ಪೇಜಾವರ ಶ್ರೀಗಳ ಹಿಂಸಿಸಿದರೆ ಮತ್ತೆ ಕೃಷ್ಣನ ದರ್ಶನ ಸಹ ಸಿಗಲಿಕ್ಕಿಲ್ಲ
ಉಡುಪಿಯ ಶ್ರೀಕೃಷ್ಣ ಮತ್ತೆ ಎತ್ತ ತಿರುಗಿ ಬಿಡುವನೋ ಎಂಬ ಆತಂಕ ನನ್ನಲ್ಲಿ ಶುರುವಾಗಿದೆ. ಈ ಬಾರಿ ತಿರುಗಿ ನಿಲ್ಲುತ್ತಾನೋ ಅಥವಾ ಗರ್ಭಗುಡಿಯಿಂದ ಹೊರಗೆ ಬಂದು ಬಿಡಬಹುದೇನೋ! ಜಾತಿಯ ನೆಪದಲ್ಲಿ ತನ್ನ ಭಕ್ತನಿಗೆ ಆದ ಅನ್ಯಾಯ ಸಹಿಸಲಾರದೆ ಕೃಷ್ಣ ತಿರುಗಿ ನಿಂತ ಎಂಬ ವಿಚಾರ ನಿಮಗೆಲ್ಲರಿಗೂ ತಿಳಿದಿದೆ.
ಜಾತಿಯ ಕಾರಣಕ್ಕೆ ಮಾಡಿದ ಎಡವಟ್ಟಿನ ಫಲಿತವಾಗಿ ಈಗಲೂ ನಿತ್ಯ ಕಿಂಡಿಯ ಮೂಲಕ ದೇವರ ದರ್ಶನ ಮಾಡುತ್ತಿದ್ದೇವೆ. ನೂರಾರು ವರ್ಷಗಳಿಂದ ಕಿಂಡಿಯಲ್ಲಿಯೇ ಭಗವಂತನನ್ನು ಕಾಣುತ್ತಿದ್ದರೂ ಆ ಮೂಲಕ ಸಿಕ್ಕ ಸಂದೇಶ ನಮ್ಮ ತಲೆಯವರೆಗೂ ತಲುಪೇ ಇಲ್ಲ. ಇನ್ನು ಹೃದಯಕ್ಕೆ ಮುಟ್ಟುವುದು ಯಾವಾಗ?
ನಮಗೆ ಬುದ್ಧಿ ಚಿಗುರುವುದಕ್ಕೆ ಭಗವಂತ ಇನ್ನೇನು ಮಾಡಬೇಕು? ಗರ್ಭಗುಡಿಯಿಂದಲೇ ಹೊರಬರಬೇಕಾ ಅಥವಾ ಇವು ಸರಿ ಹೋಗುವಂಥವಲ್ಲ ಎಂದು ನಮ್ಮನ್ನೆಲ್ಲ ಬಿಟ್ಟು ಓಡಬೇಕಾ? ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರ ನಡೆಯಲ್ಲಿ ನಾವು ತಪ್ಪು ಹುಡುಕುತ್ತಿದ್ದೇವೆ.
ನಾವೆಲ್ಲ ಗೋಲಿ, ಕುಂಟೆ ಬಿಲ್ಲೆ ಅಂತ ಆಡುವ ವಯಸ್ಸಿನಲ್ಲೇ ಅಂದರೆ ತಮ್ಮ ಎಂಟನೆ ವಯಸ್ಸಿಗೆ ಸನ್ಯಾಸ ದೀಕ್ಷೆ ಪಡೆದಂಥ ಮಹನೀಯರು ಅವರು. ಪರಮಾತ್ಮ ಎಂಬ ಶಬ್ದದ ಅರ್ಥ ನಮಗೆ ತಿಳಿಯುವ ಹೊತ್ತಿಗೆ ವೇದ-ಶಾಸ್ತ್ರ-ಪುರಾಣಗಳ ಅಧ್ಯಯನ ಆರಂಭಿಸಿದವರು ವಿಶ್ವೇಶ ತೀರ್ಥರು.

