ ಬಲೂಚಿಸ್ತಾನದಲ್ಲಿ ಚೀನಾದ ಪಶ್ಚಿಮ ಕ್ಸಿಂಜಿಯಾಂಗ್ ಪ್ರದೇಶಕ್ಕೆ ಸಂಪರ್ಕಿಸುತ್ತದೆ. ಇದು ಚೀನಾ ಮತ್ತು ಮಧ್ಯಪ್ರಾಚ್ಯದ ನಡುವಿನ ಸಂಪರ್ಕವನ್ನು ಸುಧಾರಿಸಲು ರಸ್ತೆ, ರೈಲು ಮತ್ತು ತೈಲ ಪೈಪ್ಲೈನ್ ಲಿಂಕ್ಗಳನ್ನು ರಚಿಸುವ ಯೋಜನೆಗಳನ್ನು ಒಳಗೊಂಡಿದೆ.
ತಾಲಿಬಾನ್ ಸರ್ಕಾರ ರಚನೆ ಹಿಂದೆ ನಿಂತ ಐಎಸ್ಐ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಹಿಂದೆ ಇಸ್ಲಮಾಬಾದ್ ಬಹುಮುಖ್ಯ ಪಾತ್ರ ವಹಿಸುತ್ತದೆ. ಪಾಕಿಸ್ತಾನ ಗುಪ್ತಚರ ಇಲಾಖೆಯೇ ಸೃಷ್ಟಿಕರ್ತ ಮತ್ತು ಬೆಂಬಲವಾಗಿ ನಿಂತಿದೆ ಎಂದು ಸೆರ್ಗಿಯೋ ರೆಸ್ಟೆಲ್ಲಿ ವರದಿಯಲ್ಲಿ ಬರೆದಿದ್ದಾರೆ. ತಾಲಿಬಾನ್ ಸರ್ಕಾರದ ರಚನೆಯು ಕಾಬೂಲ್ನಲ್ಲಿ ಹಿಡಿತ ಸಾಧಿಸುವ ಇಸ್ಲಾಮಾಬಾದ್ ಪ್ರಯತ್ನವಾಗಿದ್ದು, ಈ ಪ್ರದೇಶದಲ್ಲಿ ಹಿಡಿತ ಸಾಧಿಸುವ ತನ್ನ ಕಾರ್ಯತಂತ್ರದ ಯೋಜನೆಯ ಭಾಗವಾಗಿದೆ ಎಂದು ರೆಸ್ಟೆಲ್ಲಿ ಹೇಳಿದ್ದಾರೆ. ಅಲ್ಲದೇ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ತಾಲಿಬಾನ್ ಸಂಘಟನೆಗೆ ಇದೇ ಐಎಸ್ಐ ಸಹಕಾರವನ್ನು ನೀಡಿತ್ತು ಎಂದು ಗೊತ್ತಾಗಿದೆ.
ಅಫ್ಘಾನಿಸ್ತಾನದಲ್ಲಿ ಐಸಿಆರ್ಸಿ 30 ವರ್ಷಗಳ ಸೇವೆ
ಅಂತಾರಾಷ್ಟ್ರೀಯ ರೆಡ್ಕ್ರಾಸ್ ಸಮಿತಿಯು (ಐಸಿಆರ್ಸಿ) ಅಧ್ಯಕ್ಷ ಮೌರೆರ್ ಸೋಮವಾರ ತಾಲಿಬಾನ್ ನಾಯಕತ್ವವನ್ನು ಭೇಟಿಯಾಗಿ ಅಫ್ಘಾನ್ ಜನರಿಗೆ ನೆರವು ವಿಸ್ತರಿಸುವ ಚಾರಿಟಿ ಯೋಜನೆಗಳ ಬಗ್ಗೆ ಚರ್ಚಿಸಿದರು. ಕಳೆದ ಭಾನುವಾರವಷ್ಟೇ, ಅಫ್ಘಾನಿಸ್ತಾನಕ್ಕೆ ಮೂರು ದಿನಗಳ ಭೇಟಿ ನೀಡಿದ ಅವರು, ವೈದ್ಯಕೀಯ ಮತ್ತು ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿದರು. ನಂತರ ಅಫ್ಘಾನ್ ಅಧಿಕಾರಿಗಳನ್ನು ಭೇಟಿ ಮಾಡಿದರು. "ನಾನು ಇಂದು ಮುಲ್ಲಾ ಬರಾದಾರ್ ಮತ್ತು ತಾಲಿಬಾನ್ ನಾಯಕರನ್ನು ಭೇಟಿಯಾಗಿದ್ದೆವು. ನಾವು ಅಫ್ಘಾನಿಸ್ತಾನದಲ್ಲಿ ಜೀವ ಉಳಿಸುವ ಕೆಲಸವನ್ನು ಅಳೆಯುವ @ICRC ಯ ಯೋಜನೆಗಳ ಬಗ್ಗೆ ಮಾತನಾಡಿದ್ದೇವೆ. ತಟಸ್ಥ, ನಿಷ್ಪಕ್ಷಪಾತ ಮತ್ತು ಸ್ವತಂತ್ರ ಮಾನವೀಯತೆ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುವುದು" ಎಂದು ಮೌರೆರ್ ಟ್ವೀಟ್ ಮಾಡಿದ್ದಾರೆ. ಕಳೆದ 30 ವರ್ಷಗಳಿಂದ ಐಸಿಆರ್ಸಿ ಅಫ್ಘಾನ್ ಜನರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಈ ಕಾರ್ಯ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಸ್ಥರು ಹೇಳಿದ್ದಾರೆ.
