ಮಲೆನಾಡಿಗೆ ಮರಣ ಶಾಸನ ನೀಡಿದ ಗುಲಾಂ
ಅಡಿಕೆ ಬೆಳೆ, ಬೆಳೆಗಾರರ ಸಮಸ್ಯೆ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಕೇಂದ್ರ ಸಚಿವ ಗುಲಾಂ ನಬಿ ಅಜಾದ್ ಅವರ ನೇತೃತ್ವದ ಸಮಿತಿ ಅಡಿಕೆ ನಿಷೇಧದ ಬಗ್ಗೆ ಮಾತನಾಡುತ್ತಿದೆ. ಈ ನಡುವೆ ಅಡಿಕೆ ಬೆಳೆಗಾರರ ಸಂರಕ್ಷಣೆಗೆ ಹೋರಾಟ ಮಾಡುವುದಾಗಿ ಕ್ಯಾಂಪ್ಕೋ(Campco) ಅಧ್ಯಕ್ಷ ಕೊಂಕಡಿ ಪದ್ಮನಾಭ ಹೇಳಿದ್ದಾರೆ.
ಮಲೆನಾಡು, ಕರಾವಳಿ ಹಾಗೂ ಬಯಲು ಸೀಮೆಯ ಅಡಿಕೆ ಬೆಳೆಗಾರರ ಮರಣ ಶಾಸನ ಬರೆಯಲು ಹೊರಟಿರುವ ಕೇಂದ್ರಕ್ಕೆ ಸ್ಥಳೀಯ ಸಮಸ್ಯೆಗಳ ಅರಿವಿಲ್ಲವೇ? ಸಿಗರೇಟ್ ಕಂಪನಿಗಳ ಲಾಬಿಗೆ ಸರ್ಕಾರ ಮಣಿಯುತ್ತಿದೆಯೇ? ಎಂಬೆಲ್ಲ ಪ್ರಶ್ನೆಗಳತ್ತ ಬೆಳಕು ಚೆಲ್ಲಿದೆ ಗಿರೀಶ್ ಕಾರಗದ್ದೆ ಅವರ ಲೇಖನ...
ಎಲೆಯಡಿಕೆಯ ಜೊತೆಗೆ ಸೇವಿಸಿದರೆ ಆರೋಗ್ಯಕ್ಕೆ ಮಾರಕವಾಗಬಲ್ಲ ತಂಬಾಕು ಬೆಳೆಯನ್ನು ಪ್ರೋತ್ಸಾಹಿಸುವುದಕ್ಕಾಗಿ 'ತಂಬಾಕು ಅಭಿವೃದ್ಧಿ ಮಂಡಲಿ'ಯನ್ನು ಹುಟ್ಟು ಹಾಕಿರುವ ಕೇಂದ್ರ ಸರ್ಕಾರವು, ಕೊಂಚವೂ ಅಪಾಯಕಾರಿಯಲ್ಲದ, ನೂರಾರು ವರ್ಷಗಳಿಂದ ಕನ್ನಡಿಗರ, ವಿಶೇಷವಾಗಿ ಕರಾವಳಿ, ಮಲೆನಾಡು ಹಾಗೂ ಮಲೆನಾಡಿಗೆ ಹೊಂದಿಕೊಂಡಿರುವ ಕೆಲ ಬಯಲು ಪ್ರದೇಶಗಳ ಜನರ ಜೀವನ ಶೈಲಿಯ ಭಾಗವಾಗಿರುವ ಹಾಗೂ ಬದುಕಿನ ಆಸರೆಯೂ ಆಗಿರುವ ಅಡಿಕೆಯನ್ನು ನಿಷೇಧಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆಯಂತೆ. ಕೇಂದ್ರ ಆರೋಗ್ಯ ಸಚಿವರು ಹಾಗೂ ಆಹಾರ ಮತ್ತು ಸುರಕ್ಷತೆ ಕಮಿಟಿ(Food and Security Committee) ಈ ಎಲ್ಲಾ ಬೆಳವಣಿಗೆಗಳ ಪಾಲುದಾರರು .[ಇದನ್ನೂ ಓದಿ :ಕಂಗು ನಂಬಿದವರ ಗತಿಯೇನು?]