ಯಾರೂ ಮಾಡಿರದಷ್ಟು ಬಾರಿ ಶ್ರೀ ಕೃಷ್ಣನ ಸೇವೆ ಮಾಡಿದ ಯತಿ ಶ್ರೇಷ್ಠರು
ಸತತ ಎಪ್ಪತ್ತೆಂಟು ವರುಷಗಳಿಂದ ಅವಿಚ್ಛಿನ್ನವಾಗಿ ಪರಮಾತ್ಮನ ಆರಾಧನೆ ಮಾಡುತ್ತಾ, ಸತತ ಐದನೇ ಪರ್ಯಾಯದಲ್ಲಿ ಶ್ರೀ ಕೃಷ್ಣನ ನಿತ್ಯ ಪೂಜಿಸುತ್ತಿರುವ ಆ ಶರೀರಕ್ಕೆ ಎಂಬತ್ತಾರು ವರುಷ ಆಗಿದೆ. ಇದು ಅವರ ಐದನೇ ಪರ್ಯಾಯ ಅಂದರೆ ನೂರಾರು ವರುಷಗಳ ಉಡುಪಿಯ ಇತಿಹಾಸದಲ್ಲಿಯೇ, ಅಷ್ಟೇ ಯಾಕೆ, ಅಷ್ಟ ಮಠಗಳ ಇತಿಹಾಸದಲ್ಲಿಯೇ ಯಾರೂ ಮಾಡಿರದಷ್ಟು ಬಾರಿ ಶ್ರೀ ಕೃಷ್ಣನ ಸೇವೆ ಮಾಡಿದ್ದಾರೆ!

ಮನಸ್ಸು ಹಾಗೂ ಬುದ್ಧಿ ಕೃಶವಾಗಿಲ್ಲ
ವಯಸ್ಸು ಶರೀರಕ್ಕೆ ಅಷ್ಟೇ ಆಗಿದೆ. ಆದ್ದರಿಂದಲೇ ಶರೀರ ಮಾತ್ರ ಕೃಶ ಆಗಿದೆ. ಮನಸ್ಸು ಹಾಗೂ ಬುದ್ಧಿ ಕೃಶವಾಗಿಲ್ಲ. ಅಂದಹಾಗೆ ಮಾರ್ಗದರ್ಶನ ಮಾಡುವುದು ಗುರುವಿನ ಹಕ್ಕು ಹಾಗೂ ಕರ್ತವ್ಯ. ಅದನ್ನು ಅವರು ಮಾಡಿದ್ದಾರೆ. ಸ್ವಲ್ಪ ಯೋಚಿಸಿ ನೋಡಿ, ಏನು ಬದಲಾಗಿದೆ ?

ಧರ್ಮದ ಹೆಸರು ಹೇಳುತ್ತಾ ಶ್ರೀ ಕೃಷ್ಣನ ಪರಮ ಭಕ್ತರಿಗೆ ಮಾನಸಿಕ ಹಿಂಸೆ
ಜಾತಿಯ ಹೆಸರಿನಲ್ಲಿ ಅಂದು ಕನಕ ದಾಸರಿಗೆ ಅವಮಾನ ಹಾಗೂ ಶಾರೀರಿಕ ಹಿಂಸೆ ಕೊಟ್ಟೆವು. ಈಗ ಪ್ರಪಂಚ ಮುಂದುವರಿದಿದೆ ಎಂದು ಧರ್ಮದ ಹೆಸರು ಹೇಳುತ್ತಾ ಶ್ರೀ ಕೃಷ್ಣನ ಪರಮ ಭಕ್ತರು ಹಾಗೂ ಯತಿ ಶ್ರೇಷ್ಠರಿಗೆ ಅವರ ಉತ್ತಮ ನಡೆಯನ್ನು ಪ್ರಶ್ನಿಸಿ ಮಾನಸಿಕ ಹಿಂಸೆ ನೀಡುತ್ತಿದ್ದೇವೆ.

