ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?
ರಕ್ಷಣಾ ಇಲಾಖೆಗೆ ಪ್ರಮುಖ ಬಿಡಿಭಾಗಗಳನ್ನು ತಯಾರಿಸುವ ಬೆಂಗಳೂರು ಮೂಲದ ಖಾಸಗಿ ಸಂಸ್ಥೆಗೆ ಭಾರಿ ಮೋಸ, ವಂಚನೆಯಾಗಿದೆ. ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಕಲ್ಪನೆ ಸಾಕಾರಗೊಳ್ಳದಂತೆ ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಎಸ್ಎಸ್ಐಡಿಸಿ) ಅಧಿಕಾರಿಗಳು ಮಾಡಿದ್ದಾರೆ ಎಂದು ಬೆಂಗಳೂರಿನ ಸಂಸ್ಥೆ ಆರೋಪಿಸಿದೆ. ಏನಿದು ಕೆಎಸ್ಎಸ್ಐಡಿಸಿ ವಿರುದ್ಧದ ಆರೋಪ?
ರಕ್ಷಣಾ ಇಲಾಖೆಗೆ ಪ್ರಮುಖ ಬಿಡಿಭಾಗಗಳನ್ನು ತಯಾರಿಸುವ ಸಂಸ್ಥೆಗೆ ನಿಗದಿತ ಭೂಮಿಯನ್ನಾಗಲೀ ಅಥವಾ ಪರ್ಯಾಯ ಭೂಮಿಯನ್ನಾಗಲೀ ನೀಡಲು ಕೆಎಸ್ಎಸ್ಐಡಿಸಿ ಮೀನಾಮೇಷ ಎಣಿಸುತ್ತಿದೆ. ಈ ಸಂಸ್ಥೆಯು ದೇಶದ ರಕ್ಷಣಾ ಸಚಿವರು ನೀಡಿದ್ದ ಸೂಚನೆಯನ್ನೂ ಧಿಕ್ಕರಿಸುತ್ತಾ ಬಂದಿದೆ ಎಂಬ ಆರೋಪ ಕೇಳಿ ಬಂದಿದೆ.
ರಕ್ಷಣಾ ಕ್ಷೇತ್ರದ ಉತ್ಪನ್ನಗಳನ್ನು ದೇಶಿಯವಾಗಿ ತಯಾರಿಸಿ ಈ ಕ್ಷೇತ್ರವನ್ನು ಸ್ವಾವಲಂಬಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಇದಕ್ಕೆ ಪೂರಕವಾಗಿ ಕರ್ನಾಟಕ ಮೂಲದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಎಇಸಿಪಿಎಲ್) ಸಂಸ್ಥೆಯು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸಲು ರಾಜ್ಯ ಸರ್ಕಾರದಿಂದ ಕೈಗಾರಿಕಾ ಭೂಮಿ ಪಡೆಯಲು ಕಳೆದ ಎರಡು ವರ್ಷಗಳಿಂದ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

2018 ರಿಂದ ಮನವಿ ಸಲ್ಲಿಸುತ್ತಿದ್ದಾರೆ
2018 ರಿಂದ ನೆಲಮಂಗಲದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ನೀಡುವಂತೆ ಮನವಿ ಮಾಡುತ್ತಾ ಬಂದಿದ್ದರೂ ಕೆಎಸ್ಎಸ್ಐಡಿಸಿ ಸಂಸ್ಥೆಯು ಮಾತ್ರ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ. ಇದೊಂದು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಆರಂಭವಾಗುತ್ತಿರುವ ಉದ್ಯಮವಾಗಿದೆ. ಆದ್ದರಿಂದ ಈ ಸಂಸ್ಥೆಗೆ ನೆಲಮಂಗಲದ ಕೈಗಾರಿಕಾ ಪ್ರದೇಶದಲ್ಲಿ ಸೂಕ್ತ ಭೂಮಿ ನೀಡುವಂತೆ ರಕ್ಷಣಾ ಇಲಾಖೆ ಸೂಚನೆ ನೀಡಿದ್ದರೂ ಕೆಎಸ್ಎಸ್ಐಡಿಸಿ ಇದಕ್ಕೆ ಸೊಪ್ಪು ಹಾಕಿಲ್ಲ.
ಇದರಿಂದ ರಕ್ಷಣಾ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಖಾಸಗಿ ಸಂಸ್ಥೆಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಆದರೆ, ಕರ್ನಾಟಕದ ಮಟ್ಟಿಗೆ ದೇಶದ ಮೇಕ್ ಇನ್ ಇಂಡಿಯಾ' ಕನಸು ನನಸಾಗುವ ಲಕ್ಷಣಗಳು ಕಾಣುತ್ತಿಲ್ಲ.

