ಕೆಪಿಎನ್ ಟ್ರಾವೆಲ್ಸ್ ಬಸ್ ಗೆ ಬೆಂಕಿ: ಓದುಗರು ಏನಂತಾರೆ?
ಬೆಂಗಳೂರು, ಸೆಪ್ಟೆಂಬರ್ 14: ಕೆಪಿಎನ್ ಬಸ್ ಗಳನ್ನು ಸುಟ್ಟಿದ್ದರಿಂದ ಕಾವೇರಿ ನೀರಿನ ಸಮಸ್ಯೆ ಬಗೆಹರಿಯುತ್ತಾ ಎಂದು ಆ ಟ್ರಾವೆಲ್ಸ್ ನ ಮಾಲೀಕ ಕೆ.ಪಿ.ನಟರಾಜನ್ ಪ್ರಶ್ನಿಸಿದ್ದರು. ಅವರ ಪ್ರಶ್ನೆಗೆ ಒನ್ ಇಂಡಿಯಾ ಓದುಗರು ಪ್ರತಿಕ್ರಿಯಿಸಿದ್ದಾರೆ, ಪ್ರಶ್ನಿಸಿದ್ದಾರೆ, ಕೆಲವರು ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಓದುಗರ ಅಭಿಪ್ರಾಯವನ್ನು ಇಲ್ಲಿ ಪ್ರಕಟಿಸಲಾಗಿದೆ.
ಇನ್ಶೂರೆನ್ಸ್ ಗಾಗಿ ಕೆಪಿಎನ್ ಟ್ರಾವೆಲ್ಸ್ ನವರೇ ಹೀಗೆ ಮೊದಲೇ ಮಾಡಿರುವ ಪ್ಲಾನ್ ಇದು. ನಟ ರಾಜಕುಮಾರ್ ತೀರಿಕೊಂಡಾಗಲೂ ಹೀಗೆ ಮಾಡಲಾಗಿತ್ತು. ಕೋಟ್ಯಂತರ ರುಪಾಯಿ ಇನ್ಶೂರೆನ್ಸ್ ಕ್ಲೇಮ್ ಮಾಡಿ ಹೊಸ ಬಸ್ ಖರೀದಿಸಲಾಗಿತ್ತು. ತಮ್ಮ ಕಡೆಯವರಿಂದಲೇ ಬೆಂಕಿ ಇಡಿಸಿದ್ದಾರೆ.[ನನ್ನ ಬಸ್ ಸುಟ್ಟಿದ್ದರಿಂದ ಕಾವೇರಿ ಸಮಸ್ಯೆ ಬಗೆಹರಿಯುತ್ತಾ?: ಕೆ.ಪಿ.ನಟರಾಜನ್]
ಇನ್ನು ಜಯಲಲಿತಾ ಆಲೋಚನೆ ಬೇರೆಯೇ ಇದೆ. ಕರ್ನಾಟಕದವರು ತಮಿಳರ ಮೇಲೆ ದಬ್ಬಾಳಿಕೆ ಮಾಡಿ, ತಮಿಳುನಾಡಿಗೆ ನೀರು ಬಿಡುತ್ತಿಲ್ಲ ಎಂದು ವಿಡಿಯೋ- ಫೋಟೋಗಳನ್ನು ಸುಪ್ರೀಂ ಕೋರ್ಟಿನಲ್ಲಿ ತೋರಿಸಿ, ಮರುಕ ಹುಟ್ಟಿಸುವ ಪ್ರಯತ್ನ ಇದು. ಕೋರ್ಟ್ ತೀರ್ಪಿನ ಮೇಲೆ ಇದು ಪರಿಣಾಮ ಬೀರುತ್ತದೆ. ಒಂದೇ ಕಲ್ಲಿನಿಂದ ಹಲವು ಹಕ್ಕಿ ಹೊಡೆಯುವ ಪ್ಲಾನ್ ಇದು. ಕರ್ನಾಟಕದ ಜನತೆಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ ಪರಮಶಿವಯ್ಯ.