ಗಲೀಜು ವಿಚಾರಗಳ ಚರ್ಚೆ
ನಮ್ಮ ಮನಸ್ಸಿನಲ್ಲಿ ಇರುವ ವಿಷವನ್ನು ಫೇಸ್ ಬುಕ್ ಇತ್ಯಾದಿ ಸಾಮಾಜಿಕ ಜಾಲ ತಾಣಗಳಲ್ಲಿ ವಾಂತಿ ಮಾಡುತ್ತಿದ್ದೇವೆ. ಆ ಗಲೀಜನ್ನು ಮಾಧ್ಯಮಗಳು ಅವರವರ ಇಷ್ಟಬಂದಂತೆ ಚರ್ಚಿಸಿ, ಇನ್ನೂ ಕಠೋರ ಮಾಡಿ ಸಮಾಜದಲ್ಲಿ ಹರಡುತ್ತಿವೆ. ಅ ವಿಚಾರ ಈಗ ಗಾಳಿಗೆ ಸಿಕ್ಕ ಕಾಳ್ಗಿಚ್ಚಿನಂತೆ ಮನಸುಗಳನ್ನು ಸುಡಲು ಸಮಾಜವನ್ನು ತುಂಡರಿಸಿ, ಹೋಳಾಗಿಸಿ ಸಾಮರಸ್ಯವನ್ನು ಕದಡುತ್ತಿದೆ.

ಗುರುಗಳನ್ನು ಟೀಕಿಸುವ ವ್ಯಕ್ತಿಗಳು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಲಿ
ಈ ಬಗ್ಗೆ ಯಾರಿಗೂ ಚಿಂತೆ ಇಲ್ಲ ಬಿಡಿ. ಆದರೆ ಈ ಜನಗಳಿಗೆ ಏನಾಗಿದೆ ಸ್ವಾಮಿ ? ಬುದ್ಧಿ ಭ್ರಮಣೆ ಆಗಿದೆಯಾ? ಗುರುಗಳನ್ನು ಟೀಕಿಸುವ ವ್ಯಕ್ತಿಗಳು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕು. ಅರೇ! ಗುರುಗಳ ವಯಸ್ಸು ಏನು, ಅವರ ಅನುಭವ ಎಷ್ಟು, ಅವರ ಜ್ಞಾನ ಎಷ್ಟು, ಅವರನ್ನು ಟೀಕಿಸುವ ಯೋಗ್ಯತೆ ಇದೆಯೇ ಎಂದು ಯೋಚಿಸಿ.

ಲೈಕ್- ಶೇರ್ ಗಳಿಗೆ ನಮ್ಮ ಮನಸ್ಸಿನ ಕೊಳಕನ್ನು ತೆರೆದಿಡುವ ನಾವೆಲ್ಲಿ?
ಅರಿಷಡ್ವರ್ಗಗಳನ್ನು ಗೆದ್ದು ಕಠಿಣವಾದ ಸನ್ಯಾಸಾಶ್ರಮವನ್ನು ಪಾಲಿಸುತ್ತಾ ಭಗವಂತನ ವಿಚಾರದಲ್ಲಿ ಸ್ಪಷ್ಟತೆ ಇರುವ ಅವರೆಲ್ಲಿ, ಕೇವಲ ಲೈಕ್- ಶೇರ್ ಗಳಿಗೆ ನಮ್ಮ ಮನಸ್ಸಿನ ಕೊಳಕನ್ನು ತೆರೆದಿಡುವ ನಾವೆಲ್ಲಿ? ಒಮ್ಮೆ ಚಿಂತಿಸಿ: ಗುರುವನ್ನು- ಗುರು ವಾಕ್ಯವನ್ನು ಗೌರವಿಸದೇ ಗುರುವಿನ ಧರ್ಮಾತೀತ ನಡೆಯನ್ನು ಪ್ರಶ್ನಿಸುತ್ತಾ ಅವರಿಗೆ ಅಗೌರವ ತೋರುತ್ತ ನಾವು ಏನು ಸಾಧಿಸಲು ಹೊರಟಿದ್ದೇವೆ?

ಮಳೆ ಸರಿಯಾಗಿ ಬರುತ್ತಿಲ್ಲ ಎಂದು ಯಾಕೆ ಕೇಳುತ್ತೀರಿ
ಎಂಬತ್ತಾರು ವರ್ಷದ ಆ ಹಿರಿಯ ಗುರುಗಳು ಪತ್ರಿಕಾ ಗೋಷ್ಠಿ ಕರೆದು ತಮ್ಮ ನಡೆಯ ಬಗ್ಗೆ ಸ್ಪಷ್ಟೀಕರಣ ಕೊಡ ಬೇಕಾದ ಸ್ಥಿತಿಗೆ ಇಂದು ನಾವು ಅವರನ್ನು ತಂದು ನಿಲ್ಲಿಸಿದ್ದೇವೆ. ಅಬ್ಬಾ, ಎಂಥ ದೌರ್ಭಾಗ್ಯ! ಮಳೆ ಸರಿಯಾಗಿ ಬರುತ್ತಿಲ್ಲ ಎಂದು ಯಾಕೆ ಕೇಳುತ್ತೀರಿ ಸ್ವಾಮಿ? ಹೀಗೆ ಗುರುಗಳನ್ನು ಹಿಂಸಿಸಿದರೆ ಭೂಕಂಪ ಸಹ ಆಗುತ್ತದೆ, ಸಂಶಯ ಬೇಡ.