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಬದ್ಧ
ಇದರಿಂದ ಬೇಸತ್ತಿದ್ದರೂ, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ನಮ್ಮ ಸಂಸ್ಥೆಯ ಸಣ್ಣ ಕೊಡುಗೆಯಾದರೂ ಇರಲಿ ಎಂಬ ಸದುದ್ದೇಶದಿಂದ ಸಂಸ್ಥೆಯ ಮುಖ್ಯಸ್ಥರಾಗಿರುವ ಗಿರೀಶ್ ಲಿಂಗಣ್ಣ ಸರ್ಕಾರಿ ಕಚೇರಿಗಳು ಮತ್ತು ಮಂತ್ರಿ ಮಹೋದಯರ ಮನೆ/ಕಚೇರಿಗಳಿಗೆ ಎಡತಾಕುವುದನ್ನು ಬಿಟ್ಟಿಲ್ಲ.
ಹಲವು ವಿಭಾಗಗಳಿಂದ ಒತ್ತಡಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೆಎಸ್ಎಸ್ಐಡಿಸಿ ಅಧಿಕಾರಿಗಳು ಉದ್ದೇಶಿತ ನೆಲಮಂಗಲದ ಭೂಮಿ ವಿತರಣೆ ಬಗ್ಗೆ ನ್ಯಾಯಾಲಯದಲ್ಲಿ ತಗಾದೆ ಇರುವುದರಿಂದ ಭೂಮಿ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪರ್ಯಾಯವಾಗಿ ಭೂಮಿಯನ್ನು ಮಂಜೂರು
ಆದರೆ, ಸಾಮಾನ್ಯವಾಗಿ ನಿಗದಿತ ಭೂಮಿಯನ್ನು ನೀಡಲಾಗದಿದ್ದರೆ ಅದಕ್ಕೆ ಪರ್ಯಾಯವಾಗಿ ಭೂಮಿಯನ್ನು ಮಂಜೂರು ಮಾಡಬೇಕೆಂಬ ನಿಯಮವಿದೆ. ಆದರೆ, ಈ ನಿಯಮವನ್ನು ಕೆಎಸ್ಎಸ್ಐಡಿಸಿ ಅಧಿಕಾರಿಗಳು ಗಾಳಿಗೆ ತೂರಿದ್ದು, ಪರ್ಯಾಯ ಭೂಮಿ ಮಂಜೂರು ಮಾಡುವ ಬಗ್ಗೆಯೂ ಗಮನಹರಿಸಿಲ್ಲ.
ಸತ್ಯಾಂಶವೆಂದರೆ, ಕರ್ನಾಟಕದಲ್ಲಿ ಅಧಿಕಾರಸ್ಥರ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಜರ್ಮನಿಯ ಅಂಗಸಂಸ್ಥೆಯಾಗಿರುವ ಎಇಸಿಪಿಎಲ್ ಬೆಂಗಳೂರಿನ ಗಿರೀಶ್ ಲಿಂಗಣ್ಣ ಅವರೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ. ಇವರು ಭಾರತದಲ್ಲಿ ಕಂಪನಿಯ ನಿರ್ದೇಶಕರಾಗಿದ್ದಾರೆ. ಈ ಕಂಪನಿ ರಷ್ಯಾದಲ್ಲಿಯೂ ತನ್ನ ವ್ಯವಹಾರವನ್ನು ಹೊಂದಿದೆ.