***
ಹೌದು, ನೀವು ಹೇಳಿದ್ದರಲ್ಲಿ ಸತ್ಯವಿದೆ. ಇದೇ ಮಾತನ್ನು ನಿಮ್ಮ ತಮಿಳು ಸಹೋದರರಿಗೆ ಮೊದಲು ಹೇಳ್ಬೇಕು. ಯಾಕೆಂದ್ರೆ ಕರ್ನಾಟಕ ಮೂಲದ ಬಸ್ಸುಗಳ ಗಾಜು ಒಡೆಯುವ ಕೆಲಸ ಶುರು ಮಾಡಿದ್ದು ತಮಿಳರೇ. ಅದಕ್ಕೆ ನಿಮ್ಮ ಪೊಲೀಸರು ಸಹಕರಿಸಿದ್ದಾರೆ. ಇದಕ್ಕೆ ಏನಂತೀರಿ? ಹೌದು ಬಸ್ಸುಗಳನ್ನು ಸುಟ್ಟರೆ ಸಮಸ್ಯೆಗೆ ಪರಿಹಾರ ಖಂಡಿತ ಸಿಗೋದಿಲ್ಲ ಎಂದವರು ಗಣೇಶ್.[ಕೆಪಿಎನ್ ಟ್ರಾವೆಲ್ಸ್ ನ ಮೂವತ್ತಕ್ಕೂ ಹೆಚ್ಚು ಬಸ್ ಗೆ ಬೆಂಕಿ]
***
ಹೀಗೆ ಮಾಡಬಾರದಿತ್ತು ನಿಜ. ಯಾರೋ ಕಿಡಿಗೇಡಿಗಳು ಇದರ ಹಿಂದಿದ್ದಾರೆ. ಇದಕ್ಕೂ ಕಾವೇರಿ ಗಲಾಟೆಗೆ ಸಂಬಂಧ ಇಲ್ಲ ಅಂತ ಕಾಣ್ಸತ್ತೆ. ಆದರೆ ಕೆಪಿಎನ್ ಟ್ರಾವೆಲ್ಸ್ ನಲ್ಲಿ ಎಷ್ಟು ಮಂದಿ ಕನ್ನಡಿಗರು ಕೆಲಸ ಮಾಡ್ತಾರೆ? ನಿಮ್ಮ ಕಚೇರಿಗೆ ಫೋನ್ ಮಾಡಿದರೆ ತಮಿಳಿನಲ್ಲೇ ಮಾತಾಡ್ತಾರೆ. ನಿಮ್ಮ ಆಫೀಸ್ ಗೆ ಬಂದರೆ ನಮ್ಮ ರಾಜ್ಯದಲ್ಲಿ ಇದ್ದ ಹಾಗೆ ಅನಿಸಲ್ಲ. ನಿಮಗೆ ಅರ್ಥ ಆಯಿತು ಅಂತ ಅಂದ್ಕೊಳ್ತೀನಿ ಎಂದು ಪ್ರಮೋದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
***
ನೀವು ಸರಿಯಾಗಿ ಹೇಳಿದ್ರಿ. ಯಾರೋ ಹೊಟ್ಟೆಕಿಚ್ಚು ಇರುವವರು, ಇದೇ ವ್ಯವಹಾರದವರೇ ಈ ಕೆಲಸ ಮಾಡಿಸಿರಬೇಕು. ಸರಿಯಾದ ತನಿಖೆ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ಪಿ.ಜಿ.ಮಹೇಶ್ ಅವರದು.
***
ಇದಕ್ಕೆ ಜಯಲಲಿತಾ ಜವಾಬ್ದಾರಿ ಎಂದು ಕೀರ್ತಿ ಕುಮಾರ್ ಆರೋಪಿಸಿದರೆ, ಟಿವಿಯ ವಿಷುಯಲ್ಸ್ ನೋಡಿದ್ವಿ, ಬಹಳ ಅನುಮಾನಾಸ್ಪದವಾಗಿದೆ. ಇನ್ಶೂರೆನ್ಸ್ ಕ್ಲೇಮ್ ಮಾಡುವುದಕ್ಕೆ ಹೀಗೆ ಮಾಡಿದಂತಿದೆ ಎಂಬ ಅನುಮಾನ ಎಸ್.ಅನಂತಮೂರ್ತಿ ಅವರದು.[ಬೆಂಗಳೂರಿನಲ್ಲಿರುವ ತಮಿಳರ ಪ್ರದೇಶಕ್ಕೆ ಬಿಗಿ ಭದ್ರತೆ]
***
ದೇವೇಗೌಡರ ಸಲಹೆಗೆ ಮಹೇಶ್ ಮೆಚ್ಚುಗೆ ವ್ಯಕ್ತಪಡಿಸಿ, ಅದು ಸರಿಯಾಗಿದೆ ಎಂದರೆ, ಒಂದು ಬಸ್ ಖರೀದಿ ಎಷ್ಟು ಕಷ್ಟ ಇದೆ ಗೊತ್ತಾ? ಅಂಥದರಲ್ಲಿ ನಲವತ್ತೈದು ಬಸ್ಸು ಸುಟ್ಟಿರುವುದು ದುರಂತ. ಬೆಂಗಳೂರು ನಾಚಿಕೆ ಪಡುವಂಥ ಹೀನ ಕೆಲಸ. ನಮ್ಮ ಪೊಲೀಸರು ಸರಿಯಾಗಿ ತನಿಖೆ ಮಾಡಬೇಕು. ಯಾರೋ ವೈಮನಸ್ಯ ಇರುವಂಥವರೇ ಕಾವೇರಿ ಹೆಸರಲ್ಲಿ ಈ ಕೆಲಸ ಮಾಡಿದ್ದಾರೆ ಎಂಬುದು ಮತ್ತೊಬ್ಬರ ಅನುಮಾನ.
***
ಈ ಕೃತ್ಯ ದುಃಖಕರ ಎಂದು ಮಧು ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ಬಗ್ಗೆ ನೀವೂ ಅಭಿಪ್ರಾಯ ತಿಳಿಸಬಹುದು.