ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಜೈಲಿನ ಅನುಭವದ ನುಡಿ
ನವದೆಹಲಿ, ಜನವರಿ 11: ಸುಧಾ ಭಾರದ್ವಾಜ್. ಭಾರತದ ಪ್ರಸಿದ್ಧ ಸಾಮಾಜಿಕ ಹೋರಾಟಗಾರ್ತಿಯರ ಸಾಲಿನಲ್ಲಿ ಗುರುತಿಸಿಕೊಂಡಿರುವ ಇವರು ಮೂರು ವರ್ಷಗಳ ಸೆರೆವಾಸದ ನಂತರ ಹೊಸ ಬದುಕು ಕಟ್ಟಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
2018ರ ಜಾತಿ ಆಧಾರಿತ ಹಿಂಸಾಚಾರದ ಘಟನೆಯಲ್ಲಿ ಪಾತ್ರವಹಿಸಿರುವುದು ಮತ್ತು ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ಅಂತ್ಯದವರೆಗೂ ಮುಂಬೈ ತೊರೆಯುವಂತಿಲ್ಲ ಎಂದು ಜಾಮೀನು ಷರತ್ತುಗಳಲ್ಲಿ ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 2018ರ ಜೂನ್ ತಿಂಗಳಿನಿಂದ 16 ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿತ್ತು. ಈ ಪೈಕಿ ಭಾರತದ ಕೆಲವು ಗೌರವಾನ್ವಿತ ವಿದ್ವಾಂಸರು, ವಕೀಲರು, ಶಿಕ್ಷಣ ತಜ್ಞರು, ಕಾರ್ಯಕರ್ತರು ಮತ್ತು ಹಿರಿಯ ಮೂಲಭೂತ ಕವಿ ಸೇರಿದ್ದರು. ಅವರೆಲ್ಲರಿಗೂ ವ್ಯಾಪಕವಾದ ಭಯೋತ್ಪಾದನಾ-ವಿರೋಧಿ ಕಾನೂನಿನ ಅಡಿಯಲ್ಲಿ ಪದೇ ಪದೇ ಜಾಮೀನು ನಿರಾಕರಿಸಲಾಗಿತ್ತು. ಅಂಥವರಲ್ಲಿ 84 ವರ್ಷದ ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಸ್ಟಾನ್ ಸ್ವಾಮಿ ಕಳದ ವರ್ಷವಷ್ಟೇ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು.

ಡಿಸೆಂಬರ್ 10ರಂದು ಸುಧಾ ಭಾರದ್ವಾಜ್ ಬಿಡುಗಡೆ:
ಈ ಹಿಂದೆ ದೆಹಲಿಯ ಪ್ರಮುಖ ವಿಶ್ವವಿದ್ಯಾಲಯದಲ್ಲಿ ಕಾನೂನು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಧಾ ಭಾರದ್ವಾಜ್, ಮತ್ತೆ ತಮ್ಮ ಕೆಲಸಕ್ಕೆ ಮರಳಲು ಅಥವಾ ಹೊರವಲಯದಲ್ಲಿ ಇರುವ ಫರಿದಾಬಾದ್ಗೆ ಹೋಗಲು ಸಾಧ್ಯವಿಲ್ಲ. 1,000 ಕಿಲೋ ಮೀಟರ್ ದೂರದ ಭಿಲಾಯಿಯಲ್ಲಿ ಮನೋವಿಜ್ಞಾನವನ್ನು ಅಧ್ಯಯನ ಮಾಡುತ್ತಿರುವ ತನ್ನ ಮಗಳನ್ನು ಭೇಟಿ ಮಾಡುವುದಕ್ಕೂ ಸಾಧ್ಯವಾಗಿರಲಿಲ್ಲ. ಡಿಸೆಂಬರ್ 10ರಂದು ಬಿಡುಗಡೆಯಾದ ನಂತರ ಸುಧಾ ಭಾರದ್ವಾಜ್ ಮತ್ತು ಮಗಳು ಮತ್ತೆ ಒಂದಾಗಿದ್ದಾರೆ.