ಅಫ್ಘಾನ್ ನೆಲದಲ್ಲಿ 20 ವರ್ಷಗಳ ಸಂಘರ್ಷ ಅಂತ್ಯ
ಅಫ್ಘಾನಿಸ್ತಾನದಲ್ಲಿ ಸರಿಯಾಗಿ 23 ದಿನಗಳ ಹಿಂದೆ ಕಾಬೂಲ್ ನಗರಕ್ಕೆ ನುಗ್ಗಿದ ತಾಲಿಬಾನಿಗಳು ಇಡೀ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಅಂತ್ಯವಾಗುತ್ತಿದ್ದಂತೆ ದೇಶದಲ್ಲಿ ಕ್ರೌರ್ಯ ಮಿತಿ ಮೀರಿತು. ಒಂದು ದಿಕ್ಕಿನಲ್ಲಿ ವಿದೇಶಿಗರು ತಮ್ಮ ದೇಶಗಳಿಗೆ ವಾಪಸ್ ಆಗುತ್ತಿದ್ದರೆ ಕಾಬೂಲ್ ವಿಮಾನ ನಿಲ್ದಾಣವು ಸ್ಥಳಾಂತರ ಕೇಂದ್ರವಾಗಿ ಬದಲಾಯಿತು. ಆಗಸ್ಟ್ 15ರಿಂದ ಆಗಸ್ಟ್ 31ರವರೆಗೆ ಸಮರೋಪಾದಿಯಲ್ಲಿ ಸ್ಥಳಾಂತರ ಕಾರ್ಯಾಚರಣೆ ನಡೆಯಿತು. ಅಂತಿಮವಾಗಿ ಆಗಸ್ಟ್ 31ರಂದು ಯುಎಸ್ ಸೇನೆಯು ತನ್ನ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿತು. ಅಂದಿಗೆ ಅಫ್ಘಾನಿಸ್ತಾನದಲ್ಲಿ ಯುಎಸ್ ನಡೆಸಿದ 20 ವರ್ಷಗಳ ಸಂಘರ್ಷ ಮುಕ್ತಾಯಗೊಂಡು ಸಂಪೂರ್ಣ ದೇಶವು ತಾಲಿಬಾನ್ ಹಿಡಿತಕ್ಕೆ ಸಿಲುಕಿತು.
ಎನ್ಆರ್ಎಫ್ ಮತ್ತು ತಾಲಿಬಾನ್ ನಡುವೆ ಕದನ
ತಾಲಿಬಾನ್ ಮತ್ತು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನದ ನಡುವಿನ ಸಂಘರ್ಷದ ಬಗ್ಗೆ ಎನ್ಆರ್ಎಫ್ನ ವಕ್ತಾರ ಫಾಹಿಮ್ ದಸ್ತಿ ಹೇಳಿಕೆ ನೀಡಿದ್ದರು. "ಇಂದು ಬೆಳಿಗ್ಗೆಯಿಂದೀಚೆಗೆ ಪಂಜ್ ಶೀರ್ನ ವಿವಿಧ ಜಿಲ್ಲೆಗಳಲ್ಲಿ 600 ಕ್ಕೂ ಅಧಿಕ ಮಂದಿ ತಾಲಿಬಾನ್ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಹಾಗೆಯೇ ಸಾವಿರಕ್ಕೂ ಅಧಿಕ ತಾಲಿಬಾನ್ ಭಯೋತ್ಪಾದಕರನ್ನು ಬಂಧನ ಮಾಡಲಾಗಿದೆ ಅಥವಾ ಅವರಾಗಿಯೇ ಶರಣಾಗಿದ್ದಾರೆ," ಎಂದು ತಿಳಿಸಿದ್ದರು. ಹಾಗೆಯೇ ತಾಲಿಬಾನ್ಗೆ ಅಫ್ಘಾನಿಸ್ತಾನದ ಇತರೆ ಪ್ರಾಂತ್ಯಗಳಿಂದ ಸಲಕರಣೆಗಳನ್ನು ಪಡೆಯುವಲ್ಲಿ ಸಮಸ್ಯೆ ಉಂಟಾಗಿದೆ ಎಂದು ಕೂಡಾ ಎನ್ ಆರ್ ಎಫ್ನ ವಕ್ತಾರರು ಹೇಳಿದ್ದರು.
