ಕನ್ನಡಿಗರ ನೆತ್ತಿಯ ಮೇಲೆ ಬಿಜೆಪಿಯ ತೂಗು‘ಕತ್ತಿ’!

ಉತ್ತರ ಕರ್ನಾಟಕದವರು 'ಇಂತಹ ಬೇಡಿಕೆ ಇಡುವುದು ತಪ್ಪೇನಿಲ್ಲಾ' ಎಂದು ಉಮೇಶ್ ಕತ್ತಿ ಸಮರ್ಥನೆಯನ್ನೂ ಕೊಟ್ಟಿದ್ದಾರೆ. ಈ ಒಡಕು ಧ್ವನಿ ಕರ್ನಾಟಕ ಏಕೀಕರಣ ಇತಿಹಾಸದ ಅರಿವಿಲ್ಲದ, ಚಿಕ್ಕರಾಜ್ಯದ ತೊಡಕುಗಳ ಬಗ್ಗೆ ಗೊತ್ತಿಲ್ಲದ, ಒಗ್ಗಟ್ಟಿನಲ್ಲಿ ನಂಬಿಕೆಯಿಲ್ಲದ ಯಾವುದೋ ಕಿಡಿಗೇಡಿ ರಾಜಕೀಯ ಪುಡಾರಿಯದ್ದು ಎಂದು ಪರಿಗಣಿಸಬಹುದು. ಆದರೆ, ಬಿಜೆಪಿ ಪಕ್ಷವೇಕೆ ಈ ಬಗ್ಗೆ ಮೌನವಹಿಸಿದೆ?
ಒಂದು ರಾಜಕೀಯ ಪಕ್ಷದ ಶಾಸಕ ಮತ್ತು ಮಾಜಿ ಸಚಿವರು ಹೇಳಿಕೆ ಕೊಟ್ಟರು ಪಕ್ಷ ಮೌನವಹಿಸಿರುವುದರ ಅರ್ಥವೇನು?. ಇಂತಹ ಹೇಳಿಕೆ ನೀಡುವ ನಾಯಕನ ಮೇಲೆ ಪಕ್ಷಕ್ಕೆ ಹಿಡಿತವಿಲ್ಲವೇ? ಅಥವ ಪಕ್ಷವೇ ಇಂತಹ ಹೇಳಿಕೆಯನ್ನು ನಾಯಕನಿಂದ ಹೇಳಿಸುತ್ತಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕಾಗಿರುವುದು ರಾಜ್ಯ ಬಿಜೆಪಿ. (ನಾನಿಲ್ದಿದ್ರೇನಂತೆ ನನ್ ಮಗನಾದ್ರೂ ಮುಖ್ಯಮಂತ್ರಿಯಾಗ್ಲಿ')
ಹಿಂದೆಯೂ ಉಮೇಶ್ ಕತ್ತಿ ಈ ರೀತಿ ಹೇಳಿಕೆ ನೀಡಿದ್ದರು. ಆಗಲೇ ಅವರನ್ನು ನಿಯಂತ್ರಿಸಲು ಪಕ್ಷ ಏಕೆ ಮುಂದಾಗಲಿಲ್ಲ? ಉಮೇಶ್ ಕತ್ತಿ ಅವರ ಹೇಳಿಕಗೆಗೆ ಸಂಬಂಧಿಸಿದಂತೆ ಪಕ್ಷದ ನಿಲುವೇನು ಎಂದು ಬಿಜೆಪಿ ಮೊದಲು ಸ್ಪಷ್ಟಪಡಿಸಬೇಕು. ಕತ್ತಿ ನಿಲುವೇ ಪಕ್ಷದ್ದಾಗಿದ್ದರೆ, ನೇರವಾದಿ ಅದನ್ನು ಹೇಳಿಕೊಂಡೇ ರಾಜಕಾರಣ ಮಾಡಬೇಕು. ಕರ್ನಾಟಕವನ್ನು ಒಡೆಯೋದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಳ್ಳುಬೇಕು.
ಬಿಜೆಪಿ ಅಖಂಡ ಕರ್ನಾಟಕವನ್ನು ಬಯಸುವುದಾದದರೆ, ನಾಡಿನ ಹಿತಕ್ಕೆ ಮಾರಕವಾಗುವ ಬೇಜವಾಬ್ದಾರಿ ಹೇಳಿಕೆ ನೀಡುವ ನಾಯಕನಿಂದ ವಿವರ ಕೇಳುವ, ಮುಂದೆ ಇಂತಹ ಹೇಳಿಕೆ ನೀಡದಂತೆ ಬಾಯಿ ಮುಚ್ಚಿಸುವ, ಪಕ್ಷದಿಂದ ಹೊರಹಾಕುವ ಬದ್ಧತೆಯನ್ನು ಪಕ್ಷ ಪ್ರದರ್ಶಿಸಬೇಕು. ಅದು ಅವರ ವೈಯುಕ್ತಿಕ ಹೇಳಿಕೆ ಎಂಬ ಬೂಟಾಟಿಕೆಯ ಮಾತುಗಳ ಸಮರ್ಥನೆ ಪಕ್ಷದಿಂದ ಬೇಕಾಗಿಲ್ಲ.
ನಾಡನ್ನು ಒಡೆಯುವವರಿಗೆ ನೂರು ಕಾರಣಗಳಿವೆ. ಬಜೆಟ್ ನಲ್ಲಿ ಅನುದಾನ ನೀಡಿಲ್ಲ ಎಂದು. ನ್ಯಾಯಾಲಯದಲ್ಲಿ ಕೃಷ್ಣಾ ನದಿ ನೀರಿಗೆ ಹೋರಾಟ ಮಾಡಿಲ್ಲ ಎಂದು, ನೆರೆಬಂದಾಗ ನೆರವು ನೀಡಿಲ್ಲ ಎಂದು ನೆಪ ಹೇಳಿ ಜನರ ಮನಸ್ಸು ಮತ್ತು ನಾಡನ್ನು ಒಡೆಯಲು ಪ್ರಯತ್ನ ನಡೆಸುತ್ತಿರುತ್ತಾರೆ. ದೊಡ್ಡ ರಾಜ್ಯಗಳನ್ನು ಆಳೋದು ಕಷ್ಟ. ಅದಕ್ಕೇ ಚಿಕ್ಕ ರಾಜ್ಯಗಳಾಗಿ ನಾಡು ಒಡೀತಿವಿ ಅನ್ನೋರಿಗೆ ಭಾರತವೂ ದೊಡ್ಡದು ಎಂಬ ಅರಿವಿದೆಯೇ?












Click it and Unblock the Notifications