ತೇಜಸ್ ಯುದ್ಧ ವಿಮಾನಕ್ಕೆ ಟೂಲ್ಸ್ ಪೂರೈಕೆ
ಕಂಪನಿಯು ಎಚ್ಎಎಲ್ ಸಂಸ್ಥೆಗೆ ಎಲ್ಸಿಎ ತೇಜಸ್ ಮತ್ತು ಇಂಜಿನ್ ಯೋಜನೆಗೆ ಅಗತ್ಯವಾದ ಮೆಟಲ್ ಕಟಿಂಗ್ ಟೂಲ್ಸ್ ಅನ್ನು ಪೂರೈಕೆ ಮಾಡುತ್ತಿತ್ತು. ಇದಲ್ಲದೇ, ಕಂಪನಿಯು ಡಿಆರ್ ಡಿಒ, 515 ಆರ್ಮಿ ಬೇಸ್, ನ್ಯಾಷನಲ್ ಏರೋಸ್ಪೇಸ್ ಲ್ಯಾಬರೇಟರೀಸ್ ಮತ್ತು ಏರೋಸ್ಪೇಸ್ ಗೆ ಸಂಬಂಧಿಸಿದ ಇತರೆ ಕಂಪನಿಗಳೊಂದಿಗೆ ನಿಕಟವಾಗಿ ವ್ಯವಹಾರಗಳನ್ನು ನಡೆಸುತ್ತಾ ಬಂದಿದೆ. ಜೆಎಸ್ಡಬ್ಲ್ಯೂ, ಮಿಶ್ರಾ ಧಾತು ನಿಗಮ್ ಲಿಮಿಟೆಡ್, ಬಾಷ್ ಸೇರಿದಂತೆ ಇನ್ನಿತರೆ ದೊಡ್ಡ ಕಂಪನಿಗಳೊಂದಿಗೆ ಸಹಯೋಗವನ್ನು ಹೊಂದಿದೆ.

ನೆಲಮಂಗಲದಲ್ಲಿರುವ ನಿವೇಶನ ಸಂಖ್ಯೆ ಡಿ143
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ' ಉಪಕ್ರಮದಿಂದ ಪ್ರೇರೇಪಿತವಾಗಿರುವ ಕಂಪನಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಚೋನಾಯಕನಹಳ್ಳಿ ಬಳಿಯ ನಾರಾಯಣರಾವ್ ಪಾಳ್ಯದ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ಪ್ಲಾಟ್ ನಿರ್ಮಾಣಕ್ಕೆ ಭೂಮಿಗಾಗಿ (ಸಂಖ್ಯೆ ಡಿ143) ಅರ್ಜಿ ಸಲ್ಲಿಸಿತ್ತು. ಆದರೆ, 2018 ರಿಂದ ಇಲ್ಲಿವರೆಗೆ ಕಂಪನಿಯ ಕಂಪನಿಗೆ ತಣ್ಣೀರೆರಚಲಾಗುತ್ತಿದೆ.
ಏಕೆಂದರೆ, ಅಂದಿನಿಂದ ಕೆಎಸ್ಎಸ್ಐಡಿಸಿ ಕಂಪನಿಯ ಅರ್ಜಿಯನ್ನು ಶೀತಲಗೃಹಕ್ಕೆ ತಳ್ಳಿದೆ. ಅಂದರೆ, ಇದುವರೆಗೆ ಈ ಬಗ್ಗೆ ಯಾವುದೇ ನಿರ್ಧಾರವನ್ನು ಹೊರ ಹಾಕಿಲ್ಲ. ಕಂಪನಿಯ ಅಧಿಕಾರಿಗಳು ಭೂಮಿ ಪಡೆಯಲು ಕಚೇರಿಗಳ ಕಂಬ ಸುತ್ತುವ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ, ಕೆಎಸ್ಎಸ್ಐಡಿಸಿ ಮಾತ್ರ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ.