ಅಫ್ಘಾನ್ ಕಟ್ಟಲು ಆಕ್ರಮಣಕಾರರಿಂದ ಸಾಧ್ಯವಿಲ್ಲ
"ಆಫ್ಘಾನಿಸ್ತಾನದ ಪ್ರಜೆಗಳು ಮೊದಲಿಗೆ ತಿಳಿದುಕೊಳ್ಳಬೇಕಾದ ಅಂಶವೆಂದರೆ ಆಕ್ರಮಣಕಾರರು ಯಾವುದೇ ಕಾರಣಕ್ಕೂ ನಮ್ಮ ದೇಶವನ್ನು ಕಟ್ಟುವುದಕ್ಕೆ ಸಾಧ್ಯವಿಲ್ಲ. ನಮ್ಮ ದೇಶದ ಪುನರ್ ನಿರ್ಮಾಣವು ನಮ್ಮ ಜವಾಬ್ದಾರಿ ಆಗಿರುತ್ತದೆ. ನಮ್ಮಿಂದ ಹಾಗೂ ನಮ್ಮ ಜನರಿಂದಲೇ ಆ ಕಾರ್ಯ ಆಗಬೇಕಿದೆ," ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.
ಪಂಜ್ ಶೀರ್ ಪ್ರಾಂತ್ಯ ವಶಕ್ಕೆ ಪಡೆದ ಬಗ್ಗೆ ತಾಲಿಬಾನ್ ಘೋಷಣೆ
ತಾಲಿಬಾನ್ ಸಂಘಟನೆಯು ಪಂಜ್ ಶೀರ್ ಪ್ರಾಂತ್ಯವನ್ನು ಸಹ ಸಂಪೂರ್ಣ ಹತೋಟಿಗೆ ತೆಗೆದುಕೊಂಡಿರುವುದಾಗಿ ಘೋಷಿಸಿದೆ. ಕಾಬೂಲ್ ನಗರದಿಂದ ಉತ್ತರದಲ್ಲಿರುವ ಪಂಜ್ ಶೀರ್ ಪ್ರಾಂತ್ಯವನ್ನು ತಾಲಿಬಾನ್ ವಿರೋಧಿ ಬಣವು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಪಂಜ್ ಶೀರ್ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ತಾಲಿಬಾನ್ ಸಾವಿರಾರು ಭಯೋತ್ಪಾದಕರನ್ನು ಕಳುಹಿಸಿ ಕೊಟ್ಟಿದೆ. ಪಂಜ್ ಶೀರ್ ಪ್ರದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತಿದ್ದು, ಇಡೀ ದೇಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ತಂತ್ರ ರೂಪಿಸಲಾಗುತ್ತಿದೆ.
ಕಳೆದ 1996 ರಿಂದ 2001ರ ಅವಧಿಯಲ್ಲಿ ಸರ್ಕಾರ ರಚಿಸಿ ಆಡಳಿತ ನಡೆಸಿದ ತಾಲಿಬಾನ್, ಪಂಜ್ ಶೀರ್ ಪ್ರಾಂತ್ಯವನ್ನು ಮಾತ್ರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇತ್ತೀಚಿಗೆ ಯುಎಸ್ ಸೇನೆಯು ಅಫ್ಘಾನಿಸ್ತಾನದಿಂದ ವಾಪಸ್ ಆದ ಬೆನ್ನಲ್ಲೇ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ ತಾಲಿಬಾನ್ ನಿಯಂತ್ರಣ ಹೊಂದಿದೆ. ಅದಾಗ್ಯೂ, ಪಂಜ್ ಶೀರ್ ಪ್ರಾಂತ್ಯದಲ್ಲಿ ಮಾತ್ರ ತಾಲಿಬಾನ್ ಸಂಘಟನೆ ವಿರುದ್ಧ ನ್ಯಾಷನಲ್ ರೆಸಿಸ್ಟನ್ಸ್ ಫ್ರೆಂಟ್ ಆಫ್ ಅಫ್ಘಾನಿಸ್ತಾನ ಪ್ರಾಬಲ್ಯವನ್ನು ಸಾಧಿಸುತ್ತಲೇ ಬಂದಿದೆ.