ತನ್ನ ಅಧಿಕಾರದ ಅವಧಿಯಲ್ಲಿ ಒಮ್ಮೆಯೂ ಅಡಿಕೆ ಬೆಳೆಯುವ ಭಾಗಕ್ಕೆ ಬೇಟಿ ಕೊಟ್ಟಿಲ್ಲದ, ಮಲೆನಾಡು ಮತ್ತು ಕರಾವಳಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಕಾಶ್ಮೀರ ರಾಜ್ಯದ ಹಿನ್ನೆಲೆಯಿಂದ ಬಂದಿರುವ, ಕನ್ನಡಿಗರಿಗೆ ಸಂಬಂಧವೇ ಇಲ್ಲದ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ರವರು ಈ ಭಾಗದ ಲಕ್ಷಾಂತರ ರೈತರ ಪಾಲಿಗೆ ಮರಣ ಶಾಸನವಾಗಬಲ್ಲ ನಿರ್ಧಾರವನ್ನು ತೆಗೆದುಕೊಳ್ಳಬಹುದೆಂದರೆ ನಾವು ಅದೆಂತಹ Self Rule ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ? [ಧೂಮಪಾನಿಗಳೆ ನಿಮಗಿದು ನೆನಪಿರಲಿ]
ಇನ್ನು ಆಹಾರ ಮತ್ತು ಸುರಕ್ಷತೆ ಕಮಿಟಿಯಂತೆ ಇದು, ಏನು, ಇದರಲ್ಲಿ ಯಾರು ಯಾರು ಇದ್ದಾರೆ ಎಂಬುದೂ ನಮಗೆ ತಿಳಿದಿಲ್ಲ ಆದರೆ ನಮ್ಮ ಜೀವನದ ನಿರ್ಧಾರ ಅವರ ಕೈಯಲ್ಲಂತೆ. ಔಷಧಿ ಮತ್ತು ಮಾತ್ರೆಗಳ ಮೇಲೆ ಅಚ್ಚು ಹಾಕಿರುವುದನ್ನು ವಿದ್ಯಾವಂತರೇ ಓದಿ ಅರ್ಥಮಾಡಿಕೊಳ್ಳಬಹುದಾದ ಪರಿಸ್ಥಿತಿಯಲ್ಲಿ ನಾವಿಲ್ಲ. ಔಷಧಿಯನ್ನು ತಿಳಿಯದೇ ಬಳಸಿ ಎಷ್ಟೋ ಜನರ ಜೀವಕ್ಕೆ ಹಾನಿಯಾಗಿರುವ ಘಟನೆಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ. ಇದನ್ನು ಜನರ ಭಾಷೆಯಲ್ಲಿ ಹಾಕಬೇಕು ಎಂಬುದರ ಬಗ್ಗೆ ಏನೇನೂ ಮಾಡದ ಇವರು ಅಡಿಕೆ ಜನರ ಜೀವಕ್ಕೆ ಹಾನಿಕಾರಕ ಅನ್ನುವ ಫತ್ವಾ ಹೊರಡಿಸಿ ಬಿಟ್ಟಿದ್ದಾರೆ.[ಅಡಿಕೆ ಪತ್ರಿಕೆ ತಪ್ಪದೇ ಓದಿ]
ಇವರ ಈ ನಿರ್ಧಾರಗಳನ್ನು ಪ್ರಶ್ನಿಸಲೇಬೇಕು ಅನ್ನುವುದು ಒಂದು ಕಡೆಯಾದರೆ, ಎಲ್ಲಿಯೋ ಕೂತವರು ನಿರ್ಧಾರಗಳನ್ನು ತೆಗೆದುಕೊಂಡು, ಅವರ ನಿರ್ಧಾರಗಳನ್ನು ಇಡೀ ದೇಶದ ಮೇಲೆ ಹೇರುವ ಕೇಂದ್ರೀಕೃತ ವ್ಯವಸ್ಥೆಯನ್ನೇ ನಾವು ಪ್ರಶ್ನಿಸಬೇಕಿದೆ.
ಹೀಗಾಗುತ್ತಿರುವುದು ಇದೇ ಮೊದಲಲ್ಲ, ಮರದ ಕಡಿತಲೆ ನಿಷೇಧ, ಅವೈಜ್ಞಾನಿಕ ಒತ್ತುವರಿ ತೆರವು, ಅಸಂಬದ್ಧ ಹುಲಿಯೋಜನೆ, ಪಶ್ಚಿಮ ಘಟ್ಟಗಳ ಕುರಿತ ಕಾನೂನು ಹೀಗೆ ಮಲೆನಾಡಿನವರ ಮೇಲಿನ ಮರಣಶಾಸನಗಳೆಲ್ಲವೂ ನಮ್ಮ ಜೀವನ ಶೈಲಿಯ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ದೂರದ ದಿಲ್ಲಿಯಿಂದಲೇ ಹರಿದು ಬಂದಿರುವಂತವು. ನಮ್ಮಿಂದ ಚುನಾಯಿತರಾಗಿರದ ಯಾರೋ ಅಪರಿಚಿತರೊಬ್ಬರ ಕೈಯಲ್ಲಿನ ಅಧಿಕಾರ ನಮ್ಮನ್ನು ವಿನಾ ಕಾರಣ ಕಷ್ಟಕ್ಕೆ ನೂಕಬಹುದೆಂದರೆ ನಮ್ಮ ಒಕ್ಕೂಟದಲ್ಲಿ ಹುಳುಕುಗಳಿವೆ ಎಂದು ನಿಮಗೆ ಅನ್ನಿಸುತ್ತಿಲ್ಲವೇ?












Click it and Unblock the Notifications