ಸಂಪಾದಕರಿಗೆ ಪತ್ರ: ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದರೆ ಬರೀ ತೊಂದರೆ
ಬಿ.ಎಸ್ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರವು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಎಂಬ ನೂತನ ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಲು ಮುಂದಾಗಿದೆ. ಬಳ್ಳಾರಿ ಜಿಲ್ಲಾ ಕೇಂದ್ರದಿಂದ ಕೆಲವೊಂದು ಪ್ರದೇಶಗಳು 200 ಕಿ.ಮೀ ದೂರ ಇದ್ದು, ಜನ ಸಾಮಾನ್ಯರಿಗೆ ತೊಂದರೆಯುಂಟಾಗುತ್ತಿದೆ ಎಂಬ ದೂರು ಕೇಳಿ ಬಂದಿತ್ತು. ಹೀಗಾಗಿ, ಆಡಳಿತ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆ ವಿಭಜನೆಗೆ ಸರ್ಕಾರ ಮುಂದಾಗಿದೆ.
ಬಳ್ಳಾರಿಯಲ್ಲಿ ಕುರುಗೋಡು, ಸಿರಗುಪ್ಪ, ಸಂಡೂರು ಹಾಗೂ ಕೂಡ್ಲಿಗಿ ತಾಲೂಕು ಉಳಿಸಿಕೊಳ್ಳಲಾಗುತ್ತದೆ. ನೂತನ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ಜಿಲ್ಲಾಕೇಂದ್ರವಾಗಿರಲಿದ್ದು, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕಂಪ್ಲಿ, ಕೊಟ್ಟೂರು, ಹಡಗಲಿ ತಾಲೂಕುಗಳಿರಲಿವೆ.

ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ, ಹಡಗಲಿ ಸೇರಿ, ಹೊಸಪೇಟೆ ಯನ್ನು ಕೇಂದ್ರವಾಗಿಟ್ಟುಕೊಂಡು ಜಿಲ್ಲೆ ಮಾಡಿದ್ದಲ್ಲಿ, ಹಡಗಲಿ, ಹರಪನಹಳ್ಳಿ, ಕೊಟ್ಟೂರು ಭಾಗದ ಜನರು ತಮ್ಮ ಅಮೂಲ್ಯ ಸಮಯವನ್ನು ಮತ್ತದೇ ಸಂಚಾರದಲ್ಲಿ ಕಳೆಯ ಬೇಕಾದೀತು.
ಹೊಸಪೇಟೆ ಗಡಿ ಉದ್ದೇಶಿತ ವಿಜಯನಗರ ಜಿಲ್ಲೆಯ ಗಡಿಭಾಗದಲ್ಲಿ ಇದ್ದು, ಒಂದು ಮೈ ಕೊಪ್ಪಳ ಜಿಲ್ಲೆ, ಇನ್ನೊಂದು ಮೈ ತುಂಗಭದ್ರಾ ನದಿ, ಮತ್ತೊಂದು ಮೈ ಗುಡ್ಡಗಳು, Archeological Survey of India ನಿಯಂತ್ರಿತ ಹಂಪಿ ಪ್ರದೇಶ ಜಿಲ್ಲಾ ಕೇಂದ್ರದ ಬೆಳವಣಿಗೆಗೆ ಅಡ್ಡಿ ಹಾಗೂ ಹಡಗಲಿ, ಹರಪನಹಳ್ಳಿ, ಕೊಟ್ಟೂರು ನಿಂದ ಅತೀ ದೂರದಲ್ಲಿದ್ದು ಹೊಸಪೇಟೆಯ ನ್ನು ಜಿಲ್ಲಾ ಕೇಂದ್ರವಾಗಿ ಮಾಡುವುದು ಅವೈಜ್ಞಾನಿಕ.
ಉದ್ದೇಶಿತ ಜಿಲ್ಲೆಯ ಮಧ್ಯ ಹಗರಬೊಮ್ಮನಹಳ್ಳಿ , ಇದು ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ, ಹಡಗಲಿ, ಹೊಸಪೇಟೆ ಗೆ ಸಮಾನ ದೂರದಲ್ಲಿದ್ದು, ಜಿಲ್ಲಾ ಕೇಂದ್ರಕ್ಕೆ ಬೇಕಾದ ಭೌಗೋಳಿಕ ಅರ್ಹತೆ ಹೊಂದಿದೆ.
ಉದ್ದೇಶಿತ ಜಿಲ್ಲೆಯ ಶಾಸಕರು, ಜನ ಪ್ರತಿನಿಧಿಗಳು, ಜನರು ಈ ಬಗ್ಗೆ ಗಮನ ಹರಿಸಬೇಕು. ಯಾವುದೇ ಚರ್ಚೆ ಇಲ್ಲದೇ ಹೊಸಪೇಟೆ ಯನ್ನೇ ಕೇಂದ್ರ ಮಾಡಬೇಕೆಂಬ ಹಿತಾಸಕ್ತಿಗಳ ಆಸೆಗೆ ಸ್ವಲ್ಪ ಬಿಸಿ ಮುಟ್ಟಿಸಬೇಕು.












Click it and Unblock the Notifications