ನಿರ್ಮಲಾ ಸೀತಾರಾಮನ್ ಪತ್ರಕ್ಕೂ ಬೆಲೆ ಇಲ್ಲ
ವಿಚಿತ್ರವೆಂದರೆ ಎಡಿಡಿ 28 ಆಗಸ್ಟ್ 2018 ರಲ್ಲಿ ಕಳುಹಿಸಿದ್ದ ಇಮೇಲ್ ಗೆ ಪ್ರತಿಕ್ರಿಯೆ ನೀಡಿದ್ದ ಅಂದಿನ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು, 6 ಸೆಪ್ಟಂಬರ್ 2018 ರಂದು ಕೆಎಸ್ಎಸ್ಐಡಿಸಿಗೆ ಪತ್ರ ಬರೆದು ಕಂಪನಿಗೆ ಆದ್ಯತೆ ಮೇಲೆ ಭೂಮಿಯನ್ನು ಮಂಜೂರು ಮಾಡುವಂತೆ ನಿರ್ದೇಶನ ನೀಡಿದ್ದರು. ಆದರೆ, ಈ ನಿರ್ದೇಶನಕ್ಕೆ ಕೆಎಸ್ಎಸ್ಐಡಿಸಿ ತಲೆಯನ್ನೇ ಕೆಡಿಸಿಕೊಂಡಿಲ್ಲ ಮತ್ತು ಭೂಮಿ ಮಂಜೂರು ಮಾಡುವ ಗೋಜಿಗೆ ಹೋಗಿಲ್ಲ.
ರಕ್ಷಣಾ ಇಲಾಖೆಯು ಕೆಎಸ್ಎಸ್ಐಡಿಸಿಗೆ ಮತ್ತೊಂದು ಪತ್ರ ಬರೆದು, ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿ ಮತ್ತು ಹೂಡಿಕೆ ಮಾಡಲು ಆಸಕ್ತಿ ಇರುವವರೊಂದಿಗೆ ಚರ್ಚೆ ನಡೆಸಿ. ರಕ್ಷಣಾ ಸಚಿವರು ರಕ್ಷಾಣ ಕೈಗಾರಿಕೆ ಅಭಿವೃದ್ದಿ ಸಭೆಯಲ್ಲಿ ರಕ್ಷಣಾ ಹೂಡಿಕೆದಾರರ ಘಟಕವನ್ನು ಸ್ಥಾಪಿಸುವಂತೆ ಸೂಚಿಸಿದ್ದಾರೆ. ಭೂಮಿ ಮಂಜೂರು ಮಾಡುವಂತೆ ಎಇಸಿಪಿಎಲ್ ರಕ್ಷಣಾ ಇಲಾಖೆಗೆ ಮನವಿ ಮಾಡಿಕೊಂಡಿದೆ. ಆ ಪತ್ರವನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ ಎಂದು ಹೇಳುವ ಮೂಲಕ ಕಂಪನಿಗೆ ಭೂಮಿ ಮಂಜೂರು ಮಾಡುವಂತೆ ಸೂಚನೆ ನೀಡಿತ್ತು.

ಆತ್ಮನಿರ್ಭರ್ ಭಾರತ್ ಪರಿಕಲ್ಪನೆಗೆ ಎಳ್ಳು ನೀರು?
ಆದಾಗ್ಯೂ, ಕೆಎಸ್ಎಸ್ಐಡಿಸಿಗೆ ಎಷ್ಟೇ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲದಿರುವ ಹಿಂದಿನ ಮರ್ಮ ಈಗ ಕಂಪನಿಗೆ ಸ್ಪಷ್ಟವಾದಂತಾಗಿದೆ.
ಒಂದು ವೇಳೆ ಕಾನೂನು ಅಡ್ಡಿಯಾದರೆ ಪರ್ಯಾಯ ಜಾಗವನ್ನು ಮಂಜೂರು ಮಾಡಲು ಅವಕಾಶವಿದೆ. ಈ ಕಾರಣದಿಂದ ನೆಲಮಂಗಲದ ಉದ್ದೇಶಿತ ಜಾಗವನ್ನು ಬಿಟ್ಟು ಬೆಂಗಳೂರು ಹೊರವಲಯದ ಯಾವುದೇ ಕೈಗಾರಿಕೆ ಎಸ್ಟೇಟ್ ನಲ್ಲಿ ಪರ್ಯಾಯ ಜಾಗವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದರೂ ಕೆಎಸ್ಎಸ್ಐಡಿಸಿ ಅಧಿಕಾರಿಗಳು ಅದಕ್ಕೂ ಸ್ಪಂದಿಸುತ್ತಿಲ್ಲ.
ಈ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಂಸ್ಥೆಯೇ ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಭಾರತ್ ನಿರ್ಮಾಣದ ಪರಿಕಲ್ಪನೆಗೆ ಎಳ್ಳು ನೀರು ಬಿಡುವಂತಾಗಿದೆ.












Click it and Unblock the Notifications