ರಷ್ಯಾ, ಚೀನಾ, ಕ್ವಾತಾರ್, ಟರ್ಕಿ ಮತ್ತು ಪಾಕಿಸ್ತಾನಕ್ಕೆ ಆಹ್ವಾನ
ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ ಕಠಿಣ ಪೈಪೋಟಿ ನೀಡುತ್ತಿರುವ ಪಂಜ್ ಶೀರ್ ಪ್ರಾಂತ್ಯವನ್ನು ವಶಕ್ಕೆ ಪಡೆದುಕೊಂಡ ಬೆನ್ನಲ್ಲೇ ಹೊಸ ಸರ್ಕಾರ ರಚಿಸಲಾಗುವುದು ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಪ್ರಕ್ರಿಯೆಯು ಬಹುತೇಕ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಈಗಾಗಲೇ ತಾಲಿಬಾನ್ ಸಂಘಟನೆಯಿಂದ ಚೀನಾ, ರಷ್ಯಾ, ಟರ್ಕಿ, ಕ್ವಾತಾರ, ಪಾಕಿಸ್ತಾನ ಮತ್ತು ಇರಾಕ್ ರಾಷ್ಟ್ರಗಳಿಗೆ ಅಹ್ವಾನ ನೀಡಲಾಗಿದೆ. ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸುವ ಬಗ್ಗೆ ಸೋಮವಾರ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಕಾಬೂಲ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಯುದ್ಧ ಅಂತ್ಯಗೊಂಡಿದ್ದು, ಸ್ಥಿರ ಸರ್ಕಾರ ರಚಿಸುವ ಭರವಸೆಯಿದೆ ಎಂದರು. ಅಲ್ಲದೇ ಯಾರಾದರೂ ಆಯುಧಗಳನ್ನು ಮತ್ತೆ ತಮ್ಮ ಕೈಗಳಲ್ಲಿ ಹಿಡಿದರೆ ಅಂಥವರು ಜನವಿರೋಧಿ ಮತ್ತು ದೇಶವಿರೋಧಿಗಳಾಗುತ್ತಾರೆ," ಎಂದು ಹೇಳಿದರು.
ಅಫ್ಘಾನಿಸ್ತಾನದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕಾಗಿ ಹೋರಾಟ
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಮಹಿಳೆಯರ ಗುಂಪೊಂದು ಸೋಮವಾರ ಬಲ್ಖ್ ಪ್ರಾಂತ್ಯದಲ್ಲಿ ಕಳೆದ 20 ವರ್ಷಗಳ ಸಾಧನೆಗಳನ್ನು ಸಂರಕ್ಷಿಸಲು ಮತ್ತು ಭವಿಷ್ಯದ ಅಫ್ಘಾನಿಸ್ತಾನ ಸರ್ಕಾರದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿತು. ಅಫ್ಘಾನಿಸ್ತಾನದ ಸರ್ಕಾರದಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಬೇಕು. ಮಹಿಳೆಯರಿಲ್ಲದ ಹೊಸ ಸರ್ಕಾರ ಅರ್ಥಹೀನವಾಗಲಿದೆ ಎಂದು ಪ್ರತಿಭಟನಾಕಾರರು ವ್ಯಕ್ತಪಡಿಸಿರುವ ಬಗ್ಗೆ ಖಾಮಾ ಪ್ರೆಸ್ ವರದಿ ಮಾಡಿದೆ. ಟೋಲೋ ಸುದ್ದಿ ವಾಹಿನಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮಹಿಳೆಯರಿಗೆ ಸರ್ಕಾರದಲ್ಲಿ ಸ್ಥಾನ ನೀಡಬೇಕು ಎಂದು ಪೋಸ್ಟರ್ ಹಿಡಿದು ಘೋಷಣೆ ಕೂಗುತ್ತಿರುವುದು ಸ್ಪಷ್ಟವಾಗಿದೆ.