ತಪ್ಪುತಪ್ಪಾಗಿ ವಚನ ವಾಚಿಸಿದ ಯಡಿಯೂರಪ್ಪ
ಬಸವ ಜಯಂತಿ ಸಂಬಂಧಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಾ ಅವರು, ಅಕ್ಕಮಹಾದೇವಿಯ ವಚನವನ್ನು (ತಪ್ಪುತಪ್ಪಾಗಿ) ಉಚ್ಚರಿಸುತ್ತಲೇ, ತಮಗೆ ಪದವಿ ತಪ್ಪಿದ ಮತ್ತು ಆರೋಪ ತಟ್ಟಿದ ಅಸಮಾಧಾನವನ್ನು ಕೋಪಾವೇಶಗಳಿಂದ ಹೊರಹಾಕಿದರು.
ತನ್ಮೂಲಕ, ಮಹಾದೇವಿಯಕ್ಕನಿಗೂ ಮತ್ತು 'ನಿಂದಿಸಿದವರೆನ್ನ ತಂದೆತಾಯಿಗಳೆಂಬೆ...ಜರಿದವರೆನ್ನ ಜನ್ಮಬಂಧುಗಳೆಂಬೆ', 'ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ' ಎಂದ ಬಸವಣ್ಣನವರಿಗೂ ಅವಮಾನ ಮಾಡಿದರು.
ಕವಿ ಚನ್ನವೀರ ಕಣವಿಯವರಿಗೆ ಹಾಕಲೆಂದು ಮಾಲೆಯೊಂದನ್ನು ಮುಖ್ಯಮಂತ್ರಿ ಸದಾನಂದಗೌಡರು ಯಡಿಯೂರಪ್ಪನವರಿಗೆ ಕೊಡಲು ಹೊರಟಾಗ ಯಡಿಯೂರಪ್ಪ ಅದನ್ನು ತೆಗೆದುಕೊಳ್ಳದೆ, ಪಕ್ಕದಲ್ಲಿದ್ದ ಬಸವರಾಜ ಬೊಮ್ಮಾಮಿಗೆ ಅದನ್ನು ತೆಗೆದುಕೊಂಡು ಕಣವಿಯವರಿಗೆ ಹಾಕಲು ಸೂಚನೆ ನೀಡುವ ಮೂಲಕ ಕಣವಿಯವರಿಗೂ ಮತ್ತು ಈ ರಾಜ್ಯದ ಮುಖ್ಯಮಂತ್ರಿಯವರಿಗೂ ಅವಮಾನ ಮಾಡಿದರು.
ಯಡಿಯೂರಪ್ಪನವರಿಗೆ ತಮ್ಮ ಮೇಲಿನ ಆರೋಪದ ಚಿಂತೆ ಮತ್ತು ಪದವಿ ದಾಹ ಇವುಗಳ ಮುಂದೆ ಕವಿಶ್ರೇಷ್ಠರೂ ನಗಣ್ಯ, ಮುಖ್ಯಮಂತ್ರಿಯೂ ನಗಣ್ಯ, ಬಸವಣ್ಣ-ಅಕ್ಕಮಹಾದೇವಿಯರೂ ನಗಣ್ಯ ಎಂದು ಈ ನಾಡಿನ ಜನತೆ ಮತ್ತೆ ಯಡಿಯೂರಪ್ಪನವರ ಬಗ್ಗೆ ಆಡಿಕೊಳ್ಳುವಂತಾಯಿತು.