ಶ್ರೀಗಳ ಪಾದ ಧೂಳಿಗೂ ನಾವು- ನೀವು ಸಮರಲ್ಲ
ಪೇಜಾವರ ಶ್ರೀಗಳನ್ನು ದೂಷಿಸುತ್ತಿರುವ, ನಿಂದಿಸುತ್ತಿರುವ ಹಾಗೂ ತಮ್ಮನ್ನು ತಾವು ಧರ್ಮ ಸಂರಕ್ಷಕರು ಎಂದು ತಿಳಿದುಕೊಂಡು ಶ್ರೀಗಳ ನಡೆಯನ್ನೇ ಪ್ರಶ್ನಿಸುವವರಲ್ಲಿ ನನ್ನ ಮಾತು: ಶ್ರೀಗಳ ಪಾದ ಧೂಳಿಗೂ ನಾವು- ನೀವು ಸಮರಲ್ಲ. ಇನ್ನೊಂದು ಮುಖ್ಯವಾದ ವಿಚಾರ: ಒಮ್ಮೆ ಕನಕದಾಸರ ವಿಚಾರದಲ್ಲಿ ಮಾಡಿದ ಅಪರಾಧದಿಂದಾಗಿ ಕಿಟಕಿಯಲ್ಲಿ ಶ್ರೀ ಕೃಷ್ನನನ್ನು ನೋಡುವಂತಾಗಿದೆ. ಈಗ ಮತ್ತೆ ಅಂಥ ತಪ್ಪು ಮಾಡಿದರೆ ಮತ್ತೆ ಕೃಷ್ಣನ ದರ್ಶನ ಸಹ ಸಿಗಲಿಕ್ಕಿಲ್ಲ.

ನೆಲಕ್ಕೆ ಬಿದ್ದ ಬೆವರ ಹನಿಯ ಧರ್ಮ ಯಾವುದು?
ಯಾವುದೇ ಗುಡಿಯಲ್ಲಿ ರಥ ಸಿದ್ಧಪಡಿಸುವವರು, ಅದನ್ನು ಎಳೆಯಲು ಹಗ್ಗ ಹೊಸೆಯುವವರು, ಬೆಳೆದ ಫಲ-ತರಕಾರಿ-ಆಹಾರ ಧಾನ್ಯಗಳು ಇವುಗಳ ಹಿಂದೆ ಇರುವವರ ಧರ್ಮವನ್ನು ನೋಡ್ತೀರಾ? ನೆಲಕ್ಕೆ ಬಿದ್ದ ಬೆವರ ಹನಿಯ ಧರ್ಮ ಯಾವುದು? ಮೊನ್ನೆ ಉಡುಪಿ ಮಠಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕೆಲವರು ಅಂದಾಗ ಅದನ್ನು ನಾವು ತಡೆಯುತ್ತೇವೆ ಎಂದು ಮೊದಲು ಮುಂದೆ ಬಂದವರೇ ಮುಸ್ಲಿಮರು.

ಈಗ ಯಾರ ವಿರುದ್ಧ ಪ್ರತಿಭಟಿಸುತ್ತೀರಿ
ಕೃಷ್ಣ ಮಂದಿರದ ಗಂಟೆಯ ಸದ್ದು, ಮಂತ್ರಗಳ ಉಚ್ಚಾರ ಮಸೀದಿಯ ಗೋಪುರಕ್ಕೆ ತಾಗುವಂತೆಯೇ, ಅಲ್ಲಿನ ಪ್ರಾರ್ಥನೆ ಕೃಷ್ಣನ ಕಿವಿ ತಲುಪುತ್ತದೆ. ಈಗ ಯಾರ ವಿರುದ್ಧ ಪ್ರತಿಭಟಿಸುತ್ತೀರಿ?












Click it and Unblock the Notifications