ಮುಂಬೈನಲ್ಲಿ ಬದುಕು ಕಟ್ಟಿಕೊಳ್ಳುವ ಹುಡುಕಾಟ:
60 ವರ್ಷದ ಸುಧಾ ಭಾರದ್ವಾಜ್ ಅವರು ಬಿಡುಗಡೆಯಾದ ನಂತರ ತಮ್ಮ ಮೊದಲ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದು, "ಸಣ್ಣ ಜೈಲಿನಿಂದ ನಾನು ಈಗ ಮುಂಬೈ ಎಂಬ ದೊಡ್ಡ ಜೈಲಿನಲ್ಲಿ ವಾಸಿಸುತ್ತಿದ್ದೇನೆ," ಎಂದು ಹೇಳಿದರು. "ನಾನು ಮೊದಲು ಕೆಲಸ ಹುಡುಕಬೇಕು, ಉಳಿದುಕೊಳ್ಳುವುದಕ್ಕೆ ಒಂದು ಮನೆಯನ್ನು ಹುಡುಕಬೇಕು, ಅಲ್ಲಿವರೆಗೂ ನನ್ನ ಮಗಳು ಆಕೆಯ ಸ್ನೇಹಿತೆಯ ಜೊತೆಗೆ ಇರುತ್ತಾಳೆ," ಎಂದು ಹೇಳಿದ್ದಾರೆ.
ಛತ್ತೀಸ್ಗಢದ ಬಡ-ಶೋಷಿತ ವರ್ಗಗಳ ಪರ ಹೋರಾಟ:
ಮ್ಯಾಸಚೂಸೆಟ್ಸ್ನಲ್ಲಿ ಜನಿಸಿದ ಶ್ರೀಮತಿ ಸುಧಾ ಭಾರದ್ವಾಜ್ ಅವರ ಪೋಷಕರು ಭಾರತಕ್ಕೆ ಮರಳಿದ ನಂತರ ತಮ್ಮ ಅಮೇರಿಕನ್ ಪಾಸ್ಪೋರ್ಟ್ ಅನ್ನು ತ್ಯಜಿಸಿದರು. ಖನಿಜ ಸಮೃದ್ಧ ರಾಜ್ಯ ಛತ್ತೀಸ್ಗಢದಲ್ಲಿ ರಾಜ್ಯದಿಂದ ಹೊರ ದೂಡಲ್ಪಟ್ಟ ಶೋಷಿತ ವರ್ಗದ ಹಕ್ಕುಗಳ ಪರವಾಗಿ ಸುದೀರ್ಘ ಹೋರಾಟ ನಡೆಸಿದರು. ಯುವ ವಕೀಲರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಮತ್ತು ಟ್ರೇಡ್ ಯೂನಿಯನಿಸ್ಟ್ ಆಗಿ ಸುಧಾ ಭಾರದ್ವಾಜ್ ಗುರುತಿಸಿಕೊಂಡರು. ಬಡವರಿಗೆ ಕಾನೂನು ನೆರವು ನೀಡುವ ನಿಟ್ಟಿನಲ್ಲಿ ಇವರ ಮೂರು ದಶಕಗಳ ಹೋರಾಟ ಅನೇಕರಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿತು.
ಜೈಲಿನ ಅನುಭವದ ಕುರಿತು ಉಲ್ಲೇಖ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಜೈಲಿನಲ್ಲಿ ಕಳೆದ ದಿನಗಳು ಕಣ್ಣು ತೆರೆಸಿತು ಎಂದು ಸುಧಾ ಭಾರದ್ವಾಜ್ ಹೇಳಿದರು. ಜೈಲಿನಲ್ಲಿ ದೀರ್ಘ ಮತ್ತು ಮಧ್ಯಮ ಪರಿಸ್ಥಿತಿ ಎಂದೇನೂ ಇರುವುದಿಲ್ಲ. ಆದರೆ ನೀವು ಜೈಲಿಗೆ ಹೋದ ಕ್ಷಣದಲ್ಲಿ ನಿಮ್ಮ ಘನತೆಗೆ ಉಂಟಾಗುವ ಧಕ್ಕೆಯಿಂದ ಎದುರಿಸುವ ಅನುಭವು ಆಘಾತಕಾರಿ ಆಗಿರುತ್ತದೆ," ಎಂದರು.
ಕಳೆದ 2018ರ ಅಕ್ಟೋಬರ್ 28ರಂದು ಸುಧಾ ಭಾರದ್ವಾಜ್ ಅವರನ್ನು ಬಂಧಿಸಲಾಗಿತ್ತು. ಅಂದು ಅವರ ಫೋನ್, ಲ್ಯಾಪ್ ಟಾಪ್ ಹಾಗೂ ಕೆಲವು ಸಿಡಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ತದನಂತರ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಮೂರು ಬಾರಿ ತಿರಸ್ಕರಿಸಲಾಗಿತ್ತು. ಈ ಅವಧಿ ಹೊತ್ತಿಗಾಗಲೇ ಅವರು ಎರಡು ಜೈಲುಗಳಲ್ಲಿ ಸೆರೆವಾಸ ಅನುಭವಿಸಿದ್ದರು. ಅದರಲ್ಲಿ ಅರ್ಧದಷ್ಟು ಸಮಯವನ್ನು ಪುಣೆಯ ಹೈ-ಸೆಕ್ಯುರಿಟಿ ಯೆರವಾಡ ಸೆಂಟ್ರಲ್ ಜೈಲಿನಲ್ಲಿ ಕಳೆದಿದ್ದರು. ಅದು ಹೆಚ್ಚಾಗಿ ಶಿಕ್ಷೆಗೊಳಗಾದ ಅಪರಾಧಿಗಳನ್ನು ಹೊಂದಿದೆ, ಒಮ್ಮೆ ಮರಣದಂಡನೆ ಕೈದಿಗಳಿಗೆ ಮೀಸಲಾದ ಸೆಲ್ಗಳ ಬ್ಲಾಕ್ನಲ್ಲೂ ಸೆರೆವಾಸವನ್ನು ಅನುಭವಿಸಿದ್ದರು.

ಸ್ನಾನಕ್ಕೂ, ಕುಡಿಯುವುದಕ್ಕೂ ಒಂದೇ ಬಕೇಟ್ ನೀರು:
ಜೈಲಿನ ಕೊಠಡಿ ಜೊತೆಗೆ ಉದ್ದವಾದ ಕಾರಿಡಾರ್ ಇದ್ದು, ಅಲ್ಲಿಯೇ ಬೆಳಗ್ಗೆ ಮತ್ತು ಸಂಜೆ ಅವರು ವಾಕಿಂಗ್ ಮಾಡುತ್ತಿದ್ದರು. ಖೈದಿಗಳನ್ನು ಪ್ರತಿದಿನ ಅರ್ಧ ಗಂಟೆ ಮಾತ್ರ ಸೆಲ್ನ ಮೇಲಿರುವ ತೆರೆದ ಅಂಗಳಕ್ಕೆ ಬಿಡಲಾಗುತ್ತಿದ್ದು, ಪದೇ ಪದೇ ನೀರಿನ ಕೊರತೆ ಉಂಟಾಗುತ್ತಿತ್ತು. ಇಡೀ ದಿನ ಕುಡಿಯುವುದಕ್ಕೆ ಹಾಗೂ ಸ್ನಾನ ಮಾಡುವುದಕ್ಕೆ ಒಂದೇ ಬಕೇಟ್ ನೀರನ್ನು ಹೊತ್ತುಕೊಂಡು ಹೋಗಬೇಕಾಗಿತ್ತು.
ಜೈಲಿನಲ್ಲಿ ಹೇಗಿತ್ತು ಊಟದ ವ್ಯವಸ್ಥೆ?:
ಜೈಲಿನಲ್ಲಿ ಎರಡು ತುಂಡು ರೊಟ್ಟಿ, ದಾಲ್, ತರಕಾರಿ ಅನ್ನು ನೀಡಲಾಗುತ್ತಿತ್ತು. ಇದರ ಜೊತೆಗೆ ಹೆಚ್ಚುವರಿ ಆಹಾರ ಬೇಕಾದಲ್ಲಿ ಜೈಲಿನ ಕ್ಯಾಂಟೀನ್ನಿಂದ ಖರೀದಿಸಬಹುದಿತ್ತು. ಕೈದಿಗಳ ಖಾತೆಗೆ ಅವರ ಕುಟುಂಬಗಳಿಂದ ಪ್ರತಿ ತಿಂಗಳು ಗರಿಷ್ಠ 4,500 ರೂಪಾಯಿಗಳನ್ನು ಜಮಾ ಮಾಡುವುದಕ್ಕೆ ಅನುಮತಿ ನೀಡಲಾಗಿತ್ತು. ಇದರ ಮದ್ಯೆ ಅಗರಬತ್ತಿ ತಯಾರಿಸುವುದು, ಚಾಪೆಗಳನ್ನು ಮಾಡುವುದು, ಹಾಗೂ ಸ್ವಲ್ಪ ಹಣ ಗಳಿಸುವುದಕ್ಕೆ ಜೈಲಿನ ಜಮೀನಿನಲ್ಲಿ ತರಕಾರಿ ಮತ್ತು ಭತ್ತವನ್ನು ಬೆಳೆದಿದ್ದರು.
ಮುಂಬೈ ಜೈಲಿಗೆ ಸುಧಾ ಭಾರದ್ವಾಜ್ ಸ್ಥಳಾಂತರ:
ಮುಂಬೈನಲ್ಲಿರುವ ಬೈಕುಲ್ಲಾ ಜೈಲಿಗೆ ಸುಧಾ ಭಾರದ್ವಾಜ್ ಅವರನ್ನು ನಂತರದಲ್ಲಿ ಸ್ಥಳಾಂತರಿಸಲಾಯಿತು. ಈ ಜೈಲು ಅತಿಹೆಚ್ಚು ವಿಚಾರಣಾಧೀನ ಕೈದಿಗಳಿಂದ ತುಂಬಿದ ಹಿನ್ನೆಲೆ ಹೆಚ್ಚು ಅವ್ಯವಸ್ಥೆಯನ್ನು ಎದುರಿಸಬೇಕಾಯಿತು. ಕೆಲವು ಸಂದರ್ಭಗಳಲ್ಲಿ 35 ಕೈದಿಗಳಿರುವ ಒಂದೇ ವಿಭಾಗಕ್ಕೆ 75 ಕೈದಿಗಳನ್ನು ಹಾಕುತ್ತಿದ್ದರು. ಆಗ ಕೈದಿಗಳು ಚಾಪೆ ಮೇಲೆ ನೆಲದ ಮೇಲೆ ಹಾಗೂ ಪರಸ್ಪರ ಪಕ್ಕದಲ್ಲಿ ಮಲಗುತ್ತಿದ್ದರು. ಜೈಲಿನಲ್ಲಿ ಪ್ರತಿಯೊಬ್ಬ ಕೈದಿಗೂ "ಶವಪೆಟ್ಟಿಗೆಯ ಗಾತ್ರದ" ಜಾಗವನ್ನು ನಿಗದಿಪಡಿಸಲಾಗಿತ್ತು. ಈ ಜೈಲಿನಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವುದರಿಂದ ಗಲಾಟೆ, ಗದ್ದಲ ಮತ್ತು ಕಿತ್ತಾಟಗಳು ನಡೆಯುತ್ತಿದ್ದವು, ಅಲ್ಲದೇ ಊಟ ಮತ್ತು ಶೌಚಾಲಯಕ್ಕೂ ಸಾಲಿನಲ್ಲಿ ನಿಲ್ಲುವಂತಾ ಸ್ಥಿತಿಯಿತ್ತು ಎಂದು ಸುಧಾ ಭಾರದ್ವಾಜ್ ಹೇಳಿದ್ದಾರೆ.
55 ಕೈದಿಗಳಲ್ಲಿ 13 ಮಂದಿಗೆ ಕೊರೊನಾವೈರಸ್:
ಕಳೆದ ಬೇಸಿಗೆ ಸಂದರ್ಭದಲ್ಲಿ ದೇಶಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಹಾವಳಿ ಹೆಚ್ಚಾಗಿತ್ತು. ಈ ಸಂದರ್ಭದಲ್ಲೇ ನಮ್ಮ ವಿಭಾಗದಲ್ಲಿದ್ದ ಒಟ್ಟು 55 ಕೈದಿಗಳ ಪೈಕಿ 13 ಮಂದಿಗೆ ಕೊವಿಡ್-19 ಸೋಂಕು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಜ್ವರ ಮತ್ತು ಅತಿಸಾರ ಕಾಣಿಸಿಕೊಂಡ ತಮ್ಮನ್ನು ಜೈಲಿನ ಆಸ್ಪತ್ರೆಯಲ್ಲಿ ಇರುವ ಕ್ವಾರೆಂಟೇನ್ ವಿಭಾಗಕ್ಕೆ ಕಳುಹಿಸಿ ಕೊಡಲಾಗಿತ್ತು. "ನ್ಯಾಯಾಂಗವು ನಮ್ಮ ಜೈಲುಗಳ ದಟ್ಟಣೆಯನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕು. ಆದರೆ ಸಾಂಕ್ರಾಮಿಕ ಸಮಯದಲ್ಲೂ ಹೆಚ್ಚಿನ ಜನರು ತಮ್ಮ ಕುಟುಂಬಗಳಿಗೆ ಮರಳಲು ಅಲ್ಪಾವಧಿಗೆ ಮಧ್ಯಂತರ ಜಾಮೀನು ನೀಡಲಿಲ್ಲ."
ಭಾರತದ 1,306 ಜೈಲುಗಳಲ್ಲಿ ಸುಮಾರು 490,000 ಕೈದಿಗಳು ನೆಲೆಸಿದ್ದಾರೆ, ಅವರಲ್ಲಿ ಶೇ.69ರಷ್ಟು ಜನರು ತಮ್ಮ ವಿಚಾರಣೆಗಳು ಪ್ರಾರಂಭವಾಗುವವರೆಗೆ ಕಾಯುತ್ತಿದ್ದಾರೆ. ಸರಾಸರಿ ಆಕ್ಯುಪೆನ್ಸಿ ದರ ಶೇ.118ಕ್ಕೆ ಏರಕೆಯಾಗಿದೆ. 2020ರಲ್ಲಿ ಕೊವಿಡ್ -19 ಹರಡುವುದನ್ನು ತಡೆಯಲು ಕಿಕ್ಕಿರಿದ ಜೈಲುಗಳಲ್ಲಿರುವ ಕುಖ್ಯಾತ ಕೈದಿಗಳಿಂದ ಮುಕ್ತಗೊಳಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಸೂಚನೆ ನೀಡಿತ್ತು.
ಮಹಿಳಾ ಕೈದಿಗಳ ಜಾಮೀನಿಗಾಗಿ ಕಾನೂನು ಸಲಹೆ:
ಬೈಕುಲ್ಲಾ ಜೈಲಿನಲ್ಲಿದ್ದ ಸಂದರ್ಭದಲ್ಲಿ ಸುಧಾ ಭಾರದ್ವಾಜ್ ಅವರು ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಬಯಸುವ ಮಹಿಳಾ ಕೈದಿಗಳಿಗೆ ಹತ್ತಾರು ಕಾನೂನು ಸಲಹೆ ನೀಡಿದರು. ಅಲ್ಲದೇ ಅರ್ಜಿಗಳನ್ನು ಬರೆಯುವುದಕ್ಕಾಗಿ ಸಾಕಷ್ಟು ಸಮಯವನ್ನು ನೀಡಿದರು. ಹೀಗೆ ಅವರು ಕಾನೂನು ಸಲಹೆ ನೀಡಿದವರಲ್ಲಿ ಅನೇಕರು TB, HIV, ಅಸ್ತಮಾ ಮತ್ತು ಇತರ ಗರ್ಭಿಣಿಯರು ಸೇರಿದ್ದರು. ಈ ಪೈಕಿ ಹೆಚ್ಚಿನ ಸಹ ಕೈದಿಗಳನ್ನು ಲೈಂಗಿಕ ಕೆಲಸ ಅಥವಾ ಮಾನವರು ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. ಇತರರು ಪರಾರಿಯಾದ ದರೋಡೆಕೋರರ "ಹೆಂಡತಿಯರು, ಗೆಳತಿಯರು ಮತ್ತು ತಾಯಂದಿರೇ ಆಗಿದ್ದರು," ಎಂದು ಅವರು ಹೇಳಿದರು.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಸಂದರ್ಭವು ಕೈದಿಗಳಿಗೆ ನಿಜವಾಗಿಯೂ ಕಠಿಣ ಸಮಯವಾಗಿತ್ತು. ನ್ಯಾಯಾಲಯಗಳು ಕೆಲಸವನ್ನು ನಿಲ್ಲಿಸಿದವು, ಕೈದಿಗಳಿಗೆ ಕುಟುಂಬ ಸದಸ್ಯರ ಭೇಟಿಗಳನ್ನು ಅನುಮತಿಸಲಿಲ್ಲ, ವಿಚಾರಣೆಗಳನ್ನು ಸ್ಥಗಿತಗೊಳಿಸಲಾಗಿದ್ದವು. ಇದು ತೀರಾ ಶೋಚನೀಯ ಸಮಯವಾಗಿತ್ತು," ಎಂದು ಸುಧಾ ಭಾರದ್ವಾಜ್ ಪರಿಸ್ಥಿತಿಯನ್ನು ನೆನಪಿಸಿಕೊಂಡರು.
ಜೈಲಿನಲ್ಲಿ ಕಳೆದ ಆ ದಿನಗಳು ಹೇಗಿದ್ದವು?:
ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರು ಮಹಿಳಾ ಕೈದಿಗಳ ಮಕ್ಕಳಿಗೆ ಹಾಡುಗಳನ್ನು ಹಾಡಲು, ಜೈಲು ಕೆಲಸಗಳನ್ನು ಮಾಡಲು ಮತ್ತು ಎಡ್ವರ್ಡ್ ಸ್ನೋಡೆನ್, ವಿಲಿಯಂ ಡಾಲ್ರಿಂಪಲ್ ಮತ್ತು ನವೋಮಿ ಕ್ಲೈನ್ ಅವರ ಪುಸ್ತಕಗಳನ್ನು ಒಳಗೊಂಡಂತೆ "ಸಾಕಷ್ಟು" ಓದಲು ಸಮಯವನ್ನು ಕಳೆದರು. ಸಾಂಕ್ರಾಮಿಕ ರೋಗದ ಹೆಚ್ಚಾಗಿದ್ದ ಸಮಯದಲ್ಲಿ ಜೈಲು ಗ್ರಂಥಾಲಯದಲ್ಲಿ ಆಲ್ಬರ್ಟ್ ಕ್ಯಾಮುಸ್ನ ದಿ ಪ್ಲೇಗ್ನ ಉತ್ತಮ ಪ್ರತಿಯನ್ನು ಅವರು ಕಂಡುಕೊಂಡರು.
Recommended Video
"ಭಾರತದಲ್ಲಿ 2020ರ ಮಾರ್ಚ್ ತಿಂಗಳಿನಲ್ಲಿ ಕೊರೊನಾವೈರಸ್ ಹರಡುವಿಕೆ ನಿಯಂತ್ರಿಸಲು ಲಾಕ್ ಡೌನ್ ಜಾರಿಗೊಳಿಸಲಾಗುವುದು ಎಂಬ ಸುದ್ದಿ ಕೇಳಿದಾಗ ಮರೆಯಲಾಗದ ಅನುಭವ ಕಣ್ಣೆದುರಿಗೆ ನಡೆಯಿತು. ಇದ್ದಕ್ಕಿದ್ದಂತೆ ಕೈದಿಗಳು ಊಟ ಮತ್ತು ಉಪಹಾರವನ್ನು ಬಿಟ್ಟು ಉಪವಾಸ ಸತ್ಯಾಗ್ರಹ ನಡೆಸಿದರು. "ನಾವು ಇಲ್ಲಿ ಸಾಯಲು ಬಯಸುವುದಿಲ್ಲ, ಮನೆಗೆ ಹೋಗಿ ಅಲ್ಲಿ ಸಾಯೋಣ" ಎಂದು ಹೇಳುತ್ತಿದ್ದರು. ಜೈಲಿನ ಹೊರಗೆ ಯಾರೂ ವೈರಸ್ನಿಂದ ನಿಜವಾಗಿಯೂ ಸುರಕ್ಷಿತವಾಗಿಲ್ಲ ಎಂದು ಜೈಲು ಸೂಪರಿಂಟೆಂಡೆಂಟ್ ಹೇಳಿದಾಗ ಅವರು ಅಂತಿಮವಾಗಿ ಶಾಂತರಾದರು. ಇದು ಅವರ ಜೀವನ ಮತ್ತು ಅಸ್ತಿತ್ವ ಎಷ್ಟು ಅನಿಶ್ಚಿತವಾಗಿದೆ ಎಂಬುದನ್ನು ತೋರಿಸುತ್ತದೆ," ಎಂದು ಸುಧಾ ಭಾರದ್ವಾಜ್ ಹೇಳಿದರು.












Click it and Unblock the Notifications