ಪ್ರಕಾಶ್ ರೈ ಅವರೇ ಈ 5 ಪ್ರಶ್ನೆಗಳಿಗೆ ನೀವಾದರೂ ಉತ್ತರ ಹೇಳಿ...
Recommended Video
ವ್ಯಕ್ತಿಯೊಬ್ಬರೊಂದಿಗೆ ಸೈದ್ಧಾಂತಿಕ ಸಂಘರ್ಷ ಇದೆ ಎಂಬ ಕಾರಣಕ್ಕೆ ಯಾವುದೇ ಸಾವು ಸಂಭ್ರಮಿಸುವಂಥದ್ದಲ್ಲ. ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಆದಾಗ ಅಂಥದ್ದೊಂದು ಸನ್ನಿವೇಶ ಸೃಷ್ಟಿಯಾಯಿತು. ಸಹಜವಾಗಿ ಅದು ಸಿಟ್ಟಿಗೆ ಕಾರಣವಾಗಿದ್ದು ನಿಜ. ಅಂಥ ಅಮಾನವೀಯ ವರ್ತನೆಯನ್ನು ಖಂಡಿಸಬೇಕು ಎಂಬುದರಲ್ಲಿ ಕೂಡ ಎರಡು ಮಾತಿಲ್ಲ.
ಆದರೆ, ಆ ಹತ್ಯೆಯ ನಂತರ ಎಡ- ಬಲ ಸಿದ್ಧಾಂತಗಳೆಂಬ ಸ್ಪಷ್ಟ ಗೆರೆ ಹಾಗೂ ಪರಸ್ಪರ ಆರೋಪ- ಪ್ರತ್ಯಾರೋಪ ಹಾಗೂ ಅದು ಪಡೆದುಕೊಳ್ಳುತ್ತಿರುವ ಸ್ವರೂಪ ಆತಂಕಕಾರಿಯಾಗಿದೆ. ಪತ್ರಕರ್ತೆ ಗೌರಿ ಲಂಕೇಶ್ ಅವರು ಒಂದು ಸಿದ್ಧಾಂತದ ಪರ ಹಾಗೂ ಮತ್ತೊಂದು ಸಿದ್ಧಾಂತದ ವಿರುದ್ಧವಾಗಿದ್ದರು. ಆದರೆ ಆ ಕಾರಣಕ್ಕೇ ಅವರನ್ನು ಕೊಲ್ಲಲಾಗಿದೆ ಎಂಬುದನ್ನು ಖಚಿತ ಧ್ವನಿಯಲ್ಲಿ ಹೇಳುವುದು ಎಷ್ಟು ಸರಿ?
ಗೌರಿ ದಿನ: ಮೋದಿಯನ್ನು ಕರ್ನಾಟಕದೊಳಗೆ ಬಿಡಬಾರದು ಎಂದ ದೊರೆಸ್ವಾಮಿ
ಗೌರಿ ಲಂಕೇಶ್ ಅವರ ಹತ್ಯೆಯನ್ನು ಸೈದ್ಧಾಂತಿಕ ಸಂಘರ್ಷದ ಅತಿರೇಕದ ಫಲ ಎಂದು ಹೇಳುವುದಾದರೆ ಅದಕ್ಕೆ ಖಂಡಿತಾ ಸಾಕ್ಷ್ಯಗಳು ಬೇಕು. ಅದನ್ನು ಸಾಬೀತು ಪಡಿಸಬೇಕು. ಈ ರೀತಿ ಪ್ರಶ್ನಿಸುತ್ತಿರುವ ನಟ ಪ್ರಕಾಶ್ ರೈ ಅವರಿಗೆ ಯಾರೂ ಉತ್ತರ ನೀಡುತ್ತಿಲ್ಲ ಎಂಬುದು ಅವರ ಆಕ್ಷೇಪ. ಆದರೆ ಪ್ರಕಾಶ್ ರೈ ಅವರಿಗೆ ನಮ್ಮದೊಂದಿಷ್ಟು ಪ್ರಶ್ನೆಗಳಿವೆ. ಒಂದಿಷ್ಟು ಸಮಯ ಮಾಡಿಕೊಂಡು ಅದಕ್ಕೆ ಉತ್ತರಿಸುತ್ತಾರಾ?
ಅಧಿಕಾರದಲ್ಲಿರುವುದು ಕಾಂಗ್ರೆಸ್
ಪ್ರಶ್ನೆ 1: ಗೌರಿ ಲಂಕೇಶ್ ಅವರ ಹತ್ಯೆ ಆದದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಪಕ್ಷ ಕಾಂಗ್ರೆಸ್. ಇಲ್ಲಿನ ಕಾನೂನು- ಸುವ್ಯವಸ್ಥೆ ಕಾಪಾಡಬೇಕಾದಂಥ ಜವಾಬ್ದಾರಿ ಅಧಿಕಾರದಲ್ಲಿರುವ ಪಕ್ಷದ್ದಾಗಿರುತ್ತದೆ. ಆದರೆ ನಿಮ್ಮ ಆಕ್ಷೇಪ ಕೇಳಿಬರುತ್ತಿರುವುದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಬಗ್ಗೆ, ಏಕೆ?
ಗೃಹ ಸಚಿವರನ್ನು ಏಕೆ ಪ್ರಶ್ನೆ ಮಾಡಲ್ಲ?
ಪ್ರಶ್ನೆ 2: ಕರ್ನಾಟಕದ ಗೃಹ ಸಚಿವರಾದ ರಾಮಲಿಂಗಾರೆಡ್ಡಿ ಅವರು ಗೌರಿ ಹಂತಕರ ಸುಳಿವು ಸಿಕ್ಕಿದೆ. ಅದಕ್ಕೆ ಅಗತ್ಯವಾದ ಸಾಕ್ಷ್ಯಾಧಾರ ಹುಡುಕುತ್ತಿದ್ದೀವಿ ಎಂದು ಅದೆಷ್ಟೋ ಸಲ ಹೇಳಿದ್ದಾರೆ. ಆದರೆ ಈ ವರೆಗೆ ಅದರ ಫಲಿತಾಂಶ ಮಾತ್ರ ಕಾಣುತ್ತಿಲ್ಲ. ಸ್ವಾಮಿ, ನೀವು ಹೇಳಿದ ಆರೋಪಿಗಳು ಯಾರು, ಯಾವ ಸಾಕ್ಷ್ಯಕ್ಕೆ ಎದುರು ನೋಡ್ತಿದ್ದೀರಿ ಎಂದು ನೀವು ಪ್ರಶ್ನೆ ಮಾಡಿದ್ದು ಇದೆಯಾ?
ಸಾಕ್ಷ್ಯ ಕೊಡಬಹುದಲ್ವ?
ಪ್ರಶ್ನೆ 3: ಇದು ಬಲಪಂಥೀಯರದೇ ಕೃತ್ಯ ಎಂದು ಹೋದ ಕಡೆ- ಬಂದ ಕಡೆ ಹೇಳಿಕೊಂಡು ಬಂದರೆ ಸಹಜವಾಗಿ ಏನು ಸಾಕ್ಷ್ಯ ಇದೆ ಹೇಳಿ ಎಂದು ಪ್ರಶ್ನೆ ಮಾಡುವುದು ಸಹಜ. ಗೌರಿ ಹತ್ಯೆ ಬಲಪಂಥೀಯರೇ ಮಾಡಿದ್ದಾರೆ ಎಂದು ನೀವು ಹೇಳುತ್ತಿದ್ದರೆ ಅದಕ್ಕೆ ಸಾಕ್ಷ್ಯ- ಆಧಾರ ನೀಡುವುದು ನಿಮ್ಮ ಕರ್ತವ್ಯ ಆಗುತ್ತದೆ. ಅದನ್ನು ಈ ವರೆಗೆ ಯಾಕೆ ಬಯಲು ಮಾಡಿಲ್ಲ?
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದಕ್ಕೆ ಏನು ಸಂಬಂಧ?
ಪ್ರಶ್ನೆ 4: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷವೇ ಇರಬಾರದು ಎಂದು ವಾದಿಸುವುದು ತಪ್ಪು ಎಂಬ ವಾದ ಹೇಗಿದೆಯೋ ಹಾಗೇ ಬಿಜೆಪಿ ಅಧಿಕಾರಕ್ಕೇ ಬರಬಾರದು ಎಂದು ಗೌರಿ ಹತ್ಯೆಯ ವಿಚಾರವನ್ನು ಮುಂದಿಟ್ಟುಕೊಂಡು ಮಾತನಾಡುವುದರ ಹಿಂದೆ ಇರುವ ತರ್ಕ ಏನು? ಗೌರಿ ಹತ್ಯೆಗೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದಕ್ಕೆ ಏನು ಸಂಬಂಧ?
ಈ ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತೀರೇನೋ
ಪ್ರಶ್ನೆ 5: ಗೌರಿ ಹತ್ಯೆ ತನಿಖೆಯಲ್ಲಿ ಮಹತ್ತರವಾದದ್ದನ್ನು ಸಾಧಿಸಲು ಆಗದೇ ಹೋದದ್ದು ಕರ್ನಾಟಕ ಪೊಲೀಸ್. ವಿಶೇಷ ತಂಡ ರಚನೆ ಮಾಡಿದ್ದು ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಅವರ ಕುಟುಂಬದವರು ರಾಜ್ಯ ಪೊಲೀಸರ ತನಿಖೆ ಬಗ್ಗೆ ಸಮಾಧಾನವಿಲ್ಲ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಬಗ್ಗೆ ನಿಮ್ಮ ಮೌನ ಏಕೆ? ಕೇಂದ್ರದ ಬಗ್ಗೆ ಮಾತ್ರ ನಿಮ್ಮ ಸಿಟ್ಟೇಕೆ? ನಿಮ್ಮ ಪ್ರಶ್ನೆಗಳಿಗೆ ಅವರೇನೋ ಉತ್ತರ ಕೊಡ್ತಿಲ್ಲ. ಕನಿಷ್ಠ ಪಕ್ಷ ನಮ್ಮ ಪ್ರಶ್ನೆಗಳಿಗೆ ನೀವು ಉತ್ತರ ಕೊಡ್ತೀರೇನೋ ಎಂಬ ನಿರೀಕ್ಷೆಯಲ್ಲಿದ್ದೇವೆ.