ನಿರ್ಮಾಪಕ ಪುತ್ರನ ಹಲ್ಲೆ ಪ್ರಕರಣ ರಾಜಿಗೆ ಸ್ಟಾರ್ ನಟನಿಂದ ಶತ ಪ್ರಯತ್ನ!
ಬೆಂಗಳೂರು,ಅ.15: ನಿರ್ಮಾಪಕ ಸೌಂದರ್ಯ ಜಗದೀಶ್ ಮತ್ತು ಅವರ ಬೌನ್ಸರ್ ಪಟಾಲಂ ಹಲ್ಲೆ ನಡೆಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆದಿದೆ. ಮೂರು ದಿನವಾದರೂ ಎಫ್ಐಆರ್ ದಾಖಲಿಸದ ಪೊಲೀಸರ ವಿರುದ್ಧ ದೂರುದಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರೇ ಆಗಿದ್ದರೂ ನ್ಯಾಯಬದ್ಧವಾಗಿ ಎಫ್ಐಆರ್ ದಾಖಲಿಸಿ ಕ್ರಮ ಜರುಗಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಸೂಚನೆ ನೀಡಿದ್ದಾರೆ. ಕಳೆದ ಶನಿವಾರ ಕ್ಷುಲ್ಲಕ ಕಾರಣಕ್ಕೆ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ನಡೆಸಿದ ನಿರ್ಮಾಪಕ ಸೌಂದರ್ಯ ಜಗದೀಶ್ ಪ್ರಕರಣದ ಪೂರ್ಣ ಚಿತ್ರಣ ಇಲ್ಲಿ ನೀಡಲಾಗಿದೆ.
ನಡೆದಿದ್ದು ಏನು?: ಇದು ಕಳೆದ ಶನಿವಾರ ನಡೆದ ವಿವಾದ. ಉದ್ಯಮಿ ಮಂಜುಳಾ ಪುರುಷೋತ್ತಮ್ ಮನೆಯಲ್ಲಿ ಕೆಲಸ ಮಾಡುವ ಅನುರಾಧ ಮತ್ತು ಆಕೆಯ ತಾಯಿ ಕಸ ಗುಡಿಸುತ್ತಿದ್ದರು. ಈ ವೇಳೆ ಕಸದ ಚೂರು ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಮನೆಗೆ ತಾಗಿದೆ. ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಕೆಲಸಗಾರರಾದ ಅನುರಾಧ ಮತ್ತು ನೀಲಮ್ಮ ಅವರ ಮೇಲೆ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪುತ್ರ ಮಾಸ್ಟರ್ ಸ್ನೇಹಿತ್, ಅವರ ತಾಯಿ ರೇಖಾ ಮತ್ತು ಬೌನ್ಸರ್ಗಳು ಹಲ್ಲೆ ನಡೆಸಿದ್ದಾರೆ.
ಕೆಲಸಗಾರರ ಮೇಲೆ ದರ್ಪ ತೋರಿದ ಸೌಂದರ್ಯ ಜಗದೀಶ್ ಕುಟುಂಬದ ವರ್ತನೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಈ ಹಿಂದೆಯೂ ಎರಡು ಬಾರಿ ಜಗಳ ಉಂಟಾಗಿತ್ತು. ಸೌಂದರ್ಯ ಜಗದೀಶ್ ಅವರ ಕುಟುಂಬದವರು ಅನುರಾಧ ಮತ್ತು ನೀಲಮ್ಮ ಅವರ ಮೇಲೆ ದರ್ಪ ತೋರಿದ್ದರೂ ದೊಡ್ಡವರ ಸಹವಾಸ ಬೇಡ ಎಂದು ಸುಮ್ಮನಾಗಿದ್ದರು. ಇದೀಗ ಮೂರನೇ ಬಾರಿ ಮರುಕಳಿಸಿದ ಹಿನ್ನೆಲೆಯಲ್ಲಿ ದೂರು ನೀಡಿದ್ದಾರೆ.

ಅಕ್ರಮ ಪ್ರವೇಶ ಮಾಡಿ ಹಲ್ಲೆ
ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಕೆಲಸಗಾರರ ಮೇಲೆ ದರ್ಪ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉದ್ಯಮಿ ಪುರುಷೋತ್ತಮ್ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ಬೇಸ್ಮೆಂಟ್ನಲ್ಲಿದ್ದ ಅನುರಾಧ ಮತ್ತು ನೀಲಮ್ಮ ಅವರ ಮೇಲೆ ಮಾಸ್ಟರ್ ಸ್ನೇಹಿತ್ ಮತ್ತು ಆತನ ರಕ್ಷಣೆಗಾಗಿ ನೇಮಿಸಿಕೊಂಡಿರುವ ಬೌನ್ಸರ್ಗಳು ಹಲ್ಲೆ ಮಾಡಿದ್ದಾರೆ.

ಅನುರಾಧ ದೂರು ನೀಡಿದ್ರೂ ಕ್ರಮವಿಲ್ಲ
ಪ್ರತಿಷ್ಠಿತ ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬದ ವಿರುದ್ಧ ಅನುರಾಧ ಅವರು ಮಹಾಲಕ್ಷ್ಮೀ ಲೇಔಟ್ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಸ್ಟಾರ್ ನಟರು ಹಾಗೂ ರಾಜಕಾರಣಿಗಳ ಸಂಪರ್ಕ ಹೊಂದಿರುವ ಸೌಂದರ್ಯ ಜಗದೀಶ್ ಅವರ ವಿರುದ್ಧ ದೂರು ದಾಖಲಿಸಿಕೊಳ್ಳದಂತೆ ರಾಜಕೀಯ ವ್ಯಕ್ತಿಗಳು ಪೊಲೀಸರ ಮೇಲೆ ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಈ ಪ್ರಕರಣ ಹೊಸ ಸ್ವರೂಪ ಪಡೆದುಕೊಂಡಿದೆ.

ಸ್ಟಾರ್ ನಟನಿಂದ ರಾಜೀ ಯತ್ನ ವಿಫಲ
ಉಳ್ಳವರು ಅಸಹಾಯಕ ಮನೆಕೆಲಸದವರ ಮೇಲೆ ತೋರಿದ ದರ್ಪ ಪ್ರಕರಣ ಸೋಮವಾರ ಹೊಸ ತಿರುವು ಪಡೆದುಕೊಂಡಿದೆ. ಸ್ಟಾರ್ ನಟರೊಬ್ಬರು ಉದ್ಯಮಿ ಪುರುಷೋತ್ತಮ್ ಅವರಿಗೆ ಕರೆ ಮಾಡಿ, ಈ ಪ್ರಕರಣ ಇಲ್ಲಿಗೆ ಮುಕ್ತಾಯಗೊಳಿಸುವ. ಹಲ್ಲೆ ಮಾಡಿರುವ ಸಂಬಂಧ ಕೂತು ಇತ್ಯರ್ಥ ಮಾಡಿಕೊಳ್ಳೋಣ. ತಮ್ಮ ಮನೆ ಕೆಲಸದವರು ನೀಡಿರುವ ದೂರನ್ನು ವಾಪಸು ತೆಗೆಸಿಕೊಳ್ಳಿ ಎಂದು ಸ್ಟಾರ್ ನಿರ್ಮಾಪಕರೊಬ್ಬರು ಹಾಗೂ ನಟರೊಬ್ಬರು ಪೋನ್ ಕರೆ ಮಾಡಿ ಮನವಿ ಮಾಡಿದ್ದಾರೆ.
ಈ ಮೂಲಕ ಪೊಲೀಸ್ ಠಾಣೆಯಿಂದ ಹೊರಗೆ ಪ್ರಕರಣ ಇತ್ಯರ್ಥ ಪಡಿಸಿ ರಾಜೀ ಮಾಡಿಸಲು ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೂಡ ಇದೇ ವೇಳೆ ಕೇಳಿ ಬಂದಿದೆ. ದೂರು ಸಂಬಂಧ ಎಫ್ಐಆರ್ ದಾಖಲಾದರೂ ಆರೋಪಿಗಳನ್ನು ಬಂಧಿಸದೇ ವಿಚಾರಣೆ ನಡೆಸುತ್ತಿರುವ ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಎಫ್ಐಆರ್ ನಂತರ ಪೊಲೀಸರು ರಾಜೀಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪೊಲೀಸ್ ಆಯುಕ್ತರ ಗರಂ
ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಾದರೂ ಕ್ರಮ ಜರುಗಿಸದ ಮಹಾಲಕ್ಷ್ಮೀ ಲೇಔಟ್ ಪೊಲೀಸರ ಕ್ರಮದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಗರಂ ಆಗಿದ್ದಾರೆ. ಘಟನೆ ಸಂಬಂಧ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಪೊಲೀಸರು, ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಐಪಿಸಿ ಸೆಕ್ಷನ್ 354 ಅಡಿ ಕೇಸು ದಾಖಲಿಸಿದರೂ ಕ್ರಮ ಜರುಗಿಸದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಸ್ಥಳೀಯರ ಅರೋಪ
ಸೌಂದರ್ಯ ಜಗದೀಶ್ ಬೌನ್ಸರ್ಸ್ ಮೇಲೆ ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಆ ಹುಡುಗ ( ಮಾಸ್ಟರ್ ಸ್ನೇಹಿತ್ ) ಹೊರ ಬಂದರೆ ಹಿಂದೆ ಮುಂದೆ ಕಾರು ಬರುತ್ತದೆ. ರಸ್ತೆಯಲ್ಲಿ ಅಡ್ಡ ಬರುವ ದ್ವಿಚಕ್ರ ವಾಹನ ಸವಾರರ ಮೇಲೆ ಹಲ್ಲೆಗೆ ಯತ್ನಿಸುತ್ತಾರೆ. ದೊಡ್ಡವರು- ಚಿಕ್ಕವರು ಎನ್ನದೇ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಅವರ ಕಾರ್ ಬರಬೇಕಾದರೆ ರಸ್ತೆಯಲ್ಲಿ ಬೇರೆ ಯಾರೂ ಓಡಾಡಬಾರದು. ಮುಖ್ಯಮಂತ್ರಿಗಳಿಗೆ ಝೀರೋ ಟ್ರಾಫಿಕ್ ತರ ರೋಡ್ ಕ್ಲಿಯರ್ ಆಗಿರಬೇಕು. ಈ ಬಗ್ಗೆ ಸೌಂದರ್ಯ ಜಗದೀಶ್ ಮತ್ತು ಅವರ ಪುತ್ನಿ ಗಮನಕ್ಕೆ ತಂದಿದ್ದೆವು. ಅವರು ನೋಡ್ತೀನಿ ಅಂತಾರೆ ಬಿಟ್ಟರೆ ಯಾವುದೇ ಕ್ರಮ ಜರುಗಿಸಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಉದ್ಯಮಿ ಮಂಜುಳಾ ಪುರುಷೋತ್ತಮ್ ಹೇಳಿಕೆ
ಕೇಸು ತನಿಖೆ ಏನಾಗಿದೆ ಎಂದು ಮಾಹಿತಿ ಕೇಳುತ್ತೇನೆ. ಕೆಲವು ಸ್ಟಾರ್ ನಟರ ಕರೆಗಳು ಬರುತ್ತಿವೆ. ತೆರೆ ಮರೆಯಲ್ಲಿ ರಾಜೀ ಸಂಧಾನ ಕರೆಗಳು ಬರುತ್ತಿವೆ. ಘಟನೆ ಸಂಬಂಧ ಸಿಸಿಟಿವಿ ನೋಡಿ ಆಶ್ಚರ್ಯವಾಯಿತು ಎಂದು ಉದ್ಯಮಿ ಮಂಜುಳಾ ಪುರುಷೋತ್ತಮ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ನೋಟಿಸ್: ಇನ್ನು ಪ್ರಕರಣ ದೊಡ್ಡ ವಿವಾದ ಸೃಷ್ಟಿಯಾಗುತ್ತಿದ್ದಂತೆ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಕುಟುಂಬ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ನೋಟಿಸ್ ನೀಡಿದ್ದಾರೆ. ಸೌಂದರ್ಯ ಜಗದೀಶ್ ಪತ್ನಿ ರೇಖಾ, ಅಪ್ಪು ಖ್ಯಾತಿಯ ಪುತ್ರ ಸ್ನೇಹಿತ್ಗೆ ನೋಟಿಸ್ ನೀಡಲಾಗಿದೆ. ಆದರೆ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಸ್ನೇಹಿತ್ ಮತ್ತು ಬೌನ್ಸರ್ಗಳು ತಲೆ ಮರೆಸಿಕೊಂಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಮಹಜರು ವರದಿ ತಯಾರಿಸಿಕೊಂಡಿದ್ದಾರೆ.












Click it and Unblock